ಬಿಜಾಪುರ: ಮೃತ್ಯಕೂಪದಿಂದ ಬದುಕಿಬರಲಿಲ್ಲ ಅಕ್ಷತಾ
ಬಿಜಾಪುರ, ಜೂ. 20: ತಾಲೂಕಿನ ನಾಗಠಾಣಾದಲ್ಲಿ ಮೂರು ದಿನಗಳ ಕಾಲ ಮೃತ್ಯಕೂಪದಲ್ಲಿ ಸಾವಿನೊಂದಿಗೆ ಸೆಣೆಸಿದ ಪುಟ್ಟ ಕಂದ ಅಕ್ಷತಾ ಗುರುವಾರ ರಾತ್ರಿ ಶವವಾಗಿ ಪತ್ತೆಯಾಗಿದ್ದಾಳೆ. ಮಗುವಿನ ಸುರಕ್ಷತೆಗಾಗಿ ವಿಪತ್ತು ನಿರ್ವಹಣಾ ತಜ್ಞರು ನಡೆಸಿದ ಅಹಿರ್ನಿಶಿ ಕಾರ್ಯಾಚರಣೆ ಮತ್ತು ನಾಡಿನ ಜನತೆಯ ಪ್ರಾರ್ಥನೆ ಕೊನೆಗೂ ಫಲ ನೀಡಲಿಲ್ಲ.
ತೆರೆದ ಕೊಳವೆ ಬಾವಿಗೆ ಬಿದ್ದು ಹಲವು ಗಂಟೆಗಳು ಕಳೆದಿದ್ದರಿಂದ ಮಗು ಬದುಕಿರುವ ಸಾಧ್ಯತೆ ಕ್ಷೀಣಿಸಿತ್ತು. ಕೊನೆಯ ಹಂತದಲ್ಲಿ ರಕ್ಷಣಾ ತಂಡದವರು ಕೊಳವೆ ಬಾವಿಯ ಆಳಕ್ಕೆ ಇಳಿಯುತ್ತಿದ್ದಂತೆ ದುರ್ವಾಸನೆ ಬೀರತೊಡಗಿತು. ಅದರಿಂದ ಮಗು ಸಾವನ್ನಪ್ಪಿರುವುದು ಖಾತ್ರಿಯಾಗತೊಡಗಿತು. ರಾತ್ರಿ 9.30ಕ್ಕೆ ಕಾರ್ಯಾಚರಣೆ ತಂಡವು ಮಗುವಿದ್ದ ಸ್ಥಳಕ್ಕೆ ತಲುಪಿದಾಗ ಸಾವು ಎದುರಿಗೇ ಇತ್ತು.
ಹಟ್ಟಿ ಚಿನ್ನದ ಗಣಿ ಹಾಗೂ ರಾಷ್ಟ್ರೀಯ ವಿಪತ್ತು ನಿರ್ವಹಣಾ ತಜ್ಞರು ಅಂತಿಮವಾಗಿ ಅಕ್ಷತಾಳ ಮೃತದೇಹವನ್ನು 10.50ರ ಸಮಯದಲ್ಲಿ ಹೊರ ತೆಗೆದರು. ಮೂರು ದಿನಗಳಿಂದ ಸ್ಥಳದಲ್ಲಿ ಉಪಸ್ಥಿತರಿದ್ದ ಆರೋಗ್ಯಾಧಿಕಾರಿಗಳು ಅಕ್ಷತಾಳ ದೇಹವನ್ನು ಪರೀಕ್ಷಿಸಿದರು. ಬಳಿಕ ಜಿಲ್ಲಾಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ, ಆಕೆಯ ಪಾಲಕರಿಗೆ ದೇಹವನ್ನು ಹಸ್ತಾಂತರಿಸಲಾಯಿತು. ತಡರಾತ್ರಿ ದ್ಯಾಬೇರಿಯಲ್ಲಿ ಮಗುವಿನ ಅಂತ್ಯಸಂಸ್ಕಾರ ನೆರವೇರಿತು.

ಜಿಲ್ಲಾ ಉಸ್ತುವಾರಿ ಸಚಿವ ಎಂಬಿ ಪಾಟೀಲ ಅವರು ಮೃತ ಅಕ್ಷತಾಳ ಕುಟುಂಬಕ್ಕೆ ಸಾಂತ್ವನ ಹೇಳುತ್ತಾ, ವೈಯಕ್ತಿಕವಾಗಿ 1 ಲಕ್ಷ ರೂ ಪರಿಹಾರ ನೀಡಿದ್ದಾರೆ. ಜತೆಗೆ, ತಕ್ಷಣ ಮುಖ್ಯಮಂತ್ರಿಗಳ ಜತೆ ವಿಷಯವನ್ನು ಚರ್ಚಿಸಿ ಕುಟುಂಬಕ್ಕೆ ಸೂಕ್ತ ಪರಿಹಾರ ಕಲ್ಪಿಸುವುದಾಗಿ ಭರವಸೆ ನೀಡಿದ್ದಾರೆ.
ನಾಯಿ ಅಟ್ಟಿಸಿಕೊಂಡು ಬಂದಾಗ ಜೀವ ಭಯದಿಂದ ಓಡಿದ ಅಕ್ಷತಾ ಮಂಗಳವಾರ ಸಂಜೆ ಅಂದಾಜು 6.30ರಲ್ಲಿ ಕೊಳವೆ ಬಾವಿಗೆ ಬಿದ್ದಿದ್ದಳು. ಅದಾದ ನಂತರ ಅಂದು ರಾತ್ರಿ 11ರ ವೇಳೆಗೆ ಸ್ಥಳಕ್ಕೆ ಆಗಮಿಸಿದ ಜಿಲ್ಲಾಡಳಿತ ರಕ್ಷಣಾ ಕಾರ್ಯಾಚರಣೆ ಪ್ರಾರಂಭಿಸಿತ್ತು.












Click it and Unblock the Notifications