Mallikarjun Kharge: ಇಲ್ಲಿ ಮೋದಿ ಅಂತ ಹೇಳಿದರೆ ಕೇಸ್ ಹಾಕ್ತಾರೆ, ಆದರೆ ಯಾವುದಕ್ಕೂ ಹೆದರಲ್ಲ: ಖರ್ಗೆ ವಾಗ್ದಾಳಿ
ಮೈಸೂರು, ಆಗಸ್ಟ್ 30: ಇಲ್ಲಿ ಮೋದಿ ಅಂತ ಹೇಳಿದರೆ ಕೇಸ್ ಹಾಕ್ತಾರೆ. ಮೋದಿ ಎಂದಿದಕ್ಕೆ ರಾಹುಲ್ ಗಾಂಧಿ ಮೇಲೆ ಕೇಸ್ ಹಾಕಿದರು. ಆದರೆ, ರಾಹುಲ್ ಗಾಂಧಿ ಯಾವುದಕ್ಕೂ ಹೆದರುವುದಿಲ್ಲ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಅವರು ಬಿಜೆಪಿ ಕೇಂದ್ರ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದರು.
ಮೈಸೂರಿನಲ್ಲಿ ಬುಧವಾರ ಗೃಹಲಕ್ಷ್ಮಿ ಯೋಜನೆ ಜಾರಿಯಾದ ಬಳಿಕ ಮಾತನಾಡಿದ ಅವರು, ಕನ್ಯಾಕುಮಾರಿಯಿಂದ ಕಾಶ್ಮೀರವರೆಗೆ ಪಾದಯಾತ್ರೆ ಮಾಡಿ ರಾಹುಲ್ ಗಾಂಧಿ ಜನರ ಮಾತು ಆಲಿಸಿದ್ದಾರೆ. ರಾಹುಲ್ ಗಾಂಧಿ ಕಾಂಗ್ರೆಸ್ ಏನ್ ವಾಗ್ದಾನ ಮಾಡುತ್ತೋ, ನುಡಿಯುತ್ತೋ ಅದರಂತೆ ನಡೆಯುತ್ತೆ ಎಂದು ಹೇಳಿದ್ದಾರೆ. ಆ ಮಾತನ್ನ ನಾನು ಹೇಳ್ತೇನೆ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಕೊಟ್ಟ ಮಾತನ್ನ ಉಳಿಸಿಕೊಂಡಿದೆ ಎಂದು ಹೇಳಿದರು.

ಇನ್ನೂ ನಾನು ಹಲವಾರು ಕಡೆ ಹೋದಾಗ ಕರ್ನಾಟಕದಲ್ಲಿ ಆದ ರೀತಿಯಲ್ಲಿ ನಾವು ಮಾಡಬೇಕು ಅಂತ ಹೇಳ್ತಾರೆ. ನೀವು ಹೊಸ ಯೋಜನೆಯನ್ನ ನಮಗೆ ಹೇಳಿ ಆ ಗ್ಯಾರೆಂಟಿಯನ್ನ ನಾವು ಜಾರಿ ಮಾಡ್ತೇವೆ ಅಂತಾರೆ. ಗ್ಯಾರೆಂಟಿ ಬಗ್ಗೆ ಅಮಿತ್ ಶಾ ಹಾಗೂ ನರೇಂದ್ರ ಮೋದಿ ಬೋಗಸ್ ಅಂದ್ರು. ಆದರೆ, ಇಂದು ಸಾಬೀತು ಮಾಡಿ ತೋರಿಸಲಾಗಿದೆ ಎಂದು ಮೋದಿಗೆ ಟಾಂಗ್ ಕೊಟ್ರು.
