ಅಫ್ಘಾನ್: ತಂದೆ ಮೇಲಿನ ಶಂಕೆಯಿಂದ ಮಗನಿಗೆ ಗಲ್ಲು ವಿಧಿಸಿದ ತಾಲಿಬಾನ್!
ಕಾಬೂಲ್, ಸೆಪ್ಟೆಂಬರ್ 28: ಅಫ್ಘಾನಿಸ್ತಾನದಲ್ಲಿ ರಚನೆಯಾಗಿರುವ ತಾಲಿಬಾನ್ ಸರ್ಕಾರ ಪ್ರತಿನಿತ್ಯ ಘೋರಾತಿಘೋರ ನಿಯಮಗಳ ಜೊತೆಗೆ ಕಠಿಣ ಕ್ರಮಗಳನ್ನು ಜಾರಿಗೊಳಿಸುತ್ತಿದೆ. ತಾಲಿಬಾನ್ ಸರ್ಕಾರದ ಹೊಸ ಕಾನೂನುಗಳು ಜನರಲ್ಲಿ ಭಯವನ್ನು ಹುಟ್ಟಿಸುತ್ತಿದೆ. ಅಂಥದ್ದೇ ಒಂದು ಘಟನೆ ಸೋಮವಾರ ನಡೆದಿರುವ ಬಗ್ಗೆ ವರದಿಯಾಗಿದೆ.
ಅಫ್ಘಾನಿಸ್ತಾನದ ತಖರ್ ಪ್ರಾಂತ್ಯದಲ್ಲಿ ಪುಟ್ಟವನ್ನು ವಶಕ್ಕೆ ಪಡೆದ ತಾಲಿಬಾನಿಗಳು ಘೋರಶಿಕ್ಷೆ ವಿಧಿಸಿದ್ದಾರೆ. ಮಗುವಿನ ತಂದೆಯು ಎದುರಾಳಿ ತಂಡದಲ್ಲಿ ಇರುವ ಬಗ್ಗೆ ಶಂಕಿಸಿ ಮಗುವನ್ನು ಗಲ್ಲಿಗೇರಿಸಿದ್ದಾರೆ ಎಂದು ಗೊತ್ತಾಗಿದೆ.
ಪಂಜಶೀರ್ ಅಬ್ಸರ್ವರ್ ವರದಿಗಳ ಪ್ರಕಾರ, ಮಗುವನ್ನು ತಾಲಿಬಾನ್ ಸರ್ಕಾರ ಗಲ್ಲಿಗೇರಿಸಿದೆ. ನೆತ್ತರ ನಡುವಿನಲ್ಲಿ ಪುಟ್ಟ ಮಗುವನ್ನು ಮಲಗಿದ್ದು, ಸುತ್ತಲೂ ಮಕ್ಕಳು ಅಳುತ್ತಿರುವ ವಿಡಿಯೋವೊಂದನ್ನು ಸ್ಥಳೀಯ ಸ್ವಾತಂತ್ರ್ಯ ಮಾಧ್ಯಮವೊಂದು ಟ್ವೀಟ್ ಮಾಡಿದೆ.

ಮಗುವಿನ ಗಲ್ಲುಶಿಕ್ಷೆ ವಿಧಿಸಲು ತಂದೆಯೇ ಕಾರಣ?
"ತನ್ನ ತಂದೆ ಪ್ರತಿರೋಧದಲ್ಲಿದ್ದಾನೆ ಎಂದು ಶಂಕಿಸಿದ ನಂತರ ತಾಲಿಬಾನ್ ಹೋರಾಟಗಾರರು ತಖರ್ ಪ್ರಾಂತ್ಯದಲ್ಲಿ ಮಗುವನ್ನು ಗಲ್ಲಿಗೇರಿಸಿದರು. ಚಲನೆಯಿಲ್ಲದ ಮಗುವಿನ ದೇಹವು ಬೀದಿಯಲ್ಲಿ ಮಲಗಿರುವಾಗ ಇತರ ಮೂರು ಮಕ್ಕಳು ದೇಹದ ಪಕ್ಕದಲ್ಲಿ ಕುಳಿತು ಅಳುತ್ತಿರುವ ಭಯಾನಕ ವಿಡಿಯೋವನ್ನು ಟ್ವೀಟ್ ಜೊತೆಗೆ ಟ್ಯಾಗ್ ಮಾಡಲಾಗಿದೆ," ಎಂದು ಪಂಜಶೀರ್ ವೀಕ್ಷಕರು ತಮ್ಮ ಟ್ವೀಟ್ ನಲ್ಲಿ ಉಲ್ಲೇಖಿಸಿದ್ದಾರೆ.

