Arvind Kejriwal: ಇಂದು ಅರವಿಂದ್ ಕೇಜ್ರಿವಾಲ್ ರಾಜೀನಾಮೆ ಸಾಧ್ಯತೆ; ದೆಹಲಿ ಮುಂದಿನ ಸಿಎಂ ಯಾರು?
ದೆಹಲಿ ಮುಖ್ಯಮಂತ್ರಿ ಸ್ಥಾನಕ್ಕೆ ಅರವಿಂದ್ ಕೇಜ್ರಿವಾಲ್ ಇಂದು ಸಂಜೆ ವೇಳೆಗೆ ರಾಜೀನಾಮೆ ನೀಡುವ ಸಾಧ್ಯತೆ ಇದೆ. ದೆಹಲಿ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಭಾನುವಾರ ಅರವಿಂದ್ ಕೇಜ್ರಿವಾಲ್ ಘೋಷಣೆ ಮಾಡಿದ್ದರು. ಎರಡು ದಿನಗಳಲ್ಲಿ ರಾಜೀನಾಮೆ ಕೊಡುವುದಾಗಿ ತಿಳಿಸಿದ್ದರು. ಇಂದು ಸಂಜೆ ಲೆಫ್ಟಿನೆಂಟ್ ಗವರ್ನರ್ ಅವರನ್ನು ಭೇಟಿ ಮಾಡಲಿದ್ದು ರಾಜೀನಾಮೆ ನೀಡುವ ಸಾಧ್ಯತೆ ಇದೆ.
ಅರವಿಂದ್ ಕೇಜ್ರಿವಾಲ್ ರಾಜೀನಾಮೆ ಬಳಿಕ ದೆಹಲಿ ಮುಂದಿನ ಮುಖ್ಯಮಂತ್ರಿ ಯಾರು ಎನ್ನುವ ಪ್ರಶ್ನೆ ಶುರುವಾಗಿದೆ. ಆಮ್ ಆದ್ಮಿ ಪಕ್ಷದಲ್ಲಿ ಹಲವು ನಾಯಕರಿದ್ದರೂ, ಯಾರಿಗೆ ಮಣೆ ಹಾಕುತ್ತಾರೆ ಎನ್ನುವ ಕುತೂಹಲ ಇದೆ. ಎಎಪಿ ನಾಯಕ ಮನೀಶ್ ಸಿಸೋಡಿಯಾ ಸೋಮವಾರ ಕೇಜ್ರಿವಾಲ್ ಅವರನ್ನು ಭೇಟಿಯಾಗಿದ್ದು, ಪಕ್ಷದ ಮುಖ್ಯಮಂತ್ರಿ ಆಯ್ಕೆ ಕುರಿತು ಚರ್ಚೆ ಮಾಡಿರುವ ಸಾಧ್ಯತೆ ಇದೆ. ಆದರೆ ಮನೀಶ್ ಸಿಸೋಡಿಯಾ ಮಾಧ್ಯಮಗಳ ಜೊತೆ ಮಾತನಾಡದೇ ತೆರಳಿದ್ದು, ಏನು ಚರ್ಚೆಯಾಗಿದೆ ಎನ್ನುವ ಮಾಹಿತಿ ತಿಳಿದುಬಂದಿಲ್ಲ.

ದೆಹಲಿ ವಿಧಾನಸಭಾ ಚುನಾವಣೆ 2025ರ ಫೆಬ್ರವರಿಯಲ್ಲಿ ನಿಗದಿಯಾಗಿದೆ. ಆದರೆ ಮಹಾರಾಷ್ಟ್ರ ವಿಧಾನಸಭಾ ಚುನಾವಣೆ ನವೆಂಬರ್ ನಲ್ಲಿ ನಡೆಯಲಿದ್ದು, ಆ ವೇಳೆಯಲ್ಲೇ ದೆಹಲಿ ವಿಧಾನಸಭಾ ಚುನಾವಣೆ ನಡೆಸುವಂತೆ ಕೇಜ್ರಿವಾಲ್ ಆಗ್ರಹಿಸಿದ್ದಾರೆ. ಚುನಾವಣೆಯಲ್ಲಿ ಜನತೆ ಮತ್ತೆ ಆಯ್ಕೆ ಮಾಡಿದರೆ ಮಾತ್ರ ಸಿಎಂ ಆಗುವುದಾಗಿ ಹೇಳಿರುವ ಅವರು ಮನೀಶ್ ಸಿಸೋಡಿಯಾ ಕೂಡ ಚುನಾವಣೆ ಬಳಿಕವೇ ಡಿಸಿಎಂ ಆಗುವುದಾಗಿ ಹೇಳಿದ್ದಾರೆ ಎಂದು ಹೇಳಿದ್ದಾರೆ. ಈ ಮೂಲಕ ಮನೀಶ್ ಸಿಸೋಡಿಯಾ ಮುಂದಿನ ಸಿಎಂ ರೇಸ್ನಲ್ಲಿ ಇಲ್ಲ ಎನ್ನುವುದು ಸ್ಪಷ್ಟವಾಗಿದೆ.
