Yatnal: ನಾನು ಸಿಎಂ ಆದ್ರೆ ಮೊದಲು 1,000 ಬುಲ್ಡೋಜರ್ ಖರೀದಿಸುವೆ
ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನದ ಆಕಾಂಕ್ಷಿ ಎಂಬುದು ಎಲ್ಲರಿಗೂ ಗೊತ್ತೇ ಇದೆ. ಈಗ ಅವರು ಇನ್ನೂ ದೊಡ್ಡ ಹುದ್ದೆಯ ಮೇಲೆ ಕಟ್ಟಿಣ್ಣಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷರ ರೇಸ್ನಲ್ಲಿರುವಾಗಲೇ ಯತ್ನಾಳ್ ಅವರು ಮುಖ್ಯಮಂತ್ರಿಯಾಗುವ ಬಗ್ಗೆ ಅಚ್ಚರಿ ಹೇಳಿಕೆ ನೀಡಿದ್ದಾರೆ. ಅಲ್ಲದೆ ಅವರು ಸಿಎಂ ಆದರೆ ಮೊದಲು ಏನು ಕೆಲಸ ಮಾಡುತ್ತಾರೆ ಎಂಬುದನ್ನೂ ಅವರು ಹೇಳಿದ್ದಾರೆ. ಇದು ರಾಜಕೀಯ ವಲಯದಲ್ಲಿ ಸಂಚಲನ ಸೃಷ್ಟಿಸಿದೆ.
ಉತ್ತರಪ್ರದೇಶದ ಬುಲ್ಡೋಜರ್ ಮಾಡಲ್ ಬಗ್ಗೆ ಸದಾ ಧ್ವನಿ ಎತ್ತುವ ಬಸನಗೌಡ ಪಾಟೀಲ್ ಯತ್ನಾಳ್ ಅವರು ಇದೀಗ ಒಂದು ಅವರು ಮುಖ್ಯಮಂತ್ರಿ ಆದರೆ ಮೊದಲು ಒಂದು ಸಾವಿರ ಬುಲ್ಡೋಜರ್ಗಳನ್ನು ಖರೀದಿಸುತ್ತೇನೆ. ರಾಜ್ಯದಲ್ಲಿ ಹಿಂದೂಗಳ ಮೇಲೆ ಹಲ್ಲೆಗಳು ನಡೆದಾಗ ಏನೂ ಆಗಲಿಲ್ಲ. ಈಗಿರುವ ಕಾಂಗ್ರೆಸ್ ಸರ್ಕಾರ ಕೂಡ ಏನೂ ಮಾಡಲಿಲ್ಲ, ನಮ್ಮ ಬಿಜೆಪಿ ಸರ್ಕಾರ ಕೂಡ ಏನೂ ಮಾಡಲಿಲ್ಲ. ಇದಕ್ಕೆಲ್ಲ ಕಡಿವಾಣ ಹಾಕಬೇಕು ಎಂದರೆ ಮೊದಲು ಬುಲ್ಡೋಜರ್ ತರಬೇಕು. ಹಾಗಾಗಿ ನಾನು ಸಿಎಂ ಆದರೆ ಮೊದಲಿಗೆ 1000 ಬುಲ್ಡೋಜರ್ ಖರೀದಿ ಮಾಡುತ್ತೇನೆ. ಪ್ರತಿ ತಾಲ್ಲೂಕಿಗೆ 25 ಬುಲ್ಡೋಜರ್ ಆರ್ಡರ್ ಕೊಡುತ್ತೇನೆ. ಯಾರಾದರೂ ಬಾಯಿ ಬಿಟ್ರೆ ಅವರ ಮನೆ ಖಲಾಸ್ ಮಾಡ್ತೀವಿ ಎಂದು ಯತ್ನಾಳ್ ವಾರ್ನಿಂಗ್ ಕೂಡ ಕೊಟ್ಟಿದ್ದಾರೆ.

