ಉತ್ತರಾಖಂಡ್ ಹಿಮಪಾತ: 3 ಮೃತದೇಹ ಪತ್ತೆ, 16 ಜನರ ರಕ್ಷಣೆ
ನವದೆಹಲಿ, ಫೆಬ್ರವರಿ.07: ಉತ್ತರಾಖಂಡ್ ಹಿಮಪರ್ವತ ಸ್ಫೋಟದ ನಂತರ ಮೂರು ಮೃತದೇಹಗಳನ್ನು ಪತ್ತೆ ಮಾಡಲಾಗಿದೆ. ಹಿಮಪಾತದ ನಂತರ ಸುತ್ತಮುತ್ತಲಿನ ನದಿಗಳಲ್ಲಿ ನೀರಿನ ಮಟ್ಟ ಹೆಚ್ಚಾಗಿದ್ದು ಪ್ರವಾಹ ಭೀತಿ ಎದುರಾಗಿದೆ.
ಉತ್ತರಾಖಂಡ್ ದೌಲಿಗಂಗಾ ನದಿಯಲ್ಲಿ ಏಕಾಏಕಿ ನೀರಿನ ಮಟ್ಟ ಹೆಚ್ಚಾಗಿದ್ದು, ರಿಷಿಗಂಗಾ ಪವರ್ ಪ್ರಾಜೆಕ್ಟ್ ಗೆ ಅಪಾಯ ಎದುರಾಗಿದೆ. ಚಮೋಲಿ ಜಿಲ್ಲೆ ತಪೋವನ ಪ್ರದೇಶದ ರೈನಿ ನದಿಯ ಅಪಾಯದ ಮಟ್ಟ ಮೀರಿ ಉಕ್ಕಿ ಹರಿಯುತ್ತಿದೆ. ಹಿಮಪಾತ ಮತ್ತು ಉಕ್ಕಿ ಹರಿಯುತ್ತಿರುವ ನದಿ ನೀರಿದಿಂದಾಗಿ 100 ರಿಂದ 150 ಮಂದಿ ಕಾರ್ಮಿಕರಿಗೆ ಪ್ರಾಣಭೀತಿ ಎದುರಾಗಿದೆ.
ಉತ್ತರಾಖಂಡ್ ಹಿಮಪಾತ LIVE: 100ಕ್ಕೂ ಅಧಿಕ ಮಂದಿ ಸಾವಿನ ಶಂಕೆ?
ರಾಷ್ಟ್ರೀಯ ವಿಪತ್ತು ನಿರ್ವಹಣಾ ತಂಡ, ರಾಜ್ಯ ವಿಪತ್ತು ನಿರ್ವಹಣಾ ಪಡೆ ಮತ್ತು ಉತ್ತರ ಪ್ರದೇಶದ ಭದ್ರತಾ ಸಿಬ್ಬಂದಿಯು ರಕ್ಷಣಾ ಕಾರ್ಯಾಚರಣೆ ನಡೆಸುತ್ತಿದ್ದು, ಅಪಾಯದಲ್ಲಿ ಸಿಲುಕಿರುವ ಜನರನ್ನು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಿಸುವ ಕಾರ್ಯವನ್ನು ಮಾಡಲಾಗುತ್ತಿದೆ.
|
ಇಂಡೋ-ಟಿಬೆಟಿಯನ್ ಪೊಲೀಸರಿಂದ 16 ಮಂದಿ ರಕ್ಷಣೆ
ಉತ್ತರಾಖಂಡ್ ಚಮೇಲಿ ಜಿಲ್ಲೆಯಲ್ಲಿ ಇಂಡೋ-ಟಿಬೆಟಿಯನ್ ಪೊಲೀಸ್ ಗಡಿ ಪೊಲೀಸ್ ಸಮರೋಪಾದಿಯಲ್ಲಿ ರಕ್ಷಣಾ ಕಾರ್ಯಾಚರಣೆ ನಡೆಸುತ್ತಿದೆ. ಜಿಲ್ಲೆಯ ತಪೋವನ ಡ್ಯಾಂ ಬಳಿಯಲ್ಲಿ ಸಿಲುಕಿದ್ದ 15 ರಿಂದ 16 ಜನರನ್ನು ಸುರಕ್ಷಿತವಾಗಿ ಬೇರೆ ಕಡೆಗೆ ಸ್ಥಳಾಂತರಿಸಿದ್ದಾರೆ.
