ಬಿಜೆಪಿ ಜನಸ್ಪಂದನ ಸುಳ್ಳುಗಳ ಕಂತೆ; ಪ್ರಿಯಾಂಕ್ ಖರ್ಗೆ
ಬೆಂಗಳೂರು, ಸೆ.11: "ಬೆಲೆ ಏರಿಕೆ ಜನಸಾಮಾನ್ಯರ ಬೇಬು ಸುಡುತ್ತಿದೆ. ಜನ ಸಾಮಾನ್ಯರು, ಮಹಿಳೆಯರು ಸಂಕಷ್ಟಕ್ಕೆ ಸಿಲುಕಿದ್ದರು, ಬೆಂಗಳೂರು ಮುಳುಗುತ್ತಿದ್ದರೂ, ನಿರುದ್ಯೋಗಿ ಯುವಕರು ಆಕ್ರೋಶದಲ್ಲಿದ್ದರೂ ಬಿಜೆಪಿಯವರು ಜನಸ್ಪಂದನ ಸಮಾವೇಶ ಕಾರ್ಯಕ್ರಮ ಮಾಡಿದ್ದಾರೆ" ಎಂದು ಕೆಪಿಸಿಸಿ ಸಂವಹನ ವಿಭಾಗದ ಮುಖ್ಯಸ್ಥ ಪ್ರಿಯಾಂಕ್ ಖರ್ಗೆ ವಾಗ್ದಾಳಿ ನಡೆಸಿದ್ದಾರೆ.
"ಈ ಕಾರ್ಯಕ್ರಮದಲ್ಲಿ ಸರ್ಕಾರದ ಸಾಧನೆ ಹೇಳುವುದಕ್ಕಿಂತ ಕಾಂಗ್ರೆಸ್ ಟೀಕೆ ಮಾಡಿರುವುದೇ ಹೆಚ್ಚಾಗಿ ಕಂಡಿತು. ನನಗೆ ಇದು ಸರ್ಕಾರದ ಸಾಧನೆಯ ಉತ್ಸವಕ್ಕಿಂತ, ಕೇವಲ ಮುಖ್ಯಮಂತ್ರಿ ಹಾಗೂ ಮೂರ್ನಾಲ್ಕು ಮಂತ್ರಿಗಳ ಉತ್ಸವವಾಗಿ ಕಂಡಿತು" ಎಂದು ಟೀಕಿಸಿದ್ದಾರೆ.

ವಿದ್ಯಾನಿಧಿ ಯೋಜನೆಯಲ್ಲಿ 20 ಲಕ್ಷ ಫಲಾನುಭವಿ ಎಂಬುದು ಸುಳ್ಳು!
"ವಿದ್ಯಾನಿಧಿ ಯೋಜನೆ ಅಡಿಯಲ್ಲಿ 20 ಲಕ್ಷ ಫಲಾನುಭವಿಗಳಿದ್ದಾರೆ ಎಂದು ಹೇಳಿದ್ದಾರೆ. ಆದರೆ ಕಳೆದ ತಿಂಗಳು ಘೋಷಣೆಯಾದ ಯೋಜನೆ. ಸರ್ಕಾರದ ಮಾಹಿತಿ ಪ್ರಕಾರ 10 ಲಕ್ಷಕ್ಕಿಂತ ಹೆಚ್ಚು ಜನ ಅರ್ಜಿ ಹಾಕಿಲ್ಲ. ಆದರೆ 20 ಲಕ್ಷ ಫಲಾನುಭವಿಗಳು ಎಂದು ಹೇಳುತ್ತಾರೆ.
