ಜೆಡಿಎಸ್ ಪಂಚರತ್ನ ಯಾತ್ರೆಯಲ್ಲ, ಪಂಚ ಜನರ ಪ್ರಮೋಶನ್ ಯಾತ್ರೆ: ಬಿಜೆಪಿ
ಬೆಂಗಳೂರು,ಡಿಸೆಂಬರ್ 29: ಜೆಡಿಎಸ್ ಪಕ್ಷದ ಪಂಚರತ್ನ ಪ್ರಮೋಶನ್ ಯಾತ್ರೆ ಎಂದರೆ ಜನಪರ ಅಭಿವೃದ್ಧಿಯ ಯಾತ್ರೆಯಲ್ಲ. ಅದು ಅವರ ಕುಟುಂಬದ 5 (ಪಂಚ) ಜನರನ್ನು ಪ್ರಮೋಶನ್ ಮಾಡುವ ಯಾತ್ರೆ. ಇದು ಜನರಿಗೆ ಅರ್ಥವಾದ ಕಾರಣಕ್ಕೆ ಪಂಚರತ್ನ ಯಾತ್ರೆ, ಪಂಚರ್ ಆಗಿದೆ ಎಂದು ಜೆಡಿಎಸ್ ವಿರುದ್ದ ಬಿಜೆಪಿ ವ್ಯಂಗ್ಯವಾಡಿದೆ.
ಈ ಕುರಿತು ಸರಣಿ ಟ್ವೀಟ್ ಮಾಡಿರುವ ಬಿಜೆಪಿ, ಪಂಚರ್ ರತ್ನ ಪ್ರಮೋಶನ್ ಯಾತ್ರೆ ಎಂಬುದು ಹಳೆ ಮೈಸೂರಿನ ಅಭಿವೃದ್ಧಿಗೆ ಹಮ್ಮಿಕೊಂಡ ಯಾತ್ರೆ ಅಲ್ಲಾ. ಹೆಚ್. ಡಿ. ಕುಮಾರಸ್ವಾಮಿ, ನಿಖಿಲ್ ಕುಮಾರಸ್ವಾಮಿ, ಹೆಚ್. ಡಿ. ರೇವಣ್ಣ, ಪ್ರಜ್ವಲ್ ರೇವಣ್ಣ, ಹಾಗೂ ಸೂರಜ್ ರೇವಣ್ಣ ಹೀಗೆ ಜೆಡಿಎಸ್ನ 5 ಜನರನ್ನು ಪ್ರಮೋಶನ್ ಮಾಡಲು ಆಯೋಜಿಸಿದ ಯಾತ್ರೆಯಾಗಿದೆ. '
ಪಂಚರ್ ರತ್ನ ಪ್ರಮೋಶನ್ ಯಾತ್ರೆ ಎಂಬುದು ಹಳೆ ಮೈಸೂರಿನ ಅಭಿವೃದ್ಧಿಗೆ ಹಮ್ಮಿಕೊಂಡ ಯಾತ್ರೆ ಅಲ್ಲಾ @hd_kumaraswamy @Nikhil_Kumar_k @hd_revanna@iPrajwalRevanna @iSurajRevanna
— BJP Karnataka (@BJP4Karnataka) December 29, 2022
ಹೀಗೆ ಜೆಡಿಎಸ್ನ 5 ಜನರನ್ನು ಪ್ರಮೋಶನ್ ಮಾಡಲು ಆಯೋಜಿಸಿದ ಯಾತ್ರೆ.#OldMysuruWelcomesAmitShah
2/9
ಜನರ ಒಳ್ಳೆಯತನವನ್ನು ದುರುಪಯೋಗ ಪಡಿಸಿಕೊಳ್ಳುವುದರಲ್ಲಿ ಹೆಚ್. ಡಿ. ಕುಮಾರಸ್ವಾಮಿ ಅವರು ಎತ್ತಿದ ಕೈ. ರಾಜಕೀಯವನ್ನು ಫ್ಯಾಮಿಲಿ ಬಿಸ್ನೆಸ್ ಮಾಡಿಕೊಂಡಿರುವ ಜೆಡಿಎಸ್, ಲಾಭಕ್ಕಾಗಿ ಏನು ಬೇಕಾದರೂ ಮಾಡುತ್ತದೆ ಎಂಬುದು ಈಗಾಗಲೇ ಪದೇಪದೇ ಸಾಬೀತುಪಡಿಸಿದೆ. ಇವರ ಕಪಟ ಬುದ್ಧಿಗೆ ಸಿಲುಕಿ ತತ್ತರಿಸುತ್ತಿರುವವರು ಮಂಡ್ಯದ ಜನತೆ. ಮುಗ್ದ ಮನಸ್ಸಿನ ಮಂಡ್ಯ ಜನರ ಒಳ್ಳೆಯತನವನ್ನೇ ದಡ್ಡತನವೆಂದು ತಿಳಿದುಕೊಂಡ ಹೆಚ್. ಡಿ. ಕುಮಾರಸ್ವಾಮಿ ಇಡೀ ಜಿಲ್ಲೆಯಲ್ಲಿ ಮಾಡಿದ್ದು ಹಗಲು ದರೋಡೆ. 2018 ರಲ್ಲಿ ಏಳಕ್ಕೆ ಏಳೂ ಕ್ಷೇತ್ರಗಳನ್ನು ಗೆಲ್ಲಿಸಿಕೊಟ್ಟ ಮಂಡ್ಯದ ಜನತೆಗೆ ಜೆಡಿಎಸ್ ಹೇಳಿಕೊಳ್ಳುವುದಕ್ಕಾದರೂ ಒಂದು ಒಳ್ಳೆಯ ಕೆಲಸ ಮಾಡಲಿಲ್ಲಎಂದು ಕಿಡಿಕಾರಿದೆ.

