'ಸ್ಕ್ಯಾನ್ ಪ್ರತಿಗಳಿಂದ ಸಂಪುಟದಲ್ಲಿ ಚರ್ಚೆ ಮಾಡಿದ ಮೊದಲ ಸಿಎಂ ಸಿದ್ದರಾಮಯ್ಯ'
ಜಾತಿ ಗಣತಿ ವರದಿ ಜಾರಿ ವಿಚಾರವಾಗಿ ರಾಜ್ಯ ಸರ್ಕಾರವು ತೀವ್ರ ಇಕ್ಕಟ್ಟಿಗೆ ಸಿಲುಕಿದೆ. ಈ ಬಗ್ಗೆ ಬಹುತೇಕ ಎಲ್ಲರಿಂದಲೂ ವಿರೋಧ ಎದುರಿಸುತ್ತಿದ್ದು, ಜಾತಿ ಗಣತಿಯ ಮೂಲಪ್ರತಿಯೇ ಕಳವಾಗಿದೆ ಎಂಬ ವಿಚಾರವಾಗಿ ಮುಜುಗರಕ್ಕೆ ಒಳಗಾಗುತ್ತಿದೆ. ಶಾಸಕ ಬಸನಗೌಡ ಪಾಟೀಲ್ ಕೂಡ ಈ ಬಗ್ಗೆ ಸಿದ್ದರಾಮಯ್ಯ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಜಾತಿ ಗಣತಿ ವಿಚಾರ ಹಲವು ಗಂಭೀರ ಪ್ರಶ್ನೆಗಳನ್ನು ಸಿಎಂ ಸಿದ್ದರಾಮಯ್ಯ ಅವರ ಮುಂದಿಟ್ಟಿದ್ದಾರೆ.
ಜಾತಿ ಗಣತಿಯ ಮೂಲ ಪ್ರತಿಯಲ್ಲಿ ಏನಿತ್ತು ಎಂಬುದೇ ತಿಳಿಯದೆ, ಕೇವಲ ಜೆರಾಕ್ಸ್ ಹಾಗೂ ಸ್ಕ್ಯಾನ್ ಮಾಡಿರುವ ಕಾಪಿಗಳನ್ನು ಇಟ್ಟುಕೊಂಡು ಸರ್ಕಾರ ಕ್ಯಾಬಿನೆಟ್ನಲ್ಲಿ ಚರ್ಚೆ ಮಾಡಿತೇ? ಎಂದು ಬಸನಗೌಡ ಪಾಟೀಲ್ ಯತ್ನಾಳ್ ಕೇಳಿದ್ದಾರೆ. ಮೂಲ ಪ್ರತಿಯಿಲ್ಲದ ದಾಖಲೆಗಳನ್ನೇ ಆಧಾರವನ್ನಾಗಿಸಿಕೊಂಡು ಉಪ ಸಮಿತಿಯ ರಚನೆಗೆ ಮುಂದಾಗಿದೆಯೇ ಸರ್ಕಾರ? ಸರ್ಕಾರದ ತಿಜೋರಿಯಲ್ಲಿದ್ದ ಕಾಂತರಾಜು ವರದಿಯ ಮೂಲಪ್ರತಿಯನ್ನು ಕದ್ದವರು ಯಾರು? ಅಥವಾ ಉದ್ದೇಶಪೂರ್ವಕವಾಗಿ ಮೂಲಪ್ರತಿಯನ್ನು ತಿಜೋರಿಯಿಂದ ಕಳವು ಮಾಡಲಾಯಿತೇ? ಎಂದು ಪ್ರಶ್ನೆ ಕೇಳಿದ್ದಾರೆ.