ಮುಂದಿನ ಮುಖ್ಯಮಂತ್ರಿ ಯಾರು?
ಚುನಾವಣೆಗೆ ಇನ್ನು ಕೆಲವೇ ತಿಂಗಳು ಇರುವ ಕಾರಣ, ಮುಖ್ಯಮಂತ್ರಿ ಆಯ್ಕೆ ಹೆಚ್ಚಿನ ಮಹತ್ವ ಪಡೆದುಕೊಂಡಿದೆ. ಪಕ್ಷದ ನಾಯಕರ ಸಮ್ಮತಿಯ ಮೇರೆಗೆ ಸಿಎಂ ಆಯ್ಕೆ ಮಾಡಲು ನಿರ್ಧರಿಸಲಾಗಿದ್ದು ಈ ಪ್ರಮುಖ ನಾಯಕರು ರೇಸ್ನಲ್ಲಿದ್ದಾರೆ.
ಸಂಜಯ್ ಸಿಂಗ್
2018 ರಿಂದ ರಾಜ್ಯಸಭಾ ಸಂಸದರಾಗಿರುವ ಸಂಜಯ್ ಸಿಂಗ್ ತಮ್ಮ ಭಾಷಣಗಳಿಗೆ ಹೆಸರಾದವರು. ಆಮ್ ಆದ್ಮಿ ಪಕ್ಷದ ರಾಷ್ಟ್ರೀಯ ಕಾರ್ಯಕಾರಿ ಮತ್ತು ರಾಜಕೀಯ ವ್ಯವಹಾರಗಳ ಸಮಿತಿಯ ಸದಸ್ಯರಾಗಿದ್ದಾರೆ. ದೆಹಲಿ ಮದ್ಯ ನೀತಿ ಪ್ರಕರಣಕ್ಕೆ ಸಂಬಂಧಿಸಿದ ಭ್ರಷ್ಟಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಜಯ್ ಸಿಂಗ್ ಕೂಡ ಬಂಧನಕ್ಕೆ ಒಳಗಾಗಿದ್ದರು ಅವರು ಈಗ ಜಾಮೀನಿನ ಮೇಲೆ ಹೊರಗಡೆ ಇದ್ದಾರೆ.
ದೆಹಲಿಗೆ ಮಹಿಳಾ ಸಿಎಂ?
ಅತಿಶಿ ಕೂಡ ಸಿಎಂ ರೇಸ್ನಲ್ಲಿರುವ ಮತ್ತೊಬ್ಬ ನಾಯಕಿಯಾಗಿದ್ದಾರೆ. ಶಿಕ್ಷಣ ಮತ್ತು ಲೋಕೋಪಯೋಗಿಯಂತಹ ಪ್ರಮುಖ ಖಾತೆಗಳನ್ನು ಹೊಂದಿರುವ ಅವರು ಸಮರ್ಥವಾಗಿ ನಿಭಾಯಿಸಿದ್ದಾರೆ. ದೆಹಲಿಯ ಶಾಲೆಗಳಲ್ಲಿ ಶಿಕ್ಷಣದ ಗುಣಮಟ್ಟ ಸುಧಾರಣೆ ಮಾಡುವಲ್ಲಿ ಕೂಡ ಕೆಲಸ ಮಾಡಿದ್ದಾರೆ. ಮನೀಶ್ ಸಿಸೋಡಿಯಾ ಬಂಧನದ ಬಳಿಕ ಅತಿಶಿ ಸಚಿವೆ ಸ್ಥಾನ ಪಡೆದುಕೊಂಡಿದ್ದರು.