"150 ಪರಿಶಿಷ್ಟರು ಹಾಗೂ ಅಲ್ಪಸಂಖ್ಯಾತರಿಗೆ ಹಾಸ್ಟೆಲ್ ನಿರ್ಮಾಣ ಎಂದು ಹೇಳಿದ್ದಾರೆ. ಇನ್ನು ಮುಂದೆ ಅವರು ಭಾಷಣ ಮಾಡುವ ಮುನ್ನ ಬಜೆಟ್ ಪುಸ್ತಕ ನೋಡಿ ಮಾತನಾಡಬೇಕು. ಅವರು ಹಾಸ್ಟೆಲ್ ನಿರ್ಮಾಣಕ್ಕೆ ಅನುದಾನ ಘೋಷಿಸಿರುವುದೇ 259 ಕೋಟಿ. ಇದರಲ್ಲಿ 159 ಹಾಸ್ಟೆಲ್ ನಿರ್ಮಾಣ ಮಾಡಲು ಸಾಧ್ಯವೇ...? ನಾನು ಸಮಾಜ ಕಲ್ಯಾಣ ಸಚಿವನಾಗಿದ್ದಾಗ ಕಟ್ಟಿದ ಹಾಸ್ಟೆಲ್ಗಳನ್ನು ಇನ್ನು ಉದ್ಘಾಟನೆ ಮಾಡುತ್ತಿದ್ದಾರೆ. ಕಳೆದ 3 ವರ್ಷಗಳಲ್ಲಿ ಎಷ್ಟು ಹೊಸ ಹಾಸ್ಟೆಲ್ ಕಟ್ಟಿಸಿದ್ದಾರೆ ತೋರಿಸಲಿ" ಎಂದು ಪ್ರಿಯಾಂಕ್ ಖರ್ಗೆ ಸವಾಲು ಹಾಕಿದರು.

ಆತ್ಮಹತ್ಯೆ ಮಾಡಿಕೊಂಡ ಯುವಕರು 30,056
"ಬಿಪಿಎಲ್ ಕಾರ್ಡುದಾರರಿಗೆ ಹಾಗೂ ಪರಿಶಿಷ್ಟರಿಗೆ 75 ಯುನಿಟ್ ವಿದ್ಯುತ್ ಉಚಿತವಾಗಿ ನೀಡುವುದಾಗಿ ಹೇಳಿದ್ದೀರಿ. ಇದೇ ಆ.24ರಂದು ಇದನ್ನು ರದ್ದು ಆದೇಶ ಮಾಡಿದಿರಿ. ಕಾಂಗ್ರೆಸ್ ಪ್ರಶ್ನಿಸಿದಾಗ ಆದೇಶಕ್ಕೆ ತಡೆ ನೀಡಿದಿರಿ. ಇದರಲ್ಲಿ ಫಲಾನುಭವಿಗಳೆಷ್ಟು ಎಂದು ಹೇಳಲಿಲ್ಲ.
50 ಸಾವಿರ ಯುವಕರಿಗೆ ಉದ್ಯೋಗ ಸೃಷ್ಟಿ ಮಾಡಿದ್ದೀರಿ ಎಂದು ಹೇಳುತ್ತೀರಿ. 2021ರಲ್ಲಿ ಎಷ್ಟು ನಿರುದ್ಯೋಗಿ ಯುವಕರು ಆತ್ಮಹತ್ಯೆ ಮಾಡಿಕೊಂಡಿರುವ ಸಂಖ್ಯೆ ಗೊತ್ತಾ? 30,056 ಆತ್ಮಹತ್ಯೆ ಆಗಿದೆ ಎಂದು ಕೇಂದ್ರ ಸರ್ಕಾರದ ಅಂಕಿಅಂಶ ಹೇಳುತ್ತದೆ.
