'ಪ್ರಧಾನಿ ಗೌಡ್ರೇ ಆಗ್ಬೇಕು. ಸಿಎಂ ಎಚ್ಡಿಕೆ, ರೇವಣ್ಣನೇ ಆಗ್ಬೇಕು'
ಬೆಂಗಳೂರು, ಏ. 16 : 'ಪ್ರಧಾನಿಯಾದರೆ ದೇವೇಗೌಡರೇ ಆಗಬೇಕು. ಮುಖ್ಯಮಂತ್ರಿಯಾದರೆ ಕುಮಾರಸ್ವಾಮಿ, ರೇವಣ್ಣನೇ ಆಗಬೇಕು, ಇದು ದೇವೇಗೌಡರ ರಾಜಕಾರಣ'. ಹೀಗೆ ದೇವೇಗೌಡರ ಕುಟುಂಬವನ್ನು ಲೇವಡಿ ಮಾಡಿದ್ದು ಮುಖ್ಯಮಂತ್ರಿ ಸಿದ್ದರಾಮಯ್ಯ.
ಗೃಹ ಕಚೇರಿ ಕೃಷ್ಣಾದಲ್ಲಿ ಗುರುವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಸಿದ್ದರಾಮಯ್ಯ ಅವರು ಜಾತಿ ಗಣತಿ ವಿರೋಧಿಸುವ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರ ವಿರುದ್ಧ ಕಿಡಿಕಾರಿದರು. 'ಸಿದ್ದರಾಮಯ್ಯ ಜಾತಿವಾದಿ' ಎಂದು ಟೀಕಿಸಿದ್ದ ಕುಮಾರಸ್ವಾಮಿ ಅವರಿಗೆ ತಿರುಗೇಟು ಕೊಟ್ಟರು. [ಸಿದ್ದರಾಮಯ್ಯ ಮನೆಯಲ್ಲಿ ಜಾತಿಗಣತಿ]

'ದೇವೇಗೌಡರದ್ದು ಜಾತಿ ಮತ್ತು ಕುಟುಂಬ ರಾಜಕಾರಣ ಎಂದು ಹೇಳಿದ ಸಿದ್ದರಾಮಯ್ಯ, ಪ್ರಧಾನಿಯಾದರೆ ದೇವೇಗೌಡರೇ ಆಗಬೇಕು, ಮುಖ್ಯಮಂತ್ರಿಯಾದರೆ ಕುಮಾರಸ್ವಾಮಿ, ರೇವಣ್ಣನೇ ಆಗಬೇಕು ಎಂಬುದು ಅವರ ರಾಜಕಾರಣಕ್ಕೆ ಉದಾಹರಣೆ' ಎಂದು ಕುಟುಕಿದರು. [ಬಿಬಿಎಂಪಿ ಚುನಾವಣೆ, ಸರ್ಕಾರಕ್ಕೆ ಹಿನ್ನಡೆ]
'ಇನ್ನೊಬ್ಬರ ಬಗ್ಗೆ ಮಾತನಾಡಲು ಕುಮಾರಸ್ವಾಮಿ ಅವರಿಗೆ ಯಾವುದೇ ನೈತಿಕ ಹಕ್ಕಿಲ್ಲ, ಜಾತಿ ಗಣತಿಯನ್ನು ಸಮಾಜ ಒಂದುಗೂಡಿಸುವ ಉದ್ದೇಶದಿಂದ ಮಾಡಲಾಗುತ್ತಿದೆ. ಸಮಾಜ ಒಡೆಯಲು ಅಲ್ಲ ಎಂದು' ಸಿದ್ದರಾಮಯ್ಯ ಸ್ಪಷ್ಟಪಡಿಸಿದರು.
ಬಿಜೆಪಿ ರಾಜಕೀಯ ಮಾಡುತ್ತಿದೆ : ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವಿಭಜನೆ ವಿಷಯದಲ್ಲಿ ಪ್ರತಿಪಕ್ಷ ಬಿಜೆಪಿ ರಾಜಕಾರಣ ಮಾಡುತ್ತಿದೆ ಎಂದು ಸಿದ್ದರಾಮಯ್ಯ ಆರೋಪಿಸಿದರು. ಹಿಂದೆ ಬಿಜೆಪಿಯೇ ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ಪಾಲಿಕೆ ವಿಭಜನೆ ಪ್ರಸ್ತಾಪ ಮಾಡಿತ್ತು. ಆದರೆ, ಈಗ ಅದನ್ನು ವಿರೋಧಿಸುತ್ತಿದೆ ಎಂದು ನೆನಪಿಸಿದರು. [ಬಿಬಿಎಂಪಿ ವಿಭಜನೆ ಹೇಗೆ, ಇಲ್ಲಿದೆ ಮಾಹಿತಿ]
ಬಿಬಿಎಂಪಿ ವಿಭಜನೆ ಸುಗ್ರೀವಾಜ್ಞೆಗೆ ಒಪ್ಪಿಗೆ ಪಡೆಯಲು ಸರ್ಕಾರ ವಿಶೇಷ ಅಧಿವೇಶನ ಕರೆಯಲಿದೆ. ಪ್ರತಿಪಕ್ಷಗಳು ಈ ಬಗ್ಗೆ ಅಧಿವೇಶನದಲ್ಲಿಯೇ ಬಂದು ಚರ್ಚೆ ಮಾಡಿ ತಮ್ಮ ಗೊಂದಲ ಬಗೆಹರಿಸಿಕೊಳ್ಳಲಿ. ಯಾವುದೇ ಕಾರಣಗಳಿಲ್ಲದೇ ವಿಭಜನೆ ವಿರೋಧಿಸುವುದು ತಪ್ಪು ಎಂದು ಹೇಳಿದರು.












Click it and Unblock the Notifications