ರಾಜ್ಯದ ಸಮಗ್ರ ಅಭಿವೃದ್ದಿಗೆ ಏನನ್ನೂ ನೀಡದ ಜನ ವಿರೋಧಿ ಬಜೆಟ್
ಬೆಂಗಳೂರು, ಮಾರ್ಚ್ 5: ಕರ್ನಾಟಕ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ವಿಧಾನಸಭೆಯಲ್ಲಿ 2020-21ನೇ ಸಾಲಿನ ಬಜೆಟ್ ಮಂಡಸಿದರು. 2 ಲಕ್ಷ 37 ಸಾವಿರ ಕೋಟಿ ಗಾತ್ರದ ಬಜೆಟ್ನಲ್ಲಿ ಆರು ವಲಯಗಳಾಗಿ ವಿಂಗಡಿಸಿ ಹಲವು ಯೋಜನೆಗಳನ್ನು ಘೋಷಿಸಿದ್ದಾರೆ.
ಆದರೆ ಯಡಿಯೂರಪ್ಪ ಮಂಡಿಸಿದ ಬಜೆಟ್ ಕುರಿತು ಬೆಂಗಳೂರು ಆಮ್ ಆದ್ಮಿ ಪಾರ್ಟಿ ಅಧ್ಯಕ್ಷ ಬೇಸರ ವ್ಯಕ್ತಪಡಿಸಿದ್ದಾರೆ. 'ರಾಜ್ಯದ ಸಮಗ್ರ ಅಭಿವೃದ್ದಿಗೆ ಏನನ್ನೂ ನೀಡದ ಜನ ವಿರೋಧಿ ಬಜೆಟ್ ಇದು' ಎಂದು ವ್ಯಂಗ್ಯ ಮಾಡಿದ್ದಾರೆ. 'ಬೆಂಗಳೂರು ಭಾಗಶಃ ಹೊರತು ಪಡಿಸಿ, ಇತರೆ ಮುಖ್ಯ ನಗರಗಳಿಗೆ ಯಾವುದೇ ರೀತಿಯ ಅನುಕೂಲವನ್ನು ಈ ಬಜೆಟ್ ಕಲ್ಪಿಸಿಲ್ಲ' ಎಂದು ಟೀಕಿಸಿದ್ದಾರೆ.
ಕರ್ನಾಟಕ ಬಜೆಟ್ 2020: ಶೈಕ್ಷಣಿಕ ಕ್ಷೇತ್ರಕ್ಕೆ ಬಿಎಸ್ವೈ ಕೊಡುಗೆ ಏನು?
'ಮೈಸೂರು, ಬೆಳಗಾವಿ, ಕಲಬುರ್ಗಿ, ಮಂಗಳೂರು ನಗರಗಳ ಸ್ಮಾರ್ಟ್ ಸಿಟಿ ಯೋಜನೆಯ ದೂರದರ್ಶಿತ್ವ ಹಾಗೂ ಸಮಗ್ರ ಅಭಿವೃದ್ದಿಗೆ ಹೊಂದಿರುವ ಯಾವುದೇ ರೀತಿಯ ಆರ್ಥಿಕ ಯೋಜನೆ ನೀಡಿಲ್ಲ. ಈ ರೀತಿ ಬಾಕಿ ನಗರಗಳನ್ನು ಕಡೆಗಣಿಸಿದರೆ, ನಮ್ಮ ರಾಜ್ಯಕ್ಕೆ ಹೂಡಿಕೆದಾರರು ಹೇಗೆ ಬರಲು ಸಾಧ್ಯ ಹಾಗೂ ಬೇರೆ ನಗರಗಳಲ್ಲಿ ಹೂಡಿಕೆ ಮಾಡಲು ಸಾಧ್ಯವೇ' ಎಂದು ಪ್ರಶ್ನಿಸಿದ್ದಾರೆ.
ಎಎಪಿ ಫಲಶ್ರುತಿ: ಬಿಎಂಟಿಸಿಯಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ
'ಬೆಂಗಳೂರಿನ ಮೇಲೆ ಒತ್ತಡ ಹಾಗೂ ಈಗಾಗಲೇ ಇರುವ ಪ್ರಾದೇಶಿಕ ಅಸಮತೋಲನ ಮತ್ತಷ್ಟು ಹೆಚ್ಚಾಗುತ್ತಾ ಹೋಗುತ್ತದೆ. ಇದರಿಂದಾಗಿ ರಾಜ್ಯದ ಜನತೆ ಅನ್ನಕ್ಕಾಗಿ ಗುಳೆ ಹೋಗುವ ಪರಿಸ್ಥಿತಿಯನ್ನು ತಪ್ಪಿಸಲು ಯೋಜನೆ ರೂಪಿಸುವಲ್ಲಿ ಸರ್ಕಾರದ ದೂರ ದರ್ಶಿತ್ವದ ಕೊರತೆ ಎದ್ದು ಕಾಣುತ್ತದೆ' ಎಂದು ಅಭಿಪ್ರಾಯ ಪಟ್ಟಿದ್ದಾರೆ.
