ಹಾವೇರಿಯಲ್ಲಿ ರಾಹುಲ್ ಗಾಂಧಿ ಭೇಟಿಗೆ ಕ್ಷಣಗಣನೆ
ಹಾವೇರಿ, ಅಕ್ಟೋಬರ್, 10 : ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಕೆಲವೇ ಕ್ಷಣಗಳಲ್ಲಿ ಹಾವೇರಿ ತಲುಪಲಿದ್ದಾರೆ. ಝಡ್ ಪ್ಲಸ್ ಭದ್ರತೆಯು ರಾಹುಲ್ ಭೇಟಿಯಾಗುವ ಮುನ್ಸೂಚನೆ ಸಿಗುತ್ತಿದ್ದಂತೆ ಭದ್ರತಾ ವ್ಯವಸ್ಥೆ ಮಾಡಿಕೊಂಡಿದ್ದು, ಇದರ ಉಸ್ತುವಾರಿಯನ್ನು ಎಸ್ಪಿಜಿ ಸಹಾಯಕ ಮಹಾನಿರೀಕ್ಷಕ ರೋಹಿತಾಶ್ವ ವಹಿಸಿಕೊಂಡಿದ್ದಾರೆ.
ಹಾವೇರಿ ಮದುವಣಗಿತ್ತಿಯಂತೆ ಸಿಂಗಾರಗೊಂಡಿದ್ದು, ಈಗಾಗಲೇ ಎಲ್ಲಾ ಸರ್ಕಾರಿ ಕಟ್ಟಡಗಳು ವಿವಿಧ ಬಣ್ಣಗಳಿಂದ ರಾರಾಜಿಸುತ್ತಿದೆ. ರಾಹುಲ್ ಗಂಧಿ ಅವರೊಂದಿಗೆ ಸಂವಾದ ನಡೆಸಲು ಆಯ್ಕೆಯಾಗಿರುವ ವಿದ್ಯಾರ್ಥಿಗಳು ಇಂಗ್ಲೀಷ್ ಭಾಷೆಯಲ್ಲಿ ವಿಶೇಷ ತರಬೇತಿ ಪಡೆದುಕೊಂಡಿದ್ದು, ಹಲವಾರು ಪ್ರಶ್ನೆಗಳನ್ನು ಸಿದ್ದ ಮಾಡಿಟ್ಟುಕೊಂಡಿದ್ದಾರೆ.[ವಾಜಪೇಯಿ ಅವರನ್ನು ಮತ್ತೆ ಪ್ರಧಾನಿ ಮಾಡಿದ ಸಿದ್ದರಾಮಯ್ಯ!]
ರಾಜ್ಯದಲ್ಲಿ ಈ ವರ್ಷ ಮಂಡ್ಯ ಹಾಗೂ ಹಾವೇರಿ ಜಿಲ್ಲೆಯಲ್ಲಿ ಅತಿಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಶುಕ್ರವಾರ ಮಂಡ್ಯ ಜಿಲ್ಲೆಗೆ ಭೇಟಿ ಮಾಡಿದ ರಾಹುಲ್, ಶನಿವಾರ ಹಾವೇರಿಯ ಸುಮಾರು 250ಕ್ಕೂ ಹೆಚ್ಚು ರೈತರನ್ನು ಭೇಟಿ ಮಾಡಿ ಮಾತುಕತೆ ಕೈಗೊಳ್ಳಲಿದ್ದಾರೆ.
ನಗರದ ಹೆಲಿಪ್ಯಾಡ್ ನಲ್ಲಿ ಬಂದಿಳಿಯುವ ರಾಹುಲ್ ಗೆ ಮನವಿ ಸಲ್ಲಿಸಲು ನಾನಾ ಸಂಘಟನಾ ಪದಾಧಿಕಾರಿಗಳು ಸಿದ್ಧರಾಗಿದ್ದು, ಅವರಿಗಾಗಿ ವಿಶೇಷ ವ್ಯವಸ್ಥೆ ಕಲ್ಪಿಸಲಾಗಿದೆ. ಶಾಸಕ ಕೆ.ಬಿ ಕೋಳಿವಾಡ ಅವರು ರೈತ ಸಮಾವೇಶದ ಸಂಪೂರ್ಣ ಉಸ್ತುವಾರಿ ವಹಿಸಿಕೊಂಡಿದ್ದಾರೆ.
ಭದ್ರತಾ ಕೋಟೆ ನಿರ್ಮಾಣ :
ರಾಹುಲ್ ಭೇಟಿ ನಿಮಿತ್ತ 4000ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿ ನೇತೃತ್ವದಲ್ಲಿ ಭದ್ರತಾ ವ್ಯವಸ್ಥೆ ಮಾಡಲಾಗಿದೆ. ರಾಹುಲ್ ತೆರಳುವ ಸ್ಥಳಗಳಲ್ಲಿ ಬ್ಯಾರಿಕೇಡ್ ಗಳನ್ನು ಹಾಕಿದ್ದಾರೆ. ಹಲವು ರಸ್ತೆಗಳಲ್ಲಿ ಜನರ ಓಡಾಟ, ವಾಹನ ಸಂಚಾರ ಸ್ಥಗಿತಗೊಳಿಸಲಾಗಿದೆ.
ರೈತ ಸಮಾವೇಶಕ್ಕಾಗಿ 15 ಎಕರೆಗೂ ಹೆಚ್ಚು ಪ್ರದೇಶಗಳನ್ನು ಸ್ವಚ್ಛಗೊಳಿಸಿ ಸಿದ್ಧತೆ ಮಾಡಿಕೊಳ್ಳಲಾಗಿದೆ. ವೇದಿಕೆಯಲ್ಲಿ 40ಕ್ಕೂ ಹೆಚ್ಚು ಮಂದಿ ಕುಳಿತುಕೊಳ್ಳುವ ವ್ಯವಸ್ಥೆ ಮಾಡಲಾಗಿದೆ.
ಮುಖ್ಯ ವೇದಿಕೆಯಲ್ಲಿ 6 ಜನರಿಗೆ ಮಾತ್ರ ಅವಕಾಶ. ಮಾಧ್ಯಮದವರಿಗಾಗಿ 500 ಸೀಟುಗಳನ್ನು ಕಾಯ್ದಿರಿಸಲಾಗಿದೆ. ಶಾಸಕರು, ಸಚಿವರು ಮತ್ತು ಕಾಂಗ್ರೆಸ್ ಪದಾಧಿಕಾರಿಗಳಿಗಾಗಿ 2000ಕ್ಕೂ ಹೆಚ್ಚು ಆಸನಗಳನ್ನು ಮೀಸಲಿಡಲಾಗಿದೆ.