ಕೊರೊನಾ ನಿಯಂತ್ರಣ ಸಭೆಯಲ್ಲಿ ಮಾಸ್ಕ್ ಇಲ್ಲ, ಅಂತರವೂ ಇಲ್ಲ
ಬೆಂಗಳೂರು, ಡಿ. 21: ಓಮಿಕ್ರಾನ್ ರೂಪಾಂತರಿ ಕೊರೊನಾ ವೈರಸ್ ಭೀತಿ ನಡುವೆ ಮಾಸ್ಕ್ ಧರಿಸದವರನ್ನು ಅಡ್ಡಗಟ್ಟಿ ವಸೂಲಿ ಮಾಡಲು ಬೆಂಗಳೂರಿನ ಬೀದಿಗಳಿಗೆ ಮಾರ್ಷಲ್ಗಳನ್ನು ಛೂ ಬಿಟ್ಟಿದ್ದಾರೆ. ಆದರೆ, 'ಕಾಮನ್ ಮ್ಯಾನ್' ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಬೆಳಗಾವಿಯಲ್ಲಿ ಮಂಗಳವಾರ ನಡೆದ ಸಭೆಯಲ್ಲಿ ಸಿಎಂ ಸೇರಿದಂತೆ ಸಚಿವ ಮಹಾಶಯರು ಮತ್ತು ಅಧಿಕಾರಿಗಳು ಮಾಸ್ಕ್ ಧರಿಸದೇ ಕೊರೊನಾ ನಿಯಮ ಉಲ್ಲಂಘನೆ ಮಾಡಿದ್ದಾರೆ. ಇದು ಸಾರ್ವಜನಿಕ ವಲಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಅದು ಕೊರೊನಾ ವೈರಾಣುಗೆ ಸಂಬಂಧಿಸಿದ ಮಹತ್ವದ ಸಭೆಯಲ್ಲಿ ಮಾಸ್ಕ್ ಧರಿಸದೇ ಇರುವುದು ಕೊರೊನಾ ನಿಯಂತ್ರಣದ ನಿಯಮ ಗಾಳಿಗೆ ತೂರಿ ತಮ್ಮ ಬದ್ಧತೆ ಎಂತಹದ್ದು ಎಂಬುದನ್ನು ಸಮಾಜಕ್ಕೆ ಪ್ರದರ್ಶಿಸಿದ್ದಾರೆ.

ಓಮಿಕ್ರಾನ್ ಭೀತಿ:
ವಿಶ್ವದಲ್ಲಿ ಓಮಿಕ್ರಾನ್ ರೂಪಾಂತರಿ ಭೀತಿ ಹುಟ್ಟಿಸಿದೆ. ಇಂಗ್ಲೆಂಡ್ ಸೇರಿದಂತೆ ಹಲವು ರಾಷ್ಟ್ರಗಳು ಲಾಕ್ಡೌನ್ ಮೊರೆ ಹೋಗಿವೆ. ದೇಶದಲ್ಲಿ ಓಮಿಕ್ರಾನ್ ಪ್ರಕರಣಗಳು ಪತ್ತೆಯಾಗಿವೆ. ವಿಮಾನ ಯಾನ ಪ್ರಯಾಣಿಕರ ಮೇಲೆ ವಿಧಿಸಬಾರದಂತಹ ಷರತ್ತುಗಳನ್ನು ವಿಧಿಸಲಾಗಿದೆ. ಇನ್ನು ಸಾಮಾನ್ಯ ಜನರು ಕಡ್ಡಾಯವಾಗಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಜತೆಗೆ ಮಾಸ್ಕ್ ಕಡ್ಡಾಯ ಧರಿಸವಂತೆ ತಜ್ಞರು ಸೂಚನೆ ನೀಡಿದ್ದಾರೆ.