ರಾಘವ್ ಚಡ್ಡಾಗೆ ಒಲಿಯುತ್ತಾ ಅದೃಷ್ಟ?
ಎಎಪಿಯ ರಾಷ್ಟ್ರೀಯ ಕಾರ್ಯಕಾರಿ ಮತ್ತು ರಾಜಕೀಯ ವ್ಯವಹಾರಗಳ ಸಮಿತಿಯ ಸದಸ್ಯರಾಗಿರುವ ರಾಘವ್ ಚಡ್ಡಾ ಪಕ್ಷದ ರಾಜ್ಯಸಭಾ ಸಂಸದ. ಎಎಪಿಯಲ್ಲಿ ಚಡ್ಡಾ ಕೂಡ ಜನಪ್ರಿಯ ಯುವ ನಾಯಕ, ಆಮ್ ಆದ್ಮಿ ಪಕ್ಷದ ಆರಂಭದ ದಿನಗಳಿಂದಲೂ ಅವರು ಕೆಲಸ ಮಾಡಿದ್ದಾರೆ. 2022 ರ ರಾಜ್ಯ ಚುನಾವಣೆಯಲ್ಲಿ ಪಂಜಾಬ್ನಲ್ಲಿ ಎಎಪಿಯ ಭರ್ಜರಿ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಯುವ ರಾಜಕಾರಣಿಯಾಗಿರುವ ಅವರು ಮತಗಳನ್ನು ಸೆಳೆಯುವ ವರ್ಚಸ್ಸು ಹೊಂದಿದ್ದಾರೆ.
ಸೌರಭ್ ಭಾರದ್ವಾಜ್
ಗ್ರೇಟರ್ ಕೈಲಾಶ್ನಿಂದ ಮೂರು ಬಾರಿ ಶಾಸಕರಾಗಿ ಆಯ್ಕೆಯಾಗಿರುವ ಸೌರಭ್ ಭಾರದ್ವಾಜ್ ಕೂಡ ಸಿಎಂ ರೇಸ್ನಲ್ಲಿದ್ದಾರೆ. ಆರೋಗ್ಯ ಖಾತೆನ್ನು ನಿಭಾಯಿಸುತ್ತಿದ್ದಾರೆ.
ಕೈಲಾಶ್ ಗೆಹ್ಲೋಟ್
ಸಾರಿಗೆ, ಹಣಕಾಸು ಮತ್ತು ಗೃಹ ವ್ಯವಹಾರಗಳಂತಹ ಪ್ರಮುಖ ಖಾತೆಗಳನ್ನು ನಿಭಾಯಿಸುತ್ತಿರುವ ಕೈಲಾಶ್ ಗೆಹ್ಲೋಟ್ ಪಕ್ಷದ ಹಿರಿಯ ನಾಯಕರಲ್ಲ ಒಬ್ಬರು. ನಜಾಫ್ಗಢ ಕ್ಷೇತ್ರದ ಶಾಸಕರಾಗಿದ್ದಾರೆ. ದೆಹಲಿ ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್ ಎರಡರಲ್ಲೂ ವಕೀಲರಾಗಿ ಅಭ್ಯಾಸ ಮಾಡಿದವರು. ಇವರ ಹೆಸರು ಕೂಡ ಮುಂಚೂಣಿಯಲ್ಲಿದೆ.
ಮಂಗಳವಾರ ಸಂಜೆ ಅರವಿಂದ್ ಕೇಜ್ರಿವಾಲ್ ದೆಹಲಿ ಸಿಎಂ ಸ್ಥಾನಕ್ಕೆ ರಾಜೀನಾಮೆ ಕೊಡುವ ಸಾಧ್ಯತೆ ಇದ್ದು, ಬುಧವಾರ ಪಕ್ಷದ ಸಭೆ ನಡೆಸಿದ ಬಳಿಕ ಮುಂದಿನ ಸಿಎಂ ಹೆಸರು ಘೋಷಣೆ ಮಾಡುವ ಸಾಧ್ಯತೆ ಇದೆ.












Click it and Unblock the Notifications