Muda: ಚಿಲ್ಲರೆ ರಾಜಕಾರಣಿಗಳಂತೆ ನೀವಾಗಬೇಡಿ: ಸಿದ್ದರಾಮಯ್ಯಗೆ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದೇನು
ಬೆಳಗಾವಿ, ಸೆಪ್ಟಂಬರ್ 27: ರಾಜ್ಯಾದ್ಯಂತ ಸಂಚಲನ ಸೃಷ್ಟಿಸಿದ್ದ ಸಿಎಂ ಸಿದ್ದರಾಮಯ್ಯ ಮೇಲಿನ ಮುಡಾ ಹಗರಣ ತನಿಖೆ ನಡೆಸುವಂತೆ ಕೋರ್ಟ್ ಸೂಚನೆ ಬೆನ್ನಲ್ಲೆ, ಶುಕ್ರವಾರ ಅವರ ಮೇಲೆ FIR ದಾಖಲಿಸಲಾಗಿದೆ. ಸಿದ್ದರಾಮಯ್ಯನವರ ನಿಮ್ಮ ಸುತ್ತಮುತ್ತಲಿನ ಪಟಾಲಂ ಸಲಹೆ ಕೇಳಿ ಇಷ್ಟ ವರ್ಷಗಳ ನಿಮ್ಮ ರಾಜಕೀಯ ಭವಿಷ್ಯ ಹಾಳು ಮಾಡಿಕೊಳ್ಳಬೇಡಿ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಪ್ರತಿಕ್ರಿಯಿಸಿದ್ದಾರೆ.
ಶುಕ್ರವಾರ ಬೈಲಹೊಂಗಲದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ನ್ಯಾಯಾಂಗ ವ್ಯವಸ್ಥೆ ಪ್ರಕರಣ ಸಂಬಂಧ ಯಾವ ನಿರ್ದೇಶನ ಕೊಡಬೇಕು ಅದನ್ನು ಕೊಟ್ಟಿದೆ. ಅದರ ಬೆನ್ನಲ್ಲೆ ಸಿಎಂ ಸಿದ್ದರಾಮಯ್ಯ ವಿರುದ್ಧ ಎಫ್ ಐ ಆರ್ ದಾಖಲಾಗಿದೆ.

ಸಿದ್ದರಾಮಯ್ಯ ಅವರನ್ನು ಎ1 ಆರೋಪಿ ಮಾಡಲಾಗಿದೆ. ಮುಂದೆ ತನಿಖೆ ನ್ಯಾಯಸಮ್ಮತವಾಗಿ ನಡೆಸಬೇಕು. ಒತ್ತಡಕ್ಕೆ ಮಣಿಯದೇ ಪಾರದರ್ಶಕವಾಗಿ ತನಿಖೆ ನಡೆಯಬೇಕು ಎಂದರೆ, ಮುಖ್ಯಮಂತ್ರಗಳು ತಮ್ಮ ಹುದ್ದೆಗೆ ರಾಜೀನಾಮೆ ನೀಡಬೇಕು. ಸಿದ್ದರಾಮಯ್ಯ ಅವರ ಹಿತಚಿಂತನಕನಾಗಿ ಹೇಳಬೇಕೆಂದರೆ, ಅವರ ಗೌರವಯುತವಾಗಿ ರಾಜೀನಾಮೆ ಕೊಡಬೇಕು. ಸಿದ್ದರಾಮಯ್ಯನವರೇ ನೀವು ಚಿಲ್ಲರೆ ರಾಜಕಾರಣಗಳಂತೆ ಆಡಬೇಡಿ ಎಂದು ಯತ್ನಾಳ್ ಅವರು ಬುದ್ಧಿ ಹೇಳಿದ್ದಾರೆ.
ನಿರ್ದೋಷಿಯಾದ ಬಳಿಕ ಮತ್ತೆ ಸಿಎಂ ಆಗಿ: ಯತ್ನಾಳ್
ಮುಡಾ ಪ್ರಕರಣ ತನಿಖೆ ನಡೆಯುವ ಹಿನ್ನೆಲೆಯಲ್ಲಿ ನೀವು ಸದ್ಯ ರಾಜೀನಾಮೆ ಕೊಡಿ. ಮತ್ತೆ ನ್ಯಾಯಾಲಯ ತೀರ್ಪು ಬಂದ ಬಳಿಕ ನೀವು ಮತ್ತೆ ಮುಖ್ಯಮಂತ್ರಿ ಆಗಬಹುದು. ಚಿಲ್ಲರೆ ರಾಜಕಾಣಿಗಳ ರೀತಿ ನೀವು ಮಾಡಬೇಡಿ. ನಿಮ್ಮ ಸುತ್ತಮುತ್ತಲಿನ ಪಟಾಲಂ ನಿಂದ ತಪ್ಪು ಸಲಹೆ ಪಡೆದು, ಇಷ್ಟು ವರ್ಷಗಳ ರಾಜಕೀಯ ಭವಿಷ್ಯ ಹಾಳು ಮಾಡಿಕೊಳ್ಳಬೇಡಿ.
