ಸರ್ಕಾರಿ ಮನೆಗಾಗಿ ಎಂಟನೇ ಪತ್ರ ಬರೆದ ಸಭಾಪತಿ ಬಸವರಾಜ ಹೊರಟ್ಟಿ ಗರಂ!
ಬೆಂಗಳೂರು, ಸೆ. 04: ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ರಾಜ್ಯ ಬಿಜೆಪಿ ಸರ್ಕಾರದ ಮೇಲೆ ಗರಂ ಆಗಿದ್ದಾರೆ. ಸರ್ಕಾರಿ ಮನೆ ಪಡೆಯಲು ಸಭಾಪತಿ ಆಗ ಬಳಿಕ ಇನ್ನಿಲ್ಲದ ಕಸರತ್ತು ನಡೆಸಿರುವ ಹೊರಟ್ಟಿ ಅವರು ಈಗ ತಾಳ್ಮೆ ಕಳೆದುಕೊಂಡಿದ್ದಾರೆ. ಅದಕ್ಕೆ ಪ್ರಬಲವಾದ ಕಾರಣಗಳೂ ಇವೆ. ಅಧಿಕಾರದಲ್ಲಿ ಇಲ್ಲದವರಿಗೂ ಸಿಕ್ಕಿರುವ ಸರ್ಕಾರಿ ಮನೆ, ವಿಧಾನಸಭೆ ಹಾಗೂ ವಿಧಾನ ಪರಿಷತ್ ಅಧ್ಯಕ್ಷರುಗಳಿಗೆ ಹಂಚಿಕೆಯಾಗದಿರುವುದು ಕುತೂಹಲ ಮೂಡಿಸಿದೆ.
ಈ ಬಗ್ಗೆ ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಸ್ವತಃ ಮಾತನಾಡಿದ್ದಾರೆ. ವಿಧಾನಸೌಧದಲ್ಲಿ ನಡೆದ ಶಾಸಕರ ಸ್ಥಳೀಯ ಪ್ರದೇಶಾಭಿವೃದ್ದಿ ಅನುದಾನ ಕುರಿತು ಸಮಿತಿಯ ಅಂತಿಮ ಸಭೆಯ ಬಳಿಕ ಸರ್ಕಾರಿ ನಿವಾಸ ಹಂಚಿಕೆಯಾಗದಿರುವ ಕುರಿತು ಮಾಧ್ಯಮ ಪ್ರತಿನಿಧಿಗಳು ಕೇಳಿದ ಪ್ರಶ್ನೆಗೆ ಸರ್ಕಾರದ ಮೇಲೆ ಗರಂ ಆಗಿಯೇ ಉತ್ತರಿಸಿದ್ದಾರೆ.
ಸರ್ಕಾರಿ ಮನೆಗಾಗಿ ಈಗಾಗಲೇ 7 ಪತ್ರಗಳನ್ನು ಸರ್ಕಾರಕ್ಕೆ ಬಸವರಾಜ ಹೊರಟ್ಟಿ ಬರೆದಿದ್ದರು, ಇವತ್ತು ಶನಿವಾರ ಮತ್ತೊಂದು ಪತ್ರವನ್ನು ಸರ್ಕಾರಕ್ಕೆ ಬರೆದಿದ್ದಾರೆ. ಅಷ್ಟಕ್ಕೂ ಸರ್ಕಾರ ಹೀಗೆ ನಿರ್ಲಕ್ಷ ಮಾಡುತ್ತಿರುವುದಕ್ಕೆ ಕಾರಣವಾದರೂ ಏನು? ಮುಂದಿದೆ ಮಾಹಿತಿ!

