ಡಿಕೆಶಿಗೆ ಇಡಿ ಉರುಳು, ಅವರ ಮಗಳಿಗೆ ಸಿಬಿಐ ಕಂಟಕ: ಚುನಾವಣೆ ಹೊಸ್ತಿಲಲ್ಲಿ ಮತ್ತೆ ಚುರುಕಾದ ತನಿಖಾ ಸಂಸ್ಥೆಗಳು- ವರದಿ ಓದಿ
ಚುನಾವಣೆ ಹೊಸ್ತಿಲಲ್ಲಿ ಇರುವಾಗಲೇ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರಿಗೆ ಮತ್ತೆ ಇಡಿ ಕಂಟಕ ಶುರುವಾಗಿದೆ. ಅವರ ಮಗಳ ಮಾಲೀಕತ್ವದ ಶಾಲಾ ಶುಲ್ಕ ಬಗ್ಗೆ ವಿಚಾರಣೆ ನಡೆಸಲು ಸಿಬಿಐ ನೋಟಿಸ್ ನೀಡಿದೆ. ಈಗ ಎಲ್ಲರ ಕಣ್ಣುಗಳು ರಮೇಶ್ ಜಾರಕಿಹೊಳಿ ಕಡೆಗೆ ಹೊರಳಿವೆ. ಏಕೆ
ಬೆಂಗಳೂರು, ಫೆಬ್ರವರಿ 8: ಚುನಾವಣೆ ಹೊಸ್ತಿಲಲ್ಲಿ ಇರುವಾಗಲೇ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರಿಗೆ ಮತ್ತೆ ಇಡಿ ಕಂಟಕ ಶುರುವಾಗಿದೆ. ಫೆಬ್ರವರಿ 22 ರಂದು ಅವರ ಇಡಿ ಮುಂದೆ ಹಾಜರಾಗಲು ಶಿವಕುಮಾರ್ ಅವರಿಗೆ ನೋಟಿಸ್ ನೀಡಲಾಗಿದೆ. ಅವರ ಮಗಳ ಮಾಲೀಕತ್ವದ ಶಾಲಾ ಶುಲ್ಕ ಮತ್ತು ಪರೀಕ್ಷೆಯ ಫಲಿತಾಂಶಗಳ ಬಗ್ಗೆ ವಿಚಾರಣೆ ನಡೆಸಲು ಸಿಬಿಐ ನೋಟಿಸ್ ನೀಡಿದೆ. ಈ ಕುರಿತು ಸ್ವತಃ ಡಿಕೆ ಶಿವಕುಮಾರ್ ಅವರೇ ಮಾಧ್ಯಮಗೋಷ್ಠಿಯಲ್ಲಿ ತಿಳಿಸಿದ್ದಾರೆ. ಪ್ರಸ್ತುತ ಶಿವಕುಮಾರ್ ಅವರು ಕಾಂಗ್ರೆಸ್ನ 'ಪ್ರಜಾಧ್ವನಿ' ಯಾತ್ರೆಯಲ್ಲಿ ನಿರತರಾಗಿದ್ದಾರೆ. ಈ ಸಂದರ್ಭದಲ್ಲಿ ಇಡಿ ವಿಚಾರಣೆಗೆ ಕರೆದಿರುವುದು ಅವರಿಗೆ ಮತ್ತಷ್ಟು ಸಂಕಷ್ಟವನ್ನು ತಂದೊಡ್ಡಿದೆ.
ED notice to @INCKarnataka president @KPCCPresident to appear before them on February 22nd. @DKShivakumar says notices also being sent enquiring about his daughter's school fees & exam results. Alleges all these notices only for opposition. #Karnataka pic.twitter.com/lABxb69lzY
— Imran Khan (@KeypadGuerilla) February 8, 2023

ಹಣ ವರ್ಗಾವಣೆ ಪ್ರಕರಣದಲ್ಲಿ ಬಂಧನ
ಹಣ ವರ್ಗಾವಣೆ ಪ್ರಕರಣದಲ್ಲಿ 2019 ರ ಸೆಪ್ಟೆಂಬರ್ 3 ರಂದು ಇಡಿ ಶಿವಕುಮಾರ್ ಅವರನ್ನು ಬಂಧಿಸಿತ್ತು ಮತ್ತು ಅದೇ ವರ್ಷ ಅಕ್ಟೋಬರ್ನಲ್ಲಿ ದೆಹಲಿ ಹೈಕೋರ್ಟ್ ಅವರಿಗೆ ಜಾಮೀನು ನೀಡಿತು. ಕಳೆದ ವರ್ಷದ ಮೇ ತಿಂಗಳಲ್ಲಿ ಸಂಸ್ಥೆಯು ಅವರ ವಿರುದ್ಧ ಸಲ್ಲಿಸಿದ ಆದಾಯ ತೆರಿಗೆ ಇಲಾಖೆಯ ಚಾರ್ಜ್ ಶೀಟ್ ಅನ್ನು ಬಳಸಿಕೊಂಡು ಮತ್ತೆ ಪ್ರಕರಣವನ್ನು ದಾಖಲಿಸಿದೆ.

