ಕೆಎಸ್ಆರ್ಟಿಸಿ ಬಸ್ ಹತ್ತುವ ಮುನ್ನ ಇದನ್ನು ತಿಳಿಯಿರಿ
ಬೆಂಗಳೂರು, ಜುಲೈ 01 : ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಪ್ರಯಾಣಿಕರ ಸುರಕ್ಷತೆಗೆ ಹಲವಾರು ಕ್ರಮಗಳನ್ನು ಕೈಗೊಂಡಿದೆ. ಬಸ್ನಲ್ಲಿ ಸಂಚಾರ ಮಾಡುವ ಮುನ್ನ ಎಲ್ಲಾ ಪ್ರಯಾಣಿಕರ ಆರೋಗ್ಯ ತಪಾಸಣೆ ನಡೆಸಲಾಗುತ್ತದೆ. ಬಸ್ನಲ್ಲಿ ಪ್ರಯಾಣ ಮಾಡುವ ಮುನ್ನ ಇದನ್ನು ಜನರು ತಿಳಿಯಬೇಕು.
Recommended Video
ಬೆಂಗಳೂರು ನಗರದಲ್ಲಿ ಕೊರೊನಾ ವೈರಸ್ ಸೋಂಕಿನ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿವೆ. ಆದ್ದರಿಂದ ಬೆಂಗಳೂರು ನಗರದಿಂದ ಹೊರ ಹೋಗುವ ಪ್ರಯಾಣಿಕರ ತಪಾಸಣೆಯನ್ನು ಕಡ್ಡಾಯವಾಗಿ ನಡೆಸಲಾಗುತ್ತಿದೆ. ತಪಾಸಣೆಗೆ ಒಳಪಟ್ಟವರು ಮಾತ್ರ ಬಸ್ ಹತ್ತಬಹುದು.
ಮೆಜೆಸ್ಟಿಕ್ ಬಸ್ ನಿಲ್ದಾಣ ಮಾತ್ರವಲ್ಲ. ವಿವಿಧ ಪಿಕಪ್ ಪಾಯಿಂಟ್ಗಳಲ್ಲಿ ಬಸ್ ಹತ್ತುವ ಪ್ರಯಾಣಿಕರಿಗೂ ಆರೋಗ್ಯ ತಪಾಸಣೆ ನಡೆಸಲು ಕೇಂದ್ರಗಳಿವೆ. ನವರಂಗ್, ಯಶವಂತಪುರದಲ್ಲಿ ಕೇಂದ್ರ ಸ್ಥಾಪನೆ ಮಾಡಲಾಗಿದೆ.
ಲಾಕ್ ಡೌನ್ ಜಾರಿಯಲ್ಲಿದ್ದರೂ ಕರ್ನಾಟಕದೊಳಗೆ ಸಂಚಾರ ನಡೆಸಲು ಕೆಎಸ್ಆರ್ಟಿಸಿ ಬಸ್ಗಳಿಗೆ ಅವಕಾಶ ನೀಡಲಾಗಿದೆ. ಅಂತರರಾಜ್ಯ ಬಸ್ ಸೇವೆಗಳು ಇನ್ನೂ ಆರಂಭವಾಗಬೇಕಿದೆ. ಕೆಎಸ್ಆರ್ಟಿಸಿ ಎಸಿ ಬಸ್ಗಳ ಸಂಚಾರವನ್ನು ಜೂನ್ 25ರಿಂದ ಆರಂಭಿಸಿದೆ.

ಒಂದೇ ಪ್ರವೇಶ ದ್ವಾರ
ಮೆಜೆಸ್ಟಿಕ್ ಬಸ್ ನಿಲ್ದಾಣದಲ್ಲಿ ಪ್ರಯಾಣಿಕರ ಆಗಮನಕ್ಕೆ ಒಂದೇ ಪ್ರವೇಶ ದ್ವಾರ ಉಳಿಸಿಕೊಳ್ಳಲಾಗಿದೆ. ಬೇರೆ ಪ್ರವೇಶ ದ್ವಾರದ ಮೂಲಕ ಪ್ರಯಾಣಿಕರು ಬರದಂತೆ ಎಚ್ಚರವಹಿಸಲಾಗಿದೆ. ನಿಲ್ದಾಣಕ್ಕೆ ಬಂದ ತಕ್ಷಣ ಕೈಗಳನ್ನು ಸ್ಯಾನಿಟೈಸ್ ಮಾಡಿಕೊಂಡು ಮುಂದೆ ಸಾಗಬೇಕು.

ಥರ್ಮಲ್ ಸ್ಕ್ಯಾನಿಂಗ್ ಕಡ್ಡಾಯ
ಬಸ್ ನಿಲ್ದಾಣದ ಸಿಬ್ಭಂದಿ ಪ್ರಯಾಣಿಕರ ಥರ್ಮಲ್ ಸ್ಕ್ಯಾನಿಂಗ್ ನಡೆಸುತ್ತಾರೆ. ದೇಹದ ಉಷ್ಣತೆ ಸಮತೋಲನ ಸ್ಥಿತಿಯಲ್ಲಿ ಇದ್ದರೆ ಮಾತ್ರ ಬಸ್ ಹತ್ತಲು ಅವಕಾಶ ನೀಡಲಾಗುತ್ತದೆ. ಬಸ್ನಲ್ಲಿ ಪ್ರಯಾಣಿಸಬಹುದು ಎಂಬ ಸೀಲ್ ಕೈಗೆ ಹಾಕಲಾಗುತ್ತದೆ.

ಕ್ವಾರಂಟೈನ್ ಸೀಲ್ ಅಲ್ಲ
ಎಡಗೈಗೆ ಹಾಕುವ ಸಣ್ಣ ವೃತ್ತಾಕಾರದ ಸೀಲ್ಗೂ ಹೋಂ ಕ್ವಾರಂಟೈನ್ ಸೀಲ್ಗೂ ಯಾವುದೇ ಸಂಬಂಧವಿಲ್ಲ. ಕೆಲವು ನಿಮಿಷಗಳಲ್ಲಿ ಈ ಸೀಲ್ ಅಳಿಸಿ ಹೋಗಲಿದೆ. ಸೀಲ್ ಹಾಕಿದವರನ್ನು ಮಾತ್ರ ಬಸ್ಗೆ ಹತ್ತಿಸಿಕೊಳ್ಳಲಾಗುತ್ತದೆ. ನಿರ್ವಾಹಕರಿಗೆ ನೀವು ಸೀಲ್ ತೋರಿಸುವುದು ಕಡ್ಡಾಯವಾಗಿದೆ.

ನಿರ್ವಾಹಕರಿಗೆ ನೋಟಿಸ್
ಕೈಯಲ್ಲಿ ಸೀಲ್ ಇಲ್ಲದ ಪ್ರಯಾಣಿಕರನ್ನು ಹತ್ತಿಸಿಕೊಂಡರೆ ನಿರ್ವಾಹಕರಿಗೆ ನೋಟಿಸ್ ನೀಡಲಾಗುತ್ತದೆ. ಮೆಜೆಸ್ಟಿಕ್ ಹೊರತುಪಡಿಸಿ ಬೆಂಗಳೂರಿನ ವಿವಿಧ ಪಿಕಪ್ ಪಾಯಿಂಟ್ಗಳಲ್ಲಿಯೂ ಪ್ರಯಾಣಿರ ದೇಹದ ಉಷ್ಣತೆಯನ್ನು ತಪಾಸಣೆ ಮಾಡಲಾಗುತ್ತದೆ.












Click it and Unblock the Notifications