ಮಾರ್ಷಲ್ಗಳಿಂದ ಕೇಸು:
ಓಮಿಕ್ರಾನ್ ಭೀತಿ ಬೆನ್ನಲ್ಲೇ, ಬೆಂಗಳೂರು ಸೇರಿದಂತೆ ನಗರಗಳಲ್ಲಿ ಸಾಮಾಜಿಕ ಅಂತರ ಕಾಪಾಡುವಂತೆ ಸಾರ್ವಜನಿಕರಿಗೆ ಸೂಚಿಸಲಾಗಿದೆ. ಕಡ್ಡಾಯವಾಗಿ ಮಾಸ್ಕ್ ಧರಿಸುವಂತೆ ಷರತ್ತು ವಿಧಿಸಲಾಗಿದೆ. ಮಾಸ್ಕ್ ಧರಿಸದೇ ಓಡಾಡುವರ ವಿರುದ್ಧ ಕೇಸು ಜಡಿದು ದಂಡ ಕೀಳೋಕೆ ಮಾರ್ಷಲ್ಗಳನ್ನು ಬೆಂಗಳೂರು ಮಹಾನಗರ ಪಾಲಿಕೆ ರಸ್ತೆಗೆ ಇಳಿಸಿದೆ. ಅದಾಗಲೇ ವಾಹನ ಅಡ್ಡ ಗಟ್ಟಿ ಮಾಸ್ಕ ಧರಿಸದವರ ಮೇಲೆ ದಂಡಾಸ್ತ್ರ ಪ್ರಯೋಗಿಸಿದ್ದಾರೆ. ಸಿಕ್ಕ ಸಿಕ್ಕವರ ಮೇಲೆ ಮಾರ್ಷಲ್ಗಳು ಕೇಸು ಜಡಿಯುತ್ತಿದ್ದಾರೆ.

ಬೆಳಗಾವಿಯಲ್ಲಿ ಕೊರೊನಾ ನಿಯಂತ್ರಣ ಸಭೆ:
ವಿಶೇಷ ಅಂದ್ರೆ ಬೆಳಗಾವಿ ಸುವರ್ಣ ಸೌಧದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕೋವಿಡ್ ವೈರಾಣು ವಿಷಯಕ್ಕೆ ಸಂಬಂಧಿಸಿದಂತೆ ಮಂಗಳವಾರ ಸಚಿವರ ಮತ್ತು ಅಧಿಕಾರಿಗಳ ಸಮ್ಮುಖದಲ್ಲಿ ಸಭೆ ನಡೆಸಿದ್ದಾರೆ. ಅದರಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾಸ್ಕ್ ಧರಿಸಿಲ್ಲ. ಮುಖ್ಯಮಂತ್ರಿಗಳು ಮಾತನಾಡುವ ಅನಿವಾರ್ಯತೆಯಿಂದ ಮಾಸ್ಕ ಧರಿಸಿಲ್ಲ ಎಂದು ಒಪ್ಪುವುದಾದರೂ, ಒಂದು ಅಡಿಯೂ ಅಂತರ ಕಾಯ್ದುಕೊಳ್ಳದೇ ರಾಜ್ಯದ ಆರೋಗ್ಯ ಮಂತ್ರಿ ಸಾಮಾಜಿಕ ಅಂತರ ಗಾಳಿಗೆ ತೂರಿ ಕೂತಿದ್ದಾರೆ. ಪಕ್ಕದಲ್ಲಿಯೇ ಕೂತಿರುವ ಉನ್ನತ ಶಿಕ್ಷಣ ಸಚಿವ ಅಶ್ವತ್ಥ್ ನಾರಾಯಣ ಅವರು ಮಾಸ್ಕ ಧರಿಸಿಲ್ಲ. ಅದೂ ಕೊರೊನಾ ನಿಯಂತ್ರಣ ಮಹತ್ವದ ಸಭೆಯಲ್ಲಿ ಕಾಮನ್ ಮ್ಯಾನ್ ಮತ್ತು ಸಚಿವರೇ ನಿಯಮ ಉಲ್ಲಂಘನೆ ಮಾಡಿದರೆ ಸಮಾಜಕ್ಕೆ ಯಾವ ಸಂದೇಶ ರವಾನಿಸಿದಂತಾಗುತ್ತದೆ ?

