'ನಿಮ್ಮ ಹಿರಿತನವನ್ನು ಗುಲಾಮಗಿರಿ ಪಕ್ಷಕ್ಕೆ ಒತ್ತೆಯಿಟ್ಟವರಂತೆ ವರ್ತಿಸುತ್ತಿದ್ದೀರಿ'
ಬೆಂಗಳೂರು, ಜನವರಿ 28: ಉತ್ತರ ಪ್ರದೇಶದ ಪ್ರಯಾಗ್ ರಾಜ್ನಲ್ಲಿ ನಡೆಯುತ್ತಿರುವ ಮಹಾಕುಂಭ ಮೇಳದಲ್ಲಿ ಪ್ರಧಾನಿ ನರೇಂದ್ರ ಮೋದಿ ಫೆಬ್ರವರಿ 5ರಂದು ಪವಿತ್ರಾ ಸ್ನಾನ ಕೈಗೊಳ್ಳಿದ್ದಾರೆ. ಇನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ ತೀರ್ಥಸ್ನಾನ ಮಾಡಿದ್ದು, ಕೇಂದ್ರ ಬಿಜೆಪಿ ನಾಯಕರ ಆಚರಣೆಯ ವಿರುದ್ಧ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ವ್ಯಂಗ್ಯವಾಡಿದ್ದಾರೆ. ಗಂಗಾ ನದಿಯ ಸ್ನಾನದಿಂದ ಬಡತನವನ್ನು ಕೊನೆಗೊಳಿಸಲು ಸಾಧ್ಯವೇ? ಎನ್ನುವ ಮಲ್ಲಿಕಾರ್ಜುನ ಖರ್ಗೆ ವ್ಯಂಗ್ಯಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ತಿರುಗೇಟು ನೀಡಿದ್ದಾರೆ.
ಮಲ್ಲಿಕಾರ್ಜುನ ಖರ್ಗೆ ಅವರೇ, ಪ್ರಧಾನಿ ಮೋದಿ ಜೀ ಹಾಗೂ ಅಮಿತ್ ಶಾ ಜೀ ಅವರ ಗಂಗಾ ನದಿಯ ತೀರ್ಥ ಸ್ನಾನದ ಕುರಿತು ವ್ಯಂಗ್ಯದ ಮಾತುಗಳನ್ನಾಡುವ ಮೂಲಕ ಹಿಂದೂ ಧಾರ್ಮಿಕ ಶ್ರದ್ಧೆಯನ್ನು ಅಪಮಾನಿಸಿದ್ದೀರಿ. ಸ್ವಾತಂತ್ರ್ಯ ನಂತರದ ದಿನಗಳಿಂದಲೂ ನೆಹರು ಕುಟುಂಬದ ಭಟ್ಟಂಗಿಗಳಾಗಿ ಪ್ರಜಾಪ್ರಭುತ್ವ ಹಾಗೂ ಸಂವಿಧಾನದ ಆಶಯಗಳನ್ನು ಕಸದ ಬುಟ್ಟಿಗೆ ಎಸೆದು ಬಡವರು, ಶೋಷಿತರು, ರೈತರು ಹಾಗೂ ಕೂಲಿ ಕಾರ್ಮಿಕರ ಬದುಕನ್ನು ನರಕಕ್ಕೆ ತಳ್ಳಿದ ಕುಖ್ಯಾತಿ ಕಾಂಗ್ರೆಸ್ಸಿಗರದು.

ಈ ಕಾರಣಕ್ಕಾಗಿಯೇ ಭಾರತದ ರಾಜಕೀಯ ಭೂಪಟದಲ್ಲಿ ಪ್ರಾದೇಶಿಕ ಪಕ್ಷಗಳನ್ನೂ ಎದುರಿಸಲಾಗದ ಸ್ಥಿತಿಗೆ ತಲುಪಿ ಕಾಂಗ್ರೆಸ್ ಅವನತಿಯ ಹಾದಿಯಲ್ಲಿದೆ, ಇಂತಹ ಸ್ಥಿತಿಯಲ್ಲಿ ನೀವು ಆ ಪಕ್ಷದ ಅಧ್ಯಕ್ಷರಾಗಿದ್ದೀರಿ, ಇಷ್ಟಾದರೂ ನಿಮ್ಮ ಅನುಭವ ಹಾಗೂ ಹಿರಿತನವನ್ನು ಗುಲಾಮಗಿರಿ ಪಕ್ಷಕ್ಕೆ ಒತ್ತೆಯಿಟ್ಟವರಂತೆ ವರ್ತಿಸುತ್ತಿರುವ ನಿಮ್ಮ ಬಗ್ಗೆ ನಮಗೆ ಗೌರವಪೂರ್ವಕ ಕನಿಕರವಿದೆ.
