RSS ಗೀತೆ ವಿವಾದ: ಹೈಕಮ್ಯಾಂಡ್ ಸೂಚನೆಯಿಂದ ಕ್ಷಮೆ ಕೇಳಿದ್ರಾ ಕ್ಷಮೆ ಕೇಳಿದ ಡಿಸಿಎಂ ಡಿ.ಕೆ.ಶಿವಕುಮಾರ್?
ಬೆಂಗಳೂರು, ಆಗಸ್ಟ್ 26: ಸದನದಲ್ಲಿ ನಿಂತು ಆರ್ಎಸ್ಎಸ್ ಗೀತೆ ಹಾಡಿದ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ನಡೆ ರಾಜ್ಯ ರಾಜಕೀಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿತ್ತು. ಡಿ ಕೆ ಶಿವಕುಮಾರ್ ಆರ್ ಎಸ್ ಎಸ್ ಗೀತೆ ಹಾಡಿದ ವಿಚಾರವಾಗಿ ಕಾಂಗ್ರೆಸ್ ವಲಯದಲ್ಲೂ ಕಿಚ್ಚು ಹಚ್ಚಿತ್ತು. ಆರ್ಎಸ್ಎಸ್ ಗುಣಗಾನವನ್ನ ಕೈ ನಾಯಕರು ಕೂಡ ವಿರೋಧಿಸಿದ್ರು. ಅಲ್ಲದೇ ಡಿ ಕೆ ಶಿವಕುಮಾರ್ ಕ್ಷಮೆ ಕೇಳಬೇಕು ಎಂಬ ಮಾತು ಕೈ ಪಾಳಯದಲ್ಲಿ ಕೇಳಿ ಬಂದಿದ್ದು, ಡಿ ಕೆ ಶಿವಕುಮಾರ್ ಈ ಬಗ್ಗೆ ಸುದ್ದಿಗೋಷ್ಟಿಯಲ್ಲಿ ಕ್ಷಮೆ ಕೇಳಿದ್ದಾರೆ.
ಈ ಕುರಿತು ವಿಧಾನಸೌಧದಲ್ಲಿ ಡಿ ಕೆ ಶಿವಕುಮಾರ್ ಅವರು ಮಾತನಾಡಿ, ಯಾರ ಮನಸ್ಸಿಗೂ ನೋಯಿಸಲು ನನಗೆ ಇಷ್ಟವಿಲ್ಲ. ನನ್ನ ಜೀವನ ನಿಮ್ಮ ಜೀವನದ ಮೆಟ್ಟಿಲುಗಳಾಗಬೇಕು ಎಂದುಕೊಂಡವನು ನಾನು. ಯಾರಿಗಾದ್ರೂ ಇದರಿಂದ ನೋವಾಗಿದ್ರು ನಾನು ಕ್ಷಮಾಪಣೆ ಕೇಳಲು ಸಿದ್ದ. ನನ್ನ ಮಾತಿನ ಬಗ್ಗೆ ಯಾರು ಪ್ರಶ್ನೆ ಮಾಡಿದ್ದಾರೋ ಅವರೆಲ್ಲೂ ಮೂರ್ಖರು ಎನ್ನುತ್ತಾ ಸ್ವಪಕ್ಷದವರ ವಿರುದ್ಧ ಡಿಕೆ ಶಿವಕುಮಾರ್ ಗುಡುಗಿದ್ದಾರೆ.

ನಾನು ಕೆಲವು ದಿನಗಳ ಹಿಂದೆ ಸದನದಲ್ಲಿ ಚಿನ್ನಸ್ವಾಮಿ ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಿಸಿದ ಚರ್ಚೆ ವೇಳೆ ನಮ್ಮ ನಾಯಕರಾದ ಪರಮೇಶ್ವರ್ ಅವರನ್ನು ಸಮರ್ಥಿಸಿಕೊಳ್ಳುತ್ತಾ, ನಾನು ಅವರ ಗರಡಿಯಲ್ಲಿ ಬೆಳೆದಿದ್ದೇನೆ ಎಂದು ಹೇಳಿದೆ. ಕೆಣಕಿದ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಅವರ ಕಾಲೆಳೆಯಲು ಅವರು ಬೆಳೆದು ಬಂದಿರುವ ಹಿನ್ನೆಲೆಯೂ ನನಗೆ ಗೊತ್ತಿದೆ ಎಂದು ಆರ್ ಎಸ್ಎಸ್ ಗೀತೆಯ ಎರಡು ಸಾಲು ಹೇಳಿದೆ. ಆರ್ ಎಸ್ಎಸ್ ಹೊಗಳುವುದು ನನ್ನ ಉದ್ದೇಶವಾಗಿರಲಿಲ್ಲ. ಆದರೆ ನಿರ್ದಿಷ್ಟ ಭಾಗವನ್ನು ಮಾತ್ರ ಕಟ್ ಅಂಡ್ ಪೇಸ್ಟ್ ಮಾಡಿ, ಬೇರೆ ವಿಚಾರಗಳ ಜೊತೆ ಬೆರೆಸಿ ರಾಷ್ಟ್ರ ಮಟ್ಟದ ಸುದ್ದಿ ಮಾಡಲಾಗಿದೆ ಎಂದು ಹೇಳಿದರು.
