ರಕ್ತದ ಬಣ್ಣಕ್ಕೆ ತಿರುಗಿತು ಪ್ರವಾಹ, ಕಾರಣ ಕೇಳಿದ್ರೆ ಆಘಾತ!
ಅಲ್ಲಿ ಭೀಕರ ಪ್ರವಾಹ ಎದುರಾಗಿತ್ತು, ಆದರೆ ಜನರು ಪ್ರವಾಹಕ್ಕಿಂತಲೂ ಹೆಚ್ಚಾಗಿ ಭಯಪಟ್ಟಿದ್ದು ನೀರಿನ ಬಣ್ಣಕ್ಕೆ. ಅಷ್ಟಕ್ಕೂ ಅಲ್ಲಿ ಏನಾಗಿತ್ತೆಂದರೆ, ಪ್ರವಾಹದ ಜೊತೆ ನುಗ್ಗಿದ ನೀರು ರಕ್ತದ ಬಣ್ಣಕ್ಕೆ ತಿರುಗಿತ್ತು. ಇದನ್ನ ಕಂಡ ಗ್ರಾಮಸ್ಥರು ಬೆಚ್ಚಿಬಿದ್ದಿದ್ದರು. ಅಂದಹಾಗೆ ಈ ಘಟನೆ ನಡೆದಿದ್ದು ಇಂಡೋನೇಷ್ಯಾದಲ್ಲಿ.
ಪೆಕಲೋಂಗನ್ ನಗರದ ಜೆಂಗ್ಗೊಟ್ ಗ್ರಾಮದಲ್ಲಿ. ಜಾವಾ ದ್ವೀಪದ ಭಾಗವಾಗಿರುವ ಪೆಕಲೋಂಗನ್ ನಗರದಲ್ಲಿ ಜವಳಿ ಉದ್ಯಮಗಳಿವೆ, ಬಟ್ಟೆಗಳಿಗೆ ಬಣ್ಣ ಹಾಕುವ ಕಾರ್ಖಾನೆಗಳ ದರ್ಬಾರ್ ಜೋರಾಗಿದೆ. ಇದೇ ಕಾರಣಕ್ಕೆ ಹೀಗೆ ಪ್ರವಾಹದ ನೀರು ರಕ್ತದ ಬಣ್ಣಕ್ಕೆ ತಿರುಗಿರಬಹುದು ಎನ್ನಲಾಗುತ್ತಿದೆ. ಭಾರಿ ಮಳೆ ಹಾಗೂ ಪ್ರವಾಹದಿಂದ ಜನ ತತ್ತರಿಸಿ ಹೋಗಿದ್ದರು.
ಆದರೆ ನೀರಿನ ಬಣ್ಣ ಕೂಡ ಜನರಿಗೆ ಶಾಕ್ ನೀಡಿತ್ತು. ಪ್ರವಾಹದ ಪರಿಣಾಮ ನುಗ್ಗಿರುವ ನೀರು ದಿಢೀರ್ ರಕ್ತದ ಬಣ್ಣಕ್ಕೆ ತಿರುಗಿದ್ದು ಜನರನ್ನು ಬೆಚ್ಚಿಬೀಳಿಸಿತ್ತು. ಸ್ಥಳೀಯ ಅಧಿಕಾರಿಗಳು ಈ ಬಗ್ಗೆ ಸ್ಪಷ್ಟನೆ ನೀಡಿದ್ದು, ಇದು ಕಾರ್ಖಾನೆಗಳಿಂದ ಆಗಿರುವ ಕೆಲಸ ಎಂದಿದ್ದಾರೆ. ಇಂಡೋನೇಷ್ಯಾ ಒಂದಿಲ್ಲೊಂದು ಪ್ರಾಕೃತಿಕ ವಿಕೋಪಗಳಿಗೆ ತುತ್ತಾಗುತ್ತಲೇ ಬಂದಿದೆ.

ಇಂಟರ್ನೆಟ್ನಲ್ಲಿ ಫುಲ್ ವೈರಲ್..!
