"ಡಿ ಕೆ ಶಿವಕುಮಾರ್ಗೆ RSS ಬಗ್ಗೆ ಪ್ರೀತಿ, ಸಿಂಪತಿ, ಬದಲಾವಣೆ"
ಬೆಂಗಳೂರು, ಆಗಸ್ಟ್ 26: ವಿಧಾನಸಭೆಯ ಸದನದಲ್ಲಿ ನಿಂತು ಆರ್ಎಸ್ಎಸ್ ಗೀತೆ ಹಾಡಿದ ಡಿಸಿಎಂ ಡಿಕೆ ಶಿವಕುಮಾರ್ ನಡೆ ರಾಜ್ಯ ರಾಜಕೀಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿತ್ತು. ಅಲ್ಲದೇ ಕಾಂಗ್ರೆಸ್ ವಲಯದಲ್ಲೂ ಕಿಚ್ಚು ಹಚ್ಚಿತ್ತು. ಡಿ ಕೆ ಶಿವಕುಮಾರ್ ಅವರು ಆರ್ಎಸ್ಎಸ್ ಗುಣಗಾನವನ್ನ ಕೈ ನಾಯಕರು ಕೂಡ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಡಿ ಕೆ ಶಿವಕುಮಾರ್ ಆರ್ ಎಸ್ ಎಸ್ ಪ್ರೇಮದ ಕುರಿತು ಬಿಜೆಪಿ ನಾಯಕ ಹಾಗೂ ವಿಧಾನ ಪರಿಷತ್ ಸದದ್ಯರಾದ ಛಲವಾದಿ ನಾರಾಯಣಸ್ವಾಮಿ ಅವರು ಪ್ರತಿಕ್ರಿಯಿಸಿದ್ದಾರೆ.
ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ಗೆ ಆರ್.ಎಸ್.ಎಸ್ ಬಗ್ಗೆ ಪ್ರೀತಿ, ಸಿಂಪತಿ ಹಾಗೂ ಬದಲಾವಣೆ ಬಂದಿದೆ. ಕೆಲವರಿಗೆ ಸಂಘದ ಗಾಳಿಯೆ ಬಡಿಯಬಾರದು ಎಂದು ಹೇಳಿದ್ದಾರೆ. ಸಂಘ ದೇಶದ ಸರ್ವವ್ಯಾಪ್ತಿಯಾಗಿದ್ದು ಅದರ ಗಾಳಿ ಬಡಿಯಬಾರದು ಎಂದರೆ ದೇಶ ಬಿಟ್ಟು ಹೋಗಬೇಕಾಗುತ್ತದೆ ಎಂದು ಖಾರವಾಗಿ ಹೇಳಿದರು. ಮನುವಾದಿಗಳೆಂದು ಜರಿಯುವ ನೀವು ಅವರನ್ನೆ ಮನೆ ತುಂಬಿಸಿಕೊಂಡಿದ್ದಿರಿ, ಅವರ ಮನೆ ತುಂಬಿದ್ದೀರಿ. ನಿಮ್ಮ ರಕ್ಷಣೆಗೆ ಇಟ್ಟುಕೊಂಡಿದ್ದೀರಿ.

ನಿಮ್ಮ ಬೂಟಾಟಿಕೆ ಮಾತುಗಳನ್ನು ನಿಲ್ಲಿಸಿ. ಸಂಘದ ಗೀತೆ ಹಾಡಲು ಸರ್ವರು ಸ್ವತಂತ್ರರು. ನಿಮ್ಮ ಪಕ್ಷದ ಡಿಕೆಶಿ ಹಾಗೂ ಕುಣಿಗಲ್ ಶಾಸಕರು ಹಾಡಿರುವುದನ್ನು ನಿಮ್ಮ ಕೈಯಿಂದ ನಿಲ್ಲಿಸಲು ಸಾಧ್ಯವೇ? ಎಂದು ಕೇಳಿದರು. ಆರ್.ಎಸ್.ಎಸ್. ಬಗ್ಗೆ ಮಾತನಾಡುವುದೆಂದರೆ ಬಿಟ್ಟಿ ಪ್ರಚಾರಕ್ಕಾಗಿ ಬಾಯಿ ಚಪಲಕ್ಕಾಗಿ ಮಾತನಾಡುವ ನಿಮ್ಮ ಕೀಳುಮಟ್ಟದ ಪ್ರಚಾರ ಬಿಡಿ ಎಂದು ಪರೋಕ್ಷವಾಗಿ ಕಾಂಗ್ರೆಸ್ ಮುಖಂಡರನ್ನು ತರಾಟೆಗೆ ತೆಗೆದುಕೊಂಡರು.
