ಜಮ್ಮು ಕಾಶ್ಮೀರ: ಕುಲ್ಗಾಮ್ ಎನ್ಕೌಂಟರ್ನಲ್ಲಿ ಮೂವರು ಯೋಧರು ಹುತಾತ್ಮ
ಶ್ರೀನಗರ, ಆಗಸ್ಟ್. 05: ಶುಕ್ರವಾರ, ಆಗಸ್ಟ್ 4, 2023 ರಂದು ಜಮ್ಮು ಮತ್ತು ಕಾಶ್ಮೀರದ ಕುಲ್ಗಾಮ್ ಜಿಲ್ಲೆಯಲ್ಲಿ ಉಗ್ರರೊಂದಿಗೆ ನಡೆದ ಎನ್ಕೌಂಟರ್ನಲ್ಲಿ ಮೂವರು ಸೇನಾ ಯೋಧರು ಹತರಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಶುಕ್ರವಾರದಂದು ದಕ್ಷಿಣ ಕಾಶ್ಮೀರದ ಕುಲ್ಗಾಮ್ ಜಿಲ್ಲೆಯ ಹಾಲನ್ ಅರಣ್ಯ ಪ್ರದೇಶದಲ್ಲಿ ಭಯೋತ್ಪಾದಕರು ಇರುವ ನಿಖರ ಮಾಹಿತಿ ಮೇರೆಗೆ ಪೊಲೀಸ್ ಮತ್ತು ಸೇನೆಯ ಜಂಟಿ ತಂಡವು ಅರಣ್ಯ ಪ್ರದೇಶವನ್ನು ಸುತ್ತುವರೆದಿತ್ತು. ಈ ವೇಳೆ ಎನ್ಕೌಂಟರ್ ನಡೆಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಭದ್ರತಾ ಪಡೆಗಳತ್ತ ಭಯೋತ್ಪಾದಕರು ಗುಂಡು ಹಾರಿಸಿದ ನಂತರ ಶೋಧ ಕಾರ್ಯಾಚರಣೆ ಎನ್ಕೌಂಟರ್ಗೆ ತಿರುಗಿತು ಎಂದು ಮಾಹಿತಿ ನೀಡಿದ್ದಾರೆ.

"ಭಯೋತ್ಪಾದಕರೊಂದಿಗಿನ ಗುಂಡಿನ ಚಕಮಕಿಯಲ್ಲಿ ಮೂವರು ಯೋಧರು ಗಾಯಗೊಂಡಿದ್ದಾರೆ. ಚಿಕಿತ್ಸೆ ವೇಳೆ ಅವರು ಮೃತಪಟ್ಟಿದ್ದಾರೆ. ಶೋಧ ಕಾರ್ಯಾಚರಣೆ ಮುಂದುವರಿದಿದೆ" ಎಂದು ಸೇನಾ ವಕ್ತಾರರು ತಿಳಿಸಿದ್ದಾರೆ. ಈ ಪ್ರದೇಶಕ್ಕೆ ಮತ್ತಷ್ಟು ಸೇನಾ ತಂಡಗಳು ಧಾವಿಸಲಾಗಿದ್ದು, ಶೋಧ ಕಾರ್ಯಾಚರಣೆಯನ್ನು ತೀವ್ರಗೊಳಿಸಲಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.
"ಆಪರೇಷನ್ ಹಲನ್ ಕುಲ್ಗಮ್. ಕುಲ್ಗಾಮ್ನ ಹಲಾನ್ನ ಎತ್ತರದ ಪ್ರದೇಶಗಳಲ್ಲಿ ಭಯೋತ್ಪಾದಕರು ಇರುವ ಬಗ್ಗೆ ನಿರ್ದಿಷ್ಟ ಮಾಹಿತಿಯ ಮೇಲೆ, ಭದ್ರತಾ ಪಡೆಗಳು 04 ಆಗಸ್ಟ್ 23 ರಂದು ಕಾರ್ಯಾಚರಣೆಯನ್ನು ಪ್ರಾರಂಭಿಸಿದವು. ಭಯೋತ್ಪಾದಕರೊಂದಿಗಿನ ಗುಂಡಿನ ಚಕಮಕಿಯಲ್ಲಿ, ಮೂವರು ಸಿಬ್ಬಂದಿ ಗಾಯಗೊಂಡಿದ್ದರು. ನಂತರ ಸಾವನ್ನಪ್ಪಿದ್ದಾರೆ. ಶೋಧ ಕಾರ್ಯಾಚರಣೆಗಳು ಮುಂದುವರೆದಿದೆ." ಎಂದು ಸೇನೆಯ ಶ್ರೀನಗರ ಮೂಲದ ಚಿನಾರ್ ಕಾರ್ಪ್ಸ್ ಟ್ವೀಟ್ನಲ್ಲಿ ತಿಳಿಸಿದೆ.
ಮೂವರು ಭಯೋತ್ಪಾದಕರ ಸಹಚರರ ಬಂಧನ
ಶ್ರೀನಗರದ ನಾಟಿಪೋರಾ ಪ್ರದೇಶದಲ್ಲಿ ಲಷ್ಕರ್-ಎ-ತೊಯ್ಬಾದ (ಎಲ್ಇಟಿ) ಶಾಖೆಯಾದ ದಿ ರೆಸಿಸ್ಟೆನ್ಸ್ ಫ್ರಂಟ್ (ಟಿಆರ್ಎಫ್) ನಿಷೇಧಿತ ಭಯೋತ್ಪಾದಕ ಸಂಘಟನೆಯೊಂದಿಗೆ ಸಂಬಂಧ ಹೊಂದಿರುವ ಮೂವರು ಭಯೋತ್ಪಾದಕ ಸಹಚರರನ್ನು ಜಮ್ಮು ಮತ್ತು ಕಾಶ್ಮೀರ ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ. ಈ ಮೂವರು ಶ್ರೀನಗರದಲ್ಲಿ ಭಯೋತ್ಪಾದಕ ಚಟುವಟಿಕೆಗಳನ್ನು ನಡೆಸಲು ಯೋಜಿಸಿದ್ದರು ಎಂದು ಪೊಲೀಸರು ಹೇಳಿಕೆಯ ಮೂಲಕ ತಿಳಿಸಿದ್ದಾರೆ.
