ಕಲಬುರಗಿಯಲ್ಲಿ ಪ್ರವಾಹ; ನಷ್ಟ ವೀಕ್ಷಿಸಿದ ಕೇಂದ್ರ ತಂಡ
ಕಲಬುರಗಿ, ಡಿಸೆಂಬರ್ 14; ಕಲಬುರಗಿ ಜಿಲ್ಲೆಯ ವಿವಿಧ ಪ್ರದೇಶಗಳಲ್ಲಿ ಸೆಪ್ಟಂಬರ್ ಮತ್ತು ಅಕ್ಟೋಬರ್ ತಿಂಗಳಿನಲ್ಲಿ ಪ್ರವಾಹದಿಂದಾಗಿ ಅಪಾರವಾದ ನಷ್ಟ ಉಂಟಾಗಿತ್ತು. ಕೇಂದ್ರ ಸರ್ಕಾರದ ತಂಡ ಹಾನಿಗೊಳಗಾದ ಪ್ರದೇಶಗಳ ವೀಕ್ಷಣೆಯನ್ನು ನಡೆಸಿತು.
ಸೋಮವಾರ ಕೇಂದ್ರ ಗೃಹ ಸಚಿವಾಲಯದ ಜಂಟಿ ಕಾರ್ಯದರ್ಶಿ ರಮೇಶ್ ಕುಮಾರ್ ಘಂಟಾ ನೇತೃತ್ವದ ತಂಡ ನೆರೆಪೀಡಿತ ಪ್ರದೇಶಗಳ ಅಧ್ಯಯನವನ್ನು ನಡೆಸಿತು. ಜಿಲ್ಲಾಧಿಕಾರಿ ವಿ.ವಿ. ಜ್ಯೋತ್ಸ್ನಾ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಪಿ. ರಾಜಾ, ಅಪರ ಜಿಲ್ಲಾಧಿಕಾರಿ ಡಾ. ಶಂಕರ್ ವಣಿಕ್ಯಾಳ ಮುಂತಾದವರು ಜೊತೆಗಿದ್ದರು.
ವಿತ್ತ ಸಚಿವಾಲಯದ ಲೆಕ್ಕ ವಿಭಾಗದ ನಿರ್ದೇಶಕ ಡಾ. ಭರ್ತೇಂದು ಕುಮಾರ್ ಅವರನ್ನು ಒಳಗೊಂಡ ತಂಡವು ಮೊದಲು ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಕೊಳಚೆ ನೀರು ಸಂಸ್ಕರಣಾ ಘಟಕಕ್ಕೆ ಭೇಟಿ ನೀಡಿ, ಪ್ರವಾಹದಿಂದ ಘಟಕದ ಕಾಂಪೌಂಡ್ ಗೋಡೆ ಬಿದ್ದಿರುವುದನ್ನು ಪರಿಶೀಲಿಸಿತು.
ಘಟಕಕ್ಕೆ ಹೊಂದಿಕೊಂಡಿರುವ ರೈತರ ಜಮೀನುಗಳಿಗೆ ನೀರು ನುಗ್ಗಿ ಬೆಳೆ ನಾಶವಾಗಿರುವ ಬಗ್ಗೆ ಕೃಷಿ ಇಲಾಖೆ ಅಧಿಕಾರಿಗಳು ಹಾಗೂ ಗ್ರಾಮ ಲೆಕ್ಕಿಗರಿಂದ ಮಾಹಿತಿಯನ್ನು ಪಡೆಯಿತು. 153 ರೈತರ ಬೆಳೆ ನಾಶವಾಗಿದ್ದು, ಈ ಪೈಕಿ 53 ರೈತರಿಗೆ ಪರಿಹಾರ ನೀಡಲಾಗಿದ್ದು, ಉಳಿದವರಿಗೂ ನೀಡಲು ಕ್ರಮಕೈಗೊಳ್ಳಲಾಗಿದೆ ಎಂದು ತಂಡಕ್ಕೆ ವಿವರಣೆ ನೀಡಲಾಯಿತು.

