ಬೀದರ್, ಕಲಬುರಗಿಯಲ್ಲಿ ನಿರಂತರ ಮಳೆ, ಜನತೆ ತತ್ತರ
ಕಲಬುರಗಿ, ಸೆ. 16: ನೆರೆ ರಾಜ್ಯ ಆಂಧ್ರಪ್ರದೇಶದ ಕರಾವಳಿಯಲ್ಲಿನ ವಾಯುಭಾರ ಕುಸಿತದಿಂಡ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಭಾರಿ ಮಳೆ ಸುರಿಯುತ್ತಿದೆ. ನಿರಂತರ ಮಳೆಯಿಂದಾಗಿ ರಸ್ತೆ ಸಂಪರ್ಕ ಕಡಿತಗೊಂಡಿದ್ದು, ಜನ ಜೀವನ ಅಸ್ತವ್ಯಸ್ತಗೊಂಡಿದೆ,
ಬೀದರ್, ಕಲಬುರಗಿ ಜಿಲ್ಲೆಗಳ ಹಲವೆಡೆ ನೆರೆ ಪರಿಸ್ಥಿತಿ ನಿರ್ಮಾಣವಾಗಿದೆ. ಭಾರಿ ಮಳೆಯಿಂದಾಗಿ ಕಳೆದ ಮೂರು ದಿನಗಳಿಂದ ಹಲವು ರಸ್ತೆಗಳು ಸಂಪರ್ಕ ಕಡಿದುಕೊಂಡಿದೆ. ರಸ್ತೆ ಹಾಗೂ ರೈಲು ಸಂಚಾರ ವ್ಯತ್ಯಯವಾಗಿದೆ. [ರಾಜ್ಯದ ಕರಾವಳಿ, ಉತ್ತರ ಭಾರತದಲ್ಲಿ ಭಾರೀ ಮಳೆ ಎಚ್ಚರಿಕೆ]
ಹುಮನಾಬಾದಿನ ಉಡಬಾಳದಲ್ಲಿ ಹಳ್ಳ ದಾಟುತ್ತಿದ್ದ ಪ್ರಕಾಶ ಶಂಕರ್ (21) ಪ್ರವಾಹದಲ್ಲಿ ಕೊಚ್ಚಿ ಹೋಗಿದ್ದಾನೆ. ಕಲಬುರಗಿಯ ಭೀಮಳ್ಳಿ ಗ್ರಾಮದಲ್ಲಿ ಹಳೆಮನೆಯೊಂದು ಕುಸಿದು ನಾಗಪ್ಪ (53) ಸಾವನ್ನಪ್ಪಿದ್ದಾರೆ.
ಸೇಡಂ ತಾಲೂಕಿನ ಕಾಗಿಣಾ ನದಿತೀರದ ಉತ್ತರಾದಿ ಮಠಕ್ಕೆ ನೀರು ನುಗ್ಗಿದೆ. ಶ್ರೀ ಜಯತೀಥ೯ರ ಮೂಲ ವೃಂದಾವನ ಜಲಾವೃತವಾಗಿದೆ. ಬೀದರ್ ಜಿಲ್ಲೆ ಭಾಲ್ಕಿಯ ಸಾಯ್ಗಾಂವ್ ನಲ್ಲಿ ಸುಮಾರು 20.5 ಸೆಂ.ಮೀ. ಮಳೆಯಾಗಿರುವ ಮಾಹಿತಿ ಸಿಕ್ಕಿದೆ.

ತೆಲಂಗಾಣ ಹಾಗೂ ಕರ್ನಾಟಕ ಸಂಪರ್ಕ ಕಡಿತ
ತೆಲಂಗಾಣದ ವಿಕಾರಾಬಾದ್, ಸದಾಶಿವಪೇಟ್ ನಡುವಿನ ರೈಲ್ವೆ ಹಳಿಯ ಕೆಳಗಿನ ಮಣ್ಣು, ಕಲ್ಲು ಕೊಚ್ಚಿ ಹೋಗಿದ್ದರಿ೦ದ ಗುರುವಾರ ವಿಕಾರಾಬಾದ್ ಜಂಕ್ಷನ್- ಬೀದರ್ ನಡುವಿನ 6 ರೈಲುಗಳ ಸ೦ಚಾರ ಸ್ಥಗಿತವಾಗಿದೆ. ಶುಕ್ರವಾರ ಕೂಡಾ ಪರಿಸ್ಥಿತಿ ಇದೇ ರೀತಿ ಮುಂದುವರೆದಿದೆ.

