ಸಾಮೂಹಿಕ ನಮಾಜ್ಗೆ ಅವಕಾಶ ಕೊಡಿ: ಸಿಎಂ ಬಿಎಸ್ವೈಗೆ ಸಿ.ಎಂ. ಇಬ್ರಾಹಿಂ ಪತ್ರ!
ಬೆಂಗಳೂರು, ಮೇ 14: ಇಡೀ ಜಗತ್ತು ಮಾರಕ ಕಾರೊನಾ ವೈರಸ್ ಮಹಾಮಾರಿಯಿಂದ ತತ್ತರಿಸಿ ಹೋಗಿದೆ. ಸೋಂಕಿತರು ಹಾಗೂ ಸೋಂಕಿಗೆ ಬಲಿಯಾದವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಲೆ ಇದೆ. ಕೊರೊನಾ ಸೋಂಕಿಗೆ ಸಧ್ಯಕ್ಕೆ ಯಾವುದೇ ಮದ್ದು ಸಿಗುವ ಲಕ್ಷಣಗಳು ಕಾಣುತ್ತಿಲ್ಲ. ಸಾವಿನ ಸರಣಿ ಸಧ್ಯಕ್ಕೆ ನಿಲ್ಲುವುದಿಲ್ಲ ಎಂದು ವಿಶ್ವ ಆರೋಗ್ಯ ಸಂಸ್ಥೆ ಎಲ್ಲಾ ದೇಶಗಳಿಗೆ ಜಾಗೃತವಾಗಿರುವಂತೆ ಎಚ್ಚರಿಕೆಯನ್ನೂ ಕೊಟ್ಟಿದೆ.
Recommended Video
ಇಂಥ ಸಂಕಷ್ಟದ ಸಮಯದಲ್ಲಿ ಕರ್ನಾಟಕ ರಾಜ್ಯದಲ್ಲಿ ಈದ್ ಉಲ್ ಫಿತರ್ ನಿಮಿತ್ತ ರಾಜ್ಯಾದ್ಯಂತ ಸಾಮೂಹಿಕ ಪ್ರಾರ್ಥನೆಗೆ ಅವಕಾಶ ಮಾಡಿಕೊಡಬೇಕು ಎಂದು ಮುಸ್ಲಿಂ ಮುಖಂಡ, ಮಾಜಿ ಕೇಂದ್ರ ಸಚಿವ ಸಿ.ಎಂ. ಇಬ್ರಾಹಿಂ ಅವರು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಪತ್ರ ಬರೆದು ಆಗ್ರಹಿಸಿದ್ದಾರೆ. ಮೇ 24 ಅಥವಾ 25 ರಂದು ರಂಜಾನ್ ಆಚರಿಸಲಾಗುತ್ತದೆ. ಅವತ್ತು ಬೆಳಗ್ಗೆಯಿಂದ ಮಧ್ಯಾಹ್ನ 1 ಗಂಟೆಯ ವರೆಗೆ ಸಾಮೂಹಿಕ ನಮಾಜ್ ಮಾಡಲು ಅವಕಾಶ ಕೊಡಬೇಕು ಎಂದು ಪತ್ರ ಮುಖೇನ ಆಗ್ರಹಿಸಲಾಗಿದೆ. ಇದೀಗ ಸಾಮೂಹಿಕ ಪ್ರಾರ್ಥನೆಯ ಬೇಡಿಕೆ ವಿವಾದಕ್ಕೆ ಕಾರಣವಾಗಿದ್ದು, ಸಾಮೂಹಿಕ ನಮಾಜ್ಗೆ ಅವಕಾಶ ಮಾಡಿಕೊಡಬಾರದು ಎಂದು ತೀವ್ರ ವಿರೋಧ ವ್ಯಕ್ತವಾಗಿದೆ.
