BJP Mission 272+ ಗೆ ಟೆಕ್ಕಿ ಸೇನಾನಿಗಳು ಸನ್ನದ್ದ

ಒಟ್ಟಾರೆಯಾಗಿ National Democratic Alliance (NDA) ಮೈತ್ರಿಕೂಟದ ಅಭ್ಯರ್ಥಿಗಳಿಗೆ ಬೆಂಬಲ ಕೋರಿ ಸುಮಾರು 1,500 ಸಾಫ್ಟ್ ವೇರ್ ಇಂಜಿನಿಯರ್ ಗಳು ನಿನ್ನೆ ಭಾನುವಾರ ಸಭೆ ಸೇರಿ, ಸ್ವಯಂ ಸೇನಾನಿಗಳಾಗಿ ಕಾರ್ಯತತ್ಪರವಾಗುವ ನಿರ್ಧಾರ ತೆಗೆದುಕೊಂಡಿದ್ದಾರೆ.
ಪಕ್ಷದ ರಾಷ್ಟ್ರೀಯ ಖಜಾಂಚಿ ಪಿಯೂಷ್ ಗೋಯಲ್ ಅಧ್ಯಕ್ಷತೆಯಲ್ಲಿ ಜಯನಗರ ಚಾಮರಾಜ ಕಲ್ಯಾಣ ಮಂಟಪದಲ್ಲಿ ನಿನ್ನೆ ಭಾನುವಾರ ನಡೆದ 'ಫ್ರೆಂಡ್ಸ್ ಆಫ್ ಬಿಜೆಪಿ ಮಿಷನ್ 272+' ಕಾರ್ಯಕರ್ತರ ಸಮಾವೇಶದಲ್ಲಿ ಭಾಗವಹಿಸಿದ್ದ ಸಾವಿರಾರು ಸಾಫ್ಟ್ ವೇರ್ ಇಂಜಿನಿಯರ್ ಗಳು ಮತ್ತಿತರ ವೃತ್ತಿಪರರು ಈ ನಿರ್ಣಯ ಕೈಗೊಂಡಿದ್ದಾರೆ.
ಯುಪಿಎ ವಿರುದ್ಧ ಕಿಡಿ: ಇದೇ ಸಂದರ್ಭದಲ್ಲಿ ಸಮಾವೇಶದಲ್ಲಿ ಮಾತನಾಡಿದ ಪಿಯೂಷ್ ಗೋಯಲ್ ಅವರು, ಕೇಂದ್ರ ಯುಪಿಎ ಸರ್ಕಾರದ ಕಾರ್ಯವೈಖರಿ ಮತ್ತು ಭ್ರಷ್ಟಾಚಾರದ ವಿರುದ್ಧ ಕಿಡಿ ಕಾರಿದರು. ಇಂತಹ ಸರ್ಕಾರವನ್ನು ಹೋಗಲಾಡಿಸಲು ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಕೈಜೋಡಿಸಬೇಕು. ಅದಕ್ಕಾಗಿ ಈಗಲೇ ಮತದಾರರ ಪಟ್ಟಿಯಲ್ಲಿ ಹೆಸರು ನೋಂದಣಿ ಮಾಡಿಸಿಕೊಂಡು ಮುಂಬರುವ ಚುನಾವಣೆಯಲ್ಲಿ ಯುಪಿಎ ವಿರುದ್ಧ ಮತ್ತು ಬಿಜೆಪಿ ಪರ ತಮ್ಮ ಹಕ್ಕು ಚಲಾಯಿಸಬೇಕು ಎಂದು ಮನವಿ ಮಾಡಿದರು.
ರಾಜ್ಯ ಬಿಜೆಪಿ ಸಂಘಟನಾ ಕಾರ್ಯದರ್ಶಿ ಸಂತೋಷ್, ಹಿರಿಯ ವಕೀಲರಾದ ಸುಬ್ರಮಣ್ಯ ಜೋಯಿಸ್, ಪ್ರಮೀಳಾ ನೇಸರ್ಗಿ, ಚಾರ್ಟೆಡ್ ಅಕೌಂಟೆಂಟ್ಸ್ ಅಸೋಸಿಯೇಷನ್ ಮಾಜಿ ಅಧ್ಯಕ್ಷ ಟಿಪಿ ರಾವ್, ಕರ್ನಲ್ ಪ್ರಮೋದ್ ಕಪೂರ್, ಫ್ರೆಂಡ್ಸ್ ಆಫ್ ಬಿಜೆಪಿ ಸಂಚಾಲಕ ಅಮಿತ್ ಮಾಳವೀಯ ಮತ್ತಿತರರು ಹಾಜರಿದ್ದರು.