ಗ್ಯಾರಂಟಿ ಜಾರಿಯಾದ್ರೆ ರಾಜ್ಯ ದಿವಾಳಿಯಾಗುತ್ತದೆ ಎಂದು ಹೇಳಿದ್ರು. ದೇಶದಲ್ಲಿ ಆರ್ಥಿಕ ಪರಿಸ್ಥಿತಿ ಹದಗೆಡುತ್ತೆ ಅಂತ ಹೇಳಿದ್ರು, ಮೋದಿ ಬೇರೆಯವರು ಮಾಡಿದ ಕೆಲಸವನ್ನ ಒಪ್ಪುವುದಿಲ್ಲ. 53 ವರ್ಷದಲ್ಲಿ ಕಾಂಗ್ರೆಸ್ ದೇಶಕ್ಕೆ ಏನ್ ಮಾಡಿದೆ ಅಂತಾರೆ. ಏರ್ಪೋರ್ಟ್, ಸಂಸತ್ ಮಾಡಿದಿವಿ ಅಂತಾರೆ ಅವುಗಳನ್ನೂ ನಾವೇ ಮಾಡಿದ್ದು ಎಂದು ಬಿಜೆಪಿ ನಾಯಕರ ವಿರುದ್ದ ಕಿಡಿಕಾರಿದ್ರು.
ನಾವು ಕಟ್ಟಿದ್ದಕ್ಕೆ ಸುಣ್ಣ ಬಣ್ಣ ಹೊಡೆದು ಉದ್ಘಾಟನೆ ಮಾಡೋದು ಮೋದಿ ಕೆಲಸ. ಮೋದಿ ರಿಪೋರ್ಟ್ ಕಾರ್ಡ್ ಕೊಡಬೇಕು ಎಂದು ಹೇಳಿದ್ದಾರೆ. ಆದರೆ ನಾವು ಏನ್ ಮಾಡಿದ್ವಿ ಅಂತ ರಿಪೋರ್ಟ್ ಕಾರ್ಡ್ ಕೊಡ್ತೀವಿ. ನೆಹರು ಕಾಲದಿಂದಲೂ ರಿಪೋರ್ಟ್ ಕಾರ್ಡ್ ಕೊಡಲು ಸಿದ್ದ. ಅವರಿಗೆ ಹೇಳಿಕೋಳ್ಳೋಕೆ ಏನು ಇಲ್ಲ, ಬರೀ ಟೀಕೆ ಮಾಡೋದು. 1947 ರಲ್ಲಿ ಶಿಕ್ಷಿತರ ಸಂಖ್ಯೆ 18% ಇತ್ತು, 13-14 ರವರೆಗೆ 74% ಬಂತು. ಇದನ್ನ ಕಾಂಗ್ರೆಸ್ ಅಲ್ವೇ ಮಾಡಿದ್ದು? ಎಂದು ಪ್ರಶ್ನಿಸಿದ್ದಾರೆ.
ಸೋನಿಯಾ ಗಾಂಧಿಯವರು ಫುಡ್ ಸೆಕ್ಯೂರಿಟಿ ಆ್ಯಕ್ಟ್ ತಂದ್ರು, ಅದಕ್ಕೆ ಉಚಿತ ಅನ್ನ ಭಾಗ್ಯವೂ ನಾವು ತಂದದ್ದು. ಬಡವರಿಗಾಗಿ ನಾವು ಯೋಜನೆಗಳನ್ನು ಮಾಡಿದ್ದೇವೆ. ಆದರೆ ಅವರು ಶ್ರೀಮಂತರಿಗಾಗಿದ್ದಾರೆ. ಕಾಂಗ್ರೆಸ್ ಸಾಧನೆಯ ರೆಕಾರ್ಡ್ ನನ್ನ ಬಳಿ ಇದೆ ಎಂದು ಖರ್ಗೆ ಹೇಳಿದರು.
