ನಿಂದಕರಿಗೆ ತಕ್ಕ ಉತ್ತರ ಕೊಟ್ಟ ಮಂಡ್ಯದ ರಮ್ಯಾ
ಮಂಡ್ಯ, ಜೂ. 16 : "ತಾವು ಇನ್ನು ಮುಂದೆ ಮಂಡ್ಯದಲ್ಲೇ ವಾಸಿಸಲಿದ್ದು, ಜನರ ಕಷ್ಟ-ಸುಖಗಳಲ್ಲಿ ಭಾಗಿಯಾಗುತ್ತೇನೆ. ಬಾಡಿಗೆ ಸಮಸ್ಯೆಯಿಂದಾಗಿ ಮಂಡ್ಯದಲ್ಲಿದ್ದ ಮನೆಯನ್ನು ಖಾಲಿ ಮಾಡಬೇಕಾಯಿತು" ಎಂದು ಮಂಡ್ಯ ಕ್ಷೇತ್ರದ ಮಾಜಿ ಸಂಸದೆ ರಮ್ಯಾ ಹೇಳಿದ್ದಾರೆ.
ಸೋಮವಾರ ಮಂಡ್ಯಕ್ಕೆ ಆಗಮಿಸಿದ್ದ ರಮ್ಯಾ, ಮೌಲ್ವಿಯಿಂದ ಕಿರುಕುಳಕ್ಕೊಳಗಾದ ಬಾಲಕಿಯನ್ನು ಭೇಟಿ ಮಾಡಿ ಸಾಂತ್ವನ ಹೇಳಿದ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದರು. ಲೋಕಸಭೆ ಚುನಾವಣೆ ನಂತರ ವಿಶ್ರಾಂತಿ ಪಡೆಯುತ್ತಿದ್ದರಿಂದ ಮಂಡ್ಯಕ್ಕೆ ಬರಲಾಗಲಿಲ್ಲ. ಆದ್ದರಿಂದ ಕೆಲವರು ಬೇರೆ ಬೇರೆ ರೀತಿಯ ವದಂತಿಗಳನ್ನು ಹಬ್ಬಿಸುತ್ತಿದ್ದಾರೆ. ನಾನು ಮಂಡ್ಯದಲ್ಲೇ ಇದ್ದು ರಾಜಕೀಯ ಮುಂದುವರೆಸುತ್ತೇನೆ ಎಂದು ರಮ್ಯಾ ಸ್ಪಷ್ಟಪಡಿಸಿದರು.

ಬಾಡಿಗೆ ಸಮಸ್ಯೆಯಿಂದಾಗಿ ಮಂಡ್ಯದಲ್ಲಿದ್ದ ಮನೆಯನ್ನು ಖಾಲಿ ಮಾಡಬೇಕಾದ ಪರಿಸ್ಥಿತಿ ನಿರ್ಮಾಣವಾಯಿತು. ನಾನು ಮಂಡ್ಯವನ್ನು ಬಿಟ್ಟು ಎಲ್ಲಿಗೂ ಹೋಗುವುದಿಲ್ಲ. ಇನ್ನು ಮುಂದೆ ಮಂಡ್ಯದಲ್ಲೇ ವಾಸಿಸಲಿದ್ದು, ಜನರ ಕಷ್ಟ-ಸುಖಗಳಲ್ಲಿ ಭಾಗಿಯಾಗುತ್ತೇನೆ ಎಂದು ಭರವಸೆ ನೀಡಿದರು. [ರಮ್ಯಾ ಸೋಲಿಗೆ ಯಾರು ಕಾರಣ ಗೊತ್ತೆ?]