ಜನರಿಗೊಂದು, ಜನ ಪ್ರತಿನಿಧಿಗಳಿಗೊಂದು ಕಾನೂನು:
ಓಮಿಕ್ರಾನ್ ಕೇವಲ ಜನ ಸಾಮಾನ್ಯರಿಗೆ ಮಾತ್ರ ಬರುತ್ತದೆಯೇ? ಸಿಎಂ, ಸಚಿವರು ಹಾಗೂ ಅಧಿಕಾರಿಗಳಿಗೆ ಬರುವುದಿಲ್ಲವೇ? ಇದೇ ಮಹತ್ವದ ಸಭೆಯಲ್ಲಿ ಸರ್ಕಾರದ ಮುಖ್ಯ ಕಾರ್ಯದರ್ಶಿ ಪಿ. ರವಿಕುಮಾರ್ ಕೂಡ ಮಾಸ್ಕ್ ಧರಿಸಿಲ್ಲ. ಅವರು ಪಕ್ಕದಲ್ಲಿರುವ ಎಲ್ಲಾ ಅಧಿಕಾರಿಗಳು ಮಾಸ್ಕ್ ಧರಿಸಿದ್ದಾರೆ. ಮಾಸ್ಕ್ ಧರಿಸದೇ, ಸಾಮಾಜಿಕ ಅಂತರ ಕಾಯ್ದುಕೊಳ್ಳದೇ ಇವರು ಸಭೆ ನಡೆಸಬಹುದು ಎಂದಾದರೆ, ಸಿನಿಮಾ ಥಿಯೇಟರ್ಗಳಿಗೆ , ಸಾರ್ವಜನಿಕ ಕಾರ್ಯಕ್ರಮಗಳಿಗೆ ಕೊರೊನಾ ನಿರ್ಬಂಧ ವಿಧಿಸುವ ಅಗತ್ಯವೇನು? ಜನ ಸಾಮಾನ್ಯರಿಗೊಂದು ಕಾನೂನು ? ಸಚಿವರಿಗೊಂದು ಕಾನೂನೇ ? ಜನ ಪ್ರತಿನಿಧಿಗಳೇ ಕೊರೊನಾ ನಿಯಮ ಗಾಳಿಗೆ ತೂರಿ ನಗೆಪಾಟಲಿಗೆ ಗುರಿಯಾಗಿದ್ದಾರೆ. ಕೊರೊನಾ ನಿಯಮ ಪಾಲನೆ ವಿಚಾರದಲ್ಲಿ ಜನ ಸಾಮಾನ್ಯರಿಂದ ಹಣ ಪಡೆಯೋಕೆ ನಿಯಮ ರೂಪಿಸಿ ಕೈತೊಳೆದುಕೊಂಡಿದ್ದಾರೆ. ಇದು ಆಡಳಿತ ಪಕ್ಷದ ಪರಿಸ್ಥಿತಿ.

ವಿರೋಧ ಪಕ್ಷದ ಕಥೆ ಕೇಳಿ:
ಇನ್ನು ವಿರೋಧ ಪಕ್ಷ ಕಾಂಗ್ರೆಸ್ದು ಅದೇ ಹಾದಿ. ಕಾಂಗ್ರೆಸ್ ನಾಯಕರ ಸಭೆಯಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಹೊರತು ಪಡಿಸಿದರೆ ಬಹುತೇಕ ನಾಯಕರು ಮಾಸ್ಕ ಧರಿಸಿಲ್ಲ, ಸಾಮಾಜಿಕ ಅಂತರ ಕೂಡ ಕಾಯ್ದುಕೊಳ್ಳದೇ ಸಭೆ ನಡೆಸಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮತ್ತು ಅವರಿಗೆ ಹೊಂದಿಕೊಂಡಂತೆ ನಿಂತಿರುವ ಇತರೆ ನಾಯಕರಲ್ಲಿ ಒಬ್ಬರಲ್ಲೂ ಮಾಸ್ಕ ಕೂಡ ಕಾಣುತ್ತಿಲ್ಲ. ಸಿದ್ದರಾಮಯ್ಯ ಮಾತ್ರ ಮಾಸ್ಕ ಧರಿಸಿದ್ದಾರೆ. ಜನ ನಾಯಕರೇ ಹೀಗಿರುವಾಗ ಜನ ಸಾಮಾನ್ಯರು ಯಾಕೆ ಪಾಲಿಸಬೇಕು ? ಜನರಿಗೊಂದು ಕಾನೂನು, ಜನ ಪ್ರತಿನಿಧಿಗಳಿಗೊಂದು ಕಾನೂನೇ ? ಇಲ್ಲವೇ ಓಮಿಕ್ರಾನ್ ಹರಡದಂತೆ ವಿನಾಯಿತಿ ಪಡೆದು ಮಾಸ್ಕ್ ಗೆ ಕೋಕ್ ಕೊಟ್ಟಿದ್ದಾರಾ ? ದೇವರೇ ಬಲ್ಲ.












Click it and Unblock the Notifications