ಲೋಕಸಭೆ ಚುನಾವಣೆಗೆ ಹೊಸ ಪಕ್ಷದೊಂದಿಗೆ ಎಂಟ್ರಿ ಕೊಡಲಿದ್ದಾರೆ ಉಪೇಂದ್ರ
ಬೆಂಗಳೂರು, ಆಗಸ್ಟ್ 13: ರಾಜಕೀಯದ ಬದಲಿಗೆ 'ಪ್ರಜಾಕೀಯ'ದ ಪರಿಕಲ್ಪನೆಯೊಂದಿಗೆ ರಾಜ್ಯದ ಜನರಲ್ಲಿ ಕುತೂಹಲ ಮೂಡಿಸಿದ್ದ ಉಪೇಂದ್ರ ರಾಜಕೀಯ ಕಾರಣಗಳಿಂದಾಗಿ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಲಾಗಿರಲಿಲ್ಲ ಆದರೆ ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಅವರ ಹೊಸ ಪಕ್ಷದಿಂದ ಕಣಕ್ಕೆ ಇಳಿಯುವ ಸಾಧ್ಯತೆ ದಟ್ಟವಾಗಿದೆ.
ಅವರೇ ಮುಂದಾಳತ್ವ ವಹಿಸಿ ಕಟ್ಟಿದ್ದ ಕೆಪಿಜೆಪಿ ಪಕ್ಷದಿಂದ ಹೊರ ಬಂದಿದ್ದ ಉಪೇಂದ್ರ ಅವರು, ಉತ್ತಮ ಪ್ರಜಾಕೀಯ ಪಕ್ಷವನ್ನು ಸ್ಥಾಪಿಸಿ ಚುನಾವಣಾ ಆಯೋಗದಿಂದ ನೊಂದಾವಣಿ ಮಾಡಿಸಿದ್ದರು.
ಉಪ್ಪಿ ಭಾಗ 3: ಕೆಪಿಜೆಪಿಗೆ ರಾಜೀನಾಮೆ, ಪ್ರಜಾಕೀಯ ಉದಯ
ಆದರೆ ಕಳೆದ ವಿಧಾನಸಭೆ ಚುನಾವಣೆ ಹೊಸ್ತಿಲಲ್ಲೇ ಕೆಪಿಜೆಪಿ ಪಕ್ಷದಿಂದ ಹೊರ ಬಂದಿದ್ದ ಕಾರಣ ಚುನಾವಣೆಯಲ್ಲಿ ಸ್ಪರ್ಧಿಸಲಾಗಿರಲಿಲ್ಲ. ಆದರೆ ಈಗ ಲೋಕಸಭೆ ಚುನಾವಣೆ ಹಾಗೂ ಬಿಬಿಎಂಪಿ ಚುನಾವಣೆಗೆ ಉಪೇಂದ್ರ ಸ್ಪರ್ಧಿಸುವ ಸಾಧ್ಯತೆ ಇದೆ.
ಸೆಪ್ಟೆಂಬರ್ 18ರಂದು ಘೋಷಣೆ
ಹೊಸ ಪಕ್ಷ ಕಟ್ಟಿರುವ ಉಪೇಂದ್ರ ಅವರು, ಹೊಸ ಪಕ್ಷದ ಪದಾಧಿಕಾರಿಗಳನ್ನು ಅವರ ಹುಟ್ಟುಹಬ್ಬ ಸೆಪ್ಟೆಂಬರ್ 18ರಂದು ಘೋಷಣೆ ಮಾಡಲಿದ್ದಾರೆ. ಅಂದೇ ತಾವು ಲೋಕಸಭೆ ಚುನಾವಣಾ ಕಣಕ್ಕೆ ಇಳಿಯುವ ಬಗ್ಗೆಯೂ ಘೋಷಣೆ ಹೊಹರಬೀಳಲಿದೆ. ಅಲ್ಲದೆ ತಮ್ಮ ಪಕ್ಷದ ಧ್ಯೇಯೋದ್ದೇಶಗಳನ್ನು ಅವರು ಅಂದೇ ಹೊರತರಲಿದ್ದಾರೆ.
ಎಲ್ಲಾ ಚುನಾವಣೆಗಳಿಗೂ ಸ್ಪರ್ಧೆ ಎಂದಿದ್ದರು
ಈ ಹಿಂದೆ ಕೆಪಿಜೆಪಿ ಪಕ್ಷದ ಅಧ್ಯಕ್ಷರಾಗಿದ್ದಾಗ ತಮ್ಮ ಪಕ್ಷವು ವಿಧಾನಸಭೆ ಚುನಾವಣೆಯಿಂದ ಹಿಡಿದು ಗ್ರಾಮ ಪಂಚಾಯಿತಿ ಚುನಾವಣೆವರೆಗೂ ಎಲ್ಲ ಚುನಾವಣೆಯಲ್ಲೂ ಸ್ಪರ್ಧಿಸುವುದಾಗಿ ಹೇಳಿದ್ದರು.
