ಶಾಸಕ ಮುನಿರತ್ನ ಭವಿಷ್ಯ ನಿರ್ಧರಿಸುವುದು ಇದು ಮಾತ್ರ..!
ಗುತ್ತಿಗೆದಾರನಿಗೆ ಜೀವ ಬೆದರಿಕೆ ಹಾಗೂ ಜಾತಿ ನಿಂದನೆ ಆರೋಪದಲ್ಲಿ ಬಿಜೆಪಿ ಶಾಸಕ ಮುನಿರತ್ನ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಆದರೆ, ಜಾತಿ ನಿಂದನೆ ವಿಚಾರವಾಗಿ ಒಕ್ಕಲಿಗರು ಹಾಗೂ ದಲಿತರು ರಾಜ್ಯಾದ್ಯಂತ ಬೀದಿಗಿಳಿದು ಪ್ರತಿಭಟನೆ ಮಾಡುತ್ತಿದ್ದಾರೆ. ಮುನಿರತ್ನ ಹಾಗೂ ಗುತ್ತಿಗೆದಾರ ಮಾತನಾಡಿದ್ದಾರೆ ಎನ್ನಲಾದ ಆಡಿಯೋದಿಂದಲೇ ಈ ಕೇಸ್ ಸ್ಟ್ರಾಂಗ್ ಆಗಿದ್ದು, ಈಗ ಮುನಿರತ್ನ ಅವರು ಈ ಆರೋಪದಿಂದ ಪಾರಾಗಲು ಇರುವುದು ಒಂದೇ ದಾರಿ ಎನ್ನಲಾಗಿದೆ.
ಗುತ್ತಿಗೆದಾರ ಚೆಲುವರಾಜು ಎನ್ನುವವರು ತಮಗೆ ಶಾಸಕ ಮುನಿರತ್ನ ಅವರು ಜೀವಬೆದರಿಕೆ ಹಾಕಿದ್ದರು ಎಂದು ಆರೋಪಿಸಿ, ಇದಕ್ಕೆ ಸಂಬಂಧಿಸಿದಂತೆ ಸಂಭಾಷಣೆಯ ಆಡಿಯೋವೊಂದನ್ನು ರಿಲೀಸ್ ಮಾಡಿದ್ದರು. ಇದರಲ್ಲಿ ಮುನಿರತ್ನ ಅವರೇ ಅವಾಚ್ಯವಾಗಿ ನಿಂದಿಸಿದ್ದಲ್ಲದೆ, ಒಕ್ಕಲಿಗರು ಹಾಗೂ ದಲಿತರ ಬಗ್ಗೆ ಕೆಟ್ಟ ಪದಗಳಿಂದ ಮಾತನಾಡಿದ್ದಾರೆ ಎಂದು ಆರೋಪಿಸಲಾಗಿದೆ.

ಸದ್ಯ ಈ ಆಡಿಯೋವನ್ನು ಎಸ್ಎಸ್ಎಲ್ಗೆ ಕಳುಹಿಸಲಾಗಿದೆ. ಒಂದು ವೇಳೆ ಈ ಸಂಭಾಷಣೆ ಮುನಿರತ್ನ ಅವರದ್ದೇ ಎಂದು ಸಾಬೀತಾದರೆ, ಈ ಕೇಸ್ ಮತ್ತೊಂದು ತಿರುವು ಪಡೆದುಕೊಳ್ಳಲಿದೆ. ಆ ಧ್ವನಿ ಮುನಿರತ್ನ ಅವರದ್ದಲ್ಲ ಎಂದರೆ ಮಾತ್ರವೇ ಈ ಕೇಸ್ನಿಂದ ಶಾಸಕರಿಗೆ ಮುಕ್ತಿ ಸಿಗಲಿದೆ.
ಈ ಬಗ್ಗೆ ಮಾತನಾಡಿರುವ ಗೃಹ ಸಚಿವ ಜಿ.ಪರಮೇಶ್ವರ್, ಶಾಸಕ ಮುನಿರತ್ನ ವಿರುದ್ಧದ ಜೀವ ಬೆದರಿಕೆ ಹಾಗೂ ಜಾತಿ ನಿಂದನೆ ಕೇಸ್ಗೆ ಸಂಬಂಧಿಸಿದಂತೆ ಆಡಿಯೋವನ್ನು ಈಗಾಗಲೇ ಎಫ್ಎಸ್ಎಲ್ಗೆ ಕಳಿಸಲಾಗಿದೆ. ಅದರಲ್ಲಿ ಮುನಿರತ್ನ ಅವರ ವಾಯ್ಸ್ ಮ್ಯಾಚ್ ಆಗದಿದ್ರೆ ಅವರ ಮೇಲೆ ಈ ಕೇಸ್ ಮುಂದುವರಿಯುವುದಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.
ಹಾಗಾಗಿ ಮುನಿರತ್ನ ಅವರ ಭವಿಷ್ಯವನ್ನು ಎಫ್ಎಸ್ಎಲ್ ವರದಿ ತೀರ್ಮಾನಿಸಲಿದೆ ಎಂದು ಹೇಳಲಾಗುತ್ತಿದೆ. ಎಫ್ಎಸ್ಎಲ್ ವರದಿ ಆಧರಿಸಿಯೇ ಮುನಿರತ್ನ ಅವರ ಮೇಲೆ ದಾಖಲಾಗಿರುವ ಈ ಪ್ರಕರಣವು ಮುಂದಿನ ಹಂತಕ್ಕೆ ತಲುಪಲಿದೆ.