ಭ್ರಷ್ಟಾಚಾರದ ಆರೋಪದ ಮೇಲೆ ಎಫ್ಐಆರ್
ಭ್ರಷ್ಟಾಚಾರದ ಆರೋಪದ ಮೇಲೆ ಅವರ ವಿರುದ್ಧ ದಾಖಲಾಗಿರುವ ಎಫ್ಐಆರ್ ಆಧರಿಸಿ ಹೊಸ ಪ್ರಕರಣವನ್ನು ದಾಖಲಿಸಲಾಗಿದೆ. ಮೊದಲ ಪ್ರಕರಣದಲ್ಲಿ ಇಡಿ ಶಿವಕುಮಾರ್ ವಿರುದ್ಧ ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯಡಿ ಆರೋಪ ಹೊರಿಸಿತ್ತು. ಡಿಕೆ ಶಿವಕುಮಾರ್ ಅವರ ಆಪ್ತ ಸಹಚರ ಮತ್ತು ದೆಹಲಿಯ ಕರ್ನಾಟಕ ಭವನದ ಸಿಬ್ಬಂದಿ ಮತ್ತು ಇತರರ ವಿರುದ್ಧ ಆದಾಯ ತೆರಿಗೆ ಇಲಾಖೆ ಸಲ್ಲಿಸಿದ ಆರೋಪಪಟ್ಟಿಯನ್ನು ಆಧರಿಸಿ ಸಂಸ್ಥೆಯು ಸೆಪ್ಟೆಂಬರ್ 2018 ರಲ್ಲಿ ತನ್ನ ತನಿಖೆಯನ್ನು ಪ್ರಾರಂಭಿಸಿತು. ಆದಾಯ ತೆರಿಗೆ ಇಲಾಖೆಯು ಗಡಿಯಾಚೆಗಿನ ಹವಾಲಾ ವಹಿವಾಟುಗಳನ್ನು ಪತ್ತೆಹಚ್ಚಿದೆ. ಅಕ್ರಮ ನಗದನ್ನು ಸಾಗಿಸಲು ಮತ್ತು ಬಳಸಲು ದೆಹಲಿ ಮತ್ತು ಬೆಂಗಳೂರಿನಾದ್ಯಂತ ಡಿಕೆಶಿ ಹೊಂದಿರುವ ಜಾಲಗಳನ್ನು ಪತ್ತೆ ಮಾಡಲಾಗಿದೆ ಎಂದು ಆರೋಪಿಸಲಾಗಿತ್ತು.

ಹಣಕಾಸಿನ ಹೂಡಿಕೆಗಾಗಿ ಸಿಂಗಾಪುರಕ್ಕೆ ಪ್ರಯಾಣ
ಜುಲೈ, 2017 ರಲ್ಲಿ ಡಿಕೆ ಶಿವಕುಮಾರ್ ಮತ್ತು ಅವರ ಮಗಳು ಹಣಕಾಸಿನ ಹೂಡಿಕೆಗಾಗಿ ಸಿಂಗಾಪುರಕ್ಕೆ ಪ್ರಯಾಣ ಬೆಳೆಸಿದ್ದರು ಎಂದು ಆರೋಪಿಸಲಾಗಿದೆ. ಡಿಕೆಶಿಗೆ ಸಂಬಂಧಿಸಿದ 429 ಕೋಟಿ ರೂಪಾಯಿಗಳ ಅಕ್ರಮ ಆಸ್ತಿಯನ್ನು ಐಟಿ ಇಲಾಖೆ ಪತ್ತೆ ಮಾಡಿದೆ ಎಂದು ಹೇಳಿಕೊಂಡಿದೆ. ಡಿಕೆ ಶಿವಕುಮಾರ್ ಮೇಲೆ ಆದಾಯ ತೆರಿಗೆ ಇಲಾಖೆ 2017 ರಲ್ಲಿ ದಾಳಿ ನಡೆಸಿತ್ತು. ತನಿಖಾ ಸಂಸ್ಥೆಗಳ ಪ್ರಕಾರ, ಶಿವಕುಮಾರ್ಗೆ ನೇರವಾಗಿ ಸಂಬಂಧಿಸಿರುವ ದೆಹಲಿಯ ನಾಲ್ಕು ಸ್ಥಳಗಳ ಮೇಲೆ ದಾಳಿ ನಡೆಸಿದಾಗ 8.5 ಕೋಟಿ ರೂಪಾಯಿ ಪತ್ತೆಯಾಗಿತ್ತು. ಆ ಹಣವನ್ನು ವಶಪಡಿಸಿಕೊಳ್ಳಲಾಗಿದೆ. ದೆಹಲಿಯ ಸಫ್ದರ್ಜಂಗ್ ಎನ್ಕ್ಲೇವ್ನಲ್ಲಿ ಮೂರು ಫ್ಲಾಟ್ಗಳನ್ನು ಖರೀದಿಸಲಾಗಿದೆ ಎಂದು ಐಟಿ ಇಲಾಖೆ ಪತ್ತೆ ಮಾಡಿದೆ. ಇದು ಶಿವಕುಮಾರ್ಗೆ ಸಂಬಂಧಿಸಿದೆ ಎಂದು ಹೇಳಲಾಗಿದೆ. ಸೆಪ್ಟೆಂಬರ್ 2019 ರಲ್ಲಿ ಡಿಕೆ ಶಿವಕುಮಾರ್ ಅವರನ್ನು ಇಡಿ ಬಂಧಿಸಿತ್ತು. ಕಳೆದ ವರ್ಷ ಡಿಕೆ ಶಿವಕುಮಾರ್ ಅವರ ಮಗಳಿಗೆ ಸಂಬಂಧಿಸಿದ ಶಾಲೆಯ ಮೇಲೆ ಸಿಬಿಐ ದಾಳಿ ನಡೆಸಿತ್ತು.