ಜಯಪ್ರಕಾಶ್ ಹೆಗ್ಡೆ ಸಮಿತಿಗೆ ಕಾಂತರಾಜು ಗಣತಿ ವರದಿ ಸಿಕ್ಕಿಲ್ಲವೆಂದು ಗೊತ್ತಾಗಿದೆ. ಇದರ ಸತ್ಯಾಸತ್ಯತೆಯನ್ನು ಸರ್ಕಾರವೇ ಜನರಿಗೆ ತಿಳಿಸಬೇಕು. ಹಿಂದಿನ ದತ್ತಾಂಶವನ್ನು ಬಳಸಿಕೊಂಡು ವರದಿ ತಯಾರಿಸಬೇಕೆಂದು ಹಿಂದುಳಿದ ವರ್ಗದ ಮಾಜಿ ಅಧ್ಯಕ್ಷರಾದ ಜಯಪ್ರಕಾಶ್ ಹೆಗ್ಡೆ ಅವರಿಗೆ ಸರ್ಕಾರ ಸೂಚಿಸಿತ್ತು. ದತ್ತಾಂಶವೇ ಕಳವು ಆದ ಮೇಲೆ, ಹೆಗ್ಡೆ ಅವರು ತಯಾರಿಸಿರುವ ಜಾತಿ ಗಣತಿಯ ವರದಿ ಎಷ್ಟು ನಿಖರ? ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.
ಮೂಲ ಪ್ರತಿ ಕಾಣೆಯಾಗಲು ಕಾರಣವಾದವರಿಗೆ ಆಯೋಗ ನೋಟೀಸ್ ನೀಡಿದೆ. ಆದರೆ ಯಾವುದೇ ಕ್ರಮ ಕೈಗೊಂಡಿಲ್ಲ. ಕ್ರಮ ಕೈಗೊಳ್ಳದೇ ಇರಲು ಯಾವ ನಾಯಕರು ಹಸ್ತಕ್ಷೇಪ ಮಾಡುತ್ತಿದ್ದಾರೆ ಎಂದು ಸರ್ಕಾರ ಬಹಿರಂಗ ಮಾಡಬೇಕು ಎಂದು ಆಗ್ರಹಿಸಿದ್ದಾರೆ. 2022ರ ಏಪ್ರಿಲ್ನಲ್ಲಿ ಆಯೋಗದ ಅಂದಿನ ಸದಸ್ಯ ಕಾರ್ಯದರ್ಶಿಯಾಗಿದ್ದ ಐಎಎಸ್ ಅಧಿಕಾರಿ ಕೆ.ದಯಾನಂದ ಅವರು ಡಾ.ಎನ್.ವಿ.ಪ್ರಸಾದ್ ಅವರಿಗೆ ಪತ್ರ ಬರೆದು ಮೂಲ ದಾಖಲೆ ಇಲ್ಲದ ಸ್ಕ್ಯಾನ್ ಪ್ರತಿಯಲ್ಲಿ ಪ್ರಸಾದ್ ಅವರ ಸಹಿ ಇದ್ದು, ಅದು ಅಧಿಕೃತ ಸಹಿ ಹೌದೋ ಅಲ್ಲವೋ ಎಂದು ಕೇಳಿದ್ದಾರೆ. ಆದರೆ, ಇದುವರೆಗೂ ಡಾ ಪ್ರಸಾದ್ ಅವರು ಈ ಪತ್ರಕ್ಕೆ ಉತ್ತರ ನೀಡಿರುವುದಿಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.

ಸರಿಯಾದ ಮಾಹಿತಿಯಿಲ್ಲದ ಸ್ಕ್ಯಾನ್ ಹಾಗೂ ಜೆರಾಕ್ಸ್ ಪ್ರತಿಗಳನ್ನು ಆಧಾರವಾಗಿಸಿಕೊಂಡು, ಅಧಿಕಾರಿಗಳ ಸಹಿ ನಿಜವೋ ಸುಳ್ಳೋ ಎಂದು ತಿಳಿಯದೆ ಕಾಂತರಾಜು ವರದಿಯನ್ನು ಸಚಿವ ಸಂಪುಟದಲ್ಲಿ ಚರ್ಚೆ ಆಯಿತೇ? ಸಂಪುಟದಲ್ಲಿ ಸ್ಕ್ಯಾನ್ ಪ್ರತಿಗಳಿಂದ ಚರ್ಚೆ ಮಾಡಿದ ಮೊದಲ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಎಂಬ ಅಪಖ್ಯಾತಿಗೆ ಒಳಗಾಗಿದ್ದಾರೆ ಎಂದು ಯತ್ನಾಳ್ ಕಿಡಿಕಾರಿದ್ದಾರೆ.
ಮತ್ತೊಮ್ಮೆ ಜಾತಿ ಗಣತಿ ಮಾಡಲಿ
ತೆರಿಗೆದಾರರ ಹಣವನ್ನು ಸದ್ಬಳಕೆ ಮಾಡುವುದನ್ನು ಬಿಟ್ಟು, ಜನರ ದಿಕ್ಕು ತಪ್ಪಿಸುವ ಕೆಲಸವನ್ನು ಸರ್ಕಾರ ಮಾಡದಿರಲಿ. ಹತ್ತು ವರ್ಷದ ಹಿಂದಿನ ಸೆನ್ಸಸ್ ದತ್ತಾಂಶದಿಂದ ವೈಜ್ಞಾನಿಕ ವರದಿ ಮಂಡಿಸಲು ಸಾಧ್ಯವೇ? ಆಧಾರ್ ಕಾರ್ಡ್ ಹಾಗೂ ಸರ್ಕಾರದ ಹಲವು ಇಲಾಖೆಯಲ್ಲಿರುವ ದತ್ತಾಂಶವನ್ನು ಸರ್ಕಾರ ಬಳಸಬೇಕಾಗಿತ್ತು. ಹಾಗಿದ್ದರೆ ಮಾತ್ರ ವೈಜ್ಞಾನಿಕ ವರದಿ ಮಂಡಿಸಲು ಸಾಧ್ಯ. ಜಾತಿ ಗಣತಿಯನ್ನು ಬರ್ಖಾಸ್ತು ಮಾಡಿ, ವೈಜ್ಞಾನಿಕವಾಗಿ ಮತ್ತೊಮ್ಮೆ ಜಾತಿ ಗಣತಿ ಮಾಡಲಿ. ಹಾಗೆಯೇ, ಮೂಲಪ್ರತಿ ಕಳವು ಆಗಿರುವ ಬಗ್ಗೆ ಉನ್ನತ ಮಟ್ಟದ ತನಿಖೆಯನ್ನು ಸರ್ಕಾರ ಮಾಡಲಿ ಎಂದು ಆಗ್ರಹಿಸಿದ್ದಾರೆ.












Click it and Unblock the Notifications