ಕೆರೆ ಏರಿ ಒಡೆದ ಪ್ರದೇಶ
ಅಫ್ಜಲಪೂರ ತಾಲೂಕಿನ ಬಿದನೂರು ಕೆರೆ ಏರಿ ಒಡೆದು ಹೋಗಿರುವ ಪ್ರದೇಶವನ್ನು ತಂಡ ವೀಕ್ಷಿಸಿತು. ಈ ಸಂದರ್ಭದಲ್ಲಿ ಸಣ್ಣ ನೀರಾವರಿ ಇಲಾಖೆಯ ಕಾರ್ಯನಿರ್ವಾಹಕ ಅಭಿಯಂತರ ಅಂಬಲಗಿ ಅವರು ತಂಡಕ್ಕೆ ಮಾಹಿತಿ ನೀಡಿದರು. ಕೆರೆ ಒಡೆದಿದ್ದರಿಂದ ಸುಮಾರು 1000 ಎಕರೆಗೆ ನೀರುಣಿಸುವಷ್ಟು ನೀರು ಬರೀದಾಗಿದೆ ಎಂದು ಹೇಳಿದರು. ಈ ಕೆರೆಯನ್ನು ಪುನರುಜ್ಜೀವನಗೊಳಿಸಲು ಸುಮಾರು 2.50 ಲಕ್ಷ ರೂಪಾಯಿಗಳು ಅಗತ್ಯವಿದೆ ಎಂದರು.

ಪ್ರವಾಹ ಬಂದ ಪ್ರದೇಶಗಳು
ಶಾಸಕ ಎಂ. ವೈ. ಪಾಟೀಲ್ ಅಧಿಕಾರಿಗಳಿಗೆ ಕೆರೆ ಹಾನಿ ಹಾಗೂ ತಾಲೂಕಿನಲ್ಲಿ ಪ್ರವಾಹದಿಂದ ಆಗಿರುವ ಹಾನಿಯ ಬಗ್ಗೆ ಮನವರಿಕೆ ಮಾಡಿಕೊಟ್ಟರು. ಸೇತುವೆ ಮತ್ತು ರಸ್ತೆಗಳು ಹಾನಿಗೀಡಾದ ಚಿಣಮಗೇರಾ, ಮನೆಗಳು ಹಾನಿಗೀಡಾಗಿರುವ ಅಳ್ಳಗಿ ಬಿ ಗ್ರಾಮ ಹಾಗೂ ಜೇವರ್ಗಿ ತಾಲೂಕಿನ ಕೋನ ಹಿಪ್ಪರಗಾ ಬಿಡ್ಜ್ ಕಂ ಬ್ಯಾರೇಜ್ ಕೂಡ ವೀಕ್ಷಿಸಿದ ಅಧಿಕಾರಿಗಳು, ಮಾಹಿತಿ ಪಡೆದರು.

ಕೇಂದ್ರದಿಂದ 3 ತಂಡ ಆಗಮನ
ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಆಯುಕ್ತ ಮನೋಜ್ ರಾಜನ್ ಮಾತನಾಡಿ, "ಕೇಂದ್ರದಿಂದ ನೆರೆ ಅಧ್ಯಯನಕ್ಕಾಗಿ 3 ತಂಡಗಳು ಬಂದಿವೆ. ಕಲಬುರಗಿ, ವಿಜಯಪುರ ಹಾಗೂ ಉಡುಪಿ ಜಿಲ್ಲೆಗಳಲ್ಲಿ ತಂಡ ಅಧ್ಯಯನ ನಡೆಸಲಿದೆ. ಮಂಗಳವಾರ ಸಂಜೆ ಕಂದಾಯ ಸಚಿವರ ಅಧ್ಯಕ್ಷತೆಯಲ್ಲಿ ಸಭೆ ನಡೆಯಲಿದ್ದು, ತಂಡ ಕೇಂದ್ರ ಸರ್ಕಾರಕ್ಕೆ ವರದಿ ಸಲ್ಲಿಸಲಿದೆ" ಎಂದರು.

15,410 ಕೋಟಿ ಹಾನಿಯಾಗಿದೆ
ಕರ್ನಾಟಕದಲ್ಲಿ ಸೆಪ್ಟಂಬರ್ ಮತ್ತು ಅಕ್ಟೋಬರ್ ತಿಂಗಳಿನಲ್ಲಿ ಮಳೆ ಮತ್ತು ಪ್ರವಾಹದಿಂದ 15,410 ಕೋಟಿ ರೂ. ಹಾನಿಯಾಗಿದೆ. ಆದರೆ, ಎನ್ಡಿಆರ್ಎಫ್ ಮತ್ತು ಎಸ್ಡಿಆರ್ಎಫ್ ಪ್ರಕಾರ 1,629 ಕೋಟಿ ರೂಪಾಯಿ ಹಾನಿಯಾಗಿದೆ.












Click it and Unblock the Notifications