ಬೆಳಗಾವಿ ನಮ್ಮದು ಎಂದ ಫಡ್ನವೀಸ್ಗೆ ನಾಯಕರ ತಿರುಗೇಟು
ಬೆಂಗಳೂರು, ಜನವರಿ 19 : ಕರ್ನಾಟಕ ಮತ್ತು ಮಹಾರಾಷ್ಟ್ರ ನಡುವಿನ ಗಡಿ ವಿವಾದ ಮತ್ತೊಮ್ಮೆ ಸದ್ದು ಮಾಡುತ್ತಿದೆ. ಈಗ ಸ್ವತಃ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರು ಗಡಿ ಕ್ಯಾತೆ ತೆಗೆದಿದ್ದಾರೆ. ಫಡ್ನವೀಸ್ ಹೇಳಿಕೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ತಿರುಗೇಟು ಕೊಟ್ಟಿದ್ದಾರೆ.
ಮಹಾರಾಷ್ಟ್ರದ ಪುಣೆಯಲ್ಲಿ ಭಾನುವಾರ ನಡೆದ ಅಖಿಲ ಭಾರತ ಮರಾಠಿ ಸಾಹಿತ್ಯ ಸಮ್ಮೇಳನದಲ್ಲಿ ಮಾತನಾಡಿದ ದೇವೇಂದ್ರ ಫಡ್ನವೀಸ್ ಅವರು, 'ಭಾಷಾವಾರು ಪ್ರಾಂತ್ಯಗಳ ಪುನರ್ ವಿಂಗಡನೆ ಸಮಯದಲ್ಲಿ ಬೆಳಗಾವಿ ಸೇರಿದಂತೆ ಕರ್ನಾಟಕಕ್ಕೆ ಸೇರ್ಪಡೆಗೊಂಡ ಮರಾಠಿ ಭಾಷಿಕ ಪ್ರದೇಶಗಳು ಮಹಾರಾಷ್ಟ್ರದ ಅವಿಭಾಜ್ಯ ಭಾಗಗಳು' ಎಂದು ಹೇಳಿರುವುದು ವಿವಾದಕ್ಕೆ ಕಾರಣವಾಗಿದೆ. [ಬೆಳಗಾವಿ ನಮ್ಮದು... ನಮ್ಮದು... ನಮ್ಮದು...]
'ಬೆಳಗಾವಿ ಮಹಾರಾಷ್ಟ್ರಕ್ಕೆ ಸೇರಬೇಕು ಎಂಬ ಹೋರಾಟಕ್ಕೆ ಮಹಾರಾಷ್ಟ್ರ ಸರ್ಕಾರ ಹಾಗೂ ಮರಾಠಿಗರ ಬೆಂಬಲವಿದೆ. ಬೆಳಗಾವಿ ಸೇರಿದಂತೆ ಗಡಿಭಾಗದಲ್ಲಿ ಮರಾಠಿ ಭಾಷೆ ಹಾಗೂ ಸಂಸ್ಕೃತಿ ಮೇಲೆ ಕರ್ನಾಟಕ ಸರ್ಕಾರ ದೌರ್ಜನ್ಯ ನಡೆಸುತ್ತಿದೆ' ಎಂದು ಫಡ್ನವೀಸ್ ಹೇಳಿದ್ದಾರೆ. [ಮರಾಠಿಗರ ಮಹಾಮೇಳಾವದಲ್ಲಿ ಎಂಕ, ನೋಣ ಸೀನ]
ಕರ್ನಾಟಕ ರಕ್ಷಣಾ ವೇದಿಕೆ ಫಡ್ನವೀಸ್ ಹೇಳಿಕೆ ಖಂಡಿಸಿ ಪ್ರತಿಭಟನೆ ನಡೆಸಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಫಡ್ನವೀಸ್ ಹೇಳಿಕೆಗೆ ತಿರುಗೇಟು ಕೊಟ್ಟಿದ್ದಾರೆ. ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ, ಬಿಜೆಪಿ ರಾಜ್ಯಾಧ್ಯಕ್ಷ ಪ್ರಹ್ಲಾದ್ ಜೋಶಿ, ಬೆಳಗಾವಿ ಗಡಿ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ್ ಅವರು ಫಡ್ನವೀಸ್ ಹೇಳಿಕೆಯನ್ನು ಖಂಡಿಸಿದ್ದಾರೆ.

