ವಿಶೇಷ ವಿಮಾನದಲ್ಲಿ ಕಾಂಗ್ರೆಸ್ಗೆ ಕಪ್ಪ ರವಾನೆ - ಹೆಚ್ಡಿಕೆ
ಕಾಂಗ್ರೆಸ್ ಪಕ್ಷದ ‘ಕಿಕ್ ಬ್ಯಾಕ್’ ಪ್ರಕರಣಕ್ಕೆ ಮಾಜಿ ಮಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ತುಪ್ಪ ಸುರಿದಿದ್ದಾರೆ. ಬೆಂಗಳೂರಿನಿಂದ ವಿಶೇಷ ವಿಮಾನದಲ್ಲಿ ದೆಹಲಿಗೆ ಕಿಕ್ ಬ್ಯಾಕ್ ಗಳು ರವಾನೆಯಾಗುತ್ತಿತ್ತು ಎಂದು ಅವರು ಗಂಭೀರ ಆರೋಪ ಮಾಡಿದ್ದಾರೆ.
ಬೆಂಗಳೂರು, ಫೆಬ್ರವರಿ 15: ಕಾಂಗ್ರೆಸ್ ಪಕ್ಷದ 'ಹೈಕಮಾಂಡ್ ಕಪ್ಪ' ಪ್ರಕರಣಕ್ಕೆ ಮಾಜಿ ಮಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ತುಪ್ಪ ಸುರಿದಿದ್ದಾರೆ. ಬೆಂಗಳೂರಿನಿಂದ ವಿಶೇಷ ವಿಮಾನದಲ್ಲಿ ದೆಹಲಿಗೆ ಕಿಕ್ ಬ್ಯಾಕ್ ಗಳು ರವಾನೆಯಾಗುತ್ತಿತ್ತು ಎಂದು ಅವರು ಗಂಭೀರ ಆರೋಪ ಮಾಡಿದ್ದಾರೆ.
ರಾಜ್ಯ ಕಾಂಗ್ರೆಸ್ ಸರಕಾರ ಬೆಂಗಳೂರಿನಿಂದ ದೆಹಲಿಯಲ್ಲಿರುವ ಹೈಕಮಾಂಡಿಗೆ ವಿಶೇಷ ವಿಮಾನದಲ್ಲಿ ನಿಯಮಿತವಾಗಿ ಹಣ ಕಳುಹಿಸುತ್ತಿತ್ತು. ಸಾಮಾನ್ಯ ವಿಮಾನದಲ್ಲಿ ಆ ಪ್ರಮಾಣದ ಹಣ ಕಳುಹಿಸಲು ಅವಕಾಶ ಇಲ್ಲದೇ ಇದ್ದುದರಿಂದ ಹೀಗೆ ಮಾಡಲಾಗುತ್ತಿತ್ತು ಎಂದು ಜೆಡಿಎಸ್ ನಾಯಕ ಕುಮಾರಸ್ವಾಮಿ ಹೇಳಿದ್ದಾರೆ.[ಕಾಂಗ್ರೆಸ್, ಬಿಜೆಪಿ ಇಬ್ರೂ ಹೈಕಮಾಂಡಿಗೆ ಕಪ್ಪ ನೀಡಿದ್ದಾರೆ -ಹೆಚ್ಡಿಕೆ]
ಬೆಂಗಳೂರಿನಲ್ಲಿ ಮಾಧ್ಯಮಗಳ ಜತೆ ಮಾತನಾಡಿದ ಅವರು, ವಿಶೇಷ ವಿಮಾನದಲ್ಲಿ ಹಣದ ಜತೆ ಮುಖ್ಯಮಂತ್ರಿ ಮತ್ತು ಕೆಲವೇ ಕೆಲವು ಸಚಿವರು ಮಾತ್ರ ಪ್ರಯಾಣಿಸುತ್ತಿದ್ದರು ಎಂದು ಹೇಳಿದ್ದಾರೆ. ಕಳೆದ 9 ವರ್ಷಗಳಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಎರಡೂ ಪಕ್ಷಗಳು ಕರ್ನಾಟಕವನ್ನು ಲೂಟಿ ಹೊಡೆದಿವೆ ಎಂದು ಕುಮಾರಸ್ವಾಮಿ ಆರೋಪಿಸಿದ್ದಾರೆ.[ವಿಧಾನಸಭೆಯಲ್ಲಿ ಯಡಿಯೂರಪ್ಪ ಪರ ವಹಿಸಿದ ಕುಮಾರಸ್ವಾಮಿ]
ಅಭ್ಯರ್ಥಿಗಳ ಪಟ್ಟಿ ಬಿಡುಗಡೆ:
ಚುನಾವಣೆಗೆ ಮೊದಲ ಹಂತದ ಅಭ್ಯರ್ಥಿಗಳ ಪಟ್ಟಿ ಸದ್ಯದಲ್ಲೇ ಬಿಡುಗಡೆ ಮಾಡಲಾಗುವುದು. ಮೊದಲ ಹಂತದಲ್ಲಿ 105 ರಿಂದ 120 ಜನರಿಗೆ ಟಿಕೆಟ್ ನೀಡಲಾಗುವುದು. ಉಚ್ಛಾಟನೆಯಾಗಿರುವ 7 ಶಾಸಕರು ಬಿಟ್ಟು ಉಳಿದ 33 (ಒಟ್ಟು 40) ಶಾಸಕರು ಟಿಕೆಟ್ ಪಡೆಯಲಿದ್ದಾರೆ. ಉಳಿದ ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಅರ್ಹತೆ ನೋಡಿಕೊಂಡಿ ಆಯ್ಕೆ ಮಾಡಲಾಗುವುದು ಎಂದು ಹೇಳಿದ್ದಾರೆ.