ಪ್ರಧಾನಿ ಮೋದಿಗೆ ಮಾವಿನ ಹಣ್ಣುಗಳನ್ನು ಕಳುಹಿಸಿದ ಮಮತಾ ಬ್ಯಾನರ್ಜಿ- ಯಾವು ತಳಿಗಳು ತಿಳಿಯಿರಿ
ಕೋಲ್ಕತ್ತ, ಜೂನ್ 08: ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ರಾಷ್ಟ್ರಪತಿ ದ್ರೌಪದಿ ಮುರ್ಮು ಮತ್ತು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮಾವಿನ ಹಣ್ಣುಗಳನ್ನು ಬುಧವಾರ ಕಳುಹಿಸಿದ್ದಾರೆ. ರಾಜ್ಯದ ಉನ್ನತ ತಳಿಯ ಮಾವಿನಹಣ್ಣಿಗಳನ್ನು ಇಬ್ಬರು ನಾಯಕರಿಗೆ ರವಾನಿಸಿದ್ದಾರೆ ಎಂದು ತಿಳಿದುಬಂದಿದೆ.
ಟಿಎಂಸಿ ನಾಯಕಿ ಮಮತಾ ಬ್ಯಾನರ್ಜಿ ಅವರು ಹಲವಾರು ವರ್ಷಗಳಿಂದ ಈ ಅಭ್ಯಾಸವನ್ನು ರೂಡಿಸಿಕೊಂಡಿದ್ದಾರೆ. ಈ ಹಿಂದೆಯೂ ಮಾವಿನಹಣ್ಣುಗಳನ್ನು ರಾಷ್ಟ್ರೀಯ ನಾಯಕರಿಗೆ ಮಮತಾ ಕಳುಹಿಸಿದ್ದರು.
ಉನ್ನತ ತಳಿಯ ಮಾಹಿನ ಹಣ್ಣುಗಳನ್ನು ಭಾರತದ ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ಅವರಿಗೂ ಕಳುಹಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

'ಮಾವುಗಳನ್ನು ಅಲಂಕಾರಿಕ ಪೆಟ್ಟಿಗೆಗಳಲ್ಲಿ ಕಳುಹಿಸಲಾಗಿದೆ. ಬಾಕ್ಸ್ಗಳಲ್ಲಿ ಹಿಮ್ಸಾಗರ್, ಫಜ್ಲಿ, ಲಾಂಗ್ರಾ ಮತ್ತು ಲಕ್ಷ್ಮಣ್ ಭೋಗ್ ವಿಧದ ಮಾವಿನಹಣ್ಣುಗಳಿವೆ' ಎಂದು ಮೂಲಗಳು ಹೇಳಿವೆ. ಒಂದೆರಡು ದಿನಗಳಲ್ಲಿ ಬಾಕ್ಸ್ಗಳು ನವದೆಹಲಿ ತಲುಪಲಿವೆ ಎಂದೂ ತಿಳಿದುಬಂದಿದೆ.
ವಾಶ್ರೂಮ್ಗೂ ನುಗ್ಗುತ್ತದೆಯೇ ಸಿಬಿಐ: ಮಮತಾ ಬ್ಯಾನರ್ಜಿ ಪ್ರಶ್ನೆ
ಪಶ್ಚಿಮ ಬಂಗಾಳದ ಹಲವು ಪುರಸಭೆಗಳಿಗೆ ಕೇಂದ್ರೀಯ ತನಿಖಾ ದಳದ (ಸಿಬಿಐ) ತಂಡಗಳು ಬುಧವಾರ ಭೇಟಿ ನೀಡಿದ್ದು, ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಆಕ್ರೋಶಕ್ಕೆ ಕಾರಣವಾಗಿದೆ. ಸಂಸ್ಥೆಯು ಈಗ ವಾಶ್ರೂಮ್ಗಳಿಗೂ ನುಗ್ಗುತ್ತದೆಯೇ ಎಂದು ಸಾರ್ವಜನಿಕ ಸಭೆಯೊಂದರಲ್ಲಿ ಪ್ರಶ್ನಿಸಿದರು.
ಬಾಲಸೋರ್ ರೈಲು ಅಪಘಾತದಲ್ಲಿ ಹಾನಿಗೊಳಗಾದ ವ್ಯಕ್ತಿಗಳಿಗೆ ಚೆಕ್ ವಿತರಿಸುವ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾಗ ಬ್ಯಾನರ್ಜಿ ಈ ಹೇಳಿಕೆ ನೀಡಿದ್ದಾರೆ.

