West Bengal Horror: ಇಬ್ಬರು ಬುಡಕಟ್ಟು ಮಹಿಳೆಯರನ್ನು ವಿವಸ್ತ್ರಗೊಳಿಸಿ ಹಲ್ಲೆ- ವಿಡಿಯೊದಲ್ಲಿ ಬಹಿರಂಗ
ಕೋಲ್ಕತ್ತ, ಜುಲೈ 22: ಮಣಿಪುರದಲ್ಲಿ ಇಬ್ಬರು ಮಹಿಳೆಯರನ್ನು ಬೆತ್ತಲೆಯಾಗಿಸಿ ಮೆರವಣಿಗೆ ಮಾಡಿದ ಪ್ರಕರಣವು ದೇಶದಾದ್ಯಂತ ಆಕ್ರೋಶ ಹುಟ್ಟುಹಾಕಿದೆ. ಇದೇ ರೀತಿಯ ಅಮಾನವೀಯ ಘಟನೆಯೊಂದು ಪಶ್ಚಿಮ ಬಂಗಾಳದಲ್ಲಿ ನಡೆದಿದೆ. ಇಬ್ಬರು ಬುಡಕಟ್ಟು ಮಹಿಳೆಯರನ್ನು ಥಳಿಸಿ ಅವರ ಬಟ್ಟೆಗಳನ್ನು ಹರಿದು ಹಾಕಿರುವ ದಾರುಣ ಘಟನೆ ಪಶ್ಚಿಮ ಬಂಗಾಳದಲ್ಲಿ ಬೆಳಕಿಗೆ ಬಂದಿದೆ.
ಬಮಂಗೋಳ ಪೊಲೀಸ್ ಠಾಣೆಯ ಮಾಲ್ಡಾದ ಪಕುವಾ ಹ್ಯಾಟ್ ಪ್ರದೇಶದಲ್ಲಿ ಬುಡಕಟ್ಟು ಸಮುದಾಯದ ಇಬ್ಬರು ಮಹಿಳೆಯರ ಮೇಲೆ ದಾಳಿ ನಡೆಸಲಾಗಿದೆ. ಈ ಘಟನೆ ನಡೆಯುತ್ತಿರುವಾಗ ಪೊಲೀಸರು ಅಸಹಾಯಕರಾಗಿ ನಿಂತಿರುವುದು ವಿಡಿಯೊದಲ್ಲಿ ಕಂಡು ಬರುತ್ತಿದೆ. ಜುಲೈ 19 ರಂದು ಈ ಘಟನೆ ನಡೆದಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಯಾರೂ ಇನ್ನೂ ಪೊಲೀಸರಿಗೆ ಅಧಿಕೃತ ದೂರು ನೀಡಿಲ್ಲ. ಆದರೆ, ದಾಳಿಯ ಹಿಂದಿನ ದುಷ್ಕರ್ಮಿಗಳನ್ನು ಗುರುತಿಸಲು ತನಿಖೆ ನಡೆಯುತ್ತಿದೆ.
ಜುಲೈ 8 ರಂದು ಪಂಚಾಯತ್ ಚುನಾವಣೆಗಳು ನಡೆದಾಗ ತೃಣಮೂಲ ಕಾಂಗ್ರೆಸ್ ಕಾರ್ಯಕರ್ತರು ತಮ್ಮನ್ನು ಬೆತ್ತಲಾಗಿಸಿ ಪರೇಡ್ ಮಾಡಿಸಿದ್ದಾರೆಂದು ಪಶ್ಚಿಮ ಬಂಗಾಳದ ಮಹಿಳಾ ಬಿಜೆಪಿ ಗ್ರಾಮಸಭೆ ಅಭ್ಯರ್ಥಿಯೊಬ್ಬರು ಆರೋಪಿಸಿದ್ದಾರೆ. ಈ ಆರೋಪ ಕೇಳಿಬಂದ ಒಂದು ದಿನದ ಬಳಿಕ ಈ ಘಟನೆ ಬೆಳಕಿಗೆ ಬಂದಿದೆ.
ಬಿಜೆಪಿ ಅಭ್ಯರ್ಥಿ ನೀಡಿದ ದೂರಿನ ಪ್ರಕಾರ, ಪಶ್ಚಿಮ ಬಂಗಾಳದಲ್ಲಿ ಪಂಚಾಯತ್ ಚುನಾವಣೆ ನಡೆಯುತ್ತಿರುವಾಗ ಹೌರಾ ಜಿಲ್ಲೆಯ ಪಂಚಲಾ ಪ್ರದೇಶದಲ್ಲಿ ಸುಮಾರು 40 ತೃಣಮೂಲ ಕಾರ್ಯಕರ್ತರು ತಮಗೆ ಥಳಿಸಿದ್ದಾರೆ ಎಂದು ಮಹಿಳೆ ಆರೋಪಿಸಿದ್ದಾರೆ.
