ಬೆಂಗ್ಳೂರಿಂದ ಬೀದರ್ ವರೆಗೆ ಮೋದಿ ಚಕ್ರ ಗಿರ ಗಿರ...
ಉಜಿರೆಯಲ್ಲಿ ಕಾಣಿಸಿಕೊಂಡ ಪ್ರಧಾನಿ ಮೋದಿ, ಆ ನಂತರ ಬೆಂಗಳೂರಿನ ಅರಮನೆ ಮೈದಾನದಲ್ಲಿ ಪ್ರತ್ಯಕ್ಷರಾದರು. ಆ ನಂತರ ಬೀದರ್ ನಲ್ಲಿ ಹೊಸ ರೈಲಿಗೆ ಚಾಲನೆ ನೀಡಿದರು. ಅದೇನೇ ಹೆಲಿಕಾಪ್ಟರ್ ಮತ್ತೊಂದು ಅಂತ ಇದ್ದರೂ ಇಂಥದ್ದೊಂದು ಉತ್ಸಾಹದಿಂದ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವ ಅವರನ್ನು ಮೆಚ್ಚಬೇಕು.
In Pics : ಧರ್ಮಸ್ಥಳ, ಬೆಂಗಳೂರು, ಬೀದರ್ ನಲ್ಲಿ ನರೇಂದ್ರ ಮೋದಿ
ಭಾನುವಾರ ಇಷ್ಟೊಂದು ಚಟುವಟಿಕೆಯಿಂದ ಕಂಡುಬಂದ ಮೋದಿಯವರು, ಅಧಿಕೃತವಾಗಿ ಅಲ್ಲದಿದ್ದರೂ ಬಿಜೆಪಿಯ ಪರವಾಗಿ ಚುನಾವಣೆ ಪ್ರಚಾರ ಆರಂಭಿಸಿಯೇ ಬಿಟ್ಟರಾ ಎಂಬ ಗುಮಾನಿ ಬರುವುದು ಸುಳ್ಳಲ್ಲ. ಅದಕ್ಕೆ ತಕ್ಕ ಹಾಗೆ ಕಾಂಗ್ರೆಸ್ ಮೇಲೆ ಒಂದಿಷ್ಟು ಹರಿಹಾಯ್ದಿದ್ದಾರೆ. ದೇಶದ ಸೈನಿಕರಿಗೆ ಅಗೌರವ ತೋರುತ್ತಿದ್ದಾರೆ ಎಂದು ಆಕ್ರೋಶ ಹೊರಹಾಕಿದ್ದಾರೆ.
ಭಾನುವಾರ ಇಡೀ ಅವರು ಪಾಲ್ಗೊಂಡ ಕಾರ್ಯಕ್ರಮಗಳ ಕೆಲವು ಫೋಟೋಗಳು ಇವೆ. ಜತೆಗೆ ಭಾರತ ಕ್ರಿಕೆಟ್ ತಂಡದ ಸದಸ್ಯರು ಮೂರನೇ ಏಕದಿನ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ ಜಯ ಗಳಿಸಿದ ಸಂಭ್ರಮದಲ್ಲಿರುವ ಚಿತ್ರವೂ ಇಲ್ಲಿದೆ. ಆದರೆ ನಿಜವಾದ ಹೈಲೈಟ್ ಪ್ರಧಾನಿ ಮೋದಿ ಕಾಲಿಗೆ ಚಕ್ರ ಕಟ್ಟಿಕೊಂಡಂತೆ ಸುತ್ತಾಡಿದ್ದೇ. ಇದರ ಜತೆಗೆ ಕ್ರೀಡೆಗೆ ಸಂಬಂಧಿಸಿದ ಫೋಟೋಗಳಿವೆ.
ಕವಿರತ್ನ ಕಾಳಿದಾಸ ಸಿನಿಮಾದಲ್ಲಿ ರಾಜ್ ಕುಮಾರ್ ಅವರು ಕನ್ನಡಿಯಲ್ಲಿ ತಮ್ಮನ್ನು ತಾವೇ ಕಂಡು, ಎಲ್ಲೆಲ್ಲೂ ನಾನೇ ಎಲ್ಲೆಲ್ಲೂ ನಾನೇ ಎಂದು ಖುಷಿಪಡುವ ದೃಶ್ಯ ಈ ಸಂದರ್ಭಕ್ಕೆ ನೆನಪಾಗುತ್ತಿದೆ.

ಬೀದರ್- ಕಲಬುರ್ಗಿ ರೈಲಿಗೆ ಬಾವುಟ
ಬೀದರ್- ಕಲಬುರ್ಗಿ ಮಾರ್ಗದ ಹೊಸ ರೈಲಿಗೆ ಪ್ರಧಾನಿ ನರೇಂದ್ರ ಮೋದಿ ಬೀದರ್ ನಲ್ಲಿ ಹಸಿರು ನಿಶಾನೆ ತೋರಿದ ಕ್ಷಣವಿದು. ಈ ವೇಳೆ ರೈಲ್ವೆ ಸಚಿವ ಪಿಯೂಷ್ ಗೋಯಲ್, ಕೇಂದ್ರ ಸಚಿವರಾದ ಅನಂತಕುಮಾರ್, ಡಿ.ವಿ.ಸದಾನಂದ ಗೌಡ ಮತ್ತಿತರರಿದ್ದಾರೆ.