ದೇವೇಂದ್ರ ಫಡ್ನವೀಸ್ ಹೇಳಿದ್ದೇನು?
ಅಖಿಲ ಭಾರತ ಮರಾಠಿ ಸಾಹಿತ್ಯ ಸಮ್ಮೇಳನದಲ್ಲಿ ಮಾತನಾಡಿದ ದೇವೇಂದ್ರ ಫಡ್ನವೀಸ್ ಅವರು, 'ಭಾಷಾವಾರು ಪ್ರಾಂತ್ಯಗಳ ವಿಂಗಡನೆ ಸಮಯದಲ್ಲಿ ಬೆಳಗಾವಿ ಸೇರಿದಂತೆ ಕರ್ನಾಟಕಕ್ಕೆ ಸೇರ್ಪಡೆಗೊಂಡ ಮರಾಠಿ ಭಾಷಿಕ ಪ್ರದೇಶಗಳಾದ ಕಾರವಾರ, ನಿಪ್ಪಾಣಿ, ಬೀದರ, ಭಾಲ್ಕಿ ಮಹಾರಾಷ್ಟ್ರದ ಅವಿಭಾಜ್ಯ ಭಾಗಗಳು. ಮಹಾರಾಷ್ಟ್ರ ಸರ್ಕಾರ ಗಡಿಭಾಗದ ಮರಾಠಿ ಭಾಷಿಕರ ಪರವಾಗಿದೆ. ಗಡಿ ವಿಷಯದಲ್ಲಿ ನಮಗೆ ಆಗಿರುವ ಘೋರ ಅನ್ಯಾಯದ ಬಗ್ಗೆ ನಾವು ಎಂದಿಗೂ ಶಾಂತಿ-ಸಹನೆಯಿಂದ ಇರಲು
ಸಾಧ್ಯವಿಲ್ಲ' ಎಂದು ಹೇಳಿದ್ದರು.

'ಬೆಳಗಾವಿ ಮಹಾರಾಷ್ಟ್ರಕ್ಕೆ ಸೇರುವುದಿಲ್ಲ'
ದೇವೆಂದ್ರ ಫಡ್ನವೀಸ್ ಹೇಳಿಕೆಗೆ ತಿರುಗೇಟು ಕೊಟ್ಟಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, 'ಫಡ್ನವೀಸ್ ಹೇಳಿದ ತಕ್ಷಣ ಬೆಳಗಾವಿ ಮಹಾರಾಷ್ಟ್ರಕ್ಕೆ ಸೇರುವುದಿಲ್ಲ. ಮಹಾಜನ್ ವರದಿಯಲ್ಲಿರುವ ಸತ್ಯಾಂಶ ಬದಲಾಗುವುದೂ ಇಲ್ಲ
ಬೆಳಗಾವಿ ಎಂದೆಂದಿಗೂ ಕರ್ನಾಟಕದ ಅವಿಭಾಜ್ಯ ಅಂಗ. ಯಾವುದೇ ಕಾರಣಕ್ಕೂ ಬೆಳಗಾವಿಯನ್ನು ಬಿಟ್ಟು ಕೊಡುವುದಿಲ್ಲ. ರಾಜಕೀಯ ಕಾರಣಗಳಿಗಾಗಿ ಇಂತಹ ಹೇಳಿಕೆ ನೀಡುವುದು ಸರಿಯಲ್ಲ. ಜನರ ಭಾವನೆ ಕೆರಳಿಸುವ ಮಾತುಗಳು ಒಳ್ಳೆಯದಲ್ಲ' ಎಂದು ಹೇಳಿದ್ದಾರೆ.

'ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗ'
ಫಡ್ನವೀಸ್ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ಕೇಂದ್ರ ಕಾನೂನು ಸಚಿವ ಡಿ.ವಿ.ಸದಾನಂದ ಗೌಡ ಅವರು, 'ಬೆಳಗಾವಿ ಕರ್ನಾಟಕ ಅವಿಭಾಜ್ಯ ಅಂಗ, ಮಹಾರಾಷ್ಟ್ರದವರು ಅದನ್ನು ಕೇಳುವುದು ಸರಿಯಲ್ಲ. ಮಹಾಜನ್ ವರದಿ ಸೇರಿದಂತೆ ಹಲವು ವರದಿಗಳು ಇದನ್ನು ಪುಷ್ಟೀಕರಿಸಿವೆ. ಇಂತಹ ವಿಚಾರ ಪ್ರಸ್ತಾಪಿಸುವುದು ಸರಿಯಲ್ಲ' ಎಂದು ಹೇಳಿದ್ದಾರೆ.

