ಭಾರತಕ್ಕೆ ಗಡಿಪಾರು ಆದೇಶ ಪ್ರಶ್ನಿಸಿ ವಿಜಯ್ ಮಲ್ಯ ಸಲ್ಲಿಸಿದ್ದ ಅರ್ಜಿ ವಜಾ
ನವದೆಹಲಿ, ಏಪ್ರಿಲ್ 20: ಭಾರತಕ್ಕೆ ಗಡಿಪಾರು ಆದೇಶ ಪ್ರಶ್ನಿಸಿ ಉದ್ಯಮಿ ವಿಜಯ್ ಮಲ್ಯ ಸಲ್ಲಿಸಿದ್ದ ಅರ್ಜಿಯನ್ನು ಬ್ರಿಟನ್ ಹೈಕೋರ್ಟ್ ಇಂದು ವಜಾಗೊಳಿಸಿದೆ.
ಭಾರತದ ಬ್ಯಾಂಕುಗಳಿಗೆ ಸುಮಾರು 9 ಸಾವಿರ ಕೋಟಿ ಸಾಲ ಮರುಪಾವತಿ ಮಾಡದ ಪ್ರಕರಣದಲ್ಲಿ ಭಾರತಕ್ಕೆ ಗಡಿಪಾರಿಗೆ ಆದೇಶಿಸಲಾಗಿತ್ತು.
ಅದನ್ನು ಪ್ರಶ್ನಿಸಿ ವಿಜಯ್ ಮಲ್ಯ ಕೋರ್ಟ್ ಮೆಟ್ಟಿಲೇರಿದ್ದರು. ಭಾರತಕ್ಕೆ ಗಡಿಪಾರು ಆದೇಶ ಪ್ರಶ್ನಿಸಿ 64 ವರ್ಷದ ಕಿಂಗ್ ಫಿಶರ್ ಮಾಲೀಕ ಈ ವರ್ಷ ಫೆಬ್ರವರಿ ತಿಂಗಳಲ್ಲಿ ಬ್ರಿಟನ್ ಹೈಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿದ್ದರು.

ಬ್ರಿಟನ್ ಹೈಕೋರ್ಟ್ ನ್ಯಾಯಾಧೀಶರಾದ ಸ್ಟೀಫನ್ ಇರ್ವಿನ್ ಮತ್ತು ಎಲಿಜಬೆತ್ ಲಾಯಿಂಗ್ ಅವರನ್ನೊಳಗೊಂಡ ದ್ವಿಸದಸ್ಯ ಪೀಠ ವಿಜಯ್ ಮಲ್ಯ ಸಲ್ಲಿಸಿದ ಅರ್ಜಿಯನ್ನು ವಜಾಗೊಳಿಸಿದೆ.
ಲಾಕ್ ಡೌನ್ ಹಿನ್ನೆಲೆಯಲ್ಲಿ ವಿಡಿಯೋ ಕಾನ್ಫೆರೆನ್ಸ್ ಮೂಲಕವೇ ಲಾರ್ಡ್ ಜಸ್ಟಿಸ್ ಸ್ಟೀಫನ್ ಇರ್ವಿನ್ ಮತ್ತು ಜಸ್ಟಿಸ್ ಎಲಿಸಬೆತ್ ಲಾಯಿಂಗ್ ಅವರು ತೀರ್ಪು ನೀಡಿದರು. ವಿಜಯ್ ಮಲ್ಯ ವಿರುದ್ಧ ಸಾಕ್ಷ್ಯಾಧಾರ ಬಲವಾಗಿದೆ. ಭಾರತ ಮಾಡಿರುವ ಆರೋಪಗಳಿಗೆ ಸಕಾರಣಗಳಿದ್ದಂತಿದೆ ಎಂದು ತಮ್ಮ ತೀರ್ಪಿನ ವೇಳೆ ನ್ಯಾಯಮೂರ್ತಿಗಳು ಹೇಳಿದರು.
ಇದರೊಂದಿಗೆ ವಿಜಯ್ ಮಲ್ಯ ಅವರು ಭಾರತ ಸರ್ಕಾರದ ವಶವಾಗುವ ದಿನ ಸನ್ನಿಹಿತವಾಗಿದೆ. ಕೊರೊನಾ ವೈರಸ್ ಬಿಕ್ಕಟ್ಟು ಮುಗಿದ ಬಳಿಕ ಅವರ ಹಸ್ತಾಂತರ ಪ್ರಕ್ರಿಯೆ ಶುರುವಾಗಬಹುದು.