ನೀವು ಭಾಷಣ ಮಾಡುವ ಮುನ್ನ ನಿಮ್ಮ ಮಂತ್ರಿಗಳು ಸದನದಲ್ಲಿ ನೀಡಿರುವ ಉತ್ತರಗಳನ್ನು ಗಮನಿಸಿ. ನಿಮ್ಮ ಬೃಹತ್ ಕೈಗಾರಿಕೆ, ಸಣ್ಣ ಕೈಗಾರಿಕಾ ಹಾಗೂ ಕೌಶಲ್ಯ ಅಭಿವೃದ್ಧಿ ಮೂರು ಇಲಾಖೆ ಸಚಿವರು ಸದನದಲ್ಲಿ ನೀಡಿರುವ ಉತ್ತರದ ಪ್ರಕಾರ ಕಳೆದ 2 ವರ್ಷಗಳಲ್ಲಿ ನಾವು ನಮ್ಮ ಇಲಾಖೆಯಿಂದ ಒಂದು ಉದ್ಯೋಗವನ್ನು ಸೃಷ್ಟಿಸಿಲ್ಲ ಎಂದು ಹೇಳಿದ್ದಾರೆ. ಇವರ ಮೂರು ವರ್ಷಗಳ ಆಡಳಿತದಲ್ಲಿ ಉದ್ಯೋಗ ಮೇಳದಿಂದ 1600ಕ್ಕಿಂತ ಹೆಚ್ಚು ಉದ್ಯೋಗ ಕೊಡಿಸಿಲ್ಲ" ಎಂದು ಆಕ್ರೋಶ ಹೊರಹಾಕಿದರು.
ಇನ್ನು 1600 ರೈಲ್ವೇ ಮಾರ್ಗ ವಿದ್ಯುತೀಕರಣ ಮಾಡಿದ್ದೇವೆ ಎಂದು ಘಂಟಾಘೋಷವಾಗಿ ಹೇಳಿದ್ದಾರೆ. ಮೋದಿಯವರು ಇವರಿಗೆ ಸಾಧನೆ ಮಾಡುವುದು ಹೇಗೆ ಎಂದು ಹೇಳಿಕೊಡದಿದ್ದರೂ ಸುಳ್ಳು ಹೇಳುವುದನ್ನು ಚೆನ್ನಾಗಿ ಹೇಳಿಕೊಟ್ಟಿದ್ದಾರೆ. ಕರ್ನಾಟಕ ದೇಶದಲ್ಲಿ ರೈಲ್ವೇ ಮಾರ್ಗ ವಿದ್ಯುತೀಕರಣದಲ್ಲಿ 23ನೇ ಸ್ಥಾನದಲ್ಲಿದೆ. ಕೇವಲ ಶೇ.42.49 ಮಾರ್ಗಳು ಮಾತ್ರ ವಿದ್ಯುತೀಕರಣವಾಗಿದೆ. ದಕ್ಷಿಣ ಭಾರತದಲ್ಲಿ ಅತಿಹೆಚ್ಚು ಬಿಜೆಪಿ ಸಂಸದರನ್ನು ಕೊಟ್ಟಿರುವುದು ಕರ್ನಾಟಕದಲ್ಲಿ. ನಮ್ಮಲ್ಲಿ 25 ಸಂಸದರಿದ್ದಾರೆ. ದಕ್ಷಿಣ ಭಾರತದಲ್ಲಿ ರೈಲ್ವೆ ಮಾರ್ಗದ ವಿದ್ಯುತೀಕರಣದಲ್ಲೂ ನಮ್ಮ ರಾಜ್ಯ ಹಿಂದುಳಿದಿದೆ ಎಂದರು.