ಆರೋಗ್ಯ ಕ್ಷೇತ್ರಕ್ಕೆ ಅನ್ಯಾಯ
ಆರೋಗ್ಯ ಕ್ಷೇತ್ರಕ್ಕೆ ಬಂದರೆ ಕೇವಲ ಶೇ 4 ರಷ್ಟು ಬಜೆಟ್ ಇಟ್ಟುಕೊಂಡು ಈ ಕ್ಷೇತ್ರವನ್ನು ಅಭಿವೃದ್ಧಿ ಪಡಿಸಲು ಸಾಧ್ಯವೇ ಇಲ್ಲ. ಜಿಲ್ಲಾ ಆಸ್ಪತ್ರೆ, ತಾಲ್ಲೂಕು ಆಸ್ಪತ್ರೆ, ಪ್ರಾಥಮಿಕ ಆರೋಗ್ಯ ಕೇಂದ್ರಗಳು ಶೈಶಾವಾವಸ್ಥೆಯಲ್ಲಿ ಇದ್ದು. ಇವುಗಳನ್ನು ಉನ್ನತೀಕರಿಸಲು ಆರೋಗ್ಯ ಇಲಾಖೆಗೆ ನೀಡಿರುವ ಅನುದಾನ ಯಾವುದಕ್ಕೂ ಸಾಕಾಗುವುದಿಲ್ಲ. ಇದರಿಂದ ರಾಜ್ಯದ ಬಡ ಜನತೆ ಖಾಸಗಿ ಆಸ್ಪತ್ರೆಗಳ ಕಡೆಗೆ ಮುಖ ಮಾಡುವಂತೆ ಆಗಿದೆ. ರಾಜ್ಯದ ಜ್ವಲಂತ, ಮಾರಕ ರೋಗವಾಗಿರುವ ಕ್ಯಾನ್ಸರ್ ಗೆ ರಾಜ್ಯದ ಕನಿಷ್ಠ ನಾಲ್ಕು ಭಾಗಗಳಲ್ಲಾದರೂ ಚಿಕಿತ್ಸೆ ನೀಡುವ ಯಾವುದೇ ಆಸ್ಪತ್ರೆಗಳ ಪ್ರಸ್ತಾವ ಬಜೆಟ್ನಲ್ಲಿ ಮಾಡಿಲ್ಲದಿರುವುದು ಬಡ ರೋಗಿಗಳ ಪಾಲಿಗೆ ಅನ್ಯಾಯ ಎಸಗಿದಂತಾಗಿದೆ.
ಶೈಕ್ಷಣಿಕ ಕ್ಷೇತ್ರಕ್ಕೆ ಇನ್ನು ಬೇಕಿತ್ತು
ರಾಜ್ಯದ ಸರ್ಕಾರಿ ಶಾಲಾ ಕಾಲೇಜುಗಳ ಶಿಕ್ಷಣ ವ್ಯವಸ್ಥೆ ಬದಲಾಯಿಸಬೇಕೆಂದರೆ ಬರೀ ಶಿಕ್ಷಕ ಮಿತ್ರ ಎಂಬ ತಂತ್ರಾಶದಿಂದ ಸಾಧ್ಯವಿಲ್ಲ. ದೆಹಲಿಯಲ್ಲಿ ಶೇ 24 ರಷ್ಟು ಬಜೆಟ್ ಅನ್ನು ಮೀಸಲಿಟ್ಟು ಇಡೀ ದೇಶವೇ ದೆಹಲಿಯತ್ತ ನೋಡುವಂತಹ ಮಾದರಿ ವ್ಯವಸ್ಥೆ ಹಾಗೂ ಶಿಕ್ಷಣ ಕ್ರಾಂತಿಯನ್ನು ಕರ್ನಾಟಕ ರಾಜ್ಯದಲ್ಲಿ ಮೀಸಲಿಟ್ಟಿರುವ ಶೇ 11 ರಷ್ಟು ಅನುದಾನದಿಂದ ಮಾಡಲು ಯಾವುದೇ ಕಾರಣಕ್ಕೂ ಸಾಧ್ಯವಿಲ್ಲ. ಭೀಕರ ಅತಿವೃಷ್ಟಿಯಿಂದ ಸಂಪೂರ್ಣವಾಗಿ ನಾಶವಾದ 6,064 ಶಾಲಾ ಕೊಠಡಿಗಳ ನಿರ್ಮಾಣಕ್ಕಾಗಿ ಮೀಸಲಿಟ್ಟಿರುವ 774 ಕೋಟಿ ರೂಪಾಯಿ ಆನೆಗೆ ಅರೆ ಕಾಸಿನ ಮಜ್ಜಿಗೆ ನೀಡಿದಂತಾಗಿದೆ. ಇದರಿಂದಾಗಿ ಮುಂಬರುವ ಶೈಕ್ಷಣಿಕ ವರ್ಷಗಳಲ್ಲೂ ಸಹ ರಾಜ್ಯದ ಲಕ್ಷಾಂತರ ಮಕ್ಕಳು ಶಾಲಾ ಕೊಠಡಿಗಳು ಇಲ್ಲದೇ ವಿದ್ಯಾಬ್ಯಾಸದಿಂದ ವಂಚಿತರಾಗುವ ಆತಂಕ ಎದ್ದು ಕಾಣುತ್ತಿದೆ.