1979 ರಿಂದ ಕಾಂಗ್ರೆಸ್ ಪಕ್ಷದಲ್ಲಿ ಗುರುತಿಸಿಕೊಂಡು ವಿದ್ಯಾರ್ಥಿ ನಾಯಕನಾಗಿ ಕೆಲಸ ಮಾಡಿಕೊಂಡು ಬಂದವನು. ನಾನು ಹೊಸದಾಗಿ ಪಕ್ಷ ಸೇರಿದವನಲ್ಲ. ಯಾರಿಂದಲೂ ಪಾಠ ಹೇಳಿಸಿಕೊಳ್ಳುವ ಅವಶ್ಯಕತೆಯೂ ಇಲ್ಲ. ಇಂದಿರಾ ಗಾಂಧಿ ಅವರು ನಿಧನ ಹೊಂದಿದ ಸಂದರ್ಭದಲ್ಲಿ ನನ್ನ ಟೂರಿಂಗ್ ಟಾಕೀಸ್ ಗೆ ಇಂದಿರಾ ಚಿತ್ರಮಂದಿರ ಎಂದು ಹೆಸರಿಟ್ಟವನು ನಾನು. ನನ್ನ ಹಾಗೂ ಗಾಂಧಿ ಕುಟುಂಬದ ನಡುವಿನ ಸಂಬಂಧ ಭಕ್ತ ಹಾಗೂ ಭಗವಂತನ ನಡುವಣ ಸಂಬಂಧ ಎಂದರು.
ರಾಜಕೀಯ ನಾಯಕನಾಗಿ ಹಾಗೂ ರಾಜಕೀಯ ಶಾಸ್ತ್ರದ ವಿದ್ಯಾರ್ಥಿಯಾಗಿ, ಎನ್ಎಸ್ ಯುಐನಲ್ಲಿ ವಿದ್ಯಾರ್ಥಿ ನಾಯಕನಾಗಿ ಬೆಳೆದವನು ನಾನು. ಗಾಂಧಿ ಕುಟುಂಬ ಹಾಗೂ ಅದರ ಕೊಡುಗೆ ಸೇರಿದಂತೆ, ಕಾಂಗ್ರೆಸ್ ಪಕ್ಷದ ಇತಿಹಾಸ, ಆರ್ ಎಸ್ಎಸ್ ಇತಿಹಾಸ, ಬಿಜೆಪಿ ಇತಿಹಾಸ, ಜೆಡಿಎಸ್, ಕಮ್ಯುನಿಷ್ಟ್ ಪಕ್ಷಗಳ ಇತಿಹಾಸ, ಅಜೆಂಡಾ ತಿಳಿದಿದ್ದೇನೆ. ಇದು ನನ್ನ ಕರ್ತವ್ಯ. ಕೇರಳದಲ್ಲಿ ನಮ್ಮ ಮೈತ್ರಿ ಪಕ್ಷ ಮುಸ್ಲಿಂ ಲೀಗ್ ಯೂಥ್ ಕಾನ್ಫರೆನ್ಸ್ ಗೆ ಕೆಲ ವರ್ಷಗಳ ಹಿಂದೆ ಹೋಗಿದ್ದೆ. ಆಗ ಅವರ ಶಿಸ್ತು, ಸಂಘಟನೆ ನೋಡಿ ನಾನು ಬೆರಗಾಗಿದ್ದೆ ಎಂದು ಹೇಳಿದರು.
