New Train Service: ನಾಳೆಯಿಂದ ಕರ್ನಾಟಕ ಮಾರ್ಗವಾಗಿ ಗೋವಾ-ತೆಲಂಗಾಣಕ್ಕೆ ಎಕ್ಸಪ್ರೆಸ್ ರೈಲು ಸೇವೆ ಆರಂಭ
ಹುಬ್ಬಳ್ಳಿ, ಅಕ್ಟೋಬರ್ 08: ಕರ್ನಾಟಕದ ಮಾರ್ಗವಾಗಿ ಎರಡು ರಾಜ್ಯಗಳ ನಡುವೆ ಹೊಸ ರೈಲು ಸಂಪರ್ಕ ಸೇವೆಗೆ ಇದೇ ಆಕ್ಟೋಬರ್ 9ರಂದು ನೈಋತ್ಯ ರೈಲ್ವೆ (South Western Raiways) ಚಾಲನೆ ನೀಡಲಿದೆ. ತೆಲಂಗಾಣ ಮತ್ತು ಗೋವಾ ರಾಜ್ಯಗಳ ನಡುವಿನ ಪ್ರವಾಸೋದ್ಯಮ ಉತ್ತೇಜಿಸುವ ಹಾಗೂ ಈ ಭಾಗದ ಜನರಿಗೆ ಸಾರಿಗೆ ಸೇವೆ ನೀಡುವ ಉದ್ದೇಶದಿಂದ ಹೊಸ ರೈಲನ್ನು ಸೇವೆ ಆರಂಭವಾಗುತ್ತಿದೆ.
ಸಿಕಂದರಾಬಾದ್ ಮತ್ತು ವಾಸ್ಕೋ-ಡ-ಗಾಮಾ ನಿಲ್ದಾಣಗಳ ನಡುವೆ ಹೊಸ ವಾರಕ್ಕೆ ಎರಡು ಭಾರಿ (ದ್ವಿ-ಸಾಪ್ತಾಹಿಕ) ಎಕ್ಸ್ಪ್ರೆಸ್ ರೈಲು ಸೇವೆ (ಸಂಖ್ಯೆ-17039/17040) ನಾಳೆ ಬುಧವಾರದಿಂದ ಶುರುವಾಗಲಿದೆ. ಹಾಗಾದರೆ ಯಾವೆಲ್ಲ ಮಾರ್ಗದ ನಿಲ್ದಾಣಗಳಲ್ಲಿ ನಿಲುಗಡೆ ನೀಡಲಿದೆ. ಹೊರಡುವ ಮತ್ತು ತಲುಪುವ ಸಮಯ, ವೇಳಾಪಟ್ಟಿ ಮಾಹಿತಿ ಇಲ್ಲಿದೆ.

ಬುಧವಾರ, ಶುಕ್ರವಾರ ವಾರದಲ್ಲಿ ಎರಡು ದಿನ ಸೇವೆ
* ಈ ಸಿಕಂದರಾಬಾದ್-ವಾಸ್ಕೋ-ಡ-ಗಾಮಾ ಎಕ್ಸ್ಪ್ರೆಸ್ ರೈಲು (ಸಂಖ್ಯೆ 17039) ಇದೇ ಅಕ್ಟೋಬರ್ 9ರಿಂದ ವಾರದಲ್ಲಿ ಎರಡು ಬಾರಿ ಅಂದರೆ ಬುಧವಾರ ಹಾಗೂ ಶುಕ್ರವಾರ ಹೊರಡಲಿದೆ. ನಿಗದಿತ ಎರಡು ದಿನ ಬೆಳಗ್ಗೆ 10:05 ಗಂಟೆಗೆ ಹೊರಟು, ಮರುದಿನ ಬೆಳಗ್ಗೆ 5:45 ಕ್ಕೆ ವಾಸ್ಕೋ-ಡ-ಗಾಮಾವನ್ನು ತಲುಪಲಿದೆ ಎಂದು ರೈಲ್ವೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ರೈಲು ನಿಲುಗಡೆ ನಿಲ್ದಾಣಗಳ ಮಾಹಿತಿ
ಸಿಕಂದರಾಬಾದ್-ವಾಸ್ಕೋ-ಡ-ಗಾಮಾ ಬೈ ವೀಕ್ಲಿ ಎಕ್ಸ್ಪ್ರೆಸ್ ತೆಲಂಗಾಣದಿಂದ ಹೊರಟು ಮಾರ್ಗದಲ್ಲಿ ಕಾಚಿಗುಡ, ಶಾದ್ನಗರ, ಜಡ್ಚೆರ್ಲಾ, ಮಹಬೂಬ್ನಗರ, ಗದ್ವಾಲ್, ಕರ್ನೂಲ್ ಸಿಟಿ ಡೋನ್, ಗುಂತಕಲ್, ಬಳ್ಳಾರಿ, ಹೊಸಪೇಟೆ, ಕೊಪ್ಪಳ, ಗದಗ, ಎಸ್ಎಸ್ಎಸ್ ಹುಬ್ಬಳ್ಳಿ, ಧಾರವಾಡ, ಲೋಂಡಾ, ಕ್ಯಾಸಲ್ ರಾಕ್, ಕುಲೆಮ್, ಸ್ಯಾಂವೊರ್ಡೆಮ್ ಮತ್ತು ಮಡಗಾಂವ್ ನಿಲ್ದಾಣಗಳಲ್ಲಿ ಆಗಮಿಸಿ ಎರಡರಿಂದ ನಾಲ್ಕು ನಿಮಿಷಗಳಲ್ಲಿ ಹೊರಡಲಿದೆ.