ಇಡಿ, ಸಿಬಿಐ, ಐಟಿ ಎಲ್ಲಾ ಸಂಸ್ಥೆ ಬಿಜೆಪಿ ನಿಯಂತ್ರಣದಲ್ಲಿದೆ
"ಕಾರ್ಯಕ್ರಮದಲ್ಲಿ ಬಿಜೆಪಿ ನಾಯಕರು ಕಾಂಗ್ರೆಸ್ ನಾಯಕರಿಗೆ ಬೆದರಿಕೆ ಹಾಕುತ್ತಾರೆ. ಕಾಂಗ್ರೆಸ್ ಸರ್ಕಾರದಲ್ಲಿ ಆಗಿರುವ ಮರಳು, ದಿಂಬು, ಪ್ರಶ್ನೆಪತ್ರಿಕೆ ಸೋರಿಕೆ, ಸೋಲಾರ್ ಅಕ್ರಮ ತನಿಖೆ ಮಾಡುತ್ತೇವೆ ಎಂದಿದ್ದಾರೆ. ತನಿಖೆ ಮಾಡಿ ಸ್ವಾಮಿ, ಯಾರು ಬೇಡ ಎಂದಿದ್ದಾರೆ?. ಸಿದ್ದರಾಮಯ್ಯ, ಡಿ. ಕೆ. ಶಿವಕುಮಾರ್ ಅಥವಾ ಪಕ್ಷದಿಂದ ಅಧಿಕೃತವಾಗಿ ಯಾರಾದರೂ ತಡೆದಿದ್ದಾರಾ? ಯಾರಿಗೆ ಈ ಬೇದರಿಕೆ? ಇಡಿ, ಸಿಬಿಐ, ಐಟಿ ಸೇರಿದಂತೆ ಎಲ್ಲಾ ಸಂಸ್ಥೆ ಸಿಮ್ಮ ನಿಯಂತ್ರಣದಲ್ಲಿದೆ. ತನಿಖೆ ಮಾಡಿ ತಪ್ಪಿತಸ್ಥರು ಶಿಕ್ಷೆ ಅನುಭವಿಸಲಿ" ಎಂದರು.
"ಸಿಎಂ ರೌದ್ರಾವತಾರದಿಂದ ಕಾಂಗ್ರೆಸ್ಗೆ ಧಮ್ಮು, ತಾಕತ್ತು ಇದ್ದರೆ ಬಿಜೆಪಿ ಸಾಧನೆ, ಪ್ರಗತಿ ತಡೆಯಲಿ ಎಂದಿದ್ದಾರೆ. ಕಾಂಗ್ರೆಸ್ ನಿಮ್ಮನ್ನು ಯಾವಾಗ ತಡೆಹಿಡಿದಿದೆ?. ಮೂರು ಬಾರಿ ಜನೋತ್ಸವ ಕಾರ್ಯಕ್ರಮ ಮುಂದೂಡಿ, ಹೆಸರು ಬದಲಿಸಿದ್ದು ಕಾಂಗ್ರೆಸ್ನವರಾ? ಸಾಧನಾ ಸಮಾವೇಶ, ಜನೋತ್ಸವ ಹಾಗೂ ಜನಸ್ಪಂದನ ಎಂದು ಹೆಸರು ಬದಲಿಸಿದವರು ಯಾರು? ಜನೋತ್ಸವ ಮುಂದೂಡಿ, ಹೆಸರು ಬದಲಿಸಿ ಎಂದು ಸಿದ್ದರಾಮಯ್ಯ ಹಾಗೂ ಶಿವಕುಮಾರ್ ತಡೆದಿದ್ದರೆ? ನಿಮ್ಮಲ್ಲೆ ಸ್ಪಷ್ಟತೆ ಗಟ್ಟಿತನವಿಲ್ಲದಿದ್ದರೂ ಕಾಂಗ್ರೆಸ್ ಮೇಲೆ ಗೂಬೆ ಕೂರಿಸುವುದು ಯಾಕೆ?" ಎಂದು ಪ್ರಶ್ನಿಸಿದ್ದಾರೆ.
