ತಮ್ಮನ್ನು ಸೋಲಿಸಿದವರನ್ನೇ ಗೆಲ್ಲಿಸಬೇಕಾದ ಹೊಣೆ: ಡಿಸಿಎಂ ಲಕ್ಷ್ಮಣ ಸವದಿ ಅತಂತ್ರ

ಬೆಂಗಳೂರು, ನವೆಂಬರ್ 14: ಸಮ್ಮಿಶ್ರ ಸರ್ಕಾರ ಪತನಗೊಂಡು ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬರುತ್ತಿದ್ದಂತೆಯೇ ಉಪ ಮುಖ್ಯಮಂತ್ರಿ ಸ್ಥಾನ ಗಿಟ್ಟಿಸಿಕೊಂಡ ಅಥಣಿ ಕ್ಷೇತ್ರದ ಮಾಜಿ ಶಾಸಕ ಲಕ್ಷ್ಮಣ ಸವದಿ ಅವರ ರಾಜಕೀಯ ಸ್ಥಿತಿ ಅತಂತ್ರವಾಗಿದೆ.

ಗುರುವಾರ ಬಿಜೆಪಿ ಸೇರ್ಪಡೆಗೊಂಡ ಅನರ್ಹ ಶಾಸಕ ಮಹೇಶ್ ಕುಮಟಳ್ಳಿ ಅವರಿಗೆ ಅಥಣಿ ಕ್ಷೇತ್ರದಿಂದ ಬಿಜೆಪಿ ಟಿಕೆಟ್ ಘೋಷಿಸಿದೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದ ಮಹೇಶ್ ಕುಮಟಳ್ಳಿ, ಬಿಜೆಪಿ

ಅಭ್ಯರ್ಥಿ ಲಕ್ಷ್ಮಣ ಸವದಿ ಅವರನ್ನು ಸೋಲಿಸಿದ್ದರು. ಸೋಲು ಅನುಭವಿಸಿದ್ದರೂ ಲಕ್ಷ್ಮಣ ಸವದಿ ಅವರನ್ನು ಉಪ ಮುಖ್ಯಮಂತ್ರಿಯನ್ನಾಗಿ ಆಯ್ಕೆ ಮಾಡಲಾಗಿತ್ತು. ಅಥಣಿ ಕ್ಷೇತ್ರಕ್ಕೆ ನಡೆಯುವ ಉಪ ಚುನಾವಣೆಯಲ್ಲಿ ಸವದಿ ಅವರಿಗೆ ಟಿಕೆಟ್ ನೀಡುವ ಮೂಲಕ ಅವರನ್ನು ಗೆಲ್ಲಿಸಿಕೊಂಡು ಉಪ ಮುಖ್ಯಮಂತ್ರಿ ಸ್ಥಾನ ಉಳಿಸಲಾಗುತ್ತದೆ ಎಂದೇ ಭಾವಿಸಲಾಗಿತ್ತು.

ಬಿಜೆಪಿ ತಮ್ಮ ಸರ್ಕಾರ ಅಸ್ತಿತ್ವಕ್ಕೆ ಬರಲು ಕಾರಣರಾದ ಅನರ್ಹ ಶಾಸಕರಲ್ಲಿ ಒಬ್ಬರಾದ ಮಹೇಶ್ ಕುಮಟಳ್ಳಿ ಅವರಿಗೇ ಅಲ್ಲಿ ಟಿಕೆಟ್ ನೀಡಬೇಕಾದ ಅನಿವಾರ್ಯತೆಯಲ್ಲಿತ್ತು. ಹೀಗಾಗಿ ಲಕ್ಷ್ಮಣ ಸವದಿ ಅವರಿಗೆ ಟಿಕೆಟ್ ಕೈತಪ್ಪಿದೆ. ಇದರಿಂದ ಅವರ ಸ್ಥಿತಿ ಅತಂತ್ರವಾಗಿದೆ.