ಬೀದರ್, ಕಲಬುರಗಿ ಜಿಲ್ಲೆಯಲ್ಲಿ ಪ್ರಮುಖ ರಸ್ತೆಗಳು ಹಾಳಾಗಿವೆ
ಬೀದರ್, ಕಲಬುರಗಿ ಜಿಲ್ಲೆಯಲ್ಲಿ ಪ್ರಮುಖ ರಸ್ತೆಗಳು ಹಾಳಾಗಿವೆ. ಚಿಂಚೋಳಿ ತಾಲೂಕು, ತಾಜ್ಲಾಪುರ್, ಚಿಮ್ನಾಚೊಡ್, ಸಲ್ಗಾರ್, ಬಸಂತ್ ಪುರ್, ನಾಗರಾಲ್ ಗ್ರಾಮ ಸಂಪೂರ್ಣ ಜಲಾವೃತವಾಗಿವೆ. ಕಲಬುರಗಿ-ಚಿತ್ತಾಪುರ-ದಂದೋತಿ ಮಾರ್ಗ ಕೂಡಾ ಸಂಪರ್ಕ ಕಡಿದುಕೊಂಡಿದೆ,

ಕೃಷಿ ಚಟುವಟಿಕೆಗಳಿಗೆ ಭಾರಿ ಹೊಡೆತ
ಈ ಭಾಗದ ರೈತರು ಹಿಂಗಾರು ಬಿತ್ತನೇ ಕಾರ್ಯದಲ್ಲಿ ತೊಡಗಿದ್ದರು. ಅದರೆ, ಭಾರಿ ಮಳೆಯಿಂದಾಗಿ ಬೀದರ್, ಕಲಬುರಗಿ, ವಿಜಯಪುರ ಸೇರಿದಂತೆ ಹೈದರಾಬಾದ್ ಕರ್ನಾಟಕ ಭಾಗದ ರೈತರು ಆತಂಕದ ಸ್ಥಿತಿಯಲ್ಲಿದ್ದಾರೆ.

ಬೀದರ್ ನಲ್ಲಿ ಸೇತುವೆಗಳು ಮುಳುಗಿವೆ
ಬೀದರ್ ನ ಭಾಲ್ಕಿ ತಾಲೂಕಿನ ಇಂಚೂರ್ ಬಳಿ ಮಾಂಜ್ರಾ ನದಿ ಸೇತುವೆ ಅರ್ಧ ಮುಳುಗಿದೆ. ಔರಾದ್ ತಾಲೂಕಿನ ನಿಡೋಡಾ ಗ್ರಾಮದಲ್ಲೂ ಸೇತುವೆ ಮುಳುಗಿದೆ. ತಾತ್ಕಾಲಿಕವಾಗಿ ಪರ್ಯಾಯ ಮಾರ್ಗದಲ್ಲಿ ಸಾರ್ವಜನಿಕರು ಚಲಿಸುತ್ತಿದ್ದರು, ಮಳೆ ನಿಲ್ಲದ ಕಾರಣ, ಸಮಸ್ಯೆ ಉಲ್ಬಣಿಸುವ ಸಾಧ್ಯತೆ ಹೆಚ್ಚಿದೆ. ಸಂತಪುರ್, ಚಿಟಗುಪ್ಪ, ನಿರ್ಣಾ, ಹುಮ್ನಾಬಾದ್, ಮಂಥಲ್, ದಬ್ಕಾ ಸೇರಿದಂತೆ ಅನೇಕ ಗ್ರಾಮಗಳು ಸಂಪೂರ್ಣ ನೀರಿನಲ್ಲಿವೆ.

ಉತ್ತರ ಕರ್ನಾಟಕದಲ್ಲಿ ಅಧಿಕ ಮಳೆ ಪ್ರಮಾಣ
ಗುರುವಾರದ ಲೆಕ್ಕಾಚಾರದಂತೆ ಹವಾಮಾನ ಇಲಾಖೆ ಮಳೆ ಪ್ರಮಾಣದ ಲೆಕ್ಕಾಚಾರ ನೀಡಿದ್ದು, ಕಲಬುರಗಿಯಲ್ಲಿ 38.70 ಮಿಲಿಮೀಟರ್(ಸಾಮಾನ್ಯವಾಗಿ 4.90 ಎಂಎಂ), ಚಿಂಚೋಳಿ ತಾಲೂಕಿನಲ್ಲಿ 70.6ಎಂಎಂ, ಆಳಂದ 38.9ಎಂಎಂ, ಚಿತ್ತಾಪುರ ಹಾಗೂ ಅಫ್ಜಲಪುರ 29 ಎಂಎಂ, ಸೇಡಂ 21.5ಎಂಎಂ ಪ್ರಮಾಣದ ಮಳೆ ಕಂಡಿದೆ.












Click it and Unblock the Notifications