ಮತ್ತೆ ಲಾಟರಿ ಆರಂಭಿಸೋಲ್ಲ ಅಂದ್ರು ಸಿಎಂ ಸಿದ್ದು!
ಬೆಂಗಳೂರು, ಫೆ.5 : 'ಕರ್ನಾಟಕದ ಬೊಕ್ಕಸ ತುಂಬಿದೆ ರಾಜ್ಯದಲ್ಲಿ ಲಾಟರಿಯನ್ನು ಪುನಃ ಜಾರಿಗೆ ತರುವುದಿಲ್ಲ' ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸ್ಪಷ್ಟಪಡಿಸಿದ್ದಾರೆ. ರಾಜ್ಯದಲ್ಲಿ ಮತ್ತೆ ಲಾಟರಿಗೆ ಅವಕಾಶ ಕಲ್ಪಿಸಬೇಕು ಎಂದು ರಾಜ್ಯ ಯೋಜನಾ ಮಂಡಳಿ ಉಪಾಧ್ಯಕ್ಷ ಸಿ.ಎಂ. ಇಬ್ರಾಹಿಂ ಪ್ರಸ್ತಾವನೆ ಸಲ್ಲಿಸಿದ್ದರು.
ಗುರುವಾರ ವಿಧಾನಪರಿಷತ್ ಕಲಾಪದಲ್ಲಿ ಜೆಡಿಎಸ್ ಸದಸ್ಯ ಬಸವರಾಜ್ ಹೊರಟ್ಟಿ ಅವರು ಪ್ರಸ್ತಾಪಿಸಿದ ವಿಷಯಕ್ಕೆ ಉತ್ತರ ನೀಡಿದ ಸಿಎಂ ಸಿದ್ದರಾಮಯ್ಯ ಅವರು, 'ಆರೋಗ್ಯ ಕ್ಷೇತ್ರ ಹಾಗೂ ಇತರ ಸಾಮಾಜಿಕ ಕಾರ್ಯಗಳಿಗೆ ಲಾಟರಿ ಹಣವನ್ನು ಬಳಸುವ ದುಸ್ಥಿತಿ ಸರ್ಕಾರಕ್ಕೆ ಬಂದಿಲ್ಲ. ಬೊಕ್ಕಸ ಭರ್ತಿಯಾಗಿದೆ. ಆದ್ದರಿಂದ ಲಾಟರಿಯನ್ನು ಪುನಃ ಆರಂಭಿಸುವ ಆಲೋಚನೆ ಇಲ್ಲ' ಎಂದು ಹೇಳಿದರು.

ಬುಧವಾರ ನಡೆದ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯಲ್ಲಿಯೂ ಲಾಟರಿ ಪುನರಾರಂಭಕ್ಕೆ ಶಾಸಕರು ವಿರೋಧ ವ್ಯಕ್ತಪಡಿಸಿದ್ದರು. ರಾಜ್ಯದಲ್ಲಿ ಜನರೂ ಸಹ ಲಾಟರಿ ಬಗ್ಗೆ ವಿರೋಧದ ಮಾತುಗಳನ್ನು ಆಡುತ್ತಿದ್ದರು. ಇಂದು ಈ ಕುರಿತು ಮುಖ್ಯಮಂತ್ರಿಗಳು ಹೇಳಿಕೆ ನೀಡುವ ಮೂಲಕ ಎಲ್ಲಾ ವಿವಾದಗಳಿಗೆ ತೆರೆ ಎಳೆದಿದ್ದಾರೆ. [ಕರ್ನಾಟಕದಲ್ಲಿ ಮತ್ತೆ ಲಾಟರಿ ಭಾಗ್ಯ]
ಮಂಗಳವಾರ ಪತ್ರಿಕಾಗೋಷ್ಠಿ ನಡೆಸಿದ್ದ ಕರ್ನಾಟಕ ಯೋಜನಾ ಮಂಡಳಿ ಉಪಾಧ್ಯಕ್ಷ ಸಿ.ಎಂ.ಇಬ್ರಾಹಿಂ ಅವರು, ರಾಜ್ಯದಲ್ಲಿ ಪುನಃ 10 ರೂ. ಮುಖಬೆಲೆಯ ಲಾಟರಿಯನ್ನು ಆರಂಭಿಸುವಂತೆ ಸರ್ಕಾರಕ್ಕೆ ಶಿಫಾರಸು ಮಾಡಲಾಗಿದೆ ಎಂದು ಹೇಳಿದ್ದರು.
ಅನುದಾನ ಸಂಗ್ರಹಣೆಗೆಗಾಗಿ ಲಾಟರಿ : ದೀರ್ಘಕಾಲೀನ ಮಾರಕ ರೋಗಗಳಿಂದ ಬಳಲುತ್ತಿರುವ ಮಧ್ಯಮ ವರ್ಗ ಹಾಗೂ ಬಡ ರೋಗಿಗಳಿಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ದೊರಕಿಸಿಕೊಡಲು ಸಂಪನ್ಮೂಲ ಕ್ರೋಢೀಕರಣ ಮಾಡುವ ಉದ್ದೇಶದಿಂದ ಲಾಟರಿಯನ್ನು ಪುನಃ ಆರಂಭಿಸುವಂತೆ ಪ್ರಸ್ತಾವನೆ ಸಲ್ಲಿಸಲಾಗಿತ್ತು.
ಕೇರಳ ರಾಜ್ಯದಲ್ಲಿ 'ಕಾರುಣ್ಯ ಬೆನೆವೋಲೆಂಟ್ ಫಂಡ್' ಯಶಸ್ವಿಯಾಗಿದೆ. ಇದೇ ಮಾದರಿಯಲ್ಲಿ ಕರ್ನಾಟಕದಲ್ಲಿ ಲಾಟರಿ ಮೂಲಕ ಅನುದಾನ ಸಂಗ್ರಹಿಸಿ 'ಅಣ್ಣಾ ಕಾರುಣ್ಯ ಆರೋಗ್ಯ ಯೋಜನೆ' ಜಾರಿಗೆ ತರಬೇಕು ಎಂದು ಉದ್ದೇಶಿಸಲಾಗಿದೆ ಎಂದು ಸಿಎಂ ಇಬ್ರಾಹಿಂ ಹೇಳಿದ್ದರು.
'ಅಣ್ಣಾ ಕಾರುಣ್ಯ ಆರೋಗ್ಯ ಯೋಜನೆ' ಜಾರಿಗೆ ಬಂದರೆ ದೀರ್ಘಕಾಲೀನ ಮಾರಕ ರೋಗಗಳಿಂದ ಬಳಲುತ್ತಿರುವ ಸುಮಾರು 40 ಸಾವಿರ ಜನರಿಗೆ ಪ್ರತಿವರ್ಷ ಉಪಯೋಗವಾಗಲಿದೆ. ಯೋಜನೆಗೆ ವಾರ್ಷಿಕ 600 ಕೋಟಿ ರೂ. ಅಗತ್ಯವಿದೆ ಇದನ್ನು ಲಾಟರಿ ಮೂಲಕ ಸಂಗ್ರಹಿಸಲಾಗುತ್ತದೆ ಎಂದು ತಿಳಿಸಿದ್ದರು. ಆದರೆ, ಸದ್ಯ ಸಿಎಂ ಈ ಪಸ್ರಸ್ತಾವನೆಯನ್ನು ತಳ್ಳಿ ಹಾಕಿದ್ದಾರೆ.












Click it and Unblock the Notifications