ಏನಿದು ಪ್ರಕರಣ?: ಗುತ್ತಿಗೆದಾರ ಚೆಲುವರಾಜು ಎಂಬುವರಿಗೆ ಕೊಲೆ ಬೆದರಿಕೆ, ಜಾತಿ ನಿಂದನೆ ಮಾಡಿರುವ ಆರೋಪದಲ್ಲಿ ಬಿಜೆಪಿ ಶಾಸಕ ಮುನಿರತ್ನ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಬಳಿಕ ಅವರನ್ನು ನ್ಯಾಯಾಧೀಶರ ಎದುರು ಹಾಜರುಪಡಿಸಿ ಎರಡು ದಿನಗಳವರೆಗೆ ಕಸ್ಟಡಿಗೂ ಒಪ್ಪಿಸಲಾಗಿದೆ.
ಇದಕ್ಕೂ ಮುನ್ನ ಗುತ್ತಿಗೆದಾರ ಚಲುವರಾಜು, ಮುನಿರತ್ನ ಅವರ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದರು. ಬಳಿಕ ಮುನಿರತ್ನ ಅವರ ಪತ್ತೆಗೆ ಪೊಲೀಸರು ಮುಂದಾದಾಗ ಅವರು ಕೋಲಾರ ಜಿಲ್ಲೆಯಲ್ಲಿ ಇರುವ ಮಾಹಿತಿ ಸಿಕ್ಕಿತ್ತು. ಕೊನೆಗೆ ಮುಳಬಾಗಿಲು ತಾಲ್ಲೂಕಿನ ನಂಗಲಿ ಗ್ರಾಮದ ಬಳಿ ಮುನಿರತ್ನ ಅವರನ್ನು ಪೊಲೀಸರು ಲಾಕ್ ಮಾಡಿದ್ದರು. ಕೋಲಾರದಿಂದ ಆಂಧ್ರದ ಚಿತ್ತೂರು ಕಡೆಗೆ ಹೋಗಲು ಶಾಸಕ ಮುನಿರತ್ನ ಮುಂದಾಗಿದ್ದರು. ಮುನಿರತ್ನ ಅವರ ಮೊಬೈಲ್ ಲೊಕೇಶನ್ ಟ್ರ್ಯಾಕ್ ಮಾಡಿ ಅವರಿದ್ದ ಸ್ಥಳವನ್ನು ಪೊಲೀಸರು ಪತ್ತೆ ಹಚ್ಚಿ ಬಂಧಿಸಿದ್ದರು.
ಇದಕ್ಕೂ ಮುನ್ನ ವಿಡಿಯೋ ಬಿಡುಗಡೆ ಮಾಡಿದ್ದ ಶಾಸಕ ಮುನಿರತ್ನ, ರಾಜಕೀಯ ಪಿತೂರಿಯಿಂದಾಗಿ ಈ ರೀತಿಯ ಆರೋಪಗಳನ್ನು ನನ್ನ ಮೇಲೆ ಮಾಡಿದ್ದಾರೆ. ನಾನೆಲ್ಲೂ ನಾಪತ್ತೆಯಾಗಿಲ್ಲ ಎಂದಿದ್ದರು. ಅಲ್ಲದೆ, ಆ ಆಡಿಯೋ ನನ್ನದೇ ಎಂದು ಸಾಬೀತಾದರೆ, ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ ಎಂದು ಹೇಳಿದ್ದರು.
ಮುನಿರತ್ನ ಅವರು ನಿಂದಿಸಿದ್ದಾರೆ ಎನ್ನಲಾದ ಆಡಿಯೋ ವೈರಲ್ ಆದ ಬೆನ್ನಲ್ಲೇ ರಾಜ್ಯಾದ್ಯಂತ ದಲಿತರು ಹಾಗೂ ಒಕ್ಕಲಿಗ ಸಮುದಾಯದವರು ಪ್ರತಿಭಟನೆ ನಡೆಸುತ್ತಿದ್ದಾರೆ. ಮತ್ತೊಂದೆಡೆ ಮುನಿರತ್ನ ಅವರ ವಿರುದ್ಧ ಒಕ್ಕಲಿಗ ರಾಜಕಾರಣಿಗಳು ಸಿಡಿದೆದ್ದಿದ್ದು, ಕಾಂಗ್ರೆಸ್ ಪಕ್ಷದ ಒಕ್ಕಲಿಗ ಸಮುದಾಯದ ಶಾಸಕರು ಹಾಗೂ ಸಚಿವರು ಇಂದು ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಮುನಿರತ್ನ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದಾರೆ. ಬಿಜೆಪಿ ಕೂಡ ಈ ಘಟನೆ ಬಗ್ಗೆ ಸ್ಪಷ್ಟೀಕರಣ ನೀಡುವಂತೆ ಮುನಿರತ್ನ ಅವರಿಗೆ ಶೋಕಾಸ್ ನೋಟೀಸ್ ಜಾರಿ ಮಾಡಿದೆ.












Click it and Unblock the Notifications