ಪಾಕ್ ಸೇನೆ ಗುಂಡಿನ ದಾಳಿಗೆ ಯೋಧ ಹುತಾತ್ಮ, ಮೂವರಿಗೆ ಗಾಯ
ಜಮ್ಮು, ನವೆಂಬರ್ 21: ಪಾಕ್ ಸೇನೆಯಿಂದ ನಡೆದ ಗುಂಡಿನ ದಾಳಿಯಲ್ಲಿ ಭಾನುವಾರ ರಾತ್ರಿ ಭಾರತೀಯ ಸೈನಿಕ ಹುತಾತ್ಮನಾಗಿ, ಮೂವರು ಗಾಯಗೊಂಡಿದ್ದಾರೆ. ಜಮ್ಮು-ಕಾಶ್ಮೀರದ ರಜೌರಿ ವಲಯದಲ್ಲಿ ಭಾನುವಾರ ರಾತ್ರಿ ಪಾಕ್ ಸೇನೆಯಿಂದ ಗುಂಡಿನ ದಾಳಿ ನಡೆದಿದೆ. ಇಪ್ಪತ್ನಾಲ್ಕು ಗಂಟೆ ಅವಧಿಯಲ್ಲಿ ಪಾಕಿಸ್ತಾನದಲ್ಲಿ ಮೂರನೇ ಬಾರಿಗೆ ಕದನ ವಿರಾಮ ಉಲ್ಲಂಘನೆಯಾಗಿದೆ.
'ಈ ಗುಂಡಿನ ದಾಳಿಗೆ ಉತ್ತರ ನೀಡುತ್ತೇವೆ ಮತ್ತು ಸರಿಯಾದ ಉತ್ತರವೇ ನೀಡುತ್ತೇವೆ' ಎಂದು ಭಾರತೀಯ ಸೇನೆ ಟ್ವೀಟ್ ಮಾಡಿದೆ. ಇದಕ್ಕೂ ಮೊದಲು ಗಡಿ ನಿಯಂತ್ರಣ ರೇಖೆಯ ರಜೌರಿ ವಲಯದ ನೌಶೆರಾ ಮತ್ತು ಸುಂದರ್ ಬನಿಯಲ್ಲಿ ನಾಗರಿಕರನ್ನೇ ಗುರಿಯಾಗಿಸಿಕೊಂಡು ಸಣ್ಣ ಶಸ್ತ್ರಾಸ್ತ್ರ ಹಾಗೂ ಮಾರ್ಟರ್ ಗಳನ್ನು ಬಳಸಿ ಪಾಕಿಸ್ತಾನ ದಾಳಿ ನಡೆಸಿತ್ತು. ಆ ವೇಳೆ ಬಿಎಸ್ ಎಫ್ ಯೋಧ, ಒಬ್ಬರು ಮಹಿಳೆಗೆ ಗಾಯವಾಗಿತ್ತು. ಎರಡು ಮನೆಗೆ ಹಾನಿಯಾಗಿತ್ತು.[ಯೋಧರ ತಿರುಗೇಟು: 7 ಪಾಕಿಸ್ತಾನಿ ಸೈನಿಕರ ಸಾವು]

ಪಾಕಿಸ್ತಾನ ಸೇನೆಯು ನೌಶೆರಾ ವಲಯದಲ್ಲಿ ಶನಿವಾರ ಕದನ ವಿರಾಮ ಉಲ್ಲಂಘಿಸಿ ಗುಂಡಿನ ದಾಳಿ ನಡೆಸಿತ್ತು.ಮಧ್ಯಾಹ್ನ ಸುಂದರ್ ಬನಿ ವಲಯದಲ್ಲಿ ನಾಗರಿಕ ಪ್ರದೇಶಗಳ ಮೇಲೆ ದಾಳಿ ನಡೆಸಿತು. ಕಳೆದ ಗುರುವಾರದಂದು ಜಮ್ಮು ಜಿಲ್ಲೆಯ ಪಲ್ಲಾನ್ ವಾಲಾ ವಲಯದ ಹಳ್ಳಿಗಳನ್ನೇ ಗುರಿಯಾಗಿಸಿಕೊಂಡು ಪಾಕ್ ಸೇನೆ ದಾಳಿ ಮಾಡಿತ್ತು.[ಉಗ್ರರ ದಾಳಿಗೆ ತಕ್ಕ ಪ್ರತ್ಯುತ್ತರ ನೀಡಿ: ಪರಿಕ್ಕರ್]
ಕಳೆದ ಮಂಗಳವಾರ ಭಾರತೀಯ ಸೇನೆ ಮೇಲೆ ಜಮ್ಮು-ಕಾಶ್ಮೀರದ ರಜೌರಿಯಲ್ಲಿ ನಡೆಸಿದ ಭಾರಿ ಗುಂಡಿನ ಚಕಮಕಿಗೆ ಸೇನೆ ತಕ್ಕ ಪ್ರತ್ಯುತ್ತರ ನೀಡಿತ್ತು. ಭಾರತದಿಂದ ಸೆಪ್ಟೆಂಬರ್ 29ರಂದು ಸರ್ಜಿಕಲ್ ಸ್ಟ್ರೈಕ್ ನಡೆದ ನಂತರ ಗಡಿ ನಿಯಂತ್ರಣ ರೇಖೆ ಬಳಿ ಪಾಕಿಸ್ತಾನ ಸೇನೆಯಿಂದ 286 ಪ್ರಕರಣಗಳು ಗುಂಡಿನ ದಾಳಿ, ಶೆಲ್ಲಿಂಗ್ ನಂತಹವು ನಡೆದಿದೆ. ಹದಿನಾಲ್ಕು ರಕ್ಷಣಾ ಸಿಬ್ಬಂದಿಯೂ ಸೇರಿ 26 ಜನ ಭಾರತೀಯರು ಮೃತಪಟ್ಟಿದ್ದಾರೆ.












Click it and Unblock the Notifications