ಎಂಟು ಪತ್ರ ಬರೆದರೂ ಮನೆಯಿಲ್ಲ!
ಸರ್ಕಾರಕ್ಕೆ ಎಂಟು ಪತ್ರಗಳನ್ನು ಬರೆದರೂ ಸರ್ಕಾರಿ ನಿವಾಸ ಹಂಚಿಕೆ ಮಾಡದ ಹಿನ್ನೆಲೆಯಲ್ಲಿ ವಿಧಾನಸೌಧದಲ್ಲಿ ಸಭಾಪತಿ ಬಸವರಾಜ್ ಹೊರಟ್ಟಿ ಬೇಜಾರು ಹಾಗೂ ಗರಂ ಆಗಿ ಮಾತನಾಡಿದ್ದಾರೆ. "ಏಳು ಪತ್ರದ ಜೊತೆಗೆ ಇಂದು ಎಂಟನೇ ಪತ್ರ ಬರೆದಿದ್ದೇನೆ. ನಾನು ಹಾಗೂ ವಿಧಾನಸಭೆ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಅವರೂ ಸೇರಿ ನಿಗದಿತ ನಿವಾಸ ಹಂಚಿಕೆ ಮಾಡುವಂತೆ ಪತ್ರ ಬರೆದಿದ್ದೇವೆ. ನಾನು ಮನೆಗಾಗಿ ಭಿಕ್ಷೆ ಬೇಡುವುದಿಲ್ಲ ಅಂತ ಮತ್ತೆ ಹೇಳಿದ್ದೇನೆ" ಎಂದಿದ್ದಾರೆ.

ಮನೆ ಕೊಟ್ಟರೆ ಕೊಡಿ, ಇಲ್ಲದಿದ್ದರೆ ಬೇಡ!
"ಕಾವೇರಿ ನಿವಾಸ ನಿಗದಿತ ನಿವಾಸ ಅಲ್ಲ. ಆದರೂ ಅಲ್ಲಿ ಸಿಎಂ ಆದವರು ಇರುತ್ತಾರೆ. ಎಲ್ಲರಿಗೂ ಸರ್ಕಾರಿ ನಿವಾಸ ಇದೆ. ನಮ್ಮ ಹಣೆ ಬರಹ ನೋಡಿ, ಪ್ರೊಟೋಕಾಲ್ ಪ್ರಕಾರ ಮುಖ್ಯಮಂತ್ರಿಗಿಂತ ನಾವು ಮೇಲಿನವರು. ಆದರೆ ನಮಗೆ ಶಕ್ತಿ ಇಲ್ಲ ಅಂದುಕೊಂಡಿದ್ದಾರೆ. ಏರ್ಪೋರ್ಟ್ನಲ್ಲಿ ಮುಖ್ಯಮಂತ್ರಿ, ಗೃಹ ಸಚಿವರು ಎಲ್ಲರೂ ನೇರವಾಗಿ ಪ್ರವೇಶಿಸುತ್ತಾರೆ. ಸಂವಿಧಾನಿಕವಾಗಿ ನಾವು ಅವರಿಗಿಂತ ಮೇಲಿನವರು. ನಮಗೆ ಮಾತ್ರ ಎಲ್ಲ ಚೆಕ್ಕಿಂಗ್ ಮಾಡುತ್ತಾರೆ. ಹೀಗಾಗಿ ಗಾಂಧೀ ಭವನ ರಸ್ತೆಯ ಮನೆ ಕೊಟ್ಟರೆ ಕೊಡಿ, ಇಲ್ಲದಿದ್ದರೆ ಬೇಡ" ಎಂದು ಬಸವರಾಜ ಹೊರಟ್ಟಿ ಗರಂ ಆಗಿ ಸರ್ಕಾರಕ್ಕೆ ಕೇಳಿದ್ದಾರೆ. ಇನ್ನು ಕಾವೇರಿ ನಿವಾಸದ ಬಗ್ಗೆ ಮಾಹಿತಿ ಮುಂದೆ ಹೀಗಿದೆ.

