ಇನ್ನು ಹೈಕೋರ್ಟ್ ಕಲಾಪ ಕನ್ನಡದಲ್ಲಿ
ಬೆಂಗಳೂರು, ಜು. 10 : ಹೈಕೋರ್ಟ್ ನಡಾವಳಿಗಳನ್ನು ಕನ್ನಡದಲ್ಲೇ ನಡೆಸಲು ಕ್ರಮ ತೆಗೆದುಕೊಳ್ಳುವುದೂ ಸೇರಿದಂತೆ ಹಲವಾರು ಪ್ರಮುಖ ನಿರ್ಧಾರಗಳನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ಬುಧವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಕೈಗೊಳ್ಳಲಾಗಿದೆ.
ಬುಧವಾರ ವಿಧಾನಸಭೆ ಕಲಾಪ ಆರಂಭವಾಗುವುದಕ್ಕೊ ಮೊದಲು ವಿಧಾನಸೌಧದಲ್ಲಿ ರಾಜ್ಯ ಸಚಿವ ಸಂಪುಟ ಸಭೆ ನಡೆಯಿತು. ರಾಜ್ಯ ಹೈಕೋರ್ಟ್ ಎಲ್ಲಾ ನಡಾವಳಿ ಕನ್ನಡದಲ್ಲಿ ನಡೆಯುವಂತೆ ಮಾಡಲು ಅಗತ್ಯವಿರುವ ಪ್ರಕ್ರಿಯೆ ಆರಂಭಿಸಲು ಸಭೆಯಲ್ಲಿ ತೀರ್ಮಾನ ತೆಗೆದುಕೊಳ್ಳಲಾಗಿದೆ. ಪ್ರಸ್ತುತ ಕೆಳ ಹಂತದ ನ್ಯಾಯಾಲಯದಲ್ಲಿ ಕನ್ನಡ ಬಳಕೆ ಜಾರಿಯಲ್ಲಿದೆ.

ಹಲವು ವರ್ಷಗಳಿಂದ ಹೈಕೋರ್ಟ್ ನಲ್ಲಿ ಕಲಾಪ ಕನ್ನಡದಲ್ಲಿ ನಡೆಯಬೇಕು ಎಂಬ ಬೇಡಿಕೆ ಇತ್ತು. ಇದರಿಂದ ಜನರಿಗೆ ಸಹಾಯಕವಾಗುವ ಜೊತೆಗೆ ಯುವ ವಕೀಲರು ಕನ್ನಡದಲ್ಲಿ ಕಲಾಪ ನಡೆಸಲು ಅನುಕೂಲವಾಗುತ್ತದೆ ಎಂದು ಈ ನಿರ್ಧಾರ ಕೈಗೊಳ್ಳಲಾಗಿದೆ. ಈ ಬಗ್ಗೆ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಜತೆ ಚರ್ಚಿಸಲು ಸಚಿವ ಸಂಪುಟ ಒಪ್ಪಿಗೆ ನೀಡಿದೆ.
ಸ್ಥಳೀಯ ಸಂಸ್ಥೆಗಳು ಮೇಲ್ದರ್ಜೆಗೆ : ಎಂಟು ಪುರಸಭೆ ಹಾಗೂ ಆರು ಪಟ್ಟಣ ಪಂಚಾಯತಿ ಸೇರಿ ಒಟ್ಟು 16 ಸ್ಥಳೀಯ ಸಂಸ್ಥೆಗಳನ್ನು ಮೇಲ್ದರ್ಜೆಗೇರಿಸಲು ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿದೆ. ಹಾಲಿ ಪುರಸಭೆಗಳಾಗಿರುವ ಪುತ್ತೂರು, ಶಿರಗುಪ್ಪ, ಶಿಡ್ಲಘಟ್ಟ ಉಲ್ಲಾಳ, ಹೊಸಕೋಟೆ, ನಂಜನಗೂಡು, ಹಿರಿಯೂರು, ಕನಕಪುರ ಹಾಗೂ ಮುಧೋಳವನ್ನು ನಗರ ಸಭೆಯಾಗಿ ಮೇಲ್ದರ್ಜೆಗೇರಿಸಲಾಗುತ್ತದೆ.
ಪಟ್ಟಣ ಪಂಚಾಯಿತಿಗಳು : ಪಟ್ಟಣ ಪಂಚಾಯತಿಗಳಾದ ಟಿ.ನರಸೀಪುರ, ಕುಡಚಿ, ಸದಲಗ, ಹುಕ್ಕೇರಿ, ಮುದ್ಗಲ್, ಚನ್ನಗಿರಿ ಮತ್ತು ಮುಳಬಾಗಿಲನ್ನು ಪುರಸಭೆಯಾಗಿ ಮೇಲ್ದರ್ಜೆಗೇರಿಸಲು ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿದೆ. [ಹಿಂದಿನ ಸಚಿವ ಸಂಪುಟ ಸಭೆ ನಿರ್ಣಯಗಳು]
ಸಂಪುಟ ಸಭೆಯ ಇತರ ನಿರ್ಣಯಗಳು
* ಕರ್ನಾಟಕ ಪಂಚಾಯತ್ರಾಜ್ ಎಂಜಿನಿಯರಿಂಗ್ ಸೇವೆಗಳ ನಿಯಮ-2008 ಮತ್ತು ಕರ್ನಾಟಕ ಸಾಮಾನ್ಯ ಸೇವೆ ನಿಯಮಕ್ಕೆ ತಿದ್ದುಪಡಿ.
* ಕೃಷಿ ಭೂಮಿಯನ್ನು ಕೃಷಿಯೇತರ ಉದ್ದೇಶಕ್ಕೆ ಬಳಸಲು ಅನುಮತಿ ಕೋರಿದ ಪ್ರಸ್ತಾವನೆಗಳಿಗೆ ಅನುಮೋದನೆ.
* ಚಿಕ್ಕಬಳ್ಳಾಪುರ, ರಾಮನಗರ ಮತ್ತು ಯಾದಗಿರಿ ಜಿಲ್ಲಾ ಪಂಚಾಯತ್ ಅಧಿಕಾರಿಗಳಿಗೆ ವಸತಿ ಗೃಹ ನಿರ್ಮಿಸಲು 14.25 ಕೋಟಿ ಬಿಡುಗಡೆ.
* 9 ಸಾರ್ವಜನಿಕ ಆಸ್ಪತ್ರೆಗಳಲ್ಲಿ ತಾಯಿ ಮತ್ತು ಶಿಶು ಆರೋಗ್ಯ ರಕ್ಷಣಾ ಕೇಂದ್ರಗಳ ಕಟ್ಟಡವನ್ನು ನಬಾರ್ಡ್ ನೆರವಿನೊಂದಿಗೆ ನಿರ್ಮಿಸಲು ಒಪ್ಪಿಗೆ












Click it and Unblock the Notifications