ನಮ್ಮ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವ ಮುನ್ನ ಹಾಗೂ ಅಧಿಕಾರಕ್ಕೆ ಬಂದ ನಂತರ ಆರ್ ಎಸ್ಎಸ್ ಹೇಗೆ ಬೇರೂರಿದೆ ಎಂದು ಅರಿತಿದ್ದೇನೆ. ರಿಸರ್ವ ಬ್ಯಾಂಕ್ ಕಚೇರಿ ಎದುರು ಆರ್ ಎಸ್ಎಸ್ ನ ದೊಡ್ಡ ಕಟ್ಟಡವಿದೆ. ವರ್ಷಕ್ಕೆ ಕೋಟ್ಯಂತರ ರೂ. ಬಾಡಿಗೆ ಪಡೆಯುತ್ತಿದ್ದಾರೆ. ಬೆಂಗಳೂರು ನಗರದಲ್ಲಿ ಎಷ್ಟು ಶಾಲೆ ಆರಂಭಿಸಿದ್ದಾರೆ. ಚನ್ನೇನಹಳ್ಳಿಯಲ್ಲಿ ಯಾವ ರೀತಿ ಭವ್ಯ ಕಟ್ಟಡ ನಿರ್ಮಿಸುತ್ತಿದ್ದಾರೆ, ರಾಜ್ಯದಲ್ಲಿ ಹೇಗೆ ಸಂಘಟನೆ ಮಾಡುತ್ತಿದ್ದಾರೆ ಎಂಬುದನ್ನು ರಾಜಕೀಯ ನಾಯಕನಾಗಿ ಅರಿತಿದ್ದೇನೆ. ಪಕ್ಷದ ಅಧ್ಯಕ್ಷನಾಗಿ ನಮ್ಮ ವಿರೋಧಿಗಳ ಸಂಘಟನೆ ಬಗ್ಗೆ ತಿಳಿಯುವುದು ನಮ್ಮ ಕರ್ತವ್ಯ ಎಂದು ತಿಳಿಸಿದರು.
ವಿದ್ಯಾರ್ಥಿ ನಾಯಕನಾಗಿದ್ದಾಗ ನನ್ನ ವಿರುದ್ಧ ಕಮ್ಯೂನಿಷ್ಟರು, ಬಲಪಂಥೀಯ ಸಿದ್ಧಾಂತದ ಎಬಿವಿಪಿಯವರು ನಿಲ್ಲುತ್ತಿದ್ದರು. ಆಗ ಪ್ರಾಧ್ಯಾಪಕರನ್ನೇ ಉಪಾಧ್ಯಕ್ಷರನ್ನಾಗಿ ಮಾಡಿಕೊಂಡು ತರಬೇತಿ ಕೊಡಿಸುತ್ತಿದ್ದರು. ನಾನು, ನಮ್ಮ ಹುಡುಗರು ಸೂಕ್ತ ತರಬೇತಿ ಪಡೆದು ಆ ಗರಡಿಯಲ್ಲಿ ತಯಾರಾದವನು ನಾನು. ಪಕ್ಷದ ಆಂತರಿಕ ರಾಜಕೀಯದ ಕಾರಣಕ್ಕೆ ನನಗೆ ಟಿಕೆಟ್ ಸಿಗದಿದ್ದಾಗಲೂ ಇಂದಿರಾ ಗಾಂಧಿ, ರಾಜೀವ್ ಗಾಂಧಿ ಫೋಟೋ ಹಾಕಿಕೊಂಡೇ ಚುನಾವಣೆ ಗೆದ್ದೆ. ಆಗ ನನ್ನ ಮನೆ ಬಾಗಿಲಿಗೆ ಎಷ್ಟೋ ಜನ ಬಂದರೂ ನಾನು ಹುಟ್ಟು ಕಾಂಗ್ರೆಸಿಗ, ಕಾಂಗ್ರೆಸಿಗನಾಗಿಯೇ ಸಾಯುತ್ತೇನೆ ಎಂದು ನಾಲ್ಕೇ ತಿಂಗಳಲ್ಲಿ ಮತ್ತೆ ಕಾಂಗ್ರೆಸ್ ಪಕ್ಷದ ಭಾಗವಾದೆ. ಈ ರೀತಿ ರಾಜಕಾರಣ ಮಾಡಿಕೊಂಡು ಬಂದಿರುವನು ನಾನು ಎಂದು ವಿವರಿಸಿದರು.
ನನ್ನ ಇತಿಹಾಸ, ನನ್ನ ಬದ್ಧತೆ, ನನ್ನ ಸಿದ್ಧಾಂತದ ಬಗ್ಗೆ ಗೊತ್ತಿಲ್ಲದೆ ರಾಜಕೀಯ ಮಾಡಿದರೆ, ಅದು ಅವರ ಇಚ್ಛೆ. ನನ್ನ ಪಕ್ಷದ ಕೆಲವು ಸಹೋದ್ಯೋಗಿಗಳು ಕೂಡ ನನ್ನ ಬಗ್ಗೆ ಟೀಕೆ ಮಾಡುತ್ತಿದ್ದಾರೆ. ನಾನು ಇಂಡಿಯಾ ಮೈತ್ರಿಕೂಟದ ನಾಯಕರಿಗೆ ಕ್ಷಮೆ ಕೋರುತ್ತೇನೆಯೇ ವಿನಃ ರಾಜಕೀಯ ಮಾಡುವವರಿಗೆ ಹೆದರುವುದಿಲ್ಲ ಎಂದು ಸ್ಪಷ್ಟಪಡಿಸಿದರು.












Click it and Unblock the Notifications