ಸಿದ್ದರಾಮಯ್ಯ ಅವರಿಗೆ ಉತ್ತಮ ಅವಕಾಶಗಳು ಇದ್ದು, ಅವರು ರಾಜೀನಾಮೆ ಕೊಡಬೇಕು ಎಂದು ಆಗ್ರಹಿಸಿದರು. ಕಾಂಗ್ರೆಸ್ನಲ್ಲಿ ಸಿಎಂ ಸಿದ್ದರಾಮಯ್ಯ ಬಿಟ್ಟರೆ ಶಕ್ತಿಯುತ ನಾಯಕ ಯಾರು ಇಲ್ಲ. ನಿಮ್ಮ ಮೇಲಿನ ಗೌರವವನ್ನು ನೀವೇ ಹಾಳು ಮಾಡಿಕೊಳ್ಳುತ್ತಿದ್ದೀರಿ ಎಂದರು.
ಕಾಂಗ್ರೆಸ್ ನಾಯಕರಿಂದ ಸಿಎಂ ಬಲಿಪಶು
ಸಿದ್ದರಾಮಯ್ಯನವರೇ ನಿಮ್ಮ ಹಿಂದೂ ವಿರೋಧಿ ನೀತಿ. ಕುಂಕುಮ, ಪೇಠ ಸುತ್ತಿಕೊಳ್ಳಲು ನಿಮಗೆ ಅಪಮಾನ ಆಗುತ್ತದೆ. ಆದರೆ ಇಂದು ನೀವು ಮೈಸೂರಿನ ಚಾಮುಂಡಿ ತಾಯಿ ದರ್ಶನ ಪಡೆದಿದ್ದೀರಿ. ನಿಮ್ಮ ಹೆಸರು ಉಳಿಯಬೇಕು ಅಂದರೆ ತಕ್ಷಣ ರಾಜೀನಾಮೆ ಕೊಡಲೇಬೇಕು. ಕೊಡದಿದ್ದರೆ ವಿಧಾನಸಭೆ ವಿಸರ್ಜನೆ ಮಾಡಿ. ಕಾಂಗ್ರೆಸ್ ನಾಯಕರೇ ನಿಮ್ಮನ್ನು ಬಲಿಪಶೂ ಮಾಡುತ್ತಿದ್ದಾರೆ ಎಂದು ಎಚ್ಚರಿಸಿದರು.
ಇನ್ನೂ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿಯವರು ಸಮರ್ಥವಾಗಿ ಹೋರಾಟ ಮಾಡಿದ್ದಾರೆ. ಅದರ ಫಲವಾಗಿ ಸಿದ್ದರಾಮಯ್ಯಗೆ ಈ ಸ್ಥಿತಿ ಬಂದಿದೆ ಎಂದು ತಿಳಿಸಿದರು.
ಉಚ್ಛಾಟನೆ ಹೇಳಿಕೆ ಬಗ್ಗೆ ಯತ್ನಾಳ್ ಗುಡುಗು
ಇನ್ನೂ ಬಿಜೆಪಿಯಿಂದ ಬಸನಗೌಡ ಪಾಟೀಲ್ ಯತ್ನಾಳ್, ರಮೇಶ್ ಜಾರಕಿಹೊಳಿ ಅವರನ್ನು ಉಚ್ಚಾಟನೆ ಮಾಡಬೇಕು ಎಂಬ ಎಂಪಿ ರೇಣುಕಾಚಾರ್ಯ ಅವರು ಹೇಳಿಕೆ ವಿಚಾರ, ಅವರನ್ನು ಮೊದಲು ಉಚ್ಛಾಟನೆ ಮಾಡಬೇಕು. ಹಣ ಪಡೆದು ಕಾಂಗ್ರೆಸ್ನ ಶಾಮನೂರು ಮಲ್ಲಿಕಾರ್ಜುನ ಪರ ಚುನಾವಣೆ ಮಾಡಿದ್ದಾನೆ ಎಂದು ಏಕವಚನದಲ್ಲಿಯೇ ಯತ್ನಾಳ್ ಅವರು ವಾಗ್ದಾಳಿ ನಡೆಸಿದರು.
ಎಂಪಿ ರೇಣುಕಾಚಾರ್ಯ ಬಿಜೆಪಿ ಪಕ್ಷದಲ್ಲಿದ್ದುಕೊಂಡೇ ಪಕ್ಷ ವಿರೋಧಿ ಚಟುವಟಿಕೆ ಮಾಡಿದ್ದಾನೆ. ಅದೇ ಒಂದು ದೊಡ್ಡ ತಲೆ ನೋವು ಪಕ್ಷದಲ್ಲಿದೆ. ಹೀಗಾಗಿ ಅವನನ್ನೆ ಪಕ್ಷದಿಂದ ಉಚ್ಛಾಟಿಸಬೇಕು ಎಂದು ಒತ್ತಾಯಿಸಿದರು.












Click it and Unblock the Notifications