ನಾವೂ ಒಂದು ಸಮೀಕ್ಷೆ ಬಿಡ್ತೀವಿ ನೋಡಿ: ಸಂದರ್ಶನದಲ್ಲಿ ಉಪೇಂದ್ರ
ಕೆಲವು ತಿಂಗಳುಗಳಿಂದ ರಾಜಕೀಯ ಅಜ್ಞಾತವಾಸ
ಕೆಪಿಜೆಪಿ ಪ್ರಾರಂಭ ಮಾಡಿದಾಗ ಸಾಮಾಜಿಕ ಜಾಲತಾಣದಲ್ಲಿ, ಮಾಧ್ಯಮಗಳಲ್ಲಿ ಸದಾ ಕಣ್ಣಿಗೆ ಬೀಳುತ್ತಿದ್ದ ಉಪೇಂದ್ರ ಪಕ್ಷದಿಂದ ಹೊರ ಬಂದಮೇಲೆ ತೆರೆ ಮರೆಗೆ ಸರಿದಂತೆ ಕಂಡು ಬಂದರು. ಹೊಸ ಪಕ್ಷ ಪ್ರಾರಂಭವಾದ ಮೇಲೂ ಮುಂಚಿನ ರಾಜಕೀಯ ಉತ್ಸಾವನ್ನು ಉಪೇಂದ್ರ ತೋರಲಿಲ್ಲ. ರಾಜ್ಯದಲ್ಲಿ ಚುನಾವಣೆ ಮುಗಿದು ರಾಜಕೀಯ ಮೇಲಾಟಗಳು ಶುರುವಾದರೂ ಕೂಡ ಉಪೇಂದ್ರ ಸುಮ್ಮನೆ ಕುಳಿತಿದ್ದರು. ಇದು ಅವರ ರಾಜಕೀಯ ಮರುಪ್ರವೇಶದ ಬಗ್ಗೆ ಅನುಮಾನ ಹುಟ್ಟುಹಾಕಿತ್ತು.
ಕೆಪಿಜೆಪಿಯಿಂದ ಹೊರ ಬಂದದ್ದೇಕೆ
ಕೆಪಿಜೆಪಿ ಪ್ರಧಾನ ಕಾರ್ಯದರ್ಶಿ ಮತ್ತು ಮತ್ತಿತರೆ ಪದಾಧಿಕಾರಿಗಳ ಜೊತೆ ಭಿನ್ನಾಭಿಪ್ರಾಯ ಮೂಡಿದ ಕಾರಣ ಉಪೇಂದ್ರ ಹೊರಬಂದರು. ವಿಧಾನಸಭೆ ಚುನಾವಣೆಗೆ ಟಿಕೆಟ್ ವಿತರಿಸುವ ವಿಷಯದಲ್ಲಿ ಪದಾಧಿಕಾರಿಗಳಿಗೂ ಉಪೇಂದ್ರ ಅವರಿಗೂ ಹೊಂದಿಕೆ ಆಗಲಿಲ್ಲ ಹಾಗಾಗಿ ಉಪೇಂದ್ರ ಪಕ್ಷದಿಂದ ಹೊರಬಂದ್ದಾಗಿ ಆಗ ಹೇಳಿದ್ದರು.
ಉಪೇಂದ್ರ ಹೊಸ ಪಕ್ಷಕ್ಕೆ ಸಿಕ್ತು ಕೇಂದ್ರ ಚುನಾವಣಾ ಆಯೋಗದ ಗ್ರೀನ್ ಸಿಗ್ನಲ್
ಕೆಪಿಜೆಪಿ ಪದಾಧಿಕಾರಿಗಳು ಹೇಳಿದ್ದೇನು?
ಉಪೇಂದ್ರ ಅವರು ಎಲ್ಲಾ ಸೈನಿಂಗ್ ಅಥಾರಿಟಿ ನನಗೊಬ್ಬನಿಗೇ ಕೊಡಬೇಕು ಎಂದು ಒತ್ತಾಯ ಮಾಡಿದ್ದರು. ಅಲ್ಲದೆ ಅವರು ಕಾಂಗ್ರೆಸ್ ಪಕ್ಷದ ಜೊತೆ ಒಳ ಒಪ್ಪಂದ ಮಾಡಿಕೊಂಡಿದ್ದರು ಎಂದು ಕೆಪಿಜೆಪಿ ಉಪಾಧ್ಯಕ್ಷ ಶಿವಕುಮಾರ್ ಆರೋಪ ಮಾಡಿದ್ದರು. ಆದರೆ ಉಪೇಂದ್ರ ಅವರು ಇವನ್ನು ತಳ್ಳಿ ಹಾಕಿದ್ದರು, ಆದರೆ ಸೈನಿಂಗ್ ಅಥಾರಿಟಿ ಕೇಳಿದ್ದ ವಿಷಯವನ್ನು ಒಪ್ಪಿಕೊಂಡಿದ್ದರು.