ಯಾರಿಗೂ ದೂರು ಕೊಟ್ಟಿಲ್ಲ : ಲೋಕಸಭೆ ಚುನಾವಣೆಯಲ್ಲಿನ ಸೋಲಿನ ಕುರಿತು ನಾನು ಯಾರ ವಿರುದ್ಧವೂ ಹೈಕಮಾಂಡ್ ನಾಯಕರಿಗೆ ದೂರು ನೀಡಿಲ್ಲ. ಆದರೂ ನನ್ನ ವಿರುದ್ಧ ಇಲ್ಲಸಲ್ಲದ ಆರೋಪಗಳು ಕೇಳಿ ಬರುತ್ತಿವೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು. [ಬಾಲಕಿಗೆ ಹಿಂಸೆ ನೀಡಿದ್ದ ಮೌಲ್ವಿ ಬಂಧನ]
ನನ್ನ ಸೋಲಿಗೆ ಯಾರು ಕಾರಣ ಎಂಬುದು ಜನರಿಗೆ ತಿಳಿದಿದೆ. ಅದರ ಕುರಿತು ಪ್ರತ್ಯೇಕವಾದ ದೂರು ನೀಡುವ ಅಗತ್ಯವಿಲ್ಲ. ನಾನು ಯಾರ ವಿರುದ್ಧವಾದರೂ ಹೈಕಮಾಂಡ್ ನಾಯಕರಿಗೆ ದೂರು ನೀಡಿರುವ ಬಗ್ಗೆ ದಾಖಲೆಗಳಿದ್ದರೆ, ಅದನ್ನು ಬಹಿರಂಗ ಪಡಿಸುವಂತೆ ಅವರು ಸವಾಲು ಹಾಕಿದರು.
ಧನ್ಯವಾದ ಸಲ್ಲಿಸಲಿರುವ ರಮ್ಯಾ : ಲೋಕಸಭೆ ಚುನಾವಣೆ ನಂತರ ಮಾಜಿ ಸಂಸದೆ ರಮ್ಯಾ ಅವರು ಜೂ. 16, 17 ಮತ್ತು 18ರಂದು ಮಂಡ್ಯ ಜನರಿಗೆ ಧನ್ಯವಾದ ಸಲ್ಲಿಸುವ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದಾರೆ.
Mandya district thanksgiving rprogramme 16th 17th & 18th June.
— Divya Spandana/Ramya (@divyaspandana) June 4, 2014 ರಾಜಕೀಯವಾಗಿ ಕಲಿಯುವುದು ತುಂಬಾ ಇದೆ : ನನ್ನ ಸೋಲಿನ ಚರ್ಚೆ ಬೇಡ ಅದು ಮುಗಿದ ಅಧ್ಯಾಯ ಎಂದು ಹೇಳಿದ ರಮ್ಯಾ ಅವರು, ಬಿಡುವಿನ ವೇಳೆಯಲ್ಲಿ ನಾನು ರಾಜಕೀಯವಾಗಿ ಕಲಿಯುವುದಕ್ಕೆ ತುಂಬ ಇದೆ ಎಂದು ತಿಳಿಸಿದರು.
ಯಾವುದೇ ಹುದ್ದೆ ಬೇಡ : ಲೋಕಸಭೆ ಚುನಾವಣೆಯ ಸಂದರ್ಭದಲ್ಲಿ ಪಕ್ಷದ ಎಲ್ಲಾ ನಾಯಕರನ್ನು ಒಗ್ಗೂಡಿಸುವ ಪ್ರಯತ್ನವನ್ನು ನಾನು ಮಾಡಿದ್ದೇನೆ. ಆದ್ದರಿಂದ ಬಹಳಷ್ಟು ಜನ ನನ್ನ ವಿರುದ್ಧ ಅಪಪ್ರಚಾರ ಮಾಡಿದರು ಎಂದು ಹೇಳಿದ ರಮ್ಯಾ ಅವರು, ನಾನು ಪಕ್ಷಕ್ಕಾಗಿ ದುಡಿಯುತ್ತೇನೆ. ಯಾವುದೇ ಹುದ್ದೆಯ ಆಕಾಂಕ್ಷಿಯಲ್ಲ ಎಂದು ಸ್ಪಷ್ಟಪಡಿಸಿದರು.












Click it and Unblock the Notifications