ನಿಮ್ಮ ನಾಲಿಗೆಯಿಂದ ಹೊರಡುತ್ತಿರುವ ಮಾತುಗಳ ಬಗ್ಗೆ ಬೇಸರ ತರಿಸುತ್ತಿದೆ, ನಿಮ್ಮ ಮೇಲಿನ ಹೈಕಮಾಂಡ್ ಓಲೈಸಲು ಹಿಂದೂ ಧಾರ್ಮಿಕ ನಂಬಿಕೆ, ಆಚಾರ - ವಿಚಾರಗಳನ್ನು ಉಲ್ಲೇಖಿಸಿ ನೀವು ಪ್ರಧಾನಿ ನರೇಂದ್ರ ಮೋದಿ ಅವರು, ಗೃಹ ಸಚಿವರಾದ ಅಮಿತ್ ಶಾ ಅವರನ್ನು ಟೀಕಿಸುತ್ತಿರುವ ಪರಿ ತುಕ್ಕು ಹಿಡಿದ ನಿಮ್ಮ ಮನಸ್ಥಿತಿಯನ್ನು ಪ್ರತಿಬಿಂಬಿಸುತ್ತಿದೆ.
ಎಲ್ಲಿ ಕಾಂಗ್ರೆಸ್ ಆಡಳಿತ ಇರುತ್ತದೋ ಅಲ್ಲಿ ಭ್ರಷ್ಟಾಚಾರ, ಸ್ವಜನ ಪಕ್ಷಪಾತ, ಕೊಲೆ, ಸುಲಿಗೆ, ದರೋಡೆ, ಅತ್ಯಾಚಾರಗಳು ಹಾಗೂ ರಾಷ್ಟ್ರವಿದ್ರೋಹಿ ಭಯೋತ್ಪಾದಕ ಚಟುವಟಿಕೆಗಳು ತಾಂಡವವಾಡುತ್ತವೆ ಎಂಬುದಕ್ಕೆ ಕರ್ನಾಟಕದ ನಿಮ್ಮ ಕರ್ನಾಟಕ ಕಾಂಗ್ರೆಸ್ ಪಕ್ಷದ ಆಡಳಿತವೇ ಸಾಕ್ಷಿಯಾಗಿದೆ.

ಮೈಕ್ರೋ ಫೈನಾನ್ಸ್ ಹಾವಳಿಯಿಂದ ದಿನವೂ ಬಡವರು ಹಾಗೂ ಗ್ರಾಮೀಣ ಪ್ರದೇಶದ ಜನರು ಊರು ಬಿಡುತ್ತಿದ್ದಾರೆ, ಸರಣಿ ರೂಪದಲ್ಲಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ, ಹಾಡು ಹಗಲಲ್ಲೇ ದರೋಡೆ ಹಾಗೂ ಬ್ಯಾಂಕ್ ಲೂಟಿ ಎಗ್ಗಿಲ್ಲದೆ ಸಾಗಿದೆ. ಸ್ವತಃ ಮುಖ್ಯಮಂತ್ರಿಗಳೇ ಮೈಸೂರು ಮುಡಾ ಹಗರಣದ ನಿವೇಶನ ಲೂಟಿಯ ಮುಂಚೂಣಿ ಫಲಾನುಭವಿಯಾಗಿದ್ದಾರೆ. ಬಾಣಂತಿಯರ ಸಾಲು ಸಾಲು ಸಾವು ಹೆಂಗರುಳಿಲ್ಲದ ನಿಮ್ಮ ಹೈಕಮಾಂಡ್ಗೆ ಈಗಲೂ ತಾಗಿಲ್ಲ.