ಅನ್ಯಾಯ ಮತ್ತು ನಂಬಿಕೆ ದ್ರೋಹವನ್ನು ಮಂಡ್ಯದ ಜನರು ಎಂದಿಗೂ ಸಹಿಸರು. ಹಾಗಾಗಿ 2019 ರ ಉಪಚುನಾವಣೆಯಲ್ಲಿ ಕೆ. ಆರ್.ಪೇಟೆಯಲ್ಲಿ ಜೆಡಿಎಸ್ ಪಕ್ಷವನ್ನು ಸೋಲಿಸಿ ಬಿಜೆಪಿಗೆ ಗೆಲುವಿನ ಮಾಲೆ ಹಾಕಿದರು. ಎರಡೂ ಪಕ್ಷಗಳ ಕೆಲಸಗಳನ್ನು ಜಿಲ್ಲೆಯ ಇತರೆ ಆರೂ ಕ್ಷೇತ್ರಗಳ ಮತದಾರರು ಪಟ್ಟಿ ಮಾಡಿಟ್ಟುಕೊಂಡಿದ್ದಾರೆ.
ಹಳೇ ಮೈಸೂರು ಭಾಗದ ಮೇಲೆಯೇ ಜೆಡಿಎಸ್ಗೆ ಯಾಕಿಷ್ಟು ಢೋಂಗಿ ಅಕ್ಕರೆ ಎಂದರೆ ಈ ಭಾಗವೇ ಆ ಪಕ್ಷದ ಪಾಲಿಗೆ ಕರೆಯುವ ಹಸು. ಕಣ್ಣೀರು ಸುರಿಸಿ ಜನರ ನಂಬಿಕೆ ಜತೆ ಆಡುವ ಕಲೆ ಪಕ್ಷಕ್ಕೆ ಕರಗತವಾಗಿದೆ. ಯೋಜನೆಗಳ ಹೆಸರು ಹೇಳಿ ಹಣ ಮಾಡಿಕೊಳ್ಳುತ್ತಿರುವುದರಿಂದಲೇ ಅಭಿವೃದ್ಧಿ ಎಂಬುದು ಈ ಭಾಗಕ್ಕೆ ಮರಿಚೀಕೆಯಾಗಿದೆ. ಆದರೆ, ಬಿಜೆಪಿಗೆ ಜನ ಮತ್ತು ಕ್ಷೇತ್ರದ ಅಭಿವೃದ್ಧಿಯೇ ಮುಖ್ಯ. ಹಳೇ ಮೈಸೂರು ಭಾಗದಲ್ಲಿ ಕೆಲವೇ ಕ್ಷೇತ್ರಗಳಲ್ಲಿ ಗೆದ್ದರೂ ಜೆಡಿಎಸ್ಗಿಂತ ಗಮನಾರ್ಹ ಪ್ರಮಾಣದಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಮಾಡಿದೆ. ಗ್ರಾಮೀಣ ಭಾಗದಲ್ಲಿ ಬಿಜೆಪಿ ಶಾಸಕರು ಮಾಡಿರುವ ಅಭಿವೃದ್ಧಿಗೆ ಜನ ಮೆಚ್ಚಿದ್ದಾರೆ ಎಂದು ಟ್ವೀಟ್ ಮಾಡಿದೆ.

ಭಾಗದ ಪ್ರಮುಖ ಸಮುದಾಯಗಳು ಈಗ ಜೆಡಿಎಸ್ ವಿರುದ್ಧ ತಿರುಗಿಬಿದ್ದಿವೆ ಎಂಬುದನ್ನು ಹೆಚ್. ಡಿ. ಕುಮಾರಸ್ವಾಮಿ ಅವರು ಅರ್ಥ ಮಾಡಿಕೊಂಡಿದ್ದಾರೆ. ಹಾಗಾಗಿಯೇ, ತುಷ್ಟೀಕರಣದ ರಾಜಕಾರಣಕ್ಕೆ ಕೈ ಹಾಕಿದ್ದಾರೆ. ತುಷ್ಟೀಕರಣ ಯಾವ ಮಟ್ಟದಲ್ಲಿದೆ ಎಂಬುದಕ್ಕೆ ಪಂಚರತ್ನ ಯಾತ್ರೆಯಲ್ಲಿ ಅವರನ್ನು ಹೊರುವ ರಥದ ಹೆಸರೇ ಸಾಕ್ಷಿ.

ತಾನು ಮಾಡಿದ ದ್ರೋಹದ ಫಲವಾಗಿ ಮಂಡ್ಯದ ಜನತೆ ಮುಂದಿನ ಚುನಾವಣೆಯಲ್ಲಿ ಕೈ ಹಿಡಿಯಲ್ಲ ಎಂಬುದನ್ನು ಹೆಚ್. ಡಿ. ಕುಮಾರಸ್ವಾಮಿ ಅವರು ಅರ್ಥಮಾಡಿಕೊಂಡಿದ್ದಾರೆ. ಜಾತ್ಯಾತೀತ ಹೆಸರಿನಲ್ಲಿ ಜಾತಿ ರಾಜಕಾರಣ ಮಾಡುವ ಆಟವನ್ನು ಹಳೇ ಮೈಸೂರು ಭಾಗದ ಜನ ಅರಿತಿದ್ದಾರೆ, ಅವರಿಗೆ ಮುಂಬರುವ ಚುನಾವಣೆಯಲ್ಲಿ ತಕ್ಕ ಪಾಠವನ್ನು ಕಲಿಸುತ್ತಾರೆ ಎಂದು ಬಿಜೆಪಿ ಟ್ವೀಟ್ ಮಾಡಿದೆ.












Click it and Unblock the Notifications