"ನಿಮ್ಮ ಜನೋತ್ಸವ ಮುಂದೂಡಿದ್ದು, ಜನಾಕ್ರೋಶದಿಂದ. ನಿಮ್ಮ ಕಾರ್ಯವೈಖರಿ ನೋಡಿ ನಿಮ್ಮದೇ ಕಾರ್ಯಕರ್ತರು ಗೃಹಸಚಿವರ ಮನೆಗೆ ನುಗ್ಗಿ ಪ್ರತಿಭಟಿಸಿದ್ದು, ಜನರು ನಳಿನ್ ಕುಮಾರ್ ಕಟೀಲ್ ಅವರ ಕಾರು ಅಲ್ಲಾಡಿಸಿದ್ದಕ್ಕೆ, ಸುನೀಲ್, ಅಂಗಾರ ಸೇರಿದಂತೆ ಸಚಿವರಿಗೆ ಸ್ವಂತ ಕ್ಷೇತ್ರದಲ್ಲೇ ದಿಗ್ಬಂದನ ಹಾಕಿದ್ದನ್ನು ನೋಡಿ ಕಾರ್ಯಕ್ರಮ ಮುಂದೂಡಿದಿರಿ. ಆದರೆ ನೀವು ನಮಗೆ ಯಾಕೆ ಹೆದರಿಸುತ್ತೀರಿ? ಜನೋತ್ಸವ ಜನ ಸ್ಪಂದನ ಆಗಿದ್ದು ಯಾಕೆ? ಎಂಬುದಕ್ಕೆ ಉತ್ತರಿಸಿ." ಎಂದು ಖರ್ಗೆ ಆಗ್ರಹಿಸಿದರು.

ಬಿಜೆಪಿಗೆ ಧಮ್ ಇದ್ದರೆ ಹಗರಣಗಳನ್ನು ನ್ಯಾಯಾಂಗ ತನಿಖೆಗೆ ನೀಡಲಿ
"ಈ ಜನಸ್ಪಂದನ ಮಾಡಿ ಬಿಜೆಪಿ ಅವರು ಸ್ವಯಂ ಕಲ್ಯಾಣಕ್ಕೆ ಇದೆಯೇ ಹೊರತು ಜನರ ಕಲ್ಯಾಣಕ್ಕೆ ಅಲ್ಲ. ಅವರಿಗೆ ಜನರ ಹಿತದ ಬಗ್ಗೆ ಆಸಕ್ತಿ ಇಲ್ಲ ಸಾಬೀತುಪಡಿಸಿದ್ದಾರೆ. ಅವರಿಗೆ ಜನರ ತೊಂದರೆ ಬಗ್ಗೆ ಕಾಳಜಿ ಇಲ್ಲದೇ ತಮ್ಮ ಸ್ವಂತ ಹಿತಾಸಕ್ತಿಗೆ ಕಾರ್ಯಕ್ರಮ ಮಾಡಿದ್ದಾರೆ. ಇದನ್ನು ನೋಡಿ ರಾಜಕುಮಾರ್ ಅವರ ಯಾರೇ ಕೂಗಾಡಲಿ ಹಾಡು ನೆನಪಾಗುತ್ತದೆ. ಬಿಜೆಪಿಯವರು ಜನ ಎಷ್ಟೇ ಸಂಕಷ್ಟದಲ್ಲಿದ್ದರೂ ನಾವು ನಮ್ಮ ಸಂಭ್ರಮ ಆಚರಿಸುತ್ತೇವೆ ಎಂದು ದಪ್ಪ ಚರ್ಮ ಪ್ರದರ್ಶಿಸಿದ್ದಾರೆ" ಎಂದರು.
"ಬೊಮ್ಮಾಯಿ ಅವರು ತಮ್ಮ ಗುರು ಮೋದಿ ಅವರಿಂದ ಚೆನ್ನಾಗಿ ಪಾಠ ಕಲಿತಿದ್ದಾರೆ. ಮೋದಿ ಅವರು ಎಲ್ಲದಕ್ಕೂ ನೆಹರೂ ಕಾರಣ ಎಂದರೆ, ಬೊಮ್ಮಾಯಿ ಅವರು ಹಿಂದಿನ ಸರ್ಕಾರ ಕಾರಣ ಎನ್ನುತ್ತಾರೆ. ನಾನು ಬಿಜೆಪಿಯವರಿಗೆ ಕೇಳುವುದು ನಿಮಗೆ ಧಮ್ಮು, ತಾಕತ್ತು, ಧೈರ್ಯ ಇದ್ದರೆ ಪಿಎಸ್ಐ, ಕೆಪಿಟಿಸಿಎಲ್, ಬೋವಿ ಅಭಿವೃದ್ಧಿ ನಿಗಮ ಹಗರಣ, ಪಿಡಬ್ಲ್ಯೂಡಿ ನೇಮಕಾತಿ, ಗುತ್ತಿಗೆದಾರರ ಸಂಘದ ಆರೋಪ, ಬಿಟ್ ಕಾಯಿನ್ ಹಗರಣವನ್ನು ನ್ಯಾಯಾಂಗ ತನಿಖೆಗೆ ನೀಡುತ್ತೀರಾ?" ಎಂದು ಸವಾಲು ಹಾಕಿದರು.