ಬಿಜೆಪಿಯಲ್ಲಿ ಹಿಂದೂ ಹುಲಿ ಎಂದೇ ಕರೆಸಿಕೊಂಡಿರುವ ಯತ್ನಾಳ್ ಅವರು ರಾಜ್ಯದಲ್ಲಿ ಈ ಹಿಂದೆ ಹಿಂದೂಗಳ ಮೇಲಿನ ಹಲ್ಲೆಯನ್ನು ತೀವ್ರವಾಗಿ ಖಂಡಿಸಿದ್ದರು. ಪ್ರತಿ ಘಟನೆಯಾದಾಗಲೂ ಅವರು ಸಿಡಿಯುತ್ತಿದ್ದರು. ಇದೀಗ ಅವರು ಮುಖ್ಯಮಂತ್ರಿಯಾಗುವ ಆಸೆ ಬಿಚ್ಚಿಟ್ಟಿರುವುದಲ್ಲದೆ, ಸಿಎಂ ಆದ ಕೂಡಲೇ ಮೊದಲು ಬುಲ್ಡೋಜರ್ಗಳನ್ನ ಖರೀದಿಸುವುದಾಗಿ ಅವರು ಹೇಳಿದ್ದಾರೆ. ಈ ಕಳೆದ ಕೆಲವು ತಿಂಗಳ ಹಿಂದೆಯೂ ಅವರು ಸಿಎಂ ಆಗುವ ಆಸೆ ಬಿಚ್ಚಿಟ್ಟಿದ್ದರು. ಬಿಜೆಪಿಯ ರಾಜ್ಯ ಘಟಕದ ಅಧ್ಯಕ್ಷ ಹಾಗೂ ಮುಂದಿನ ಮುಖ್ಯಮಂತ್ರಿಯಾಗುವ ರೇಸ್ನಲ್ಲಿ ನಾನು ಕೂಡ ಇದ್ದೇನೆ ಎಂದು ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದರು.
ನಾನು ಯಾಕೆ ಸಿಎಂ ಆಗಬಾರದು? ನನ್ನಲ್ಲಿ ಏನು ಕೊರತೆ ಇದೆ? ಪ್ರಾಮಾಣಿಕರನ್ನು ಸಿಎಂ ಸ್ಥಾನಕ್ಕೆ ಆಯ್ಕೆ ಮಾಡಲು ಮುಂದಾದರೆ, ನನ್ನ ಹೆಸರೇ ಮೊದಲು ಬರುತ್ತದೆ. ಒಳ್ಳೆಯ ಮನುಷ್ಯನನ್ನ ಸಿಎಂ ಮಾಡಬೇಕು ಎಂದು ದೇವರು ಏನಾದರೂ ಆದೇಶ ಕೊಟ್ಟರೆ, ನಾನೇ ಸಿಎಂ ಆಗುತ್ತೇನೆ. ಆದರೆ ಸಿಎಂ ಆಗಲಿಲ್ಲ ಎಂದು ಆತ್ಮಹತ್ಯೆ ಎಲ್ಲ ಮಾಡಿಕೊಳ್ಳುವುದಿಲ್ಲ ಎಂದಿದ್ದರು. ಇದೀಗ ಅವರು ಮತ್ತೆ ಮುಖ್ಯಮಂತ್ರಿಯಾಗುವ ಬಗ್ಗೆ ಪುನರುಚ್ಛರಿಸಿದ್ದಾರೆ.

ಬಿಜೆಪಿಯಲ್ಲಿ ಯತ್ನಾಳ್ ಅವರು ಬಣ ಕಟ್ಟಿಕೊಂಡು ಯಡಿಯೂರಪ್ಪ ಹಾಗೂ ವಿಜಯೇಂದ್ರ ವಿರುದ್ಧ ತೊಡೆ ತಟ್ಟಿದ್ದಾರೆ. ವಿಜಯೇಂದ್ರ ಅವರನ್ನು ರಾಜ್ಯಾಧ್ಯಕ್ಷ ಸ್ಥಾನದಿಂದ ಕೆಳಗಿಳಿಸಲು ನಿರಂತರ ಯತ್ನ ಮಾಡುತ್ತಿದ್ದಾರೆ. ಇತ್ತೀಚೆಗೆ ತಾರಕಕ್ಕೇರಿದ ಬಣ ಬಡಿದಾಟದಲ್ಲಿ ಯತ್ನಾಳ್ ಅವರ ಹೆಸರು ಮುನ್ನೆಲೆಯಲ್ಲಿತ್ತು. ಕೊನೆಗೆ ತಮ್ಮ ಪಕ್ಷದ ವಿರುದ್ಧವೇ ನಡೆದುಕೊಂಡ ಆರೋಪದ ಮೇರೆಗೆ ಶೋಕಾಸ್ ನೋಟಿಸ್ ಕೂಡ ಪಡೆದಿದ್ದರು. ಈಗಲೂ ಸಹ ಯತ್ನಾಳ್ ಅವರ ಬಣವು ಮತ್ತೆ ವಿಜಯೇಂದ್ರ ವಿರುದ್ಧ ತೊಡೆ ತಟ್ಟಲು ಮುಂದಾಗಿದೆ. ಶೀಘ್ರದಲ್ಲೇ ಮತ್ತೊಂದು ಸಭೆ ನಡೆಸಲು ನಿರ್ಧರಿಸಿದೆ.












Click it and Unblock the Notifications