ಶಿವಮೊಗ್ಗ: ಸೌಮ್ಯಾ ಕೊಲೆ, ಪ್ರಿಯಕರ ಹೂತಿಟ್ಟ ಶವ ತೆಗೆದ ಪೊಲೀಸರು
ಶಿವಮೊಗ್ಗ, ಜುಲೈ 25: ಪ್ರಿಯಕರ ಸೃಜನ್ನಿಂದ ಕೊಲೆಯಾದ ಕೊಪ್ಪ ಮೂಲದ ಯುವತಿ ಸೌಮ್ಯ ಶವ ಹೊರತೆಗೆಯಲಾಗಿದೆ. ಶಿವಮೊಗ್ಗ ಜಿಲ್ಲೆ ಸಾಗರ ಮೂಲದ ಯುವಕ ಸೃಜನ್ ಸೌಮ್ಯಾ ಹತ್ಯೆ ಮಾಡಿ, ಶವ ಹೂತು ಹಾಕಿದ್ದ. ಆತನ ಸಮ್ಮುಖದಲ್ಲೇ ಕೊಳೆತ ಸ್ಥಿತಿಯಲ್ಲಿದ್ದ ಶವ ಹೊರತೆಗೆದು ಮರಣೋತ್ತರ ಪರೀಕ್ಷೆ ನಡೆಸಲಾಗುತ್ತಿದೆ.
ಸಾಗರ ಪೊಲೀಸರು, ವಿಧಿ ವಿಜ್ಞಾನ ಪ್ರಯೋಗಾಲಯದ ತಜ್ಞರ ಸಮ್ಮುಖದಲ್ಲಿ ಗುರುವಾರ ಮಧ್ಯಾಹ್ನ ಸಾಗರ ತಾಲೂಕಿನ ಮುಂಬಾಳು ಗ್ರಾಮದ ಬಳಿ ಹೂತು ಹಾಕಿದ್ದ ಸೌಮ್ಯಾ ಶವ ಹೊರತೆಗೆದಿದ್ದಾರೆ. ಮರಣೋತ್ತರ ಪರೀಕ್ಷೆ ಬಳಿಕ ಶವವನ್ನು ಕುಟುಂಬದವರಿಗೆ ಹಸ್ತಾಂತರ ಮಾಡಲಾಗುತ್ತದೆ.

ಚಿಕ್ಕಮಗಳೂರು ಜಿಲ್ಲೆ ಕೊಪ್ಪ ಮೂಲದ ಸೌಮ್ಯ, ತೀರ್ಥಹಳ್ಳಿಯ ಫೈನಾನ್ಸ್ನಲ್ಲಿ ಕೆಲಸ ಮಾಡುತ್ತಿದ್ದ ಸಾಗರ ಮೂಲದ ಸೃಜನ್ ಎರಡೂವರೆ ವರ್ಷದಿಂದ ಪ್ರೀತಿಸುತ್ತಿದ್ದರು. ಸೌಮ್ಯಾ ಮದುವೆಯಾಗುವಂತೆ ಸೃಜನ್ ಒತ್ತಾಯಿಸುತ್ತಿದ್ದಳು.
ಸೌಮ್ಯಾಳಿಂದ ಒತ್ತಡ ಹೆಚ್ಚಾದ ಹಿನ್ನೆಲೆಯಲ್ಲಿ ಸೃಜನ್ ಆಕೆಯನ್ನು ಕೊಲೆ ಮಾಡಿ, ಮುಂಬಾಳು ಗ್ರಾಮದ ಬಳಿ ಶವ ಹೂತು ಹಾಕಿದ್ದ. ಫೈನಾನ್ಸ್ನಲ್ಲಿ ಕೆಲಸ ಮಾಡುತ್ತಿದ್ದ ಸೃಜನ್ಗೆ ಹಣ ವಸೂಲಿಗೆ ಕೊಪ್ಪಕ್ಕೆ ಹೋಗುವಾಗ ನರ್ಸಿಂಗ್ ವ್ಯಾಸಂಗ ಮಾಡುತ್ತಿದ್ದ ಯುವತಿ ಸೌಮ್ಯಾ ಪರಿಚಯವಾಗಿತ್ತು.
ಪ್ರೀತಿಗೆ ಅಡ್ಡ ಬಂದ ಜಾತಿ: ಸೃಜನ್ ಮತ್ತು ಸೌಮ್ಯಾ ನಡುವಿನ ಪರಿಚಯ, ಪ್ರೀತಿಯಾಗಿ ಬದಲಾಗಿತ್ತು. ಆರಂಭದಲ್ಲಿ ಮದುವೆಯಾಗುವುದಾಗಿ ಆತ ಭರವಸೆ ನೀಡಿದ್ದ, ಬಳಿಕ ನಂಬಿಸಿ ಮೋಸ ಮಾಡಿದ್ದ ಎಂಬುದು ಆರೋಪವಾಗಿದೆ.