ಆರೋಪಿಗಳಿಂದ 3 ಹ್ಯಾಂಡ್ ಗ್ರೆನೇಡ್ಗಳು, 10 ಪಿಸ್ತೂಲ್ ಗುಂಡುಗಳು, 25 ಎಕೆ-47 ಸುತ್ತುಗಳು ಮತ್ತು ಇತರ ದೋಷಾರೋಪಣೆ ಸಾಮಗ್ರಿಗಳನ್ನು ಶ್ರೀನಗರ ಪೊಲೀಸ್ ತಂಡವು ವಶಪಡಿಸಿಕೊಂಡಿದ್ದಾರೆ. ಬಂಧಿತ ಭಯೋತ್ಪಾದಕರನ್ನು ಬಾರಾಮುಲ್ಲಾದ ಬುಲ್ಬುಲ್ ಬಾಗ್ ನಿವಾಸಿ ಇಮ್ರಾನ್ ಅಹ್ಮದ್ ನಜರ್, ಶ್ರೀನಗರದ ಕಮರ್ವಾರಿ ನಿವಾಸಿ ವಸೀಮ್ ಅಹ್ಮದ್ ಮಟ್ಟಾ ಮತ್ತು ಬಿಜ್ಬೆಹರಾದ ವಕೀಲ್ ಅಹ್ಮದ್ ಭಟ್ ಪಜಲ್ಪೋರಾ ಎಂದು ಗುರುತಿಸಲಾಗಿದೆ.
ಶ್ರೀನಗರ ಪೊಲೀಸರ ಸಣ್ಣ ತಂಡವು ಶ್ರೀನಗರದ ನಾಟಿಪೋರಾ ಪ್ರದೇಶದಲ್ಲಿ ನಿಷೇಧಿತ ಭಯೋತ್ಪಾದಕ ಸಂಘಟನೆಯಾದ ಎಲ್ಇಟಿಯ ಉಪಶಾಖೆಯಾದ ಟಿಆರ್ಎಫ್ನೊಂದಿಗೆ ಸಂಬಂಧ ಹೊಂದಿರುವ ಮೂವರು ಭಯೋತ್ಪಾದಕ ಸಹಚರರನ್ನು ಬಂಧಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಖಚಿತ ಸುಳಿವಿನ ಮೇರೆಗೆ ಶ್ರೀನಗರ ಪೊಲೀಸರ ತಂಡವು ಹ್ಯಾನಿಬಲ್ ನಾಟಿಪೋರಾದಲ್ಲಿ ಚೆಕ್ಪಾಯಿಂಟ್ ಅನ್ನು ಸ್ಥಾಪಿಸಿ ಮೂವರನ್ನು ಬಂಧಿಸಿದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.
ವಕೀಲ್ ಅಹ್ಮದ್ ಭಟ್ ಅವರು ಈ ಹಿಂದೆ ನಿಷೇಧಿತ ಭಯೋತ್ಪಾದಕ ಸಂಘಟನೆ ಇಸ್ಲಾಮಿಕ್ ಸ್ಟೇಟ್ ಜಮ್ಮು ಮತ್ತು ಕಾಶ್ಮೀರ (ಐಎಸ್ಜೆಕೆ) ನೊಂದಿಗೆ ಸಂಪರ್ಕ ಹೊಂದಿದ್ದ ಸಕ್ರಿಯ ಭಯೋತ್ಪಾದಕರಾಗಿದ್ದರು. ಎರಡು ವರ್ಷಗಳ ಕಾಲ ಜೈಲಿನಲ್ಲಿದ್ದು, ಜಾಮೀನಿನ ಮೇಲೆ ಸೆಂಟ್ರಲ್ ಜೈಲಿನಿಂದ ಬಿಡುಗಡೆಯಾಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಶ್ರೀನಗರ ನಗರದಲ್ಲಿ ಭಯೋತ್ಪಾದಕ ಚಟುವಟಿಕೆಗಳನ್ನು ನಡೆಸುವುದಕ್ಕಾಗಿ ಟಿಆರ್ಎಫ್ನ ಸಕ್ರಿಯ ಭಯೋತ್ಪಾದಕರಿಂದ ಮೂವರು ಸ್ಫೋಟಕಗಳು ಮತ್ತು ಮದ್ದುಗುಂಡುಗಳನ್ನು ಸಂಗ್ರಹಿಸಿದ್ದರು ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದು ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿಗಳ ವಿರುದ್ಧ ಸ್ಫೋಟಕ ಕಾಯ್ದೆಯ ಸೆಕ್ಷನ್ 3 ಮತ್ತು 4, ಶಸ್ತ್ರಾಸ್ತ್ರ ಕಾಯ್ದೆಯ ಸೆಕ್ಷನ್ 25 ಮತ್ತು ಕಾನೂನುಬಾಹಿರ ಚಟುವಟಿಕೆಗಳ (ತಡೆಗಟ್ಟುವಿಕೆ) ಕಾಯ್ದೆಯ ಸೆಕ್ಷನ್ 18, 23 ಮತ್ತು 39 ರ ಅಡಿಯಲ್ಲಿ ಚನಪೋರಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.












Click it and Unblock the Notifications