ಸೋತವರನ್ನೇ ಗೆಲ್ಲಿಸುವ ಹೊಣೆ

ಸೋತವರನ್ನೇ ಗೆಲ್ಲಿಸುವ ಹೊಣೆ

ಕಳೆದ ಚುನಾವಣೆಯಲ್ಲಿ ತಮ್ಮನ್ನು ಸೋಲಿಸಿದ್ದವರನ್ನೇ ಗೆಲ್ಲಿಸಿಕೊಂಡು ಬರಬೇಕಾದ ವಿಪರ್ಯಾಸ ಲಕ್ಷ್ಮಣ ಸವದಿ ಅವರದು. ಮಹೇಶ್ ಕುಮಟಳ್ಳಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಲಿರುವ ಅಥಣಿ ಕ್ಷೇತ್ರದ ಚುನಾವಣಾ ಉಸ್ತುವಾರಿಗಳಲ್ಲಿ ಸವದಿ ಕೂಡ ಒಬ್ಬರು. ಕಳೆದ ಚುನಾವಣೆಯಲ್ಲಿ ತಾವು ಯಾರ ವಿರುದ್ಧ ಪ್ರಚಾರ ನಡೆಸಿ ಚುನಾವಣಾ ಅಖಾಡದಲ್ಲಿ ಪೈಪೋಟಿ ನಡೆಸಿದ್ದರೋ, ಅವರನ್ನೇ ತಮ್ಮ ಪಕ್ಷದಿಂದ ಗೆಲ್ಲಿಸಿಕೊಡಬೇಕಾದ ಒತ್ತಡಕ್ಕೆ ಸಿಲುಕಿದ್ದಾರೆ.

ಲಕ್ಷ್ಮಣ ಸವದಿಗೆ ಆತಂಕ

ಲಕ್ಷ್ಮಣ ಸವದಿಗೆ ಆತಂಕ

ಉಪ ಮುಖ್ಯಮಂತ್ರಿ ಸ್ಥಾನದಲ್ಲಿರುವ ಲಕ್ಷ್ಮಣ ಸವದಿ, ತಮ್ಮ ಸ್ಥಾನವನ್ನು ಉಳಿಸಿಕೊಳ್ಳಲು ವಿಧಾನಸಭೆ ಅಥವಾ ವಿಧಾನಪರಿಷತ್‌ನ ಅಧಿಕೃತ ಸದಸ್ಯತ್ವವನ್ನು ಹೊಂದಬೇಕು. ಆರು ತಿಂಗಳ ಒಳಗೆ ಅವರು ಸದನದ ಯಾವುದಾದರೂ ಸದಸ್ಯತ್ವ ಪಡೆದುಕೊಳ್ಳಲು ಸಾಧ್ಯವಾಗದೇ ಹೋದರೆ ಅವರು ಉಪಮುಖ್ಯಮಂತ್ರಿ ಸ್ಥಾನ ಕಳೆದುಕೊಳ್ಳಬೇಕಾಗುತ್ತದೆ. ಆದರೆ 2022ರವರೆಗೂ ವಿಧಾನಪರಿಷತ್‌ನಲ್ಲಿ ಯಾವುದೇ ಸದಸ್ಯರ ಸ್ಥಾನ ತೆರವಾಗುವುದಿಲ್ಲ. ಅತ್ತ ಅಥಣಿ ಕ್ಷೇತ್ರದಲ್ಲಿ ಸ್ಪರ್ಧಿಸುವ ಅವಕಾಶವೂ ಕೈತಪ್ಪಿದೆ. ಇದರಿಂದ ಸವದಿ ಆತಂಕಕ್ಕೆ ಸಿಲುಕಿದ್ದಾರೆ.