ಮುಸ್ಲಿಂ ಸಮುದಾಯದ ಪರವಾಗಿ ಮನವಿ
ಇದೇ ಮೇ 24 ಅಥವಾ 25 ರಂದು ರಂಜಾನ್ ದಿನದಂದು ಬೆಳಗ್ಗೆಯಿಂದ ಮಧ್ಯಾಹ್ನದ ವರೆಗೆ ಸಾಮೂಹಿಕ ನಮಾಜ್ ಮಾಡಲು ಅವಕಾಶ ಮಾಡಿಕೊಡುವಂತೆ ಮಾಜಿ ಕೇಂದ್ರ ಸಚಿವ, ವಿಧಾನ ಪರಿಷತ್ ಸದಸ್ಯ ಸಿ.ಎಂ. ಇಬ್ರಾಹಿಂ ಅವರು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಪತ್ರ ಬರೆದು ಒತ್ತಾಯಿಸಿದ್ದಾರೆ. ಸ್ಥಳೀಯವಾಗಿ ಲಭ್ಯವಿರುವ ಈದ್ಗಾ ಮೈದಾನಗಳಲ್ಲಿ ಅಥವಾ ಮಸೀದಿಗಳಲ್ಲಿ ಬೆಳಗ್ಗೆಯಿಂದ ಮಧ್ಯಾಹ್ನ 1 ಗಂಟೆಯವರೆಗೆ ಸಾಮೂಹಿಕ ಪ್ರಾರ್ಥನೆ ಮಾಡಲು ಅನುಮತಿ ಕೊಡಿ ಎಂದು ಪತ್ರದಲ್ಲಿ ಆಗ್ರಹಿಸಿದ್ದಾರೆ.
ತಬ್ಲಿಘಿ ನಾಯಕರು ಮತ್ತು ಬುದ್ಧಿಜೀವಿಗಳಿಗೆ ಬಿಜೆಪಿಯ 13 ಪ್ರಶ್ನೆಗಳು
ಇಡೀ ಮುಸ್ಲಿಂ ಸಮುದಾಯದ ಪರವಾಗಿ ಮನವಿ ಮಾಡಿಕೊಳ್ಳುತ್ತಿದ್ದೇನೆ. ವೈದ್ಯರ ಸಲಹೆಯನ್ನು ಪಡೆದುಕೊಂಡು ಸಾಮೂಹಿಕ ನಮಾಜ್ ಮಾಡಲು ಅವಕಾಶ ಮಾಡಿಕೊಡಬೇಕು. ನಮಾಜ್ಗೆ ಮೊದಲು ಎಲ್ಲ ರೀತಿಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು. ಈ ಬಗ್ಗೆ ಪರಿಶೀಲಿಸಿ ಎಂದು ಸಲಹೆ ಕೊಡುತ್ತಿದ್ದೇನೆ ಎಂದು ಪತ್ರದಲ್ಲಿ ಬರೆದಿದ್ದಾರೆ. ಸಿ.ಎಂ. ಇಬ್ರಾಹಿಂ ಅವರ ಬೇಡಿಕೆಗೆ ತೀವ್ರ ವಿರೋಧ ವ್ಯಕ್ತವಾಗಿದೆ.
ಅವಕಾಶ ಕೊಟ್ಟರೆ ಇಡೀ ರಾಜ್ಯ ಹೊತ್ತಿ ಉರಿಯಲಿದೆ
ಸಾಮೂಹಿಕ ನಮಾಜ್ ಮಾಡಲು ಅವಕಾಶ ಕೊಟ್ಟರೆ ಇಡೀ ರಾಜ್ಯ ಹೊತ್ತಿ ಉರಿಯಲಿದೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್. ಈಶ್ವರಪ್ಪ ಪ್ರತಿಕ್ರಿಯೆ ಕೊಟ್ಟಿದ್ದಾರೆ. ವಿಧಾನಸೌಧದಲ್ಲಿ ಈಶ್ವರಪ್ಪ ಅವರು ಮಾತನಾಡಿದ್ದಾರೆ. ರಾಜ್ಯ ಹೊತ್ತಿ ಉರಿಯೋದಕ್ಕೆ ಶಾಸಕ ಜಮೀರ್ ಅಹಮ್ಮದ್ ಖಾನ್ ಹಾಗೂ ಪರಿಷತ್ ಸದಸ್ಯ ಸಿ ಎಂ. ಇಬ್ರಾಹಿಂ ಕಾರಣ, ಈಗಾಗಲೇ ಅವರು ಕೊಟ್ಟಿದ್ದ ಹೇಳಿಕೆಯಿಂದ ರಾಜ್ಯ ಹೊತ್ತಿಕೊಂಡು ಉರಿದಿದೆ. ಈಗ ಪ್ರಾರ್ಥನೆಗೆ ಅವಕಾಶ ಕೊಟ್ಟರೆ ರಾಜ್ಯವೇ ಮತ್ತೆ ಹೊತ್ತಿ ಉರಿಯಲಿದೆ ಎಂದಿದ್ದಾರೆ.