ಬಿಎಸ್ವೈಗೆ ಕಾವೇರಿ ಮನೆ ಬಿಟ್ಟು ಕೊಟ್ಟ ಅಶೋಕ್
ಕಂದಾಯ ಸಚಿವ ಆರ್. ಅಶೋಕ್ ಅವರಿಗೆ ಕಾವೇರಿ ನಿವಾಸವನ್ನು ಹಂಚಿಕೆ ಮಾಡಲಾಗಿದೆ. ಆ ನಿವಾಸದಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ವಾಸವಾಗಿದ್ದು, ಅವರೇ ವಾಸವಾಗಿರಲು ಅಶೋಕ್ ಬಿಟ್ಟು ಕೊಟ್ಟಿದ್ದಾರೆ ಎಂಬ ಮಾಹಿತಿಯಿದೆ. ಈ ಹಿಂದೆ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಅವಧಿ ಮುಗಿದ ಮೇಲೂ ಅವರು ಕಾವೇರಿ ನಿವಾಸದಲ್ಲಿಯೇ ವಾಸವಾಗಿದ್ದರು. ಆಗ ಸಚಿವರಾಗಿದ್ದ ಕೆ.ಜೆ. ಜಾರ್ಜ್ ಅವರಿಗೆ ಕಾವೇರಿ ನಿವಾಸವನ್ನು ಹಂಚಿಕೆ ಮಾಡಲಾಗಿತ್ತು. ನೀಡಲಾಗಿತ್ತು. ಜಾರ್ಜ್ ಅವರು ಸಿದ್ದರಾಮಯ್ಯ ಅವರಿಗೆ ಕಾವೇರಿ ನಿವಾಸದಲ್ಲಿ ವಾಸ ಮಾಡಲು ಅವಕಾಶ ಕಲ್ಪಿಸಿದ್ದರು.
ಇದೆ ಸಂದರ್ಭದಲ್ಲಿ ಶಾಸಕರ ಸ್ಥಳೀಯ ಪ್ರದೇಶಾಭಿವೃದ್ದಿ ಅನುದಾನ ಕುರಿತು ನಡೆದ ಸಭೆಯ ಬಗ್ಗೆ ಬಸವರಾಜ ಹೊರಟ್ಟಿ ಮಾತನಾಡಿದ್ದಾರೆ. ಮುಂದಿದೆ ಮಾಹಿತಿ.
Recommended Video

ಬಾಕಿ ಅನುದಾನ ಬಿಡುಗಡೆ!
2021-22ನೇ ಸಾಲಿನಲ್ಲಿ ಒಂದು ಕೋಟಿ ಬದಲಿಗೆ ಎರಡು ಕೋಟಿ ರೂ. ಅನುದಾನ ಮಂಜೂರಿಗೆ ಸೂಚನೆ ನೀಡಲಾಗಿದೆ. ಈ ವರ್ಷ ಎಲ್ಲಾ ಶಾಸಕರಿಗೆ ಒಟ್ಟು 6 ನೂರು ಕೋಟಿ ರೂ. ಬಿಡುಗಡೆ ಮಾಡಲಾಗಿದೆ. ಜೊತೆಗೆ 2018-19, 20, 21ನೇ ಸಾಲಿನ ಬಾಕಿ ಅನುದಾನ ಬಿಡುಗಡೆಗೆ ಸೂಚಿಸಲಾಗಿದೆ.
"ಪ್ರತಿ ವರ್ಷ ಜೂನ್ ಅಂತ್ಯದೊಳಗಾಗಿ ಕ್ರಿಯಾ ಯೋಜನೆ ಅಂತಿಮಗೊಳಿಸಿ ಕಾಮಗಾರಿ ಪ್ರಗತಿಗೆ ಅನುದಾನ ಬಿಡುಗಡೆಗೆ ಒಪ್ಪಿಗೆ
ಯೋಜನಾ ಇಲಾಖೆಯು ಅನುದಾನವನ್ನು ಕ್ಷೇತ್ರವಾರು ಬದಲು ಜಿಲ್ಲಾವಾರು ಬಿಡುಗಡೆಗೆ ಆದೇಶ ಮಾಡಲಾಗಿದೆ. ಲಭ್ಯವಿರುವ ಅನುದಾನವನ್ನ ಜಿಲ್ಲಾಧಿಕಾರಿಗಳು ಪ್ರತಿ ಕ್ಷೇತ್ರಕ್ಕೆ 2 ಕೋಟಿ ರೂ. ಒದಗಿಸುವಂತೆ ಸೂಚನೆ ಕೊಡಲಾಗಿದೆ. ಯಾರೇ ಅಧಿಕಾರಿ ನಿರ್ಲಕ್ಷ್ಯ ತೋರಿದಲ್ಲಿ ಸಂಬಂಧಿಸಿದ ಶಾಸಕರು ನನ್ನ ಗಮನಕ್ಕೆ ತರಬಹುದು" ಎಂದು ಸಭಾಪತಿ ಬಸವರಾಜ ಹೊರಟ್ಟಿ ತಿಳಿಸಿದ್ದಾರೆ.












Click it and Unblock the Notifications