ಭಾರಿ ನಿರೀಕ್ಷೆಯಲ್ಲಿದ್ದ 'ಸಮಾಜ ಕಲ್ಯಾಣ'ಕ್ಕೆ ಬಜೆಟ್ ನಲ್ಲಿ ಸಿಕ್ಕಿದ್ದಿಷ್ಟೇ!
ಕೃಷ್ಟಿ ಮತ್ತು ನೀರಾವರಿ ಕಥೆ ಏನು
ರಾಜ್ಯದ ರೈತರು ಕೃಷಿ ಸಾಲ ಮನ್ನಾ ಮಾಡಲಾಗುತ್ತದೆ ಮತ್ತು ಬೆಳೆದ ಬೆಳೆಗಳಿಗೆ ಸರಿಯಾದ ಬೆಂಬಲ ಬೆಲೆ ನೀಡಬಹುದು ಎನ್ನುವ ಮಹಾದಾಸೆ ಕೂಡ ಈಡೇರಿಲ್ಲ. 24 ಗಂಟೆಗಳ ಕಾಲ 2 ಫೇಸ್ ವಿದ್ಯುತ್ ನೀಡುವ ಬಗ್ಗೆ ಯಾವುದೇ ರೀತಿಯ ಪ್ರಾಸ್ತಾವನೆಯೇ ಇಲ್ಲ. ರಾಜ್ಯದ ಪ್ರಮುಖ ನೀರಾವರೀ ಯೋಜನೆಗಳಾದ ಭ್ರದ್ರಾ ಮೇಲ್ದಂಡೆ ಮತ್ತು ಬಳಕೆ ಆಗದಿರುವ ಕೃಷ್ಣಾ ಬೀ ಸ್ಕೀಂ ಬಗ್ಗೆ ಯಾವುದೇ ಯೋಜನೆಗಳಿಲ್ಲ. ಗ್ರಾಮೀಣ ರಸ್ತೆಗಳು, ರಾಜ್ಯ ಹೆದ್ದಾರಿಗಳ ಅಭಿವೃದ್ದಿಗೆ ಯಾವುದೇ ಯೋಜನೆ ರೂಪಿಸಿಲ್ಲ. ಸೋಲಾರ್ ವಿದ್ಯುತ್ ಉತ್ಪಾದನೆಗೆ ಯಾವುದೇ ವಿಶೇಷ ಯೋಜನೆಗಳು ಕಲ್ಪಿಸದಿರುವುದು ಎದ್ದು ಕಾಣುತ್ತಿದೆ.
