ದಸರಾ ಆನೆ ದ್ರೋಣ ಸಾವು : ಸರ್ಕಾರಕ್ಕೆ ಹೈಕೋರ್ಟ್ ನೋಟಿಸ್
ಬೆಂಗಳೂರು, ಮೇ 15 : ಮೈಸೂರು ದಸರಾ ಆನೆ ದ್ರೋಣ ಸಾವಿಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನೋಟಿಸ್ ನೀಡಿದೆ. ಮೇ 21ರಂದು ಸಮಗ್ರ ವರದಿ ನೀಡಬೇಕು ಎಂದು ಸೂಚನೆ ನೀಡಲಾಗಿದೆ.
ವಕೀಲ ಅಮೃತೇಶ್ ಸಲ್ಲಿಸಿದ್ದ ರಿಟ್ ಅರ್ಜಿಯ ವಿಚಾರಣೆ ಕರ್ನಾಟಕ ಹೈಕೋರ್ಟ್ ರಜೆ ದಿನದ ದ್ವಿಸದಸ್ಯ ಪೀಠದಲ್ಲಿ ಮಂಗಳವಾರ ನಡೆಯಿತು. ರಾಜ್ಯ ಸರ್ಕಾರ ಮತ್ತು ಅರಣ್ಯ ಇಲಾಖೆಗೆ ನೋಟಿಸ್ ಜಾರಿಗೊಳಿಸಲಾಯಿತು.
ನ್ಯಾಯಮೂರ್ತಿಗಳಾದ ಮೈಕಲ್ ಜಾನ್ ಕುನ್ನಾ ಮತ್ತು ಎಚ್.ಟಿ.ನರೇಂದ್ರ ಪ್ರಸಾದ್ ಅವರಿದ್ದ ವಿಭಾಗೀಯ ಪೀಠ ದಸರಾ ಆನೆ ದ್ರೋಣ ಸಾವಿನ ಕುರಿತು ಸಮಗ್ರ ವರದಿಯನ್ನು ಮೇ 21ಕ್ಕೆ ನೀಡುವಂತೆ ಸೂಚನೆ ನೀಡಿತು.
ಮೂರು ವರ್ಷಗಳಿಂದ ವಿಶ್ವವಿಖ್ಯಾತ ಮೈಸೂರು ದಸರಾದಲ್ಲಿ ಪಾಲ್ಗೊಳ್ಳುತ್ತಿದ್ದ ಆನೆ ಜ್ಯೂನಿಯರ್ ದ್ರೋಣ (39) ಹುಣಸೂರು ತಾಲೂಕಿನ ಮತ್ತಿಗೋಡು ಶಿಬಿರದಲ್ಲಿ ಏಪ್ರಿಲ್ 26ರಂದು ನೀರು ಕುಡಿಯುವಾಗ ಕುಸಿದು ಬಿದ್ದು ಮೃತಪಟ್ಟಿತ್ತು.

ರಿಟ್ ಅರ್ಜಿ ಸಲ್ಲಿಕೆ
ವಕೀಲ ಅಮೃತೇಶ್ ಅವರು ಹೈಕೋರ್ಟ್ಗೆ ರಿಟ್ ಅರ್ಜಿ ಸಲ್ಲಿಸಿದ್ದು, ಮತ್ತಿಗೋಡು ಶಿಬಿರದಲ್ಲಿ ಆನೆಗಳಿಗೆ ಸೂಕ್ತ ವ್ಯವಸ್ಥೆ ಇಲ್ಲ. 24 ಗಂಟೆಯೊಳಗೆ ಅಲ್ಲಿಗೆ ವೈದ್ಯರ ನೇಮಕ ಮಾಡಬೇಕು. ಆನೆಗಳಿಗೆ ಬೇಕಾದ ಪೌಷ್ಠಿಕ ಆಹಾರ ಒದಗಿಸಬೇಕು. 24 ಗಂಟೆಗಳ ಕಾಲ ಆನೆಯನ್ನು ನೋಡಿಕೊಳ್ಳಲು ರಾಜ್ಯ ಸರ್ಕಾರ ಮತ್ತು ಅರಣ್ಯ ಇಲಾಖೆಗೆ ಸೂಚಿಸಬೇಕು ಎಂದು ಮನವಿ ಮಾಡಿದ್ದರು.

ಸಮಿತಿ ರಚನೆ ಮಾಡಲು ಸಾಧ್ಯವೇ?
ದ್ರೋಣ ಆನೆ ಸಾವಿನ ಕುರಿತು ತನಿಖೆ ನಡೆಸಲು ಸಮಿತಿ ರಚನೆ ಮಾಡಲು ಸಾಧ್ಯವೇ?. ಶಿಬಿರದಲ್ಲಿ ಯಾವ ಯಾವ ವ್ಯವಸ್ಥೆ ಇದೆ. ಆನೆಗಳಿಗೆ ಏನು ಆಹಾರ ನೀಡಲಾಗುತ್ತಿದೆ. ಚಿಕಿತ್ಸೆಗೆ ಯಾವ ವ್ಯವಸ್ಥೆ ಇದೆ ಮುಂತಾದ ವಿಚಾರಗಳ ಕುರಿತು ವರದಿ ನೀಡುವಂತೆ ಕೋರ್ಟ್ ಸೂಚನೆ ನೀಡಿದೆ.

ಹೃದಯಾಘಾತದಿಂದ ನಿಧನ
ದಸರಾ ಆನೆ ದ್ರೋಣ ಹೃದಯಾಘಾತದಿಂದಾಗಿ ಮೃತಪಟ್ಟಿದೆ ಎಂದು ವೈದ್ಯರು ಹೇಳಿದ್ದರು. ಆದರೆ, ಆನೆಗಳಿಗೆ ಶಿಬಿರದಲ್ಲಿ ಸೂಕ್ತ ವ್ಯವಸ್ಥೆಗಳಿಲ್ಲ. ಅವುಗಳಿಗೆ ಚಿಕಿತ್ಸೆ ನೀಡಲು ವೈದ್ಯರಿಲ್ಲ ಎಂಬ ಆರೋಪಗಳು ಕೇಳಬಂದಿದ್ದವು.

ಜ್ಯೂನಿಯರ್ ದ್ರೋಣ
ಮೈಸೂರು ದಸರಾ ಆನೆಗಳ ಬಳಗದಲ್ಲಿ ದ್ರೋಣ ಎಂಬ ಆನೆ ಇತ್ತು. 18 ವರ್ಷಗಳ ಕಾಲ ಅಂಬಾರಿ ಹೊತ್ತು ದಾಖಲೆಯನ್ನು ಮಾಡಿತ್ತು. 1998ರಲ್ಲಿ ವಿದ್ಯುತ್ ತಂತಿ ತಗುಲಿ ದ್ರೋಣ ಮೃತಪಟ್ಟಿತ್ತು. ಬಳಿಕ ಮತ್ತೊಂದು ಕಿರಿಯ ಆನೆಗೆ ದ್ರೋಣ ಎಂದು ನಾಮಕರಣ ಮಾಡಲಾಗಿತ್ತು. ಕಳೆದ ವರ್ಷ ಮೊದಲ ಬಾರಿಗೆ ಕಿರಿಯ ದ್ರೋಣ ದಸರಾದಲ್ಲಿ ಪಾಲ್ಗೊಂಡಿತ್ತು.












Click it and Unblock the Notifications