ವಿಜಯ್ ಮಲ್ಯ ಅವರನ್ನು ದಿವಾಳಿ ಎಂದು ಘೋಷಣೆ ಮಾಡುವಂತೆ ಬ್ಯಾಂಕ್ ಆಫ್ ಬರೋಡ, ಕಾರ್ಪೋರೇಶನ್ ಬ್ಯಾಂಕ್, ಫೆಡರಲ್ ಬ್ಯಾಂಕ್, ಐಡಿಬಿಐ ಬ್ಯಾಂಕ್, ಇಂಡಿಯನ್ ಓವರ್ ಸೀಸ್ ಬ್ಯಾಂಕ್, ಜಮ್ಮು ಮತ್ತು ಕಾಶ್ಮೀರ ಬ್ಯಾಂಕ್, ಪಂಜಾಬ್ ಮತ್ತು ಸಿಂಧ್ ಬ್ಯಾಂಕ್, ಪಂಜಾಬ್ ನ್ಯಾಶನಲ್ ಬ್ಯಾಂಕ್, ಯುಕೋ ಬ್ಯಾಂಕ್, ಯುನೈಟೆಡ್ ಬ್ಯಾಂಕ್ ಆಫ್ ಇಂಡಿಯಾ ಬ್ರಟನ್ ಹೈಕೋರ್ಟ್ ಗೆ ಮನವಿ ಮಾಡಿವೆ. ವಿಜಯ್ ಮಲ್ಯ ಈ ಹಿಂದೆ ತಮ್ಮ ಮಾಲೀಕತ್ವದ ಕಿಂಗ್ ಫಿಶರ್ ಸಂಸ್ಥೆಯ ಸಾಲವನ್ನು ಬ್ಯಾಂಕ್ ಗಳಿಗೆ ಮರು ಪಾವತಿ ಮಾಡಲಾಗದೆ, ಭಾರತೀಯ ಬ್ಯಾಂಕ್ ಗಳಿಗೆ ವಂಚಿಸಿದ್ದಾರೆ. ಅವರ ವಿರುದ್ದ ವಂಚನೆ ಮತ್ತು ಅಕ್ರಮ ಹಣ ಹಣ ವರ್ಗಾವಣೆ ಆರೋಪವಿದೆ.
13,700 ಕೋಟಿ ರೂಪಾಯಿ ಸಾಲ ಪಡೆದು ಮರಳಿಸದೆಯೇ 2016ರಿಂದ ಲಂಡನ್ಗೆ ತೆರಳಿ ಆಶ್ರಯ ಪಡೆದಿರುವ ವಿಜಯ್ ಮಲ್ಯ ಅವರನ್ನು ಗಡಿಪಾರು ಮಾಡುವಂತೆ ಲಂಡನ್ನ ವೆಸ್ಟ್ ಮಿನಿಸ್ಟರ್ ಕೋರ್ಟ್ ಆದೇಶಿಸಿತ್ತು. ಈ ಆದೇಶಕ್ಕೆ ಬ್ರಿಟನ್ ಕಾರ್ಯದರ್ಶಿ ಸಹಿ ಹಾಕಿದ್ದರು.
ಇದನ್ನು ವಿಜಯ್ ಮಲ್ಯ ಮೇಲಿನ ಕೋರ್ಟ್ನಲ್ಲಿ ಪ್ರಶ್ನಿಸಿದ್ದಾರೆ. ಈ ನಡುವೆ ಮಲ್ಯರನ್ನು ದಿವಾಳಿ ಎಂದು ಘೋಷಿಸಿ, ಸಾಲದ ಮೊತ್ತಕ್ಕೆ ಮಲ್ಯ ಅವರ ವಿದೇಶಿ ಆಸ್ತಿಗಳನ್ನು ವಶಪಡಿಸಿಕೊಳ್ಳುವ ಪ್ರಕ್ರಿಯೆಯನ್ನು ಜಾರಿ ನಿರ್ದೇಶನಾಲಯ ಮುಂದಾಗಿದೆ.












Click it and Unblock the Notifications