'ನನ್ನ ಎದೆ ಮತ್ತು ತಲೆಗೆ ಕೋಲಿನಿಂದ ಹೊಡೆದು ನನ್ನನ್ನು ಮತಗಟ್ಟೆಯಿಂದ ಹೊರಹಾಕಲಾಯಿತು' ಎಂದು ಬಿಜೆಪಿ ಕಾರ್ಯಕರ್ತೆ ಹೇಳಿದ್ದಾರೆ.
ತೃಣಮೂಲ ಅಭ್ಯರ್ಥಿ ಹಿಮಂತ ರಾಯ್, ನೂರ್ ಆಲಂ, ಅಲ್ಫಿ ಎಸ್ಕೆ, ರಣಬೀರ್ ಪಂಜಾ ಸಂಜು, ಸುಕ್ಮಲ್ ಪಂಜಾ ಸೇರಿದಂತೆ ಹಲವರ ಹೆಸರನ್ನು ಎಫ್ಐಆರ್ನಲ್ಲಿ ಉಲ್ಲೇಖಿಸಲಾಗಿದೆ.
ಮಮತಾ ವಿರುದ್ಧ ಬಿಜೆಪಿ ವಾಗ್ದಾಳಿ
ಮಹಿಳೆಯರ ಮೇಲಿನ ಹಲ್ಲೆಯ ವಿಡಿಯೊವನ್ನು ಟ್ವಿಟರ್ನಲ್ಲಿ ಹಂಚಿಕೊಂಡಿರುವ ಬಿಜೆಪಿ ಮುಖಂಡ ಅಮಿತ್ ಮಾಳವಿಯಾ ಅವರು, 'ಈ ದುರಂತದ ಹಿಂದೆ ಮಮತಾ ಬ್ಯಾನರ್ಜಿಯವರ ಹೃದಯವಿರಬೇಕು' ಎಂದು ಹೇಳಿದ್ದಾರೆ.
'ಈ ಭಯಾನಕ ಘಟನೆ ಜುಲೈ 19 ರಂದು ಬೆಳಿಗ್ಗೆ ನಡೆದಿದೆ. ಮಹಿಳೆಯರು ಬುಡಕಟ್ಟು ಸಮುದಾಯಕ್ಕೆ ಸೇರಿದವರಾಗಿದ್ದಾರೆ. ಅವರ ರಕ್ತಕ್ಕಾಗಿ ಉನ್ಮಾದಿತ ಜನಸಮೂಹವು ಹಾತೊರೆಯುತ್ತಿತ್ತು' ಎಂದು ಹೇಳಿದ್ದಾರೆ.
ಮಮತಾ ಬ್ಯಾನರ್ಜಿ ವಿರುದ್ಧ ವಾಗ್ದಾಳಿ ನಡೆಸಿದ ಮಾಳವಿಯಾ, 'ಅವರು ಅನಾಗರಿಕತೆಯನ್ನು ಖಂಡಿಸಲಿಲ್ಲ. ನೋವು ಮತ್ತು ವೇದನೆಯನ್ನು ವ್ಯಕ್ತಪಡಿಸಲಿಲ್ಲ. ಏಕೆಂದರೆ, ಅವರು ಮುಖ್ಯಮಂತ್ರಿಯಾಗಿ ತಮ್ಮ ವೈಫಲ್ಯವನ್ನು ಜಗತ್ತಿನ ಮುಂದೆ ತೋರಿಸಲು ಬಯಸುತ್ತಿಲ್ಲ' ಎಂದು ವಾಗ್ದಾಳಿ ನಡೆಸಿದ್ದಾರೆ.
ಮಣಿಪುರದ ವಿಡಿಯೊ ಪ್ರಕಟವಾದ ಒಂದು ದಿನದ ನಂತರ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸಾರ್ವಜನಿಕವಾಗಿ ಕಣ್ಣೀರು ಸುರಿಸಿದರು. ಕಾರಣ, ಅದು ಅವರಿಗೆ ರಾಜಕೀಯವಾಗಿ ಲಾಭ ತಂದು ಕೊಡುತ್ತದೆ ಎಂದು ಮಾಳವೀಯ ಹೇಳಿದ್ದಾರೆ.












Click it and Unblock the Notifications