ನಿಜಾಮುದ್ದೀನ್ ನಂಜಿನಿಂದ ತತ್ತರಿಸಿದ್ದೇವೆ!
ಮುಸ್ಲಿಂ ಸಮುದಾಯದ ಬಗ್ಗೆ ಕಾಳಜಿ ಇದ್ದಿದ್ರೆ ಮಾಜಿ ಕೇಂದ್ರ ಮಂತ್ರಿ ಸಿ.ಎಂ. ಇಬ್ರಾಹಿಂ ಈ ರೀತಿ ಪತ್ರ ಬರೆಯುತ್ತಿರಲಿಲ್ಲ ಎಂದು ಪ್ರವಾಸೋದ್ಯಮ ಸಚಿವ ಸಿ.ಟಿ. ರವಿ ಹೇಳಿದ್ದಾರೆ. ಅವರಿಗೆ ತಮ್ಮ ಮುಸ್ಲಿಂ ಮೇಲೆ ಆಕ್ರೋಶ ಇರಬಹುದು. ಸಮಾಜದ ಮೇಲಿನ ಆಕ್ರೋಶದಿಂದ ಈ ರೀತಿ ಮನವಿ ಮಾಡಿರಬಹುದು. ನಿಜಾಮುದ್ದಿನ್ ನಂಜಿನಿಂದ ಎರಡು ತಿಂಗಳು ತತ್ತರಿಸಿ ಹೋಗಿದ್ದೇವೆ. ಈ ಹಂತದಲ್ಲಿ ಇದಕ್ಕೆ ಅವಕಾಶ ಮಾಡಿಕೊಟ್ಟು ಮತ್ತೆ ಸಮಸ್ಯೆ ಸೃಷ್ಟಿ ಮಾಡಿಕೊಳ್ಳಲ್ಲ. ನೀವು ನಿಮ್ಮ ಪತ್ರವನ್ನು ವಾಪಸ್ ಪಡೆಯುವುದು ಉತ್ತಮ. ಹಾಗಾದಲ್ಲಿ ಆಗ ನಿಮ್ಮ ಬಗ್ಗೆ ನಿಮ್ಮಸಮುದಾಯಕ್ಕೆ ಒಳ್ಳೆಯ ಭಾವನೆ ಬರಬಹುದು. ಇಲ್ಲವೇ ನಿಮ್ಮಸಮುದಾಯದವರೇ ನಿಮಗೆ ಛೀಮಾರಿ ಹಾಕಬಹುದು ಎಂದು ಸಿ.ಟಿ. ರವಿ ಹೇಳಿಕೆ ಕೊಟ್ಟಿದ್ದಾರೆ.
ನಾವು ಶ್ರೀರಾಮನವಮಿಗೆ ಪಾನಕ ಹಂಚಲಿಲ್ಲ
ನಾವು ಶ್ರೀರಾಮನವಮಿಗೆ ಪಾನಕ ಹಂಚಲಿಲ್ಲ, ಯಾವ ಧರ್ಮವಾದರೂ ಸರಿಯೇ ಸಾಮೂಹಿಕ ಆಚರಣೆಗೆ ಅವಕಾಶ ಸಾಧ್ಯವಿಲ್ಲ ಎಂದು ಕಂದಾಯ ಸಚಿವ ಆರ್. ಅಶೋಕ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್ ಯಾವುದೇ ಧರ್ಮದವರು ಇರಲಿ. ತಮ್ಮ ತಮ್ಮ ಮನೆಗಳಲ್ಲಿಯೆ ಅವರು ಆಚರಣೆ ಮಾಡಿಕೊಳ್ಳಲಿ. ಸಾಮೂಹಿಕ ಆಚರಣೆಗೆ ಅವಕಾಶವಿಲ್ಲ ಎಂದು ಅಶೋಕ್ ಹೇಳಿದ್ದಾರೆ.