ಸಿಟ್ಟು ಮಾಡಿದ ಎಲೆಕ್ಷನ್ ಕ್ಯಾಂಡಿಡೇಟ್ ನಂತಿರುವ ಹಕ್ಕಿಗಳು
ಎಲೆಕ್ಷನ್ ಗೆ ನಿಂತು, ಒಬ್ಬರ ಮುಖ ಒಬ್ಬರು ನೋಡಲ್ಲ ಎಂದು ಸಿಟ್ಟು ಮಾಡಿದಂತೆ ಕಾಣುತ್ತಿರುವ ಯುರೋಪಿಯನ್ ಹಸಿರು ಮರಕುಟುಕ (ಎಡಕ್ಕೆ) ಹಾಗೂ ಕಪ್ಪು ಹಕ್ಕಿ ಕಂಡುಬಂದಿರುವುದು ಜರ್ಮನಿಯ ಫ್ರಾಂಕ್ ಫರ್ಟ್ ನಲ್ಲಿ.

ಶಂಕರ ಭಾರತಿ ಸ್ವಾಮೀಜಿ ಆಶೀರ್ವಾದ
ಬೆಂಗಳೂರಿನ ಅರಮನೆ ಮೈದಾನದಲ್ಲಿ ಭಾನುವಾರ ನಡೆದ ಸೌಂದರ್ಯಲಹರಿ ಪಾರಾಯಣ ಮಹೋತ್ಸವದಲ್ಲಿ ಭಾಗವಹಿಸಿದ್ದ ಪ್ರಧಾನಿ ನರೇಂದ್ರ ಮೋದಿ ಅವರು ಶಂಕರ ಭಾರತಿ ಮಹಾಸ್ವಾಮೀಜಿ ಆಶೀರ್ವಾದ ಪಡೆದರು.

ದಕ್ಷಿಣಾ ಮೂರ್ತಿ ಸ್ತೋತ್ರ ಪಠಣ
ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆದ ಸೌಂದರ್ಯಲಹರಿ ಪಾರಾಯಣ ಮಹೋತ್ಸವದಲ್ಲಿ ಸಾವಿರಾರು ಭಕ್ತರು ಸೌಂದರ್ಯ ಲಹರಿ ಹಾಗೂ ದಕ್ಷಿಣಾಮೂರ್ತಿ ಸ್ತೋತ್ರ ಪಠಿಸಿದರು. ಈ ಕಾರ್ಯಕ್ರಮದಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಮಂದಿ ಭಾಗವಹಿಸಿದ್ದರು.

ಪ್ರಧಾನಿಗೆ ಸ್ಮರಣಿಕೆ ನೀಡಿದ ವೀರೇಂದ್ರ ಹೆಗ್ಗಡೆ
ಉಜಿರೆಯಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆಯ ಫಲಾನುಭವಿಗಳಿಗೆ ರುಪೇ ಕಾರ್ಡ್ ವಿತರಿಸುವ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಧರ್ಮಸ್ಥಳ ಮಂಜುನಾಥ ಸ್ವಾಮಿ ದೇವಸ್ಥಾನದ ಧರ್ಮಾಧಿಕಾರಿ ಡಿ.ವೀರೇಂದ್ರ ಹೆಗ್ಗಡೆ ನೆನಪಿನ ಕಾಣಿಕೆ ನೀಡಿದರು.

ಶ್ರೀಕಾಂತ್ ಕಿದಾಂಬಿ ಗೆಲುವು
ಪಾರಿಸ್ ನಲ್ಲಿ ನಡೆದ ಫ್ರೆಂಚ್ ಓಪನ್ ಬ್ಯಾಡ್ಮಿಂಟನ್ -ಪಂದ್ಯಾವಳಿಯಲ್ಲಿ ಜಯ ಗಳಿಸಿದ ಭಾರತದ ಶ್ರೀಕಾಂತ್ ಕಿದಾಂಬಿ ಪ್ರಶಸ್ತಿಯೊಂದಿಗೆ ಕ್ಯಾಮೆರಾ ಕಣ್ಣಿನಲ್ಲಿ ಸೆರೆಯಾಗಿದ್ದು ಹೀಗೆ.

ಗೆಲುವಿನ ಸಂಭ್ರಮದಲ್ಲಿ
ಕಾನ್ಪುರದಲ್ಲಿ ನಡೆದ ನ್ಯೂಜಿಲೆಂಡ್ ವಿರುದ್ಧದ ಮೂರನೇ ಏಕದಿನ ಪಂದ್ಯದಲ್ಲಿ ಜಯ ಗಳಿಸಿದ ಭಾರತದ ಕ್ರಿಕೆಟ್ ಆಟಗಾರರ ಸಂಭ್ರಮ ಕಂಡುಬಂದಿದ್ದು ಹೀಗೆ.












Click it and Unblock the Notifications