* ಸಿಕಂದರಾಬಾದ್-ವಾಸ್ಕೋ-ಡ-ಗಾಮಾ ಬೈ ವೀಕ್ಲಿ ಎಕ್ಸ್ಪ್ರೆಸ್ ರೈಲು (ಸಂಖ್ಯೆ 17040) ವಾಸ್ಕೋ-ಡ-ಗಾಮಾದಿಂದ ಪ್ರತಿ ಗುರುವಾರ ಮತ್ತು ಶನಿವಾರ ಬೆಳಗ್ಗೆ 9:00 ಗಂಟೆಗೆ ಹೊರಡುತ್ತದೆ. ಮರುದಿನ ಬೆಳಗ್ಗೆ 6:20 ಕ್ಕೆ ಸಿಕಂದರಾಬಾದ್ ನಿಲ್ದಾಣ ತಲುಪಲಿದೆ ಎಂದು ರೈಲ್ವೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಈ ರೈಲು ಮಾರ್ಗದಲ್ಲಿ ಎದುರಾಗುವ ನಿಲ್ದಾಣಗಳ ಪೈಕಿ ಮಡಗಾಂವ್, ಸ್ಯಾಂವೊರ್ಡೆಮ್, ಕುಲೆಮ್, ಕ್ಯಾಸಲ್ ರಾಕ್ , ಲೋಂಡಾ , ಧಾರವಾಡ, ಎಸ್ಎಸ್ಎಸ್ ಹುಬ್ಬಳ್ಳಿ, ಗದಗ , ಕೊಪ್ಪಳ, ಹೊಸಪೇಟೆ, ಬಳ್ಳಾರಿ, ಗುಂತಕಲ್, ಡೋನ್ , ಕರ್ನೂಲ್ ಸಿಟಿ, ಗದ್ವಾಲ್, ಮಹಬೂಬ್ನಗರ, ಜಡ್ಚೆರ್ಲಾ, ಶಾದ್ನಗರ ಮತ್ತು ಕಾಚಿಗುಡಾ ನಿಲ್ದಾಣಗಳಲ್ಲಿ ಆಗಮಿಸಿ/ನಿರ್ಗಮಿಸಲಿದೆ.
ವಾರಕ್ಕೆ ಎರಡು ಭಾರಿ ಓಡಾಡುವ ಈ ರೈಲಿನಲ್ಲಿ ಫಸ್ಟ್ ಎಸಿ ಕ್ಲಾಸ್-1, ಎಸಿ 2-ಟೈರ್-2, ಎಸಿ 3-ಟೈರ್-3, ಎಸಿ 3-ಟೈರ್ ಎಕಾನಮಿ-2, ಸ್ಲೀಪರ್ ಕ್ಲಾಸ್-7, ಜನರಲ್ ಸೆಕೆಂಡ್ ಕ್ಲಾಸ್-4 ಮತ್ತು 2-ಬ್ರೇಕ್ ವ್ಯಾನ್ ಕಮ್ ಜನರೇಟರ್ ಬೋಗಿಗಳು ಇರಲಿವೆ. ಒಟ್ಟು 21 ಬೋಗಿಗಳು ಪ್ರಯಾಣಿಕರಿಗೆ ಆರಾಮದಾಯಕ ಅನುಭವ ನೀಡಲಿವೆ.
ಮೂರು ರಾಜ್ಯಗಳ ವಿವಿಧ ಪ್ರದೇಶಗಳಿಗೆ ಸಂಪರ್ಕ ಕಲ್ಪಿಸುವ ಈ ರೈಲು ಪ್ರವಾಸಿಗರಿಗೆ ಮತ್ತು ಸ್ಥಳೀಯ ಪ್ರಯಾಣಿಕರಿಗೆ ತಡೆರಹಿತ ಉತ್ತಮ ಸಾರಿಗೆ ಸೇವೆ ಒದಗಿಸಲಿದೆ. ಸಾಂಸ್ಕೃತಿಕವಾಗಿ ಭಿನ್ನವಾಗಿರುವ ಎರಡು ರಾಜ್ಯಗಳ ಮಧ್ಯೆ ಸಂಪರ್ಕ ಕೊಂಡಿಯಾಗಿ ಸೇವೆ ನೀಡಲಿದೆ ಎಂದು ನೈಋತ್ಯ ರೈಲ್ವೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.












Click it and Unblock the Notifications