ವಿಶ್ವಸಂಸ್ಥೆಯಲ್ಲಿ ನಡೆಯದ ಚೀನಾ ಆಟ: ಉಗ್ರ ದಾಳಿಗೆ ಕಟುವಾದ ಖಂಡನೆ
Recommended Video

ನವದೆಹಲಿ, ಫೆಬ್ರವರಿ 22: ಚೀನಾದ ಪ್ರಬಲ ಪ್ರಯತ್ನವೊಂದು ವಿಫಲವಾಗಿದೆ. ಕಳೆದ ವಾರ ಜಮ್ಮು-ಕಾಶ್ಮೀರದ ಪುಲ್ವಾಮಾದಲ್ಲಿ ನಡೆದ ಉಗ್ರರ ದಾಳಿ, ಅದರಲ್ಲಿ ನಲವತ್ತು ಸಿಆರ್ ಪಿಎಫ್ ಸಿಬ್ಬಂದಿ ಹುತಾತ್ಮರಾಗಿದ್ದು, ಅದರ ಹೊಣೆಯನ್ನು ಪಾಕಿಸ್ತಾನ ಮೂಲದ ಜೈಶ್ ಇ ಮೊಹ್ಮದ್ ಸಂಘಟನೆ ಹೊತ್ತುಕೊಂಡಿದ್ದು.. ಈ ಎಲ್ಲವನ್ನೂ ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಖಂಡಿಸಿದೆ.
ಜಮ್ಮು-ಕಾಶ್ಮೀರದಲ್ಲಿ ನಡೆದದ್ದು ಹೇಯ ಹಾಗೂ ಹೇಡಿ ಆತ್ಮಾಹುತಿ ಬಾಂಬರ್ ದಾಳಿ. ಅದರಲ್ಲಿ ಭಾರತೀಯ ಅರೆ ಸೇನಾ ಪಡೆಯ ನಲವತ್ತು ಮಂದಿ ಮೃತಪಟ್ಟು, ಹತ್ತಾರು ಮಂದಿ ಗಾಯಗೊಂಡಿದ್ದಾರೆ. ಇದರ ಹೊಣೆಯನ್ನು ಜೈಶ್ ಇ ಮೊಹ್ಮದ್ ಹೊತ್ತುಕೊಂಡಿದೆ ಎಂದು ಹೇಳಿಕೆಯಲ್ಲಿ ಹೇಳಿದ್ದು, ಘಟನೆಯನ್ನು ಬಲವಾಗಿ ಖಂಡಿಸಲಾಗಿದೆ.
ಇದಕ್ಕೂ ಮುಖ್ಯವಾಗಿ, ಎಲ್ಲ ದೇಶಗಳು ಅಂತರರಾಷ್ಟ್ರೀಯ ಕಾನೂನು ಹಾಗೂ ಸಂಬಂಧಿಸಿದ ಭದ್ರತಾ ಸಮಿತಿಯ ನಿರ್ಣಯಗಳು, ಸಕ್ರಿಯವಾದ ಸಹಕಾರದೊಂದಿಗೆ ಭಾರತ ಸರಕಾರದ ಜತೆಗೆ ತಮ್ಮ ಜವಾಬ್ದಾರಿ ನಿರ್ವಹಿಸಬೇಕು. ಸಂಬಂಧಪಟ್ಟ ಎಲ್ಲ ಅಧಿಕಾರಿಗಳು ಸಹಕಾರ ನೀಡಿ, ಜವಾಬ್ದಾರಿಯಿಂದ ನಡೆದುಕೊಳ್ಳಬೇಕು ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.

ಮೂಲಗಳ ಪ್ರಕಾರ ಈ ಹೇಳಿಕೆ ನೀಡದಿರುವಂತೆ ತಡೆಯಲು ಚೀನಾ ಬಹಳ ಯತ್ನಿಸಿದೆ. ಚೀನಾಗೆ ಜೈಶ್ ಇ ಮೊಹ್ಮದ್ ಹೆಸರಿನ ಪ್ರಸ್ತಾವ ಆಗುವುದು ಬೇಕಿರಲಿಲ್ಲ. ಜತೆಗೆ ಭಾರತದ ಆಡಳಿತದಲ್ಲಿರುವ ಕಾಶ್ಮೀರ ಎಂದು ಕರೆಯುವುದು ಬೇಕಿತ್ತು. ಆದರೆ ಆ ಅಂಶಕ್ಕೂ ಹಿನ್ನಡೆ ಆಗಿದೆ. ಎಲ್ಲ ದೇಶಗಳೂ ಸಕ್ರಿಯವಾಗಿ ಭಾರತ ಸರಕಾರಕ್ಕೆ ಸಹಕಾರ ನೀಡಬೇಕು ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.
ಪಾಕಿಸ್ತಾನದ ಪಾಲಿಗೆ 'ಸರ್ವಋತು ಸ್ನೇಹಿ' ದೇಶವಾಗಿರುವ ಚೀನಾ, ಕಳೆದ ಕೆಲವು ವರ್ಷಗಳಿಂದ ವಿಶ್ವಸಂಸ್ಥೆಯಲ್ಲಿ ತನ್ನ ವಿಟೋ ಶಕ್ತಿ ಬಳಸಿ, ಜೈಶ್ ಇ ಮೊಹ್ಮದ್ ಉಗ್ರ ಸಂಘಟನೆಯ ಮಸೂದ್ ಅಜರ್ ನನ್ನು ಬಚಾವ್ ಮಾಡುತ್ತಿದೆ. ಅಜರ್ ನನ್ನು ಜಾಗತಿಕ ಉಗ್ರ ಎಂದು ಘೋಷಣೆ ಮಾಡಬೇಕು ಎಂಬ ಭಾರತದ ಪ್ರಸ್ತಾವಕ್ಕೆ ಹಿನ್ನಡೆ ಆಗುವಂತೆ ಚಿನಾ ಮಾಡುತ್ತಿದೆ.
ಇದೀಗ ಪುಲ್ವಾಮಾ ಉಗ್ರ ದಾಳಿಯ ನಂತರ, ಅಂತರರಾಷ್ಟ್ರೀಯ ಮಟ್ಟದಲ್ಲಿ ಪಾಕಿಸ್ತಾನವನ್ನು ಏಕಾಂಗಿ ಮಾಡಲು ಭಾರತ ಕ್ರಮ ತೆಗೆದುಕೊಳ್ಳುತ್ತಿದೆ. ಅತ್ಯಾಪ್ತ ರಾಷ್ಟ್ರ ಎಂದು ಪಾಕಿಸ್ತಾನಕ್ಕೆ ನೀಡಿದ್ದ ಸ್ಥಾನವನ್ನು ಕೂಡ ಹಿಂಪಡೆದಿದೆ. ಜತೆಗೆ ಪಾಕಿಸ್ತಾನದಿಂದ ಭಾರತಕ್ಕೆ ಆಮದಾಗುವ ವಸ್ತುಗಳ ಮೇಲೆ ಶೇಕಡಾ ಇನ್ನೂರರಷ್ಟು ಸುಂಕ ವಿಧಿಸಿದೆ.












Click it and Unblock the Notifications