ಡಿಕೆಶಿ ನೇತೃತ್ವದಲ್ಲಿ ಪ್ರಜಾಧ್ವನಿ ಯಾತ್ರೆ
2023 ರ ವಿಧಾನಸಭಾ ಚುನಾವಣೆಗೆ ಮುಂಚಿತವಾಗಿ, ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ (ಕೆಪಿಸಿಸಿ) ಅಧ್ಯಕ್ಷ ಡಿಕೆ ಶಿವಕುಮಾರ್ ಅವರ ನೇತೃತ್ವದಲ್ಲಿ ಪ್ರಜಾಧ್ವನಿ ಯಾತ್ರೆ ನಡೆಯುತ್ತಿದೆ. ದಕ್ಷಿಣ ಕರ್ನಾಟಕದಲ್ಲಿ ಪ್ರಜಾಧ್ವನಿ ಯಾತ್ರೆಯ ನೇತೃತ್ವವನ್ನು ಡಿಕೆಶಿ ವಹಿಸಿಕೊಂಡಿದ್ದಾರೆ. ಉತ್ತರ ಕರ್ನಾಟಕ ಹಾಗೂ ಹೈದ್ರಾಬಾದ್ ಕರ್ನಾಟಕ ಭಾಗಗಳಲ್ಲಿ ಪ್ರಜಾಧ್ವನಿ ಯಾತ್ರೆಯ ನೇತೃತ್ವವನ್ನು ಸಿದ್ದರಾಮಯ್ಯ ವಹಿಸಿಕೊಂಡಿದ್ದಾರೆ. ಇನ್ನೆರಡು ತಿಂಗಳಲ್ಲಿ ನಡೆಯುವ ಚುನಾವಣೆಯಲ್ಲಿ ಕಾಂಗ್ರೆಸ್ ಜಯಬೇರಿ ಬಾರಿಸಲಿದೆ ಎಂದು ಡಿಕೆಶಿ ತಿಳಿಸಿದ್ದಾರೆ. ಸಿದ್ದರಾಮಯ್ಯ ಅವರೊಂದಿಗೆ ಮುಖ್ಯಮಂತ್ರಿ ಆಕಾಂಕ್ಷಿಯಾಗಿ ಡಿಕೆಶಿ ಹೊರಹೊಮ್ಮಿದ್ದಾರೆ. ಸಿಡಿ ವಿಚಾರಕ್ಕೆ ಸಂಬಂಧಿಸಿದಂತೆ ಡಿಕೆಶಿಯನ್ನು ಸಿಬಿಐ ವಿಚಾರಣೆಗೆ ವಹಿಸಬೇಕೆಂದು ಗೋಕಾಕ್ ಶಾಸಕ ರಮೇಶ ಜಾರಕಿಹೊಳಿ ಒತ್ತಾಯಿಸಿದ್ದರು. ಈ ಸಂಬಂಧ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನೂ ರಮೇಶ್ ಜಾರಕಿಹೊಳಿ ಭೇಟಿಯಾಗಿ ಮಾತುಕತೆ ನಡೆಸಿದ್ದರು.












Click it and Unblock the Notifications