ಬಿಜೆಪಿ ಕ್ರಿಮಿನಲ್ ಗಳನ್ನೂ ಬಿಡಲ್ಲ : ನರೇಂದ್ರ ಮೋದಿ
ಲಕ್ನೋ, ಏ. 21 : ಭ್ರಷ್ಟಾಚಾರದ ವಿರುದ್ಧ ಸಮರ ಸಾರಿರುವ ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ, ಭ್ರಷ್ಟರನ್ನು ಜೈಲಿಗೆ ಕಳುಹಿಸುವ ಮೂಲಕ ಭಾರತ ದೇಶವನ್ನು ಸ್ವಚ್ಚಗೊಳಿಸುವ ಕೆಲಸ ಮಾಡುತ್ತೇನೆ ಎಂದು ಹೇಳಿದ್ದಾರೆ. ಬಿಜೆಪಿ ಪಕ್ಷದಲ್ಲಿನ ಕ್ರಿಮಿನಲ್ ಗಳನ್ನು ತಾವು ಬಿಡುವುದಿಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ.
ಸೋಮವಾರ ಉತ್ತರ ಪ್ರದೇಶದ ಹರ್ದೋಯಿಯಲ್ಲಿ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಮೋದಿ, "ಮೇ 16ರಂದು ಚುನಾವಣಾ ಫಲಿತಾಂಶ ಪ್ರಕಟಗೊಂಡು ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದ ನಂತರ. ಎಲ್ಲಾ ಗೆದ್ದ ಅಭ್ಯರ್ಥಿಗಳ ಪ್ರಮಾಣ ಪ್ರತಗಳನ್ನು ಪರಿಶೀಲನೆ ನಡೆಸಿ, ಅವರ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಪ್ರಕರಣಗಳ ಕುರಿತು ಪರಿಶೀಲನೆ ನಡೆಸುತ್ತೇನೆ" ಎಂದರು.

ಎಲ್ಲಾ ಪಕ್ಷದ ಅಭ್ಯರ್ಥಿಗಳ ಪ್ರಮಾಣ ಪತ್ರಗಳನ್ನು ಪರಿಶೀಲಿಸುತ್ತೇನೆ ಎಂದು ಹೇಳಿರುವ ನರೇಂದ್ರ ಮೋದಿ, ತಾವು ಬಿಜೆಪಿ ಮತ್ತು ಎನ್ ಡಿಎ ಮೈತ್ರಿಕೂಟದ ಸಂಸದರನ್ನು ಬಿಡುವುದಿಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ. ಎಲ್ಲಾ ಪ್ರಮಾಣ ಪ್ರತಗಳ ಪರಿಶೀಲನೆ ಬಳಿಕ ಸುಪ್ರೀಂಕೋರ್ಟ್ ಗೆ ಅರ್ಜಿ ಸಲ್ಲಿಸಿ ಕ್ರಿಮಿನಲ್ ಗಳನ್ನು ಶಿಕ್ಷಿಸುವಂತೆ ಮನವಿ ಮಾಡುತ್ತೇನೆ ಎಂದು ಮೋದಿ ಹೇಳಿದ್ದಾರೆ.
ಇದು ಸಂಸತ್ ಮತ್ತು ದೇಶವನ್ನು ಕ್ರಿಮಿನಲ್ ಗಳಿಂದ ಸ್ವಚ್ಚಗೊಳಿಸುವ ವಿಧಾನವಾಗಿದೆ ಎಂದು ಹೇಳಿದ ನರೇಂದ್ರ ಮೋದಿ, ಕ್ರಿಮಿನಲ್ ಪಕ್ರರಣಗಳನ್ನು ಎದುರಿಸುತ್ತಿರುವವರಿಗೆ ದೇಶವನ್ನು ಆಳುವ ಹಕ್ಕಿಲ್ಲ ಎಂದು ಸ್ಟಷ್ಟಪಡಿಸಿದರು. [ಬಿಎಸ್ವೈ, ರಾಮುಲು ಬಗ್ಗೆ ಮೋದಿ ಹೇಳಿದ್ದೇನು?]
ತಮ್ಮ ಭಾಷಣದಲ್ಲಿ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರ ವಿರುದ್ಧ ಕಟು ಶಬ್ದಗಳಿಂದ ಟೀಕಿಸಿದ ಮೋದಿ, "ಭಯ್ಯಾ ರಾಹುಲ್ ಗಾಂಧಿ ಅವರಿಗೆ ಬಡತನ ಎಂದರೆ ಏನು ಎಂದು ತಿಳಿದಿಲ್ಲ. ಮಾಧ್ಯಮಗಳ ಮುಂದೆ ಮಾತನಾಡುವಾಗ ಬಡತನವನ್ನು, ಬಡವರನ್ನು ಅವರು ಗೇಲಿ ಮಾಡುತ್ತಾರೆ" ಎಂದು ಮೋದಿ ದೂರಿದರು.
ಉತ್ತರ ಪ್ರದೇಶದಲ್ಲಿ ಆಡಳಿತ ನಡೆಸುತ್ತಿರುವ ಸಮಾಜವಾದಿ ಪಕ್ಷದ ವಿರುದ್ಧ ವಾಗ್ದಾಳಿ ನಡೆಸಿದ ಮೋದಿ, "ಇಲ್ಲಿನ ಜನರು ಬಂದೂಕು ಇಟ್ಟುಕೊಂಡು ಜೀವನ ಮಾಡಬೇಕಾದ ಪರಿಸ್ಥಿತಿ ಬಂದಿದೆ. ಇಲ್ಲಿನ ಸರ್ಕಾರ ಇಂತಹ ಪರಿಸ್ಥಿತಿಗೆ ಕಾರಣವೇನು? ಎಂಬ ಪ್ರಶ್ನೆಗೆ ಉತ್ತರ ನೀಡಬೇಕು" ಎಂದು ಆಗ್ರಹಿಸಿದರು.












Click it and Unblock the Notifications