ಅಫ್ಘಾನಿಸ್ತಾನದಲ್ಲಿ ಎರಡು ಗುಂಪುಗಳ ನಡುವೆ ಸಂಘರ್ಷ
ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಮತ್ತು ಪಂಜ್ ಶೀರ್ ಪ್ರಾಂತ್ಯದ ಷನಲ್ ರೆಸಿಸ್ಟೆನ್ಸ್ ಫ್ರಂಟ್ ಪಡೆಗಳ ನಡುವೆ ತೀವ್ರ ಸಂಘರ್ಷ ನಡೆದಿತ್ತು. ತಾಲಿಬಾನ್ ಸರ್ಕಾರ ಘೋಷಣೆ ನಂತರದಲ್ಲೂ ಪಂಜ್ ಶೀರ್ ಪ್ರಾಂತ್ಯಕ್ಕಾಗಿ ಜಿದ್ದಾಜಿದ್ದಿನ ಹೋರಾಟ ಮುಂದುವರಿದಿತ್ತು. ಅಂತಿಮವಾಗಿ ತಾಲಿಬಾನ್, ಪಂಜ್ ಶೀರ್ ಪ್ರಾಂತ್ಯವನ್ನು ಸಂಪೂರ್ಣ ಹತೋಟಿಗೆ ತೆಗೆದುಕೊಂಡಿತು. ಕಾಬೂಲ್ ನಗರದಿಂದ ಉತ್ತರದಲ್ಲಿರುವ ಪಂಜ್ ಶೀರ್ ಪ್ರಾಂತ್ಯವನ್ನು ತಾಲಿಬಾನ್ ವಿರೋಧಿ ಬಣವು ತನ್ನ ಹಿಡಿತದಲ್ಲಿ ಇಟ್ಟುಕೊಂಡಿತ್ತು. ಪಂಜ್ ಶೀರ್ ಪ್ರಾಂತ್ಯದ ಎಂಟು ಜಿಲ್ಲೆಗಳಲ್ಲಿ ತಾಲಿಬಾನ್ ಸಾವಿರಾರು ಭಯೋತ್ಪಾದಕರನ್ನು ಕಳುಹಿಸಿ ಕೊಟ್ಟಿತ್ತು.
ಸರ್ಕಾರ ಘೋಷಿಸಿದ್ದ ತಾಲಿಬಾನ್:
ಅಫ್ಘಾನಿಸ್ತಾನದ ಯುಎಸ್ ಬೆಂಬಲಿತ ಪ್ರಜಾಪ್ರಭುತ್ವ ಸರ್ಕಾರ ಪತನಗೊಂಡು 25 ದಿನಗಳೊಳಗೆ ಹೊಸ ಸರ್ಕಾರ ಘೋಷಣೆ ಆಗಿತ್ತು. ರಾಜಧಾನಿ ಕಾಬೂಲ್ ಸೇರಿದಂತೆ ಇಡೀ ದೇಶದ ಮೇಲೆ 23 ದಿನಗಳ ಹಿಂದೆಯಷ್ಟೇ ಹಿಡಿತ ಸಾಧಿಸಿದ ತಾಲಿಬಾನ್ ಸಂಘಟನೆ ಹೊಸ ಸರ್ಕಾರವನ್ನು ಘೋಷಿಸಿತ್ತು. ತಾಲಿಬಾನ್ ರಚಿಸಿರುವ ಹೊಸ ಸರ್ಕಾರದ ನಾಯಕತ್ವವನ್ನು ಮುಲ್ಲಾ ಮೊಹಮ್ಮದ್ ಹಸನ್ ಅಖುಂದಾ ಹೆಗಲಿಗೆ ವಹಿಸಲಾಗಿದೆ. ತಾಲಿಬಾನ್ ಮತ್ತು ಹಕ್ಕಾನಿ ನಡುವಿನ ಭಿನ್ನಾಭಿಪ್ರಾಯಗಳ ನಡುವೆ ಮುಲ್ಲಾ ಹಸನ್ ಅಖುಂದಾರನ್ನು ಆಯ್ಕೆ ಮಾಡಲಾಗಿದೆ. ತಾಲಿಬಾನ್ ಸಂಘಟನೆ ಸಹ-ಸಂಸ್ಥಾಪಕ ಅಬ್ದುಲ್ ಘನಿ ಬರಾದಾರ್ ಉಪ ಪ್ರಧಾನಿ ಸ್ಥಾನವನ್ನು ನೀಡಲಾಗಿದೆ. ಅಬ್ದುಲ್ ಬರಾದಾರ್ ಮೊದಲ ಉಪ ಪ್ರಧಾನಿಯಾಗಿದ್ದು, ಮಾವ್ಲವಿ ಹನ್ನಾಫಿ ಎರಡನೇ ಉಪ ಪ್ರಧಾನಿ ಆಗಿದ್ದಾರೆ. ತಾಲಿಬಾನ್ ರಚಿಸಿರುವ ಹೊಸ ಸರ್ಕಾರದಲ್ಲಿ 33 ಸಚಿವರಿಗೆ ಸ್ಥಾನ ನೀಡಲಾಗಿದೆ. ಈ 33 ಸಚಿವರಲ್ಲಿ 17 ಮಂದಿ ವಿಶ್ವಸಂಸ್ಥೆಯ ಭಯೋತ್ಪಾದಕರ ಪಟ್ಟಿಯಲ್ಲಿ ಗುರುತಿಸಿಕೊಂಡವರು ಎಂದು ಗೊತ್ತಾಗಿದೆ.

