ರಾಷ್ಟ್ರೀಯ ರೈಫಲ್ ಕ್ಯಾಂಪ್ ಮೇಲೆ ಉಗ್ರರ ದಾಳಿ: ಯೋಧ ಸಾವು
ಕಾಶ್ಮೀರ, ಅಕ್ಟೋಬರ್ 3: ಬಾರಾಮುಲ್ಲ ಪಟ್ಟಣ ಹೊರವಲಯದ ಸೇನಾ ಕ್ಯಾಂಪ್ ಮೇಲೆ ಭಾನುವಾರ ರಾತ್ರಿ ಕನಿಷ್ಠ ಆರು ಉಗ್ರಗಾಮಿಗಳು ದಾಳಿ ನಡೆಸಿದ್ದಾರೆ. ಭಾರತೀಯ ಸೇನಾ ಪಡೆಯು ಗಡಿ ನಿಯಂತ್ರಣ ರೇಖೆ ಆಚೆಯ ಉಗ್ರರ ನೆಲೆಗಳ ಮೇಲೆ ದಾಳಿ ನಡೆಸಿದ ವಾರದೊಳಗೆ ಈ ಆಕ್ರಮಣ ನಡೆದಿದೆ.
ದಾಳಿಯಲ್ಲಿ ಒಬ್ಬ ಬಿಎಸ್ ಎಫ್ ಯೋಧ, ಇಬ್ಬರು ಉಗ್ರಗಾಮಿಗಳು ಸಾವನ್ನಪ್ಪಿದ್ದಾರೆ. ಒಬ್ಬ ಬಿಎಸ್ ಎಫ್ ಯೋಧ ಸೇರಿದಂತೆ ನಾಲ್ವರು ಯೋಧರಿಗೆ ಗಾಯಗಳಾಗಿವೆ. ರಾತ್ರಿ 10.30ರ ವೇಳೆಯಲ್ಲಿ ಬಾರಾಮುಲ್ಲ ಪಟ್ಟಣದಲ್ಲಿ ಭಾರೀ ಗುಂಡಿನ ದಾಳಿಯ ಶಬ್ದ ಕೇಳಿಸಿದೆ. ಶ್ರೀನಗರದ ಉತ್ತರಕ್ಕೆ 55 ಕಿ.ಮೀ. ದೂರದಲ್ಲಿರುವ ಬಾರಾಮುಲ್ಲ ಪಟ್ಟಣದ ಹೊರವಲಯದ ಸೇನಾ ಕ್ಯಾಂಪ್ ಮೇಲೆ ದಾಳಿ ನಡೆದಿರುವುದನ್ನು ಸೇನಾ ವಕ್ತಾರರು ಖಾತ್ರಿ ಪಡಿಸಿದ್ದಾರೆ.[ದೇಶದ ಪ್ರಮುಖ ನಗರಗಳಲ್ಲಿ ಪಾಕಿಸ್ತಾನದಿಂದ ಉಗ್ರರ ದಾಳಿ ಸಾಧ್ಯತೆ!]
ಜಂಬಾಜ್ ಪುರ ಪ್ರದೇಶದ 46 ರಾಷ್ಟ್ರೀಯ ಕ್ಯಾಂಪ್ ಬಳಿ ಉಗ್ರರು ಮೊದಲಿಗೆ ಗ್ರೆನೇಡ್ ಬಳಸಿದ್ದಾರೆ. ಆ ನಂತರ ಗುಂಡಿನ ದಾಳಿ ಮಾಡಿದ್ದಾರೆ. ಹತ್ತಿರದಲ್ಲೇ ಇರುವ ಬಿಎಸ್ ಎಫ್ ಕ್ಯಾಂಪ್ ಮೇಲೂ ಗುಂಡಿನ ದಾಳಿಯಾಗಿ, ಇಬ್ಬರು ಯೋಧರಿಗೆ ಗಾಯಗಳಾಗಿವೆ. ಸ್ಥಳೀಯರ ಪ್ರಕಾರ, ಭಾರೀ ಸ್ಫೋಟದ ಸದ್ದು ಕೇಳಿಬಂದಿದೆ.
ಇದು ಲಷ್ಕರ್ ಇ ತೈಬಾದ ಕೃತ್ಯ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕೆಲ ದಿನಗಳ ಹಿಂದೆಯೇ ಭಾರತದೊಳಕ್ಕೆ ನುಸುಳಿದ ಉಗ್ರರು ಈ ದಾಳಿ ನಡೆಸಿದ್ದಾರೆ. ಪಲ್ಲಾನ್ ವಾಲಾ ವಲಯದಲ್ಲಿ ಪಾಕಿಸ್ತಾನ ಸೇನೆ ಶನಿವಾರ ಗುಂಡಿನ ದಾಳಿ ನಡೆಸಿತ್ತು. ಇನ್ನು ವಾಘಾ ಗಡಿಯಲ್ಲಿ ಪಾಕಿಸ್ತಾನಿಯರು ಭಾರತೀಯ ಸೇನೆ ಮೇಲೆ ಕಲ್ಲು ತೂರಾಟ ನಡೆಸಿದ ವರದಿಯಾಗಿದೆ.[ಉಗ್ರರ ಏಟಿಗೆ ಭಾರತದ ಬಲವಾದ ತಿರುಗೇಟು : ಏರ್ ಮಾರ್ಷಲ್ ಪಾಂಡೆ]
ಸರ್ಜಿಕಲ್ ಸ್ಟ್ರೈಕ್ ನಂತರ ಭಾರತೀಯ ಸೇನಾ ಕ್ಯಾಂಪ್ ಹಾಗೂ ಚೆಕ್ ಪೋಸ್ಟ್ ಗಳ ಮೇಲೆ ದಾಳಿಗಳಾಗಬಹುದು ಎಂದು ಗುಪ್ತಚರ ಇಲಾಕೆ ಎಚ್ಚರಿಕೆ ನೀಡಿತ್ತು. ಉಗ್ರರು ಉರಿ ಸೇನಾ ಕ್ಯಾಂಪ್ ಮೇಲೆ ದಾಳಿ ಮಾಡಿದ್ದ ವೇಳೆ ಹತ್ತೊಂಬತ್ತು ಸೈನಿಕರು ಮೃತಪಟ್ಟಿದ್ದರು. ಅದಕ್ಕೆ ಪ್ರತೀಕಾರವಾಗಿ ಭಾರತ ಗಡಿನಿಯಂತ್ರಣ ರೇಖೆ ಪಾಕ್ ಅಕ್ರಮಿತ ಕಾಶ್ಮೀರದ ಉಗ್ರರ ನೆಲೆಗಳನ್ನು ನಾಶಗೊಳಿಸಿತ್ತು.