ನಿರುದ್ಯೋಗ ಸಮಸ್ಯೆ ಕುರಿತ ವರದಿಯ ಬಗ್ಗೆ ನೀತಿ ಆಯೋಗ ಸ್ಪಷ್ಟನೆ
ನವದೆಹಲಿ, ಜನವರಿ 31 : ಕಳೆದ 45 ವರ್ಷಗಳಲ್ಲೇ ದೇಶದಲ್ಲಿ ನಿರುದ್ಯೋಗದ ಪ್ರಮಾಣ ಅತ್ಯಧಿಕವಾಗಿದೆ ಎಂದು ಬಿಡುಗಡೆಯಾಗಿರುವ ವರದಿಯನ್ನು ದೃಢಪಡಿಸಲಾಗಿಲ್ಲ ಮತ್ತು ಆ ವರದಿಯ ಸತ್ಯಾಸತ್ಯತೆ ಬಗ್ಗೆ ಯಾವುದೇ ಮಾಹಿತಿ ಇಲ್ಲ ಎಂದು ನೀತಿ ಆಯೋಗ ಸ್ಪಷ್ಟೀಕರಣ ನೀಡಿದೆ.
2017-18ರ ಅವಧಿಯಲ್ಲಿ ದೇಶದಲ್ಲಿ ಹಿಂದೆಂದೂ ಕಾಣದ ನಿರುದ್ಯೋಗ ಸಮಸ್ಯೆ ಉದ್ಭವವಾಗಿತ್ತು ಬಿಸಿನೆಸ್ ಸ್ಟಾಂಡರ್ಡ್ ಪತ್ರಿಕೆ ವರದಿ ಮಾಡಿತ್ತು. ಈ ವರದಿ ಕೇಂದ್ರ ಸರಕಾರಕ್ಕೆ ಭಾರೀ ಮುಜುಗರ ಮಾಡಿತ್ತು ಮತ್ತು ವಿರೋಧ ಪಕ್ಷಗಳು ಇದೇ ವಿಷಯ ಇಟ್ಟುಕೊಂಡು ಕೇಂದ್ರವನ್ನು ಹಣಿಯಲು ಯತ್ನಿಸುತ್ತಿತ್ತು.
ಇದಕ್ಕೆ ಸ್ಪಷ್ಟೀಕರಣ ನೀಡಲೆಂದೇ ನೀತಿ ಆಯೋಗದ ಉಪಾಧ್ಯಕ್ಷ ರಾಜೀವ್ ಕುಮಾರ್ ಅವರು ಗುರುವಾರ ಪತ್ರಿಕಾಗೋಷ್ಠಿ ಕರೆದು, ನ್ಯಾಷನಲ್ ಸ್ಯಾಂಪಲ್ ಸರ್ವೇ ಆಫೀಸ್ ನಡೆಸಿದ ತಡೆಹಿಡಿಯಲಾದ ಸಮೀಕ್ಷೆಯ ವರದಿಯ ಬಗ್ಗೆ ಸ್ಪಷ್ಟೀಕರಣ ನೀಡಿದರು. ತಡೆಹಿಡಿಯಲಾಗಿದ್ದ ಈ ಸಮೀಕ್ಷೆಯ ವರದಿ ಬಿಸಿನೆಸ್ ಸ್ಟಾಂಡರ್ಡ್ ಗೆ ಲಭ್ಯವಾಗಿ ಅದು ಪ್ರಕಟಿಸಿತ್ತು.

ಸಮೀಕ್ಷೆಯ ವರದಿಯನ್ನು ಇನ್ನೂ ಪರಿಶೀಲಿಸಲಾಗುತ್ತಿರುವುದರಿಂದ ಸರಕಾರ ಯಾವುದೇ ವರದಿಯನ್ನು ಬಿಡುಗಡೆ ಮಾಡಿಲ್ಲ. ದತ್ತಾಂಶ ಸಂಪೂರ್ಣವಾಗಿ ಯಾವಾಗ ರೆಡಿಯಾಗುತ್ತೋ ಆವಾಗ ವರದಿ ಬಿಡುಗಡೆ ಮಾಡುತ್ತೇವೆ. ದತ್ತಾಂಶವನ್ನು ಕಲೆಹಾಕಲು ನಾವು ವಿಭಿನ್ನವಾದ ವಿಧಾನವನ್ನು ಅನುಸರಿಸುತ್ತೇವೆ. ಆದ್ದರಿಂದ ಈಗ ಬಹಿರಂಗವಾಗಿರುವ ವರದಿಯನ್ನೇ ಅಂತಿಮವೆಂದು ಭಾವಿಸಬೇಕಿಲ್ಲ ಎಂದು ಅವರು ಹೇಳಿದ್ದಾರೆ.