ಇಂತಹ ಕ್ರೂರ ಮನಸ್ಥಿತಿಯ ದಪ್ಪಚರ್ಮದ ಬಡವರ ವಿರೋಧಿ ಆಡಳಿತ ನಡೆಸುತ್ತಿರುವ ನಿಮ್ಮ ಸರ್ಕಾರಕ್ಕೆ ಕಿವಿ ಹಿಂಡಬೇಕೆಂದು ನಿಮಗೆ ಇನ್ನೂ ಜ್ಞಾನೋದಯ ಆಗಿಲ್ಲ "ನಿಮ್ಮ ತಟ್ಟೆಯಲ್ಲಿ ಹೆಗ್ಗಣ ಸತ್ತು ಬಿದ್ದಿದ್ದರು ಇನ್ನೊಬ್ಬರ ತಟ್ಟೆಯಲ್ಲಿ ನೊಣ ಹುಡುಕುವ" ರೀತಿಯಲ್ಲಿ ಮಾತನಾಡುತ್ತಿದ್ದೀರಿ. ನಿಮ್ಮ ಹಿರಿತನದ ಬಗ್ಗೆ ಗೌರವವಿದೆ ಆದರೆ ನಿಮ್ಮ ಮಾತುಗಳು ರಾಜಕೀಯ ಪರಿಭಾಷೆಯಿಲ್ಲದ ಪದ ಸಂಸ್ಕೃತಿಯನ್ನು ಮರೆತ ಕೀಳು ಅಭಿರುಚಿಯ ಮಾತುಗಳಾಡಿರುವುದು ನಿಮ್ಮ ಘನತೆ ಕುಗ್ಗಿಸ್ಸಿದೆ.
ದೇಶದಲ್ಲಿ ನರೇಂದ್ರ ಅವರು ಪ್ರಧಾನಿಯಾಗಿ 10 ವರ್ಷ ಸಮರ್ಥ ಆಡಳಿತ ನೀಡಿ ಭಾರತವನ್ನು ಜಾಗತಿಕ ಮಟ್ಟದಲ್ಲಿ ತಲೆ ಎತ್ತುವಂತೆ ಮಾಡಿದ್ದಾರೆ. ಗೃಹ ಸಚಿವ ಅಮಿತ್ ಶಾ ರಾಷ್ಟ್ರದೊಳಗೆ ವಿದ್ವಾಂಸಕ ಕೃತ್ಯ ನಡೆಸಿ ಅಟ್ಟಹಾಸ ಮೆರೆಯುತ್ತಿದ್ದ ಭಯೋತ್ಪಾದಕ ಸಂಘಟನೆಗಳನ್ನು ಬೇರು ಸಮೇತ ಕಿತ್ತೊಗೆದಿದ್ದಾರೆ. ಭಾರತಾಂಬೆ ಈ ಇಬ್ಬರ ರಕ್ಷಣೆಗೆ ನಿಂತಿದ್ದಾಳೆ ಈ ಕಾರಣದಿಂದಲೇ ಮೂರನೇ ಅವಧಿಗೂ ಇವರ ಭಾರತ ಕಟ್ಟುವ ವಿಜಯ ಯಾತ್ರೆ ನಾಗಾಲೋಟದಲ್ಲಿ ಸಾಗಿದೆ. ಇದನ್ನು ಸಹಿಸಿಕೊಳ್ಳಲಾಗದ ನೀವು ಹಾಗೂ ನಿಮ್ಮ ಕಾಂಗ್ರೆಸ್ಸಿಗರು ಹತಾಶೆಯಿಂದ ವಿವೇಕ ಸುಟ್ಟುಕೊಂಡವರಂತೆ ಮಾತನೋಡುತ್ತಿರುವುದು ಭಾರತದ ಪ್ರಜಾತಂತ್ರ ವ್ಯವಸ್ಥೆಯ ವಿರೋಧ ಪಕ್ಷ ದುರ್ಬಲ ಸ್ಥಿತಿಗೆ ತಲುಪಿರುವುದನ್ನು ಸಾಕ್ಷೀಕರಿಸುತ್ತಿದೆ ಎಂದು ಬಿ.ವೈ ವಿಜಯೇಂದ್ರ ಕಿಡಿಕಾರಿದ್ದಾರೆ.












Click it and Unblock the Notifications