ಬೆಳಗಾವಿ; ಮಹಿಳೆಗೆ ಥಳಿತ, ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡ ಕೋರ್ಟ್
ಬೆಂಗಳೂರು, ಡಿಸೆಂಬರ್ 13: ಬೆಳಗಾವಿಯಲ್ಲಿ ಮಹಿಳೆಯನ್ನು ಬೆತ್ತಲೆಗೊಳಿಸಿ ಥಳಿಸಿದ ಘಟನೆ ಸಂಬಂಧ ಕರ್ನಾಟಕ ಹೈಕೋರ್ಟ್ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡಿದೆ. ಅಲ್ಲದೆ, ಪುತ್ರ ಯುವತಿಯೊಂದಿಗೆ ಓಡಿ ಹೋದ ಪ್ರಕರಣ ಸಂಬಂಧ ಮಹಿಳೆಯೊಬ್ಬರನ್ನು ಬೆತ್ತಲೆಗೊಳಿಸಿರುವ ಸಂಬಂಧ ಸಂತ್ರಸ್ತೆಯ ಗುರುತು ಪತ್ತೆಯಾಗುವಂತೆ ವರದಿ ಮಾಡಿದ ಮಾಧ್ಯಮಗಳ ಕ್ರಮಕ್ಕೆ ತೀವ್ರ ಅಸಮಾಧಾನ ವ್ಯಕ್ತ ಪಡಿಸಿದೆ.
ಬೆಳಗಾವಿ ತಾಲೂಕಿನಲ್ಲಿ ಹೊಸ ವಂಟಮೂರಿ ಗ್ರಾಮದಲ್ಲಿ ನಡೆದಿದ್ದ ಘಟನೆ ಸಂಬಂಧ ಮಾಧ್ಯಮಗಳ ವರದಿಯನ್ನು ಗಮನಿಸಿರುವ ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಾಲಚಂದ್ರ ವರಾಳೆ ಮತ್ತು ನ್ಯಾಯಮೂರ್ತಿ ಎಂ. ಜೆ. ಎಸ್. ಕಮಲ್ ಅವರಿದ್ದ ವಿಭಾಗೀಯ ಪೀಠ, ಈ ವರದಿಯ ಶೀರ್ಷಿಕೆಗಳು ನಮ್ಮ ಆತ್ಮಸಾಕ್ಷಿ ಆಘಾತಗೊಳಿಸಿದೆ. ಅಷ್ಟೇ ಅಲ್ಲದೆ, ಮನಸಿಗೆ ದುಖಃ ಹಾಗೂ ತಲೆ ತಗ್ಗಿಸುವಂತೆ ಮಾಡಿದೆ ಎಂದು ತಿಳಿಸಿದೆ.

ಭಾರತ ದೇಶ 76ನೇ ವರ್ಷದ ಸ್ವಾತಂತ್ರ್ಯವನ್ನು 'ಆಜಾದಿ ಕಾ ಅಮೃತೋತ್ಸವ' ಎಂದು ಆಚರಿಸುತ್ತಿದೆ. ಮತ್ತೊಂದೆಡೆ ರಾಜ್ಯ ಪ್ರಗತಿ ಪತದಲ್ಲಿ ಸಾಗುತ್ತಿರುವುದಕ್ಕೆ ಹೆಸರು ವಾಸಿಯಾಗಿದೆ. ಇಂತಹ ಸಂದರ್ಭದಲ್ಲಿ ಈ ರೀತಿಯ ಕೃತ್ಯಗಳು ತಲೆ ತಗ್ಗಿಸುವಂತೆ ಮಾಡಿದೆ ಎಂದು ಹೇಳಿದೆ.