ಅಂತರ್ಜಾಲದಲ್ಲಿ ಕೆಲವರು ಇಂತಹ ಚಿತ್ರಗಳನ್ನ ಹಿಡಿದು ಸುಳ್ಳುಸುದ್ದಿ ಹಬ್ಬಿಸುವುದರಲ್ಲಿ ನಿಸ್ಸೀಮರು. ಇದೇ ರೀತಿ ಇಂಡೋನೇಷ್ಯಾದ ಫ್ಲಡ್ ಫೋಟೋಗಳನ್ನೂ ದುರುಪಯೋಗ ಮಾಡಿಕೊಂಡಿದ್ದಾರೆ ಕೆಲವರು. ಕೆಂಪು ಬಣ್ಣದ ನೀರು ಹರಡಿರುವ ಫೋಟೋ ಹಾಕಿ ರಕ್ತದ ಮಳೆ, ರಕ್ತದ ಪ್ರವಾಹ ಅಂತಾ ಸುಳ್ಳು ಸುದ್ದಿ ಹಬ್ಬಿಸಿದ್ದಾರೆ. ಸ್ಥಳೀಯ ಅಧಿಕಾರಿಗಳು ತಕ್ಷಣ ಅಲರ್ಟ್ ಆಗಿದ್ದು, ಅಂತಾರಾಷ್ಟ್ರೀಯ ಮಾಧ್ಯಮಗಳ ಮೂಲಕ ಇದು ಸುಳ್ಳು ಸುದ್ದಿ. ನೀರು ಕೆಂಪಗಾಗಿರುವುದು ನಿಜ, ಆದರೆ ಕಾರ್ಖಾನೆಗಳ ಕಲುಷಿತ ನೀರಿನಿಂದ ಸಮಸ್ಯೆ ಉಂಟಾಗಿದೆ ಎಂದು ಸ್ಪಷ್ಟನೆ ನೀಡಿದ್ದಾರೆ.

ರೆಡ್, ಗ್ರೀನ್, ಪರ್ಪಲ್..!
ಹೌದು, ಇಲ್ಲಿನ ನೀರು ಪ್ರವಾಹ ಬಂದಾಗ ಕಾಮನಬಿಲ್ಲಿನಂತೆ ಬದಲಾಗುತ್ತದೆ. ಕೆಂಪು ಬಣ್ಣಕ್ಕೆ ಮಾತ್ರವಲ್ಲ, ಎಷ್ಟೋ ಬಾರಿ ಹಸಿರು ಹಾಗೂ ನೇರಳೆ ಬಣ್ಣಕ್ಕೂ ತಿರುಗಿದ್ದುಂಟು. ಇಂಡೋನೇಷ್ಯಾದಲ್ಲಿ ನದಿಗಳ ಮಾಲಿನ್ಯ ಮಾಮೂಲಿ. ಇಲ್ಲಿನ ಅದೆಷ್ಟೋ ನದಿಗಳು ಮೋರಿ ನೀರಿಗಿಂತಲೂ ಗಬ್ಬೆದ್ದು ಹೋಗಿವೆ. ಇದನ್ನೇ ಬಂಡವಾಳ ಮಾಡಿಕೊಂಡಿರುವ ಕಾರ್ಖಾನೆ ಮಾಲೀಕರು, ನದಿಗಳಿಗೆ ಕಲುಷಿತ ನೀರನ್ನು ನೇರವಾಗಿ ಬಿಡುತ್ತಾರೆ. ಇದರ ಪರಿಣಾಮ ಪ್ರವಾಹ ಬಂದಾಗ ನೀರಿನ ಬಣ್ಣ ಬದಲಾಗುತ್ತದೆ. ಪ್ರವಾಹ ಕೂಡ ಕಲರ್ಫುಲ್ ಆಗುತ್ತದೆ.

ಕ್ರಮ ಏಕೆ ಕೈಗೊಂಡಿಲ್ಲ..?