ಇಬ್ಬರು ಬೇರೆ-ಬೇರೆ ಜಾತಿಯವರು. ಆದ್ದರಿಂದ ಸೃಜನ್ ಮನೆಯಲ್ಲಿ ಮದುವೆಗೆ ವಿರೋಧ ವ್ಯಕ್ತಪಡಿಸಿದ್ದರು. ತೀರ್ಥಹಳ್ಳಿಗೆ ಹೋಗುತ್ತೇನೆ ಎಂದು ಜುಲೈ 2ರಂದು ಕೊಪ್ಪದಿಂದ ಬಂದಿದ್ದ ಸೌಮ್ಯಾ, ಸೃಜನ್ಗೆ ಮನೆಗೆ ಕರೆದುಕೊಂಡು ಹೋಗುವಂತೆ ಒತ್ತಡ ಹಾಕಿದ್ದಳು.
ಸೌಮ್ಯಾಗೆ ನಮ್ಮ ಮನೆಗೆ ಈಗ ಬರಬೇಡ, ನಿಮ್ಮ ಮನೆಗೆ ವಾಪಸ್ ಹೋಗು ಎಂದು ಸೃಜನ್ ಹೇಳಿದ್ದ. ಈ ವಿಚಾರಕ್ಕೆ ಇಬ್ಬರ ನಡುವೆ ಜಗಳ ನಡೆದಿತ್ತು. ತೀರ್ಥಹಳ್ಳಿಯಿಂದ ಹೆದ್ದಾರಿಪುರಕ್ಕೆ ಬಂದ ಇಬ್ಬರು ಮತ್ತೆ ಜಗಳವಾಡಿದ್ದರು.
ಆಗ ಸೃಜನ್ ಸೌಮ್ಯಾ ಮೇಲೆ ಹಲ್ಲೆ ಮಾಡಿದ್ದ. ಆದ್ದರಿಂದ ಆಕೆ ಸಾವನ್ನಪ್ಪಿದ್ದಳು. ಬಳಿಕ ಶವವನ್ನು ಮುಂಬಾಳು ಬಳಿ ಹೂತಿಟ್ಟು, ಯುವಕ ಮನೆಗೆ ತೆರಳಿದ್ದ. ತಮ್ಮ ಪುತ್ರಿ ನಾಪತ್ತೆಯಾಗಿದ್ದಾಳೆ ಎಂದು ಕೊಪ್ಪ ಪೊಲೀಸರಿಗೆ ಸೌಮ್ಯಾ ಪೋಷಕರು ದೂರು ನೀಡಿದ್ದರು.
ಸೃಜನ್ ಹುಡುಕಿಕೊಂಡು ಸಾಗರಕ್ಕೆ ಬಂದ ಕೊಪ್ಪ ಪೊಲೀಸರ ಎದುರು ಆಕೆಯನ್ನು ಕೊಲೆ ಮಾಡಿ, ಶವ ಹೂತಿಟ್ಟ ರಹಸ್ಯವನ್ನು ಸೃಜನ್ ಹೇಳಿದ್ದ. ಆದ್ದರಿಂದ ಬುಧವಾರ ಸೃಜನ್ ಬಂಧಿಸಲಾಗಿತ್ತು. ಗುರುವಾರ ಸೌಮ್ಯಾ ಶವ ಹೊರತೆಗೆಯಲಾಗಿದೆ.
ಸೌಮ್ಯಾ ಹತ್ಯೆ ಪ್ರಕರಣದ ಕುರಿತು ತೀರ್ಥಹಳ್ಳಿ ಡಿವೈಎಸ್ಪಿ ಗಜಾನನ ವಾಮನಸುತಾರ ನೇತೃತ್ವದಲ್ಲಿ ತನಿಖೆ ನಡೆಸಲಾಗುತ್ತಿದೆ. ಶವ ಹೊರತೆಗೆದ ಜಾಗಕ್ಕೆ ಶಿವಮೊಗ್ಗ ಎಸ್ಪಿ ಮಿಥುನ್ ಕುಮಾರ್ ಆಗಮಿಸಿ, ಪರಿಶೀಲನೆ ನಡೆಸಿದರು. ಪೊಲೀಸರು ಘಟನಾ ಸ್ಥಳಕ್ಕೆ ಕೊಲೆ ಆರೋಪಿ ಸೃಜನ್ ಕರೆತಂದು ಕೂರಿಸಿದ್ದಾರೆ.
ಶವ ಹೊರ ತೆಗೆದು, ಮಹಜರು ಮಾಡಿ, ಮರಣೋತ್ತರ ಪರೀಕ್ಷೆ ಮಾಡಲು ಸ್ಥಳದಲ್ಲಿ ಶಾಮಿಯಾನ ಹಾಕಲಾಗಿದೆ. ಆದರೆ ಸುರಿಯುತ್ತಿರುವ ಮಳೆ ಪೊಲೀಸರ ಕಾರ್ಯಾಚರಣೆಗೆ ಅಡ್ಡಿ ಉಂಟು ಮಾಡಿದೆ. ಸಾಗರ ಎಸಿ ಯತೀಶ್. ಆರ್ ಸಮ್ಮುಖದಲ್ಲಿ ಮೃತದೇಹ ಹೊರ ತೆಗೆಯುವ ಕಾರ್ಯ ನಡೆಯಿತು. ಸಾಗರ ತಹಶೀಲ್ದಾರ್ ಚಂದ್ರಶೇಖರ್ ಸಹ ಸ್ಥಳಕ್ಕೆ ಆಗಮಿಸಿದರು.












Click it and Unblock the Notifications