ʼಅವರಿಗೆಲ್ಲ ಜೈಲುಗಳೇ ಸಾಕಾಗಲ್ಲʼ: ಸಚಿವೆ ವಾರ್ನಿಂಗ್ ಕೊಟ್ಟಿದ್ದು ಯಾರಿಗೆ?
ಜಾತಿ ನಿಂದನೆ ಹಾಗೂ ಕೊಲೆ ಬೆದರಿಕೆ ಕೇಸ್ನಲ್ಲಿ ಬಿಜೆಪಿ ಶಾಸಕ ಮುನಿರತ್ನ ಅವರ ಬಂಧನದ ವಿಚಾರವಾಗಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಖಾರವಾಗಿ ಮಾತನಾಡಿದ್ದಾರೆ. ಅಲ್ಲದೆ ಮುನಿರತ್ನ ಅವರ ಬಂಧನದ ಹಿಂದೆ ಕಾಂಗ್ರೆಸ್ನ ಷಡ್ಯಂತ್ರವಿದೆ ಎನ್ನುವ ಆರೋಪಕ್ಕೂ ಅವರು ಪ್ರತಿಕ್ರಿಯಿಸಿದ್ದಾರೆ.
ಇಂದು ಕಲಬುರಗಿಯಲ್ಲಿ ಮಾತನಾಡಿರುವ ಅವರು, ನಾವು ಬಿಜೆಪಿಯವರ ಮೇಲೆ ಷಡ್ಯಂತ್ರ ಮಾಡುವ ಅಗತ್ಯವಿಲ್ಲ. ಒಂದು ವೇಳೆ ನಾವೆಲ್ಲ ಬಿಜೆಪಿಯವರಂತೆಯೇ ಷಡ್ಯಂತ್ರ ಮಾಡಲು ನಿಂತರೆ, ಅವರಿಗೆಲ್ಲ ಜೈಲುಗಳೇ ಸಾಕಾಗುವುದಿಲ್ಲ ಎಂದು ತಿರುಗೇಟು ನೀಡಿದ್ದಾರೆ.

ರಾಜಕಾರಣಿ ಅಂದ ಮೇಲೆ ಒಂದು ಜವಾಬ್ದಾರಿಯುತ ಸ್ಥಾನದಲ್ಲಿರುತ್ತಾರೆ. ಅಲ್ಲದೆ ರಾಜಕಾರಣಿಗಳು ಜನರೂ ಫಾಲೋ ಮಾಡ್ತಾರೆ. ಹಾಗಿದ್ದಾಗ ನಮ್ಮ ಜವಾಬ್ದಾರಿ ಏನೆಂಬುದರ ಅರಿವಿನಲ್ಲಿ ಮಾತನಾಡಬೇಕು. ಮಹಿಳೆಯರ ಬಗ್ಗೆ ನಾಲಿಗೆ ಹರಿಬಿಡಬಾರದು ಎಂದು ಬಿಜೆಪಿ ಶಾಸಕ ಮುನಿರತ್ನ ಅವರು ಬಗ್ಗೆ ವಾಗ್ದಾಳಿ ನಡೆಸಿದ್ದಾರೆ.
ಬಿಬಿಎಂಪಿ ಗುತ್ತಿಗೆದಾರನಿಗೆ ಕೊಲೆ ಬೆದರಿಕೆ ಹಾಗೂ ಜಾತಿ ನಿಂದನೆ ಆರೋಪದ ಮೇರೆಗೆ ಬಿಜೆಪಿ ಶಾಸಕ ಮುನಿರತ್ನ ಅವರನ್ನು ಪೊಲೀಸರು ಬಂಧಿಸಿದ್ದರು. ಮುನಿರತ್ನ ತನಗೆ ಬೆದರಿಕೆ ಹಾಕಿದ್ದಾರೆ ಎನ್ನಲಾದ ಆಡಿಯೋವನ್ನು ಗುತ್ತಿಗೆದಾರ ಬಿಡುಗಡೆ ಮಾಡಿ, ಪೊಲೀಸರಿಗೆ ದೂರು ನೀಡಿದ್ದ.
ಈ ದೂರು ಆಧರಿಸಿದ್ದ ಪೊಲೀಸರು, ಕೋಲಾರಕ್ಕೆ ತೆರಳಿ ಮುನಿರತ್ನ ಅವರನ್ನು ಬಂಧಿಸಿ ಬೆಂಗಳೂರಿಗೆ ಕರೆತಂದಿದ್ದರು. ಬಳಿಕ ನ್ಯಾಯಾಧೀಶರ ಎದುರು ಹಾಜರುಪಡಿಸಿದಾಗ ಎರಡು ಪೊಲೀಸ್ ಕಸ್ಟಡಿಗೆ ನೀಡಲಾಗಿತ್ತು. ತಮ್ಮ ಮೇಲಿನ ಆರೋಪದ ಬಗ್ಗೆ ಮಾತನಾಡಿದ್ದ ಶಾಸಕ ಮುನಿರತ್ನ, ನಾನು ಯಾವುದೇ ತಪ್ಪು ಮಾಡಿಲ್ಲ. ರಾಜಕೀಯ ಷಡ್ಯಂತ್ರದಿಂದ ನನ್ನ ಮೇಲೆ ಈ ರೀತಿಯ ಆರೋಪ ಮಾಡಲಾಗಿದೆ ಎಂದಿದ್ದರು.