ಪಾಶ್ಚಿಮಾತ್ಯ ದೇಶಗಳಲ್ಲಿ ನದಿಗಳನ್ನ ಕಲುಷಿತಗೊಳಿಸುವ ಕಾರ್ಖಾನೆಗಳಿಗೆ ಭಾರಿ ಪ್ರಮಾಣದ ದಂಡ ವಿಧಿಸಿ, ಸರಿಯಾಗಿ ಬುದ್ಧಿ ಕಲಿಸುತ್ತಾರೆ. ಆದರೆ ಏಷ್ಯಾ ಖಂಡದ ರಾಷ್ಟ್ರಗಳಲ್ಲಿ ಇದು ಸಾಧ್ಯವಿಲ್ಲ ಎನ್ನಬಹುದು. ಇಲ್ಲಿನ ವ್ಯವಸ್ಥೆಯೇ ಹಾಗಿರುತ್ತದೆ. ಅದರಲ್ಲೂ ಬಡತನದ ಬೇಗೆಯಲ್ಲಿ ಬೇಯುತ್ತಿರುವ ಇಂಡೋನೇಷ್ಯಾದ ಜನ ಸದ್ಯ ಉದ್ಯೋಗ ಸಿಕ್ಕರೆ ಸಾಕಪ್ಪಾ ಎನ್ನುವ ಸ್ಥಿತಿಯಲ್ಲಿದ್ದಾರೆ. ಇನ್ನು ಅಲ್ಲಿನ ಸರ್ಕಾರಗಳು ಕೂಡ ಕೈಗಾರಿಕೆಗಳ ಬಗ್ಗೆ ತುಟಿ ಬಿಚ್ಚುವುದಿಲ್ಲ. ಹಾಗೇ ಭ್ರಷ್ಟಾಚಾರ ಕೂಡ ಇದಕ್ಕೆ ನೇರ ಕಾರಣ. ಹೀಗಾಗಿಯೇ ಇಂಡೋನೇಷ್ಯಾದಲ್ಲಿ ನದಿಗಳ ಮಾರಣಹೋಮ ನಿರಂತರವಾಗಿ ನಡೆಯುತ್ತಿದೆ.
|
ಕುಡಿಯುಲು ನೀರು ಸಿಗಲಾರದು..!
ಇಂಡೋನೇಷ್ಯಾದಲ್ಲಿ ಉತ್ತಮವಾಗಿ ಮಳೆ ಬೀಳುತ್ತದೆ, ನದಿಗಳ ಸಂಖ್ಯೆ ಕೂಡ ಹೇರಳವಾಗಿದೆ. ಆದರೂ ಅಲ್ಲಿ ಜನರು ಕುಡಿಯುವ ನೀರಿಗೆ ಪರದಾಡುತ್ತಾರೆ. ಸುತ್ತಲೂ ಸಮುದ್ರ ಆವರಿಸಿದ್ದರೆ, ನದಿಗಳು ಭಾರಿ ಪ್ರಮಾಣದ ನೀರನ್ನು ಹೊತ್ತು ತರುತ್ತವೆ. ಆದರೆ ನದಿಗಳು ಗಬ್ಬೆದ್ದು ಹೋಗಿವೆ. ಹೀಗಾಗಿ ನದಿ ನೀರನ್ನು ಬಳಕೆ ಮಾಡುವುದು ಒಂದೆಡೆ ಇರಲಿ, ನದಿಗಳ ಬಳಿ ಸುಳಿಯುವುದು ಕೂಡ ಅಸಾಧ್ಯ. ಇಂಡೋನೇಷ್ಯಾದಲ್ಲಿ ಲಕ್ಷಾಂತರ ಜನ ಶುದ್ಧ ನೀರು ಸಿಗದೆ ಪರದಾಡುತ್ತಿದ್ದಾರೆ. ಲೆಕ್ಕವಿಲ್ಲದಷ್ಟು ಜನ ಇದೇ ಕಾರಣಕ್ಕೆ ಉಸಿರು ಚೆಲ್ಲಿದ್ದಾರೆ.












Click it and Unblock the Notifications