"ನಿಮಗೆ ತಾಕತ್ತು ಇದ್ದರೆ ಕನಕಗಿರಿ ಶಾಸಕ ಪಿಎಸ್ಐ ನೇಮಕಾತಿಗೆ ಮಧ್ಯಸ್ಥಿಕೆ ವಹಿಸಿ 15 ಲಕ್ಷ ಹಣ ಪಡೆದಿರುವುದಾಗಿ ಬಹಿರಂಗವಾಗಿ ಹೇಳಿದ್ದಾರೆ, ನಿಮ್ಮ ಸಿಎಂ ಕುರ್ಚಿಗೆ 2,500 ಕೋಟಿ ಕೊಟ್ಟಿದ್ದೀರಿ ಎಂದು ಯತ್ನಾಳ್ ಹೇಳಿದ್ದಾರೆ. ಸಚಿವ ಮಾಧುಸ್ವಾಮಿ ಇದು ತಳ್ಳುವ ಸರ್ಕಾರ ಎಂದಿದ್ದಾರೆ, ವಿಶ್ವನಾಥ್ ಅವರು ಸರ್ಕಾರದ ವಿರುದ್ಧ ಆರೋಪ ಮಾಡಿದ್ದಾರೆ ಇವರೆಲ್ಲರ ವಿರುದ್ಧ ಕ್ರಮ ಕೈಗೊಳ್ಳುವ ಧೈರ್ಯ ನಿಮಗಿದೆಯಾ? ಕೇಂದ್ರದ ಮುಂದೆ ನಿಂತು ರಾಜ್ಯದ ಜಿಎಸ್ಟಿ ಪಾಲು ಕೊಡಿಸುವ ತಾಕತ್ತು ಇದೆಯಾ? ಬೆಂಗಳೂರು ಪ್ರವಾಹ ಪೀಡಿತ ಪ್ರದೇಶಗಳ ಜನರ ಮುಂದೆ ಹೋಗಿ, ರೈತರ ಮುಂದೆ ಹೋಗಿ ತಮ್ಮ ಸಾಧನೆ ಹೇಳುವ ತಾಕತ್ತು ಇದೆಯಾ? ಶಾಲಾ ಮಕ್ಕಳ ಮುಂದೆ ಹೋಗಿ ಅವರ ಸಮವಸ್ತ್ರ, ಪಠ್ಯಪುಸ್ತಕ, ಸಾಕ್ಸ್, ಶೂ ಸಿಕ್ಕಿಲ್ಲ ಎಂದು ಹೇಳುವ ತಾಕತ್ತು ಇದೆಯಾ? ನಿರುದ್ಯೋಗಿ ಯುವಕರ ಮುಂದೆ ನೇಮಕಾತಿ ಅಕ್ರಮದ ಸಮಜಾಯಿಶಿ ನೀಡುವ ತಾಕತ್ತು ಇದೆಯಾ?" ಎಂದು ಸಾಲು ಸಾಲು ಪ್ರಶ್ನೆ ಮುಂದಿಟ್ಟಿದ್ದಾರೆ.












Click it and Unblock the Notifications