ಕಾಡಗೋಡಿ ದಿಣ್ಣೂರಿನಲ್ಲಿ ಸ್ವಯಂ ಕ್ರಮ ಕೈಗೊಂಡು ಬಡ ದಲಿತರ ಮನೆ ಧ್ವಂಸ ಮಾಡಿದ ಅರಣ್ಯ ಇಲಾಖೆಯ ಅಧಿಕಾರಿಗಳ ಮೇಲೆ ಕೇಸ್ ದಾಖಲಿಸಲು ಮುಖ್ಯಮಂತ್ರಿಗೆ ಮನವಿ ಮಾಡಿದ್ದೆ. ಅದನ್ನು ಮುಖ್ಯಮಂತ್ರಿಯವರು ಒಪ್ಪಿಕೊಂಡು ಪೊಲೀಸ್ ಮಹಾನಿರೀಕ್ಷಕರಿಗೆ ಕೇಸ್ ದಾಖಲಿಸಲು ಸೂಚನೆ ನೀಡಿದ್ದಾರೆ ಎಂದು ವಿಧಾನಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಹೇಳಿದ್ದಾರೆ.
1952ರಲ್ಲಿ ಕಾಡುಗೋಡಿ ದಿಣ್ಣೂರಿನ 711 ಎಕರೆ ಜಮೀನು ದಲಿತರ ಕುಟುಂಬಕ್ಕೆ ನೀಡಲಾಗಿದೆ. ಇದರಲ್ಲಿ 250 ಎಕರೆ ಕೆಐಡಿಬಿ ಪ್ರತಿ ಎಕರೆಗೆ 30 ಸಾವಿರ ರೂಪಾಯಿ ಪರಿಹಾರ ನೀಡಿ ಭೂಸ್ವಾಧೀನ ಮಾಡಿದೆ. ರೈಲ್ವೇ, ಮೆಟ್ರೋ ಹಾಗೂ ಪೋಲಿಸ್ ಠಾಣೆ ಕಟ್ಟಲು ಭೂಸ್ವಾಧೀನವಾಗಿರುವ ಇಲ್ಲಿ ಕೆಲ ಬಡ ದಲಿತರು ಕಟ್ಟಿಕೊಂಡಿದ್ದ ಮನೆಗಳನ್ನು ಸುಪ್ರೀಂ ಕೋರ್ಟ್ನಲ್ಲಿ ಒಂದು ಯಾವುದೇ ಆದೇಶ ಪ್ರತಿ ಹಿಡಿದುಕೊಂಡು ಮನೆಗಳನ್ನು ಧ್ವಂಸ ಮಾಡಿದ್ದರು. ಇದು ದಮನಕಾರಿ ನೀತಿಯಾಗಿದೆ; ಇದಕ್ಕೆ ಕಾರಣರಾದ ಅಧಿಕಾರಿಗಳ ಮೇಲೆ ಪ್ರಕರಣ ದಾಖಲಾಗಲಿದೆ ಎಂದರು.
ಸುಳ್ಳು ಜಾತಿ ಪ್ರಮಾಣಪತ್ರದ ಬಗ್ಗೆ ಚರ್ಚಿಸಲಾಗಿ ಸುಳ್ಳು ಪ್ರಮಾಣ ಪತ್ರ ಹೊಂದಿದವರು ಅನೇಕರು ಸರ್ಕಾರ ನೌಕರಿಯಲ್ಲಿದ್ದಾರೆ, ಕೆಲವರು ನಿವೃತ್ತಿ ಹೊಂದಿ ಪಿಂಚಣಿ ಪಡೆಯುತಿದ್ದಾರೆ. ಇದರ ಬಗ್ಗೆ ಕಠಿಣ ಕ್ರಮ ತೆಗೆದುಕೊಳ್ಳುವಂತೆ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡುವಂತೆ ಸಭೆಯಲ್ಲಿ ನಿರ್ಣಯಿಸಲಾಯಿತು ಎಂದು ವಿಧಾನಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ತಿಳಿಸಿದರು.












Click it and Unblock the Notifications