|
ಉತ್ತರಾಖಂಡ್ ಹಿಮಸ್ಫೋಟದ ಬಗ್ಗೆ ಮೋದಿ ಟ್ವೀಟ್
ಇಡೀ ಭಾರತವೇ ಉತ್ತರಾಖಂಡ್ ಜನತೆಯ ಜೊತೆಗಿದ್ದು, ಅಲ್ಲಿನ ಪ್ರತಿಯೊಬ್ಬರ ಸುರಕ್ಷತೆಗಾಗಿ ಪ್ರಾರ್ಥಿಸುತ್ತಿದೆ. ಹಿರಿಯ ಅಧಿಕಾರಿಗಳ ಜೊತೆಗೆ ಚರ್ಚಿಸುತ್ತಿದ್ದು, ಸ್ಥಳಾಂತರ, ರಕ್ಷಣಾ ಕಾರ್ಯಾಚರಣೆಗಾಗಿ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯನ್ನು ನಿಯೋಜಿಸಲಾಗಿದೆ. ಪರಿಸ್ಥಿತಿಯ ಬಗ್ಗೆ ಕ್ಷಣಕ್ಷಣದ ಮಾಹಿತಿಯನ್ನು ಪಡೆದುಕೊಳ್ಳಲಾಗುತ್ತಿದೆ" ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಟ್ವೀಟ್ ಮಾಡಿದ್ದಾರೆ.
ಹಿಮಪಾತ ಕುರಿತು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಆತಂಕ
ಉತ್ತರಾಖಂಡದ ಜೋಶಿಮಠ ಬಳಿ ಹಿಮನದಿ ಸ್ಫೋಟಗೊಂಡಿರುವುದರಿಂದ ತೀವ್ರ ಆತಂಕವಿದೆ. ಅದು ಆ ಪ್ರದೇಶದಲ್ಲಿ ವಿನಾಶಕ್ಕೆ ಕಾರಣವಾಗುವ ಭೀತಿಯಿದೆ. ನೆಲದ ರಕ್ಷಣೆ ಮತ್ತು ಜನರ ಸುರಕ್ಷತೆಗಾಗಿ ಪ್ರಾರ್ಥಿಸೋಣ. ರಕ್ಷಣಾ ಮತ್ತು ಪರಿಹಾರ ಕಾರ್ಯಾಚರಣೆಗಳು ಉತ್ತಮವಾಗಿ ಸಾಗುತ್ತವೆ ಎಂಬ ವಿಶ್ವಾಸವಿದೆ ಎಂದು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಹೇಳಿದ್ದಾರೆ.
|
ಉತ್ತರಾಖಂಡ್ ಸಿಎಂ ಮತ್ತು ಅಮಿತ್ ಶಾ ಮಾತುಕತೆ
ಉತ್ತರಾಖಂಡ್ ಹಿಮಪಾತಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ತ್ರಿವೇಂದ್ರ ಸಿಂಗ್ ರಾವತ್ ಜೊತೆಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಚರ್ಚೆ ನಡೆಸಿದ್ದಾರೆ. ರಾಷ್ಟ್ರೀಯ ವಿಪತ್ತು ನಿರ್ವಹಣಾ ತಂಡ, ಇಂಡೋ-ಟಿಬೆಟ್ ಪೊಲೀಸ್ ಪಡೆ ಮತ್ತು ಭದ್ರತಾ ಸಿಬ್ಬಂದಿಯು ಸಮರೋಪಾದಿಯಲ್ಲಿ ರಕ್ಷಣಾ ಕಾರ್ಯಾಚರಣೆ ನಡೆಸುತ್ತಿದೆ. ಕೇಂದ್ರ ಸರ್ಕಾರದಿಂದ ಅಗತ್ಯ ನೆರವು ನೀಡಲಾಗುವುದು ಎಂದು ಭರವಸೆ ನೀಡಿದ್ದಾರೆ.
ಗಂಗಾ ನದಿ ಹರಿಯುವ ಪ್ರದೇಶಗಳಲ್ಲಿ ಮುನ್ನೆಚ್ಚರಿಕೆ
ಉತ್ತರಾಖಂಡ್ ಹಿಮಪರ್ವತ ಸ್ಫೋಟದ ಬೆನ್ನಲ್ಲೇ ತೀವ್ರ ಕಟ್ಟೆಚ್ಚರ ವಹಿಸಲಾಗಿದೆ. ಉತ್ತರ ಭಾರತದ ಪ್ರಮುಖ ರಾಜ್ಯಗಳಲ್ಲಿ ಗಂಗಾ ನದಿ ಹರಿಯುವ ಪ್ರದೇಶಗಳಲ್ಲಿ ಹೈಅಲರ್ಟ್ ಘೋಷಿಸಲಾಗಿದೆ. ನದಿ ನೀರಿನ ಮಟ್ಟದ ಮೇಲೆ ನಿಗಾ ವಹಿಸಲಾಗಿದ್ದು, ನದಿಪಾತ್ರದ ಜನರನ್ನು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಿಸುವ ಕಾರ್ಯಾಚರಣೆ ನಡೆಸಲಾಗುತ್ತಿದೆ ಎಂದು ಉತ್ತರಾಖಂಡ್ ಸರ್ಕಾರದ ಮುಖ್ಯ ಕಾರ್ಯದರ್ಶಿ ಓಂಪ್ರಕಾಶ್ ಮಾಹಿತಿ ನೀಡಿದ್ದಾರೆ.