Breaking: ಕರಾವಳಿ ಕರ್ನಾಟಕಕ್ಕೆ ಮತ್ತೆ 'ಯೆಲ್ಲೋ ಅಲರ್ಟ್'
ಬೆಂಗಳೂರು, ಸೆಪ್ಟಂಬರ್ 15: ಕರ್ನಾಟಕದಾದ್ಯಂತ ಇಳಿಕೆ ಕಂಡಿದ್ದ ಮುಂಗಾರು ಮಳೆ ಮತ್ತೆ ಕರಾವಳಿ ಭಾಗದಲ್ಲಿ ಚುರುಕುಗೊಳ್ಳುವ ಲಕ್ಷಣಗಳು ಗೋಚರಿಸಿವೆ. ಕರಾವಳಿಯ ಮೂರು ಜಿಲ್ಲೆಗಳಿಗೆ ಮತ್ತೆ ಭಾರಿ ಮಳೆ ಸುರಿಯಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಅರಭ್ಬಿ ಸಮುದ್ರ ಭಾಗದ ಮಹಾರಾಷ್ಟ್ರ ಭಾಗದಲ್ಲಿ ಉಂಟಾಗಿದ್ದ ಮೇಲ್ಮೈ ಸುಳಿಗಾಳಿ ತೀವ್ರತೆ ಕಡಿಮೆ ಆಗಿದ್ದರಿಂದ ಕರಾವಳಿ ಭಾಗ ಸೇರಿದಂತೆ ರಾಜ್ಯದ ಎಲ್ಲ ಭಾಗದಲ್ಲೂ ಮಳೆ ಕ್ಷೀಣಿಸಿತ್ತು. ಇದೀಗ ಮತ್ತೆ ಕರಾವಳಿ ಕರ್ನಾಟಕದಲ್ಲಿ ಮಳೆ ಅಬ್ಬರಿಸಲು ಸಜ್ಜಾದಂತಿದೆ. ಇದನ್ನ ಗಮನಿಸಿದರೆ ಕರಾವಳಿ ಭಾಗದ ಆದಿಯಾಗಿ ರಾಜ್ಯದ ಇನ್ನಿತರ ಭಾಗದ ಜಿಲ್ಲೆಗಳಿಗೆ ಹಂತ ಹಂತವಾಗಿ ಮಳೆ ಆವರಿಸುವ ಸಾಧ್ಯತೆ ಇದೆ.
ಹವಾಮಾನ ವೈಪರಿತ್ಯದ ತೀವ್ರತೆಯಿಂದಾಗಿ ಮುಂದಿನ ಎರಡು ದಿನ ಉಡುಪಿ, ಉತ್ತರ ಕನ್ನಡ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳ ವ್ಯಾಪ್ತಿಯಲ್ಲಿ ಸೆಪ್ಟಂಬರ್ 16 ರದು ಸಾಧಾರಣದಿಂದ ಭಾರಿ ಮಳೆ ಆಗಲಿದೆ. ಈ ಸಂಬಂಧ ಶನಿವಾರ ಮೂರು ಜಿಲ್ಲೆಗಳಿಗೆ 'ಯೆಲ್ಲೋ ಅಲರ್ಟ್' ಎಚ್ಚರಿಕೆ ಕೊಡಲಾಗಿದೆ.
ಒಳನಾಡಿನ ಜಿಲ್ಲೆಗಳಿಗೆ ಹಗುರ ಮಳೆ ನಿರೀಕ್ಷೆ
ಗುರುವಾರ ಕರಾವಳಿ ಸೇರಿದಂತೆ ಉತ್ತರ ಮತ್ತು ದಕ್ಷಿಣ ಒಳನಾಡಿನ ಕೆಲವು ಜಿಲ್ಲೆಗಳಲ್ಲಿ ಸಾಧಾರಣವಾಗಿ ಮಳೆ ದಾಖಲಾಗಿದೆ. ಈ ಮಳೆ ಮುಂದಿನ 48 ಗಂಟೆಗಳ ಕಾಲ ಹೀಗೆ ಮುಂದುವರಿಯುವ ನಿರೀಕ್ಷೆ ಇದೆ. ಬೆಳಗಾವಿ, ಯಾದಗಿರಿ, ಧಾರವಾಡ, ಶಿವಮೊಗ್ಗ, ಚಿಕ್ಕಮಗಳೂರು, ಚಿತ್ರದುರ್ಗ, ದಕ್ಷಿಣ ಕನ್ನಡ ಜಿಲ್ಲೆ ಸೇರಿದಂತೆ ಒಳನಾಡಿನ ಕೆಲವು ಜಿಲ್ಲೆಗಳಲ್ಲಿ ಒಂದೆರಡು ಕಡೆಗಳಲ್ಲಿ ಹಗುರದಿಂದ ಸಾಧಾರಣವಾಗಿ ಮಳೆ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ವರದಿ ಮಾಹಿತಿ ನೀಡಿದೆ.
ಸಿಲಿಕಾನ್ ಸಿಟಿ ಬೆಂಗಳೂರಿಗೆ ಕಳೆದ ಎರಡು ದಿನಗಳಿಂದ ಇದ್ದ ವಾತಾವರಣವೇ ಮುಂದುವರಿಯಲಿದೆ. ಬಿಸಿಲಿನ ದರ್ಶನ ಅಪರೂಪ ಎಂಬ ವಾತಾವರಣ ಕಂಡು ಬರಲಿದ್ದು, ಎಲ್ಲೆಡೆ ಮೋಡ ಕವಿದ ವಾತಾವರಣವೇ ಕಂಡು ಬರಲಿದೆ. ಇದರ ಹೊರತು ಯಾವುದೇ ಗಂಭೀರ ಬದಲಾವಣೆಗಳು ಇಲ್ಲ ಎಂದು ಹವಾಮಾನ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.