ಅಲ್ಪಸಂಖ್ಯಾತರ ದೇವತೆ 'ಕಾಳಿ'ಗೆ ರಕ್ಷಣೆ ಇಲ್ಲ
ಢಾಕಾ, ಜ.9: ಬಾಂಗ್ಲಾದೇಶದ ಸಂಸತ್ ಗೆ ನಡೆದ ಚುನಾವಣೆಯ ಬಳಿಕ ಅಲ್ಪಸಂಖ್ಯಾತ ಸಮುದಾಯಗಳನ್ನು ಗುರಿಯಾಗಿಸಿ ನಿರಂತರ ದಾಳಿಗಳು ಮುಂದುವರಿಸಲಾಗಿದೆ. ಬುಧವಾರ ದುಷ್ಕರ್ಮಿಗಳು ನೇತ್ರಕೋನ ಜಿಲ್ಲೆಯ ಕಾಳಿ ದೇವಾಲಯದ ಪಾರ್ಶ್ವವೊಂದಕ್ಕೆ ಬೆಂಕಿ ಹಚ್ಚಿದ ಪರಿಣಾಮ ದೇವಾಲಯ ಭಾಗಶಃ ಹಾನಿಗೀಡಾಗಿದೆ. ಗುರುವಾರ ಕೂಡಾ ಅಲ್ಲಲ್ಲಿ ಹಿಂಸಾಚಾರ ನಡೆದಿರುವ ವರದಿಗಳು ಬಂದಿದೆ.
ಬುಧವಾರ ಬೆಳಗಿನ ಜಾವ ದುಷ್ಕರ್ಮಿಗಳು ಈ ಕೃತ್ಯ ಎಸಗಿದ್ದು ಸ್ಥಳೀಯರ ಸುಮಾರು 45 ನಿಮಿಷಗಳ ಸತತ ಪ್ರಯತ್ನದ ಬಳಿಕ ಬೆಂಕಿಯನ್ನು ಶಮನಗೊಳಿಸಲಾಯಿತು ಎಂದು ಜಿಲ್ಲಾ ಹೆಚ್ಚುವರಿ ಪೊಲೀಸ್ ಅಧೀಕ್ಷಕರ ದೆಲಾವರ್ ಹುಸೇನ್ ಹೇಳಿಕೆಯನ್ನು ಉಲ್ಲೇಖಿಸಿ 'ದ ಡೈಲಿ ಸ್ಟಾರ್' ಪತ್ರಿಕೆ ವರದಿ ಮಾಡಿದೆ.
ಚುನಾವಣೆಯ ಬಳಿಕ ದೇಶದ ವಿವಿಧೆಡೆ ಅಲ್ಪಸಂಖ್ಯಾತ ಸಮುದಾಯವಾದ ಹಿಂದೂಗಳ ಮೇಲೆ ನಡೆದ ದಾಳಿಗಳ ಬಗೆಗೆ ತನಿಖೆ ನಡೆಸಿ ಈ ಪ್ರಕರಣಗಳಲ್ಲಿ ಶಾಮೀಲಾದ ಎಲ್ಲಾ ಆರೋಪಿಗಳನ್ನು ಬಂಧಿಸುವುದಾಗಿ ಬಾಂಗ್ಲಾ ಪ್ರಧಾನಿ ಶೇಖ್ ಹಸೀನಾ ಭರವಸೆ ನೀಡಿದ ಬೆನ್ನಲ್ಲೇ ಹಿಂದೂ ದೇವಾಲಯದ ಮೇಲೆ ಈ ದಾಳಿ ನಡೆದಿದೆ.

ಬಾಂಗ್ಲಾ ಸಂಸತ್ ಗೆ ನಡೆದ ಚುನಾವಣೆಯ ಬಳಿಕ ದೇಶದ ಹಲವಾರು ಜಿಲ್ಲೆಗಳಲ್ಲಿ ಹಿಂದೂ ಸಮುದಾಯದವರನ್ನು ಗುರಿಯಾಗಿಸಿ ವ್ಯಾಪಕ ದಾಳಿಗಳು ನಡೆದಿದ್ದವು. ರಾಜ್ ಶಾಹಿ, ದಿನಾಜ್ ಪುರ್, ಠಾಕುರ್ ಗಾಂವ್, ಲಾಲ್ ಮೊನಿರ್ ಹಾಟ್ ಹಾಗೂ ಜೆಸ್ಸೂರ್ ಮುಂತಾದ ಕಡೆಗಳಲ್ಲಿ ಹಿಂದೂಗಳ ಮನೆ, ಅಂಗಡಿ ವಹಿವಾಟುಗಳಿಗೆ ತೊಂದರೆ ಉಂಟಾಗಿದೆ.
ದೇಶದ ಹಲವೆಡೆ ನಡೆದ ಹಿಂಸಾಚಾರದಲ್ಲಿ ಶಾಮೀಲಾಗಿರುವ ಆರೋಪದ ಮೇಲೆ ಬೋಗ್ರ ಜಿಲ್ಲೆಯ ಜಮಾತೆ ಇಸ್ಲಾಮೀ ನಾಯಕನೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ. ಅಲ್ಲದೆ ದೇಶ ವಿರೋಧಿ ಚಟುವಟಿಕೆಗಳಲ್ಲಿ ತೊಡಗಿಕೊಂಡ ಆರೋಪದ ಮೇಲೆ ಜಮಾತೆ ಇಸ್ಲಾಮೀಯ 11 ಕಾರ್ಯಕರ್ತರನ್ನು ಬಂಧಿಸಿರುವುದಾಗಿಯೂ ಪೊಲೀಸ್ ಅಧೀಕ್ಷಕರು ತಿಳಿಸಿದ್ದಾರೆ.(ಪಿಟಿಐ)












Click it and Unblock the Notifications