ಬೆಂಗಳೂರಿಗೆ ಸಮರ್ಪಕವಾಗಿಲ್ಲ
ತಮ್ಮ ಬಜೆಟ್ ಅನ್ನು ರಾಜಧಾನಿ ಬೆಂಗಳೂರಿನ ಅಭಿವೃದ್ಧಿಗೆ ಏನಾದರೂ ಕೊಡುಗೆ ಇದೆಯೆ ಎಂದು ನೋಡಿದರೆ ಅದೂ ಸಹ ಸುಳ್ಳಾಗಿದೆ. ಸಬ್ ಅರ್ಬನ್ ರೈಲು ಯೋಜನೆಯ ಗಾತ್ರ 19 ಸಾವಿರ ಕೋಟಿ. ಇದರಲ್ಲಿ ರಾಜ್ಯದ ಪಾಲು ಕೇವಲ ಶೇ 20 ರಂತೆ ಇದಕ್ಕೆ 3 ಸಾವಿರದ 800 ಕೋಟಿ ಮೀಸಲಿಡುವ ಜಾಗದಲ್ಲಿ ಕೇವಲ 500 ಕೋಟಿ ನೀಡಿ ಬೆಂಗಳೂರಿಗರ ಬಹುಕಾಲದ ಟ್ರಾಫಿಕ್ ಸಮಸ್ಯೆ ನೀಗಿಸುವ ದೃಷ್ಠಿಯಲ್ಲಿ ಭ್ರಮನಿರಸನಗೊಳಿಸಿದೆ. ದಿನೇ ದಿನೇ ಹೆಚ್ಚುತ್ತಿರುವ ಬೆಂಗಳೂರಿನ ಸಂಚಾರ ದಟ್ಟಣೆ ನಿರ್ವಹಣೆಗೆ ಯಾವುದೇ ರೀತಿಯ ಯೋಜನೆಯನ್ನು ತಿಳಿಸಿಲ್ಲ. ಬಿಬಿಎಂಪಿ, ಬಿಡಿಎ, ಬಿಡಬ್ಲೂ ಎಸ್ಎಸ್ಬಿ ಇನ್ನು ಮುಂತಾದ ಇಲಾಖೆಗಳ ನಡುವೆ ಸಮನ್ವಯ ಸಾಧಿಸಲು ಯಾವುದೇ ರೀತಿಯ ಯೋಜನೆಗಳನ್ನು ರೂಪಿಸಿಲ್ಲ. ಇದರಿಂದ ಬೆಂಗಳೂರಿನ ರಸ್ತೆಗಳನ್ನು ಎಲ್ಲೆಂದರಲ್ಲಿ ಅಗೆದು, ಕಾಮಗಾರಿಯ ನೆಪದಲ್ಲಿ ಲೂಟಿಮಾಡುವ ಪ್ರಕ್ರಯೆಗೆ ಅಂಕುಶ ಹಾಕುವ ಪ್ರಸ್ತಾವನೆ ಕಾಣುತ್ತಿಲ್ಲ. ಆರ್ಥಿಕ ಹಿಂಜರಿತದಿಂದ ತತ್ತರಿಸಿ ಹೋಗಿದ್ದ ರಾಜ್ಯದ ಜನರಿಗೆ ಮತ್ತೆ ಪೆಟ್ರೋಲ್ ಹಾಗೂ ಡೀಸೆಲ್ ಮೇಲೆ ತೆರಿಗೆ ಹೆಚ್ಚಿಸಿರುವುದು ಗಾಯದ ಮೇಲೆ ಬರೆಹಾಕಿದಂತಾಗಿದೆ.
ಕರ್ನಾಟಕ ಬಜೆಟ್: ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ
ಅಭಿವೃದ್ಧಿ ವಿರೋಧಿ ಬಜೆಟ್
ಈ ಮುಗಂಡ ಪತ್ರದಲ್ಲಿ ಘೋಷಿಸಿರುವಂತೆ ನವೆಂಬರ್ನಲ್ಲಿ ನಡೆಯಲಿರುವ ʼಇನ್ವೆಸ್ಟ್ಮೆಂಟ್ ಸಮ್ಮಿಟ್ʼ ನಲ್ಲಿ ಕೊರೋನಾ ಭೀತಿಯಿಂದಾಗಿ ಭಾರತಕ್ಕೆ 150 ಬಿಲಿಯನ್ ಡಾಲರ್ಗಳಷ್ಟು ಕೈಗಾರಿಕಾ ಉತ್ಪನ್ನ ವಲಯ ಭಾರತಕ್ಕೆ ವರ್ಗಾವಣೆ ಆಗುವ ನೀರೀಕ್ಷೆ ಇದೆ. ಈ ಸಂದರ್ಭದಲ್ಲಿ ರಾಜ್ಯವು ಕೈಗಾರಿಕಾ ಸ್ನೇಹಿ ನೀತಿಯನ್ನು ಅಳವಡಿಸಿಕೊಂಡಿದೆ ಎಂಬ ಯಾವುದೇ ಸದೂರದೃಷ್ಟಿ ಈ ಬಜೆಟ್ನಲ್ಲಿ ಕಾಣುತ್ತಿಲ್ಲ. ಒಟ್ಟಾರೆಯಾಗಿ 2020-21 ರ ಬಜೆಟ್ ರಾಜ್ಯದ ಜನ ವಿರೋಧಿ ರೈತ ವಿರೋಧಿ, ಶಿಕ್ಷಣ, ಆರೋಗ್ಯ ಹಾಗೂ ಸಮಗ್ರ ಅಭಿವೃದ್ಧಿ ವಿರೋಧಿ ಬಜೆಟ್ ಇದಾಗಿದೆ.