ಸಾರ್ವಜನಿಕವಾಗಿ ನಾಲ್ವರನ್ನು ಗಲ್ಲಿಗೇರಿಸಿದ್ದ ತಾಲಿಬಾನ್
ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಸರ್ಕಾರವು ಅಪಹರಣವನ್ನು ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ ಎಂದು ಅಫ್ಘನ್ನರಿಗೆ ತಿಳಿಸಲು ಘೋರ ಕ್ರಮವನ್ನು ತೆಗೆದುಕೊಂಡಿತ್ತು. ಕಳೆದ ವಾರ ಹೆರಾತ್ ಪ್ರದೇಶದಲ್ಲಿ ಸಾರ್ವಜನಿಕವಾಗಿಯೇ ನಾಲ್ವರು ಅಪಹರಣಕಾರರನ್ನು ಕೊಂದು ಗಲ್ಲಿಗೇರಿಸಲಾಗಿತ್ತು. ಕ್ರೇನ್ಗಳಲ್ಲಿ ನೇತಾಡುತ್ತಿದ್ದ ನಾಲ್ಕು ಮೃತದೇಹಗಳ ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಜನರಲ್ಲಿ ಭಯವನ್ನು ಹುಟ್ಟಿಸುವಂತಿದ್ದವು.

ಅಫ್ಘಾನಿಸ್ತಾನದಲ್ಲಿ ಕ್ಷೌರ ಮಾಡಿಸಿಕೊಳ್ಳುವುದಕ್ಕೂ ನಿರ್ಬಂಧ
ಅಫ್ಘಾನಿಸ್ತಾನದ ಹೆಲ್ಮಂಡ್ ಪ್ರಾಂತ್ಯದ ಕ್ಷೌರಿಕರಿಗೆ ತಾಲಿಬಾನ್ ಸರ್ಕಾರವು ಹೊಸ ಆದೇಶಗಳನ್ನು ಹೊರಡಿಸಿತ್ತು. ಅಫ್ಘಾನಿಸ್ತಾನದಲ್ಲಿ ಗಡ್ಡವನ್ನು ತೆಗೆಸುವುದು, ಕ್ಷೌರ ಮಾಡುವುದು ಮತ್ತು ಟ್ರಿಮ್ ಮಾಡುವುದನ್ನು ನಿಲ್ಲಿಸಿ, ಈ ಪದ್ಧತಿಗಳು ಇಸ್ಲಾಮಿಕ್ ಕಾನೂನಿಗೆ ವಿರುದ್ಧವಾಗಿವೆ ಎಂದು ಹೇಳಿದರು. ಆಫ್ಘನ್ನರು "ಅಮೆರಿಕನ್ ಶೈಲಿಗಳನ್ನು" ಅನುಸರಿಸುವುದನ್ನು ನಿಲ್ಲಿಸಬೇಕು ಎಂದು ಹೊಸ ಮಾರ್ಗಸೂಚಿಯಲ್ಲಿ ಎಚ್ಚರಿಕೆ ನೀಡಿತ್ತು.












Click it and Unblock the Notifications