ಆ ಆಡಿಯೋ ನನ್ನದೇ ಎಂದು ಸಾಬೀತಾದರೆ, ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿಯೂ ಮುನಿರತ್ನ ಹೇಳಿದ್ದರು. ಇದರ ಬೆನ್ನಲ್ಲೇ ಬಿಜೆಪಿ ನಾಯಕರು ಕೂಡ ಮುನಿರತ್ನ ಅವರ ಬಂಧನದ ಬಗ್ಗೆ ಹಲವು ಅನುಮಾನಗಳನ್ನು ವ್ಯಕ್ತಪಡಿಸಿದ್ದರು. ಉದ್ದೇಶಪೂರ್ವಕವಾಗಿ ಕಾಂಗ್ರೆಸ್ನವರು ಮುನಿರತ್ನ ಅವರನ್ನು ಬಂಧಿಸಿದ್ದಾರೆ ಎಂದು ಆರೋಪಿಸಿದ್ದರು. ಇದಕ್ಕೆ ಲಕ್ಷ್ಮಿ ಹೆಬ್ಬಾಳ್ಕರ್ ಈ ರೀತಿ ತಿರುಗೇಟು ನೀಡಿದ್ದಾರೆ.
ಪೊಲೀಸ್ ಕಸ್ಟಡಿಯಲ್ಲಿದ್ದ ಶಾಸಕ ಮುನಿರತ್ನ ಅವರಿಗೆ ನಿನ್ನೆ ಎದೆ ನೋವು ಕಾಣಿಸಿಕೊಂಡಿದ್ದು, ಪೊಲೀಸರು ಜಯದೇವ ಆಸ್ಪತ್ರೆಗೆ ಕರೆದುಕೊಂಡು ಹೋಗಿರುವುದಾಗಿ ವರದಿಯಾಗಿದೆ. ಮುನಿರತ್ನ ತನಗೆ ಎದೆನೋವು ಕಾಣಿಸಿಕೊಂಡಿದೆ ಎಂದು ಹೇಳಿದ ಕೂಡಲೇ ಪೊಲೀಸರು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದರು. ಅಲ್ಲಿಂದ ತುರ್ತು ಚಿಕಿತ್ಸಾ ಘಟಕದಲ್ಲಿ ಮುನಿರತ್ನಗೆ ಚಿಕಿತ್ಸೆ ನೀಡಲಾಗಿತ್ತು. ಬಳಿಕ ಮುನಿರತ್ನ ಅವರಿಗೆ ಪ್ರತಿ ದಿನ ಆರೋಗ್ಯ ತಪಾಸಣೆ ಮಾಡಿಸುವಂತೆ ಪೊಲೀಸರು ಸೂಚಿಸಿದ್ದಾರೆ.
ಸದ್ಯ ಆ ಆಡಿಯೋವನ್ನು ಎಫ್ಎಸ್ಎಲ್ಗೆ ಕಳುಹಿಸಲಾಗಿದ್ದು, ಆ ಧ್ವನಿ ಮುನಿರತ್ನ ಅವರ ಧ್ವನಿಗೆ ಮ್ಯಾಚ್ ಆಗದಿದ್ದರೆ, ಅವರ ಮೇಲಿನ ಈ ಕೇಸ್ ಮುಂದುವರಿಸುವುದಿಲ್ಲ ಎಂದು ಗೃಹ ಸಚಿವ ಜಿ.ಪರಮೇಶ್ವರ್ ಸ್ಪಷ್ಟನೆ ನೀಡಿದ್ದಾರೆ.












Click it and Unblock the Notifications