'ಗಡಿ ವಿವಾದ ಮುಗಿದ ಅಧ್ಯಾಯ'
'ಬೆಳಗಾವಿ-ಕರ್ನಾಟಕ ಗಡಿ ವಿವಾದ ಮುಗಿದ ಅಧ್ಯಾಯ' ಎಂದು ಬಿಜೆಪಿ ರಾಜ್ಯಾಧ್ಯಕ್ಷ ಪ್ರಹ್ಲಾದ್ ಜೋಶಿ ಹೇಳಿದ್ದಾರೆ. 'ಮಹಾರಾಷ್ಟ್ರದ ಬಹುತೇಕ ನಾಯಕರು ಇದೇ ವಿಚಾರ ಪ್ರಸ್ತಾಪಿಸುತ್ತಾರೆ. ಆದರೆ, ಅವರು ಹೇಳಿದಂತೆ ಆಗಲು ನಾವು ಬಿಡುವುದಿಲ್ಲ. ಗಡಿ ವಿವಾದದಲ್ಲಿ ಕರ್ನಾಟಕ ಬಿಜೆಪಿಯ ನಿಲುವು ಸ್ಪಷ್ಟವಾಗಿದೆ' ಎಂದು ಜೋಶಿ ತಿಳಿಸಿದ್ದಾರೆ.

'ರಾಜ್ಯಕ್ಕೆ ಸೇರಿದ ನೆಲ ಕಸಿದುಕೊಳ್ಳಲು ಬಿಡುವುದಿಲ್ಲ'
ಬೆಳಗಾವಿ ಗಡಿ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ್ ಅವರು ಫಡ್ನವೀಸ್ ಹೇಳಿಕೆಯನ್ನು ಖಂಡಿಸಿದ್ದಾರೆ.'ರಾಜ್ಯಕ್ಕೆ ಸೇರಿದ ನೆಲವನ್ನು ಕಸಿದುಕೊಳ್ಳಲು ಯಾರಿಗೂ ಬಿಡುವುದಿಲ್ಲ. ಸಂವಿಧಾನಾತ್ಮಕವಾದ ಜವಾಬ್ದಾರಿ ಸ್ಥಾನದಲ್ಲಿರುವ ದೇವೇಂದ್ರ ಫಡ್ನವೀಸ್ ಅವರು ಪ್ರಚೋದನಾತ್ಮಕ ಹೇಳಿಕೆ ನೀಡಿರುವುದು ಸರಿಯಲ್ಲ' ಎಂದು ಪಾಟೀಲ್ ಹೇಳಿದ್ದಾರೆ.

'ಓಟ್ ಬ್ಯಾಂಕ್ ರಾಜಕಾರಣ'
ಕರ್ನಾಟಕ ಆಮ್ ಆದ್ಮಿ ಪಕ್ಷ ದೇವೇಂದ್ರ ಫಡ್ನವೀಸ್ ಹೇಳಿಕೆಯನ್ನು ಖಂಡಿಸಿದೆ. ಕರ್ನಾಟಕದ ತಾಳ್ಮೆ ಪರೀಕ್ಷಿಸುವ, ದೇಶದ ಒಕ್ಕೂಟ ವ್ಯವಸ್ಥೆಗೇ ಧಕ್ಕೆ ತರುವಂತಹ ಹೇಳಿಕೆ ನೀಡಿರುವ ಮಹಾರಾಷ್ಟ್ರ ಮುಖ್ಯಮಂತ್ರಿಯನ್ನು, ಪ್ರಧಾನ ಮಂತ್ರಿ ಮೋದಿ ಹಾಗೂ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಕೂಡಲೇ ಪದಚ್ಯುತಿಗೊಳಿಸಬೇಕು. ಓಟ್ ಬ್ಯಾಂಕ್ ರಾಜಕಾರಣಕ್ಕಾಗಿ ಸಂವಿಧಾನ ಬಾಹಿರವಾಗಿ ಕೀಳುಮಟ್ಟದ ಹೇಳಿಕೆ ನೀಡಿರುವ ದೇವೇಂದ್ರ ಫಡ್ನವೀಸ್ ಉದ್ಧಟತನದ ಹೇಳಿಕೆ ಕುರಿತು ರಾಜ್ಯ ಬಿಜೆಪಿ ನಾಯಕರುಗಳೂ ಕೂಡ ತಮ್ಮ ನಿಲುವು ವ್ಯಕ್ತ ಪಡಿಸಬೇಕು ಎಂದು ಪಕ್ಷ ಒತ್ತಾಯಿಸಿದೆ.












Click it and Unblock the Notifications