ಪುರಸಭಾ ನೇಮಕಾತಿಯಲ್ಲಿನ ಆಪಾದಿತ ಅಕ್ರಮಗಳಿಗೆ ಸಂಬಂಧಿಸಿದಂತೆ ಕೇಂದ್ರೀಯ ಸಂಸ್ಥೆಯ ಅಧಿಕಾರಿಗಳು ಪುರಸಭೆಗಳಿಗೆ ಮತ್ತು ರಾಜ್ಯದ ನಗರಾಭಿವೃದ್ಧಿ ಇಲಾಖೆಗೆ ಭೇಟಿ ನೀಡಿ ಪರಿಶೀಲಿಸಿದ್ದಾರೆ ಎಂದು ವರದಿಯಾಗಿದೆ.
'ನಾನು ಮಾತನಾಡಬಾರದು ಎಂದು ಭಾವಿಸಿದ್ದೆ. ಆದರೆ, ಪರಿಸ್ಥಿತಿ ನನ್ನನ್ನು ಮಾತನಾಡಲು ಒತ್ತಾಯಿಸಿದೆ. ಅಂತಹ ಘಟನೆ-ಅಪಘಾತ ಮತ್ತು ಅದನ್ನು ಹತ್ತಿಕ್ಕುವ ಪ್ರಯತ್ನ ನಡೆಯುತ್ತಿದೆ' ಎಂದು ಅವರು ಹೇಳಿದ್ದಾರೆ.
'ಅಪಘಾತ ಏಕೆ ಸಂಭವಿಸಿತು? ಇಷ್ಟೊಂದು ಜನ ಏಕೆ ಸತ್ತರು. ಇದು ಶತಮಾನದ ದೊಡ್ಡ ಅಪಘಾತವಾಗಿದೆ. ಸಿಬಿಐ ಏನು ಮಾಡಲಿದೆ? ಕ್ರಿಮಿನಲ್ ಪ್ರಕರಣವಾಗಿದ್ದರೆ ಸಿಬಿಐ ಕ್ರಮ ಕೈಗೊಳ್ಳಬಹುದು. ನೀವು ಪುಲ್ವಾಮಾ ನೋಡಿಲ್ಲವೇ? ಆಗಿನ ರಾಜ್ಯಪಾಲರು ಹೇಳಿದ್ದೇನು? ಇಂದು ಸಹ, ಅದೇ ರೀತಿಯ ಘಟನೆಯಾಗಿದೆ' ಎಂದು ಅವರು ತಿಳಿಸಿದ್ದಾರೆ.

ಅಪಘಾತದ ಬಗ್ಗೆ ನಿಜವಾದ ತನಿಖೆ ನಡೆದಿಲ್ಲ. ಎಲ್ಲಾ ಪುರಾವೆಗಳು ನಾಶವಾಗಿವೆ ಎಂದು ಪ್ರತಿಪಾದಿಸಿದ ಮಮತಾ ಬ್ಯಾನರ್ಜಿ, ಸತ್ಯವನ್ನು ತಿಳಿದುಕೊಳ್ಳಲು ತಾನು ಬಯಸುವುದಾಗಿ ಹೇಳಿದ್ದಾರೆ.
'ರೈಲು ಅಪಘಾತದ ಕುರಿತು ತನಿಖೆ ಮಾಡುತ್ತಿರುವ ಸಿಬಿಐ ಅನ್ನು ಕೋಲ್ಕತ್ತಾಗೆ ಕಳುಹಿಸಲಾಗಿದೆ. ಅವರು 14-16 ಪುರಸಭೆಗಳು, ನಗರಾಭಿವೃದ್ಧಿ (ಇಲಾಖೆ) ಪ್ರವೇಶಿಸಿದ್ದಾರೆ' ಎಂದು ತಿಳಿಸಿದ್ದಾರೆ.
'ಇದೆಲ್ಲವನ್ನೂ ಮಾಡುವುದರಿಂದ ( ಸತ್ಯಗಳು ) ಅಂತಹ ದೊಡ್ಡ ಅಪಘಾತವನ್ನು ಹತ್ತಿಕ್ಕಲು ಸಾಧ್ಯವಿಲ್ಲ' ಎಂದು ಅವರು ಹೇಳಿದ್ದಾರೆ. ಬೃಹತ್ ದುರಂತಕ್ಕೆ ಕಾರಣರಾದವರನ್ನು ಶಿಕ್ಷಿಸಬೇಕು ಎಂದೂ ಅವರು ಒತ್ತಾಯಿಸಿದ್ದಾರೆ.
ಕೋಲ್ಕತ್ತಾದ ನೇತಾಜಿ ಒಳಾಂಗಣ ಕ್ರೀಡಾಂಗಣದಲ್ಲಿ, ಬ್ಯಾನರ್ಜಿ ಅವರು ಈ ಹಿಂದೆ ಘೋಷಿಸಿದಂತೆ ಸಂತ್ರಸ್ತ ಕುಟುಂಬಗಳಿಗೆ ಹಣಕಾಸಿನ ನೆರವು ಮತ್ತು ಗೃಹರಕ್ಷಕರ ಕೆಲಸಕ್ಕೆ ನೇಮಕಾತಿ ಪತ್ರಗಳನ್ನು ನೀಡಿದರು. ಗಾಯಾಳುಗಳಿಗೆ ಮತ್ತು ಆಘಾತಕ್ಕೆ ಒಳಗಾದವರಿಗೆ ಪರಿಹಾರವನ್ನು ಸಹ ನೀಡಲಾಯಿತು.
ರೈಲು ಅಪಘಾತಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಿಸಿಕೊಂಡಿರುವುದಾಗಿ ಸಿಬಿಐ ಮಂಗಳವಾರ ಹೇಳಿಕೆ ನೀಡಿತ್ತು. ಈ ಹಿಂದೆ ಬಾಲಸೋರ್ ಜಿಆರ್ಪಿಎಸ್ನಲ್ಲಿ ದಾಖಲಾಗಿದ್ದ ಪ್ರಕರಣದ ತನಿಖೆಯನ್ನು ಕೈಗೆತ್ತಿಕೊಂಡ ಸಿಬಿಐ ತಂಡ ಒಡಿಶಾದ ಬಾಲಸೋರ್ ತಲುಪಿತ್ತು.












Click it and Unblock the Notifications