ಪ್ರಜಾಪ್ರಭುತ್ವ ಉಳಿಸದಿದ್ದರೆ ಮುಂದಿನ ಪೀಳಿಗೆಯನ್ನ ಗುಲಾಮರನ್ನಾಗಿ ಮಾಡಿದಂತೆ. 18 ವರ್ಷದ ಯುವಕಯುವತಿಯರಿಗೆ ಮತದಾನದ ಹಕ್ಕನ್ನ ಕೊಟ್ಟಿದ್ದು ಕಾಂಗ್ರೆಸ್. ನೀವೆಲ್ಲಾ ಒಗ್ಗಟ್ಟಾದರೆ ಈ ಫ್ಯಾಸಿಸ್ಟ್, ಡಿಕ್ಟೆಟರ್ ಸರ್ಕಾರವನ್ನ ಒದ್ದು ಓಡಿಸಬಹುದು. ಸಂವಿಧಾನವನ್ನ ಕಳೆದುಕೊಳ್ಳಬೇಡಿ, ಅದಕ್ಕೆ ಬೇಕಾದ ಹೋರಾಟವನ್ನ ನೀವು ಮಾಡಿ, ಸಂವಿಧಾನಕ್ಕಾಗಿ ನಾವೇಲ್ಲ ಹೋರಾಟ ಮಾಡುತ್ತಿದ್ದೇವೆ ಎಂದು ಮಲ್ಲಿಕಾರ್ಜುನ್ ಖರ್ಗೆ ಹೇಳಿದರು.
ಮೋದಿ ಎನ್ನುವ ಹೆಸರು ಹೇಳಿದರೆ ಅವರು ಸುಳ್ಳು ಕೇಸು ಹಾಕುತ್ತಾರೆ.ಮೋದಿ ಹೆಸರಿನ ಸುಮಾರು ಜನ ಇದ್ದಾರೆ ನಮ್ಮ ಊರಿನಲ್ಲಿ, ಕಲಬುರ್ಗಿಯಲ್ಲಿ ಮೋದಿ ಅಂತ ಹೆಸರಿಟ್ಟುಕೊಂಡ ನೂರಾರು ಜನ ಲಿಂಗಾಯತರಿದ್ದಾರೆ. ಕೇವಲ ಮೋದಿ ಎಂದು ಹೇಳಿದ್ದಕ್ಕೆ ಸಂಸದ ಸ್ಥಾನದಿಂದ ಇಳಿಸುವ ಹುನ್ನಾರ ಮಾಡಲಾಯಿತು. ಆದರೆ ಸುಪ್ರೀಂ ಕೋರ್ಟ್ ಅದಕ್ಕೆ ಅವಕಾಶ ನೀಡಲಿಲ್ಲ. ಇಲ್ಲಿ ಪ್ರಮುಖ ಅಂಶ ಏನೆಂದರೆ ರಾಹುಲ್ ಗಾಂಧಿ ಅವರು ಕಿಂಚಿತ್ತೂ ಹೆದರಲಿಲ್ಲ, ಹೆದರುವುದೂ ಇಲ್ಲ.
ಬಿಜೆಪಿಯವರೇ ಎಷ್ಟು ದಿನ ಎಂದು ಕಾಂಗ್ರೆಸ್ ಗೆ ಬೈಯುತ್ತೀರಿ. ಕೆಲಸ ಮಾಡಿ ತೋರಿಸಿ ಆನಂತರ ಮಾತನಾಡಿ. ಸ್ವಾತಂತ್ರ್ಯ ನಂತರ ನೆಹರು ಅವರು ಪ್ರಧಾನಿ ಆಗದೇ ಇದ್ದಿದ್ದರೆ ಈ ದೇಶ ಒಗ್ಗಟ್ಟಾಗಿ ಇರುತ್ತಿರಲಿಲ್ಲ. ನೆಹರು ಮತ್ತು ವಲ್ಲಭಭಾಯಿ ಪಟೇಲರು ಸೇರಿ ಈ ದೇಶವನ್ನ ಒಗ್ಗೂಡಿಸಿದ್ದಾರೆ. ಆದರೂ ನೀವು ಕಾಂಗ್ರೆಸ್ ಏನೂ ಮಾಡಿಲ್ಲ ಎಂದು ಸುಳ್ಳೆ ಹೇಳುತ್ತಾ ಓಡಾಡುತ್ತಿದ್ದೀರಿ ಎಂದು ಹೇಳಿದರು.












Click it and Unblock the Notifications