ಇರುವುದು ಪರಿಷತ್ ಹಾದಿ ಮಾತ್ರ

ಇರುವುದು ಪರಿಷತ್ ಹಾದಿ ಮಾತ್ರ

ಅಥಣಿ ಕ್ಷೇತ್ರಕ್ಕೆ ಮಹೇಶ್ ಕುಮಟಳ್ಳಿ ಅವರು ಬಿಜೆಪಿ ಅಭ್ಯರ್ಥಿಯಾಗಿರುವುದರಿಂದ ಮುಂದೆ ಲಕ್ಷ್ಮಣ ಸವದಿ ಮತ್ತು ಮಹೇಶ್ ಕುಮಟಳ್ಳಿ ನಡುವೆ ಸ್ಥಳೀಯವಾಗಿ ಸಮಸ್ಯೆಗಳು ಉದ್ಭವವಾಗುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ. ಹೀಗಾಗಿ ಕುಮಟಳ್ಳಿ ಅವರಿಗೆ ನೀಡಿದ ಭರವಸೆಯನ್ನು ಉಳಿಸಿಕೊಳ್ಳಲು ಹಾಗೂ ಪಕ್ಷದ ಪ್ರಮುಖ ಅಭ್ಯರ್ಥಿಯನ್ನಾಗಿ ಬಿಂಬಿಸಲು ಲಕ್ಷ್ಮಣ ಸವದಿ ಅವರನ್ನು ವಿಧಾನಸಭೆ ಚುನಾವಣಾ ಸ್ಪರ್ಧೆಯಿಂದ ದೂರ ಇಡುವುದು ಅನಿವಾರ್ಯ. ಹೀಗಾಗಿ ಬಿಜೆಪಿ ವಿಧಾನ ಪರಿಷತ್‌ನ ಸದಸ್ಯರಾಗಿರುವವರಲ್ಲಿ ತನ್ನ ನಿಷ್ಠಾವಂತರಲ್ಲಿ ಒಬ್ಬರಿಂದ ರಾಜೀನಾಮೆ ನೀಡಿಸಿ ಆ ಸ್ಥಾನಕ್ಕೆ ಸವದಿ ಅವರನ್ನು ಆಯ್ಕೆ ಮಾಡುವ ಉದ್ದೇಶ ಹೊಂದಿದೆ ಎನ್ನಲಾಗುತ್ತಿದೆ.

ಸ್ಪರ್ಧೆಯ ಅವಕಾಶ ಬಂದ್

ಸ್ಪರ್ಧೆಯ ಅವಕಾಶ ಬಂದ್

ಲಕ್ಷ್ಮಣ ಸವದಿ ಅವರ ವಿಧಾನಸಭೆ ರಾಜಕೀಯ ಭವಿಷ್ಯ ಸದ್ಯಕ್ಕೆ ಡೋಲಾಯಮಾನವಾಗಿದೆ. ಉಪ ಚುನಾವಣೆಯಲ್ಲಿನ ಸೋಲು ಗೆಲುವಿನ ಮೇಲೆ ಅವರು ಅಥಣಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಮತ್ತೆ ಚುನಾವಣೆಯಲ್ಲಿ ಸ್ಪರ್ಧಿಸುತ್ತಾರೋ ಇಲ್ಲವೋ ಎಂಬುದು ನಿರ್ಧಾರವಾಗಲಿದೆ. ಉಪ ಚುನಾವಣೆಯಲ್ಲಿ ಕುಮಟಳ್ಳಿ ಜಯಗಳಿಸಿದರೆ ಸವದಿ ಅವರ ಒಂದು ಆಯ್ಕೆ ಬಹುತೇಕ ಕೊನೆಗೊಳ್ಳಲಿದೆ. ಕುಮಟಳ್ಳಿ ಅವರಿಗೆ ಸೋಲು ಎದುರಾದರೆ ಸವದಿ ಅವರ ಹಾದಿ ಸುಗಮವಾಗಲಿದೆ. ಆದರೆ ಈಗಿನ ಪರಿಸ್ಥಿತಿಯಲ್ಲಿ ಕುಮಟಳ್ಳಿ ಅವರು ಸೋಲಲಿ ಅಥವಾ ಗೆಲ್ಲಲಿ, ಸವದಿ ತಮ್ಮ ಸ್ಥಾನ ಉಳಿಸಿಕೊಳ್ಳಲು ಪರಿಷತ್‌ಗೆ ಆಯ್ಕೆಯಾಗಲೇಬೇಕಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+