ಗುರುತು ತೋರಿಸುವ ದೃಶ್ಯಗಳ ಪ್ರಸಾರಕ್ಕೆ ತಡೆ: ಸಚಿವರೊಬ್ಬರು ಸಂತ್ರಸ್ತೆಯನ್ನು ಭೇಟಿಯಾದ ಸಂದರ್ಭದಲ್ಲಿ ಪತ್ರಿಕೆಗಳಲ್ಲಿ ಪ್ರಕಟವಾಗಿರುವ ಛಾಯಾಚಿತ್ರದಲ್ಲಿ ಸಂತ್ರಸ್ತೆಯ ಮುಖವನ್ನು ಗುರುತು ಸಿಗುವಂತೆ ವಿಡಿಯೋ ಮಾಡುತ್ತಿರುವುದು ಗೊತ್ತಾಗಿದೆ. ಇದರಿಂದ ಮಾಧ್ಯಮಗಳು ಅತ್ಯಂತ ಬೇಜವಾಬ್ದಾರಿ ಮತ್ತು ಸಂವೇದನಾರಹಿತವಾಗಿ ವರ್ತಿಸುತ್ತಿರುವುದು ತಿಳಿಯುತ್ತಿದೆ ಎಂದು ಪೀಠ ಅಭಿಪ್ರಾಯಪಟ್ಟಿದೆ.
ಅಲ್ಲದೆ, ಸಂತ್ರಸ್ತೆಯ ಗುರುತು ಸಿಗುವಂತೆ ಯಾವುದೇ ಮಾಧ್ಯಮ ಸಂಸ್ಥೆ ಚಿತ್ರಿಸಿರುವ ಯಾವುದೇ ಛಾಯಾಚಿತ್ರಗಳು ಮತ್ತು ವಿಡಿಯೋಗಳನ್ನು ಪ್ರಸಾರ ಮಾಡದಂತೆ ನಿರ್ದೇಶನ ನೀಡಿದೆ. ಜತೆಗೆ, ಈಗಾಗಲೇ ಪ್ರದರ್ಶನ ಮಾಡಿದ್ದರೆ ತಕ್ಷಣ ಸ್ಥಗಿತಗೊಳಿಸಬೇಕು ಎಂದು ನಿರ್ದೇಶನ ನೀಡಿದೆ.
ಈ ಮಧ್ಯಂತರ ನಿರ್ದೇಶನ ಸಂತ್ರಸ್ಥೆ ತನ್ನ ಘನತೆ ಕಾಪಾಡಿಕೊಳ್ಳಲು ಮತ್ತು ಆಕೆಯ ಗುರುತನ್ನು ಬಹಿರಗಪಡಿಸದಿರುವುದಕ್ಕೆ ಮಾತ್ರವೇ ವಿನಾ ಪತ್ರಿಕಾ ಸ್ವಾತಂತ್ರ್ಯದ ಪರಿಕಲ್ಪನೆಯನ್ನು ನಿಯಂತ್ರಣ ಎಂದಾಗುವುದಿಲ್ಲ, ಯಾವುದೇ ಸುದ್ದಿ ಪ್ರಸಾರವನ್ನು ನಿಷೇಧಿಸಿಲ್ಲ ಎಂದು ಪೀಠ ಇದೇ ವೇಳೆ ಸ್ಪಷ್ಟಪಡಿಸಿದೆ.
ವಿಚಾರಣೆ ವೇಳೆ ಹಾಜರಿದ್ದ ಅಡ್ವೋಕೇಟ್ ಜನರಲ್ ಶಶಿಕಿರಣ್ ಶೆಟ್ಟಿ, ಘಟನೆ ಸಂಬಂಧ ಸಂತ್ರಸ್ತೆಯ ಗುರುತು ಯಾವುದೇ ಮಾಧ್ಯಮಗಳಲ್ಲಿ ಪ್ರಸಾರವಾಗದಂತೆ ಕ್ರಮ ವಹಿಸಲು ಅಗತ್ಯ ಕ್ರಮ ಕೈಗೊಂಡಿರುವುದಾಗಿ ನ್ಯಾಯಪೀಠಕ್ಕೆ ವಿವರಿಸಿದರು. ನ್ಯಾಯಾಲಯ ಡಿಸೆಂಬರ್ 14ಕ್ಕೆ ವಿಚಾರಣೆ ಮುಂದೂಡಿ, ವರದಿ ಸಲ್ಲಿಸುವಂತೆ ಎಜಿಗೆ ಸೂಚನೆ ನೀಡಿದೆ.












Click it and Unblock the Notifications