ಯಡಿಯೂರಪ್ಪಗೆ ಸ್ವಾಗತ:
ಯಡಿಯೂರಪ್ಪ ಬಿಜೆಪಿಗೆ ವಾಪಸಾಗುವ ಕುರಿತು ಮಾತನಾಡಿದ ಪಿಯೂಷ್ ಗೋಯಲ್ ಅವರು 'ಸೀತೆಯನ್ನು ಪರೀಕ್ಷೆಗೆ ಗುರಿಪಡಿಸುವ ರಾಮ ತಪ್ಪು ಮಾಡಲಿಲ್ಲವೇ? ಕೃಷ್ಣನಿಂದ ತಪ್ಪುಗಳಾಗಿಲ್ಲವೇ? ಹೀಗಿರುವಾಗ, ವ್ಯಕ್ತಿಯಿಂದ ತಪ್ಪುಗಳು ಸಹಜ. ಆದ್ದರಿಂದ ಭೂತವನ್ನು ಮರೆತು, ಭವಿಷ್ಯದ ಬಗ್ಗೆ ಚಿಂತಿಸೋಣ' ಎಂದು ಯಡಿಯೂರಪ್ಪ ಬಿಜೆಪಿಗೆ ವಾಪಸಾಗಬೇಕೆಂಬ ತಮ್ಮ ಅಪೇಕ್ಷೆಯನ್ನು ಗೋಯೆಲ್ ಹೊರಹಾಕಿದರು.
ನಮ್ಮ ಗುರಿ ನರೇಂದ್ರ ಮೋದಿ ಅವರನ್ನು ಪ್ರಧಾನಿ ಮಾಡುವುದು. ಈ ದೊಡ್ಡ ಗುರಿ ಮುಟ್ಟಲು ಪೂರ್ವ ತಯಾರಿ ಏನೇನು ಮಾಡಿಕೊಳ್ಳಬೇಕೋ ಅದೆಲ್ಲವನ್ನೂ ನಾವು ಮಾಡಬೇಕಾಗುತ್ತದೆ. ಅದೇ ರೀತಿ, ಯಡಿಯೂರಪ್ಪ ಅವರ ಮರುಸೇರ್ಪಡೆ ವಿಚಾರದ ಬಗ್ಗೆಯೂ ಪರಾಮರ್ಶೆ ಮಾಡಲಾಗುತ್ತದೆ. ಹಾಗಾಗಿ, ಭೂತಕಾಲವನ್ನು ಮರೆತುಬಿಡೋಣ. ಭವಿಷ್ಯವನ್ನು ನೋಡೋಣ ಎಂದು ಸಮಜಾಯಿಷಿ ನೀಡಿದರು.
ದೊಡ್ಡ ಗುರಿ ಸಾಧನೆಗೆ ಹೊರಟಾಗ ಇಂತಹ ಸಣ್ಣ-ಪುಟ್ಟ ವಿಷಯಗಳ ಬಗ್ಗೆ ಅಷ್ಟೇನೂ ತಲೆಕೆಡಿಸಿಕೊಳ್ಳಬೇಕಿಲ್ಲ. ಅಷ್ಟಕ್ಕೂ ಯಡಿಯೂರಪ್ಪ ಸೇರ್ಪಡೆಯನ್ನು ಪಕ್ಷದ ವರಿಷ್ಠರು ತೀರ್ಮಾನಿಸುತ್ತಾರೆ ಎಂದೂ ಅವರು ಹೇಳಿದರು.
ಇದಕ್ಕೂ ಮೊದಲು ಮಾತನಾಡಿದ ಸಂಸದ ಅನಂತಕುಮಾರ್ ಬಿಜೆಪಿ ನಾಯಕರು ಎಲ್ಲರ ಜತೆಯೂ ಬೆರೆಯುತ್ತಾರೆ. ದೇಶದ ಸಮಸ್ತ ನಾಗರಿಕರ ಜತೆ ಸಂಪರ್ಕ ಹೊಂದುತ್ತಾರೆ. ಉದಾಹರಣೆಗೆ ಮೋದಿ ಅವರು ಆಂಧ್ರಗೆ ಹೋದಾಗ ತೆಲುಗು ಭಾಷೆಯಲ್ಲಿ ಮಾತನಾಡುತ್ತಾರೆ. ಸುಷ್ಮಾ ಸ್ವರಾಜ್ ಅವರು ಕರ್ನಾಟಕಕ್ಕೆ ಬಂದಾಗ ಕನ್ನಡದಲ್ಲಿ ಮಾತನಾಡುತ್ತಾರೆ. ಆದರೆ ಇದೇನಿದು ಹಾಲಿ ಪ್ರಧಾನ ಮಂತ್ರಿಯ ಸ್ಥಿತಿ. ನಮ್ಮ ಪ್ರಧಾನಿ ಎಲ್ಲ ಭಾಷೆಯಲ್ಲೂ ಮಹಾಮೌನಿಯಾಗಿದ್ದಾರೆ' ಎಂದು ಲೇವಡಿ ಮಾಡಿದರು.












Click it and Unblock the Notifications