ಕೇಂದ್ರ ಸರಕಾರ ಮಧ್ಯಂತರ ಬಜೆಟ್ ಮಂಡಿಸುವ ಒಂದು ದಿನ ಮೊದಲೇ ನಿರುದ್ಯೋಗ ಸಮಸ್ಯೆಯ ಬಗ್ಗೆ ಮಾಡಲಾದ ಸಮೀಕ್ಷೆಯ ವರದಿಯನ್ನು ಬಹಿರಂಗವಾಗಿದ್ದು ಸರಕಾರವನ್ನು ಇಕ್ಕಟ್ಟಿಗೆ ಸಿಲುಕಿಸಿತ್ತು. ಲೋಕಸಭೆ ಚುನಾವಣೆ ಮೇನಲ್ಲಿ ನಡೆಯಲಿದ್ದು, ನಿರುದ್ಯೋಗ ಸಮಸ್ಯೆಯನ್ನೇ ವಿರೋಧ ಪಕ್ಷಗಳು ಆಡಳಿತ ಪಕ್ಷದ ವಿರುದ್ಧ ಪ್ರಬಲ ಅಸ್ತ್ರವನ್ನಾಗಿ ಮಾಡಿಕೊಂಡಿವೆ.
ನ್ಯಾಷನಲ್ ಸ್ಟಾಟಿಸ್ಟಿಕಲ್ ಕಮಿಷನ್ ಕಳೆದ ಡಿಸೆಂಬರ್ ನಲ್ಲಿಯೇ ಪರೀಕ್ಷಿಸಿ ಪರಿಶೀಲನೆ ಮಾಡಿದ್ದರು ಬಿಡುಗಡೆ ಮಾಡಲಾಗಿರಲಿಲ್ಲ ಎಂದು ಮಂಗಳವಾರ ರಾಜೀನಾಮೆ ನೀಡಿದ ಇಬ್ಬರು ಸ್ವತಂತ್ರವಲ್ಲದ ಸದಸ್ಯರು ಆರೋಪಿಸಿದ್ದರು. ಆದರೆ, ಇದಕ್ಕೆ ಸ್ಪಷ್ಟೀಕರಣ ನೀಡಿದ್ದ ಸರಕಾರ, ಈ ವರದಿಯನ್ನು ಯಾವಾಗ ಬಿಡುಗಡೆ ಮಾಡಬೇಕು ಎಂದು ನಿರ್ಧರಿಸುವ ಅಧಿಕಾರ ಸರಕಾರಕ್ಕಿದೆ, ಅದನ್ನು ನಾವು ನಿರ್ಧರಿಸುತ್ತೇವೆ ಎಂದು ಉತ್ತರ ನೀಡಿದ್ದರು.
ಕಬ್ಬಿಣ ಕಾದಾಗಲೇ ಬಾರಿಸಬೇಕೆಂಬುದನ್ನು ಅರಿತಿರುವ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು, "ನಮೋ ಉದ್ಯೋಗ! ನಿಮ್ಮ ನಾಯಕರು ಪ್ರತಿವರ್ಷ 2 ಕೋಟಿ ಉದ್ಯೋಗ ಸೃಷ್ಟಿಸುವುದಾಗಿ ವಾಗ್ದಾನ ನೀಡಿದ್ದರು. 5 ವರ್ಷಗಳ ನಂತರ ಲೀಕ್ ಆದ ಸಮೀಕ್ಷೆಯ ವರದಿ ನಿರುದ್ಯೋಗವನ್ನು ರಾಷ್ಟ್ರೀಯ ವಿಪ್ಪತ್ತು ಎಂದು ಬಿಂಬಿಸುತ್ತಿದೆ. 45 ವರ್ಷಗಳಲ್ಲಿಯೇ ನಿರುದ್ಯೋಗದ ಪ್ರಮಾಣ ಗರಿಷ್ಠವಾಗಿದೆ. 2017-18ರಲ್ಲಿಯೇ 6.5 ಕೋಟಿ ಜನರು ನಿರುದ್ಯೋಗಿಗಳಾಗಿದ್ದಾರೆ. ನರೇಂದ್ರ ಮೋದಿ ಮನೆಗೆ ಹೋಗಲು ಇದು ಸಮಯ" ಎಂದು ಟ್ವೀಟ್